ಮಾವಿನ ಹೂ ರಕ್ಷಣೆಗೆ ಮಾವು ಬೆಳೆಗಾರರು ವಿಶೇಷ ಕಾಳಜಿ ವಹಿಸಬೇಕು ; ಡಾ. ಆರ್.ಕೆ.ರಾಮಚಂದ್ರ

ವರದಿ: ಶಬ್ಬೀರ್ ಅಹಮ್ಮದ್, ಶ್ರೀನಿವಾಸಪುರ

ಶ್ರೀನಿವಾಸಪುರ: ಮಾವಿನ ಹೂ ರಕ್ಷಣೆಗೆ ಮಾವು ಬೆಳೆಗಾರರು ವಿಶೇಷ ಕಾಳಜಿ ವಹಿಸಬೇಕು ಎಂದು ಹೊಗಳಗೆರೆ ತೋಟಗಾರಿಕಾ ಅಭಿವೃದ್ಧಿ ಹಾಗೂ ವಿಸ್ತರಣಾ ಕೇಂದ್ರದ ಮುಖ್ಯಸ್ಥ ಡಾ. ಆರ್.ಕೆ.ರಾಮಚಂದ್ರ ಹೇಳಿದರು.
ದಳಸನೂರು ಗ್ರಾಮದ ಸಮೀಪ ರಾಜ್ಯ ಮಾವು ಅಭಿವೃದ್ಧಿ ಹಾಗೂ ಮಾರುಕಟ್ಟೆ ನಿಗಮದ ಮಾಜಿ ಅಧ್ಯಕ್ಷ ಎಲ್.ಗೋಪಾಲಕೃಷ್ಣ ಅವರ ಮಾವಿನ ತೊಟದಲ್ಲಿ ರೈತರನ್ನು ಉದ್ದೇಶಿಸಿ ಮಾತನಾಡಿ, ನೈಸರ್ಗಿಕ ವಿಕೋಪ ಸಂಭವಿಸಿದಾಗ, ಇರುವ ಫಸಲನ್ನು ಜೋಪಾನವಾಗಿ ನೋಡಿಕೊಂಡಲ್ಲಿ ನಷ್ಟದ ಪ್ರಮಾಣ ಕಡಿಮೆ ಮಾಡಿಕೊಳ್ಳಬಹುದಾಗಿದೆ ಎಂದು ಹೇಳಿದರು.
ಮಾವಿನ ಹೀಚು ಗೋಲಿ ಗಾತ್ರ ಇರುವಾಗ ಮ್ಯಾಂಗೋ ಸ್ಪೆಷಲ್ ಔಷಧವನ್ನು ಒಂದು ಲೀಟರ್ ನೀರಿಗೆ 5 ಗ್ರಾಂನಂತೆ ಬೆರೆಸಿ, ಅದಕ್ಕೆ ಒಂದು ದೊಡ್ಡ ಗಾತ್ರದ ನಿಂಬೆ ಹಣ್ಣಿನ ರಸ ಹಾಗೂ 25 ಲೀಟರ್ ನೀರಿಗೆ ಒಂದು ಚಿಕ್ಕ ಸ್ಯಾಸೆಟ್ ಸ್ಯಾಂಪೋ ಸೇರಿಸಿ ಸಿಂಪರಣೆ ಮಾಡಬೇಕುಎಂದು ಹೇಳಿದರು.
ಸಧ್ಯದ ಪರಿಸ್ಥಿತಿಯಲ್ಲಿ ಎಕ್ಸಾಕೋನಾಜೋಲ್ ಔಷಧಿಯನ್ನು 1 ಲೀಟರ್ ನೀರಿಗೆ 2 ಗ್ರಾಂನಂತೆ ಬೆರೆಸಿ ಸಿಂಪರಣೆ ಮಾಡುವುದು ಒಳ್ಳೆಯದು. ಜಿಗಿ ಹುಳುವಿನ ಬಾಧೆ ಕಂಡುಬಂದಲ್ಲಿ 1 ಲೀಟರ್ ನೀರಿಗೆ ಅರ್ಧ ಗ್ರಾಂ ಲ್ಯಾಮ್ಡಾ ಪಯಲೋಥಿಲ್ ಸೇರಿಸಿ ಮರದ ಎಲ್ಲ ಭಾಗಕ್ಕೆ ಬೀಳುವಂತೆ ಸಿಂಪಡಣೆ ಮಾಡಬೇಕು ಎಂದು ಹೇಳಿದರು.