ಕೋಲಾರ ಜಿಲ್ಲಾ ಸಹಕಾರಿ ಯೂನಿಯನ್‍ಗೆ
ಅಧ್ಯಕ್ಷರಾಗಿ ಮೂರಾಂಡಹಳ್ಳಿ ಗೋಪಾಲಪ್ಪ ಆಯ್ಕೆ

ವರದಿ: ಶಬ್ಬೀರ್ ಅಹ್ಮದ್, ಶ್ರೀನಿವಾಸಪುರ

ಕೋಲಾರ:- ಕೋಲಾರ ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷರಾಗಿ ಮೂರಾಂಡಹಳ್ಳಿ ಗೋಪಾಲಪ್ಪ ಹಾಗೂ ಉಪಾಧ್ಯಕ್ಷರಾಗಿ ಟಿ.ಕೆ.ಬೈರೇಗೌಡ ಅವಿರೋಧವಾಗಿ ಆಯ್ಕೆಯಾದರು.
ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡ ನೇತೃತ್ವದಲ್ಲಿ ನೀಡಿದ ಸೂತ್ರದಂತೆ ಎಲ್ಲರಿಗೂ ಅಧಿಕಾರ ಸಿಗಬೇಕೆಂಬ ಆಶಯದೊಂದಿಗೆ ಸಹಕಾರಿ ಯೂನಿಯನ್‍ಗೆ ತಲಾ 10 ತಿಂಗಳ ಅಧಿಕಾರದ ಸೂತ್ರದಡಿ ಅ.ಮು.ಲಕ್ಷ್ಮೀನಾರಾಯಣ ರಾಜೀನಾಮೆಯಿಂದ ತೆರವಾಗಿದ್ದ ಅಧ್ಯಕ್ಷಸ್ಥಾನದ 2ನೇ ಅವಧಿಗೆ ಮೂರಾಂಡಹಳ್ಳಿ ಗೋಪಾಲಪ್ಪ ಅವಿರೋಧವಾಗಿ ಆಯ್ಕೆಯಾದರು.
ನೂತನ ಅಧ್ಯಕ್ಷರು,ಉಪಾಧ್ಯಕ್ಷರನ್ನು ಅಭಿನಂದಿಸಿ ಮಾತನಾಡಿದ ಬ್ಯಾಲಹಳ್ಳಿ ಗೋವಿಂದಗೌಡ, ಅಧಿಕಾರ ಒಬ್ಬರಿಗಲ್ಲ ಎಲ್ಲರಿಗೂ ಅವಕಾಶ ಸಿಗಬೇಕು, ಯೂನಿಯನ್ ಕಾರ್ಯ ಚಟುವಟಿಕೆಗಳನ್ನು ನೂತನ ಅಧ್ಯಕ್ಷರು,ಉಪಾಧ್ಯಕ್ಷರು ವಿಸ್ತರಿಸಿ, ಸಹಕಾರಿ ತತ್ವಗಳ ಕುರಿತು ಅರಿವು ಮೂಡಿಸಲು ಕಾರ್ಯಾಗಾರಗಳನ್ನು ನಡೆಸಿ ಎಂದು ಕಿವಿಮಾತು ಹೇಳಿದರು.
ನೂತನ ಅಧ್ಯಕ್ಷ ಮೂರಾಂಡಹಳ್ಳಿ ಗೋಪಾಲಪ್ಪ, ತಮ್ಮ ಆಯ್ಕೆಗೆ ಸಹಕರಿಸಿದ ಎಲ್ಲರಿಗೂ ಧನ್ಯವಾದ ತಿಳಿಸಿ, ಸಹಕಾರಿ ಯೂನಿಯನ್‍ನಲ್ಲಿ ಸಹಕಾರಿ ತತ್ವಗಳನ್ನು ಉಳಿಸುವ ನಿಟ್ಟಿನಲ್ಲಿ ಬಲಗೊಳಿಸುವ ಕಾರ್ಯದಲ್ಲಿ ಪ್ರಾಮಾಣಿಕವಾಗಿ ದುಡಿಯುವುದಾಗಿ ತಿಳಿಸಿದರು.
ನೂತನ ಉಪಾಧ್ಯಕ್ಷ ಟಿ.ಕೆ.ಬೈರೇಗೌಡ, ಸಾಮೂಹಿಕ ನಾಯಕತ್ವದಡಿ ಸಹಕಾರಿ ಯೂನಿಯನ್‍ಅನ್ನು ಮುನ್ನಡೆಸುವುದಾಗಿಯೂ, ಸಹಕಾರಿ ರಂಗದ ಕುರಿತು ಅರಿವು ಮೂಡಿಸಲು ಹೆಚ್ಚಿನ ಸಂಖ್ಯೆಯಲ್ಲಿ ತರಬೇತಿ ಕಾರ್ಯಾಗಾರ ಹಮ್ಮಿಕೊಳ್ಳುವುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ಡಿಸಿಸಿ ಬ್ಯಾಂಕ್ ನಿರ್ದೇಶಕ ಕೆ.ವಿ.ದಯಾನಂದ್, ಸಹಕಾರಿ ಯೂನಿಯನ್ ನಿರ್ದೇಶಕರಾದ ಅ.ಮು.ಲಕ್ಷ್ಮೀನಾರಾಯಣ, ಗೋವರ್ಧನರೆಡ್ಡಿ, ಶಂಕರನಾರಾಯಣಗೌಡ,ಅಣ್ಣಿಹಳ್ಳಿ ನಾಗರಾಜ್,ಚೆಂಜಿಮಲೆ ರಮೇಶ್,ರಾಮಚಂದ್ರೇಗೌಡ, ಪಾಪಣ್ಣ, ಉರಿಗಿಲಿ ರುದ್ರಸ್ವಾಮಿ, ಪೆಮ್ಮಶೆಟ್ಟಿಹಳ್ಳಿ ಸುರೇಶ್, ಅರುಣಮ್ಮ, ಕುರಗಲ್ ವೆಂಕಟೇಶ್, ಕೆ.ಎಂ.ಮಂಜುನಾಥ್, ವಕೀಲ ಪಿ.ಎನ್.ಕೃಷ್ಣಾರೆಡ್ಡಿ ಮತ್ತಿತರರಿದ್ದರು.