JANANUDI.COM NETWORK

ಕುಂದಾಪುರ, ಸ್ವಾತಂತ್ರ್ಯ ಸಿಗುವ ವೇಳೆಗೆ ಚಿಕ್ಕ ಸೂಜಿ ಕೂಡ ಉತ್ಪಾದನೆ ಮಾಡುವ ಸಾಮರ್ಥ್ಯ ಹೊಂದಿಲ್ಲದ ದೇಶವನ್ನು ತನ್ನ ದೂರದರ್ಶಿತ್ವದ ಆಡಳಿತದಿಂದ ವಿಶ್ವವೇ ತಿರುಗಿ ನೋಡುವಂತೆ ನಿರ್ಮಿಸಿದ ನೆಹರೂ ಕೊಡುಗೆ ಕುರಿತು ಇದೀಗ ಆಡಳಿತ ನಡೆಸುತ್ತಿರುವವರು ಪ್ರಶ್ನಿಸುತ್ತಿದ್ದಾರೆ. ಆದರೆ ಇದೀಗ ಆ ಟೀಕೆ ಮಾಡುವವರ ಆಡಳಿತದಲ್ಲಿ ಏನನ್ನು ಮಾರಾಟ ಮಾಡುತ್ತಿದ್ದಾರೋ ಅದೆಲ್ಲವೂ ಕಾಂಗ್ರೆಸ್ ಆಡಳಿತದಲ್ಲಿನ ಕೊಡುಗೆ ಎಂಬ ಕುರಿತು ನಾವು ಅವರಿಗೆ ತಿಳಿ ಹೇಳಬೇಕಾಗಿದೆ ಎಂದು ವಿಧಾನಪರಿಷತ್ ಮಾಜಿ ಸಭಾಪತಿ ಪ್ರತಾಪ್ಚಂದ್ರ ಶೆಟ್ಟಿ ಹೇಳಿದ್ದಾರೆ.
ಅವರು ಇಂದು ಕುಂದಾಪುರ ತಾಲೂಕು ತೆಕ್ಕಟ್ಟೆಯ ದುರ್ಗಾಪರಮೇಶ್ವರಿ ಕಲ್ಯಾಣ ಮಂಟಪದಲ್ಲಿ ನಡೆದ ಬೀಜಾಡಿ ಜಿಲ್ಲಾ ಪಂಚಾಯತ್ ವ್ಯಾಪ್ತಿಯ ಗ್ರಾಮ ಪಂಚಾಯತ್ ಚುನಾವಣೆ ಸ್ಪರ್ಧಿಸಿ ಸೋತ ಮತ್ತು ಗೆದ್ದ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳನ್ನು ಅಭಿನಂದಿಸಿ ಮಾತನಾಡಿದರು.
ಸ್ವಾತಂತ್ರ್ಯ ಸಮರಕ್ಕೆ ಯಾವುದೇ ಕೊಡುಗೆ ಕೊಡದವರು ಅದೇ ಸ್ವಾತಂತ್ರ್ಯ ಸಮರದಲ್ಲಿ ಬರೋಬ್ಬರಿ ಒಂಭತ್ತು ವರ್ಷಗಳ ಕಾಲ ಜೈಲು ಶಿಕ್ಷೆ ಅನುಭವಿಸಿದ ನೆಹರೂ ಕುರಿತು ಟೀಕೆ ಮಾಡುತ್ತಿದ್ದಾರೆ ಎಂದವರು ಹೇಳಿದರು.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಶೋಕ್ ಕುಮಾರ್ ಕೊಡವೂರು ಬೂತ್ ಮಟ್ಟದಲ್ಲಿ ಪಕ್ಷವನ್ನು ಪುನರ್ ಸಂಘಟಿಸುವ ಕುರಿತು ಕರೆ ನೀಡಿದರು. ಹಿರಿಯ ಮುಖಂಡ ಮಲ್ಯಾಡಿ ಶಿವರಾಮ ಶೆಟ್ಟಿ ಯವರು ಸೋತ ಹಾಗೂ ಗೆದ್ದ ಕಾಂಗ್ರೆಸ್ ಅಭ್ಯರ್ಥಿಗಳನ್ನು ಅಭಿನಂದಸಿ ಮಾತನಾಡಿದರು.
ಈ ಸಂಧರ್ಭದಲ್ಲಿ ಮುಖಂಡರಾದ ಬಿ. ಹಿರಿಯಣ್ಣ, ಬಾಲಕೃಷ್ಣ ಪೂಜಾರಿ, ದೇವಕಿ ಸಣ್ಣಯ್ಯ, ಭಾಸ್ಕರ್ ಶೆಟ್ಟಿ ಮುಂತಾದವರು ಉಪಸ್ಥಿತರಿದ್ದರು.ಕುಂದಾಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಹರಿಪ್ರಸಾದ್ ಶೆಟ್ಟಿ ಪ್ರಸ್ತಾವಿಕವಾಗಿ ಮಾತನಾಡಿದರು. ನಾರಾಯಣ ಆಚಾರ್ ಸ್ವಾಗತಿಸಿದರು. ಆಶಾ ಕರ್ವಾಲೋ ಅಭ್ಯರ್ಥಿಗಳ ಪಟ್ಟಿ ವಾಚಿಸಿದರು. ಬ್ಲಾಕ್ ಕಾರ್ಯದರ್ಶಿ ವಿನೋದ್ ಕ್ರಾಸ್ಟೋ ಕಾರ್ಯಕ್ರಮವನ್ನು ನಿರೂಪಿಸಿದರು. ಶೋಭಾ ಸಚ್ಚಿದಾನಂದ ವಂದಿಸಿದರು.
