ಮಾಜಿ ಶಾಸಕ ಜಿ.ವಿ.ಶ್ರೀರಾಮರೆಡ್ಡಿ ಅವರ ನಿಧನದಿಂದ ಸಮಾಜದ ಶೋಷಿತ ವರ್ಗಕ್ಕೆ ದೊಡ್ಡ ನಷ್ಟ ಉಂಟಾಗಿದೆ : ಪಿ.ಆರ್.ಸೂರ್ಯನಾರಾಯಣ

ವರದಿ: ಶಬ್ಬೀರ್ ಅಹ್ಮದ್, ಶ್ರೀನಿವಾಸಪುರ

ಶ್ರೀನಿವಾಸಪುರ: ಮಾಜಿ ಶಾಸಕ ಜಿ.ವಿ.ಶ್ರೀರಾಮರೆಡ್ಡಿ ಅವರ ನಿಧನದಿಂದ ಸಮಾಜದ ಶೋಷಿತ ವರ್ಗಕ್ಕೆ ದೊಡ್ಡ ನಷ್ಟ ಉಂಟಾಗಿದೆ ಎಂದು ಜಿಲ್ಲಾ ಸಿಪಿಎಂ ಕಾರ್ಯದರ್ಶಿ ಮಂಡಳಿ ಸದಸ್ಯ ಪಿ.ಆರ್.ಸೂರ್ಯನಾರಾಯಣ ಹೇಳಿದರು.
ಪಟ್ಟಣದ ಸರ್ಕಾರಿ ನೌಕರರ ಭವನದಲ್ಲಿ, ಈಚೆಗೆ ನಿಧನರಾದ ಬಾಗೇಪಲ್ಲಿ ಮಾಜಿ ಶಾಸಕ ಜಿ.ವಿ.ಶ್ರೀರಾಮರೆಡ್ಡಿ ಅವರ ಗೌರವಾರ್ಥ ಗುರುವಾರ ಏರ್ಪಡಿಸಿದ್ದ ಶ್ರದ್ಧಾಂಜಲಿ ಸಭೆಯಲ್ಲಿ ಮಾತನಾಡಿದ ಅವರು, ಜಿ.ವಿ.ಶ್ರೀರಾಮರೆಡ್ಡಿ ಬಡವರ ಸಮಸ್ಯೆಗಳನ್ನು ಎತ್ತಿಗೊಂಡು ಹೋರಾಟ ಮಾಡುತ್ತಿದ್ದರು. ತಮ್ಮ ಬದುಕನ್ನು ಬಡವರ ಸೇವೆಗಾಗಿ ಮೀಸಲಿಟ್ಟಿದ್ದರು ಎಂದು ಹೇಳಿದರು.
ರೋಟರಿ ಶ್ರೀನಿವಾಸಪುರ ಸೆಂಟ್ರಲ್ ಡಾ. ವೈ.ವಿ.ವೆಂಕಟಾಚಲ ಮಾತನಾಡಿ, ಜಿ.ವಿ.ಶ್ರೀರಾಮರೆಡ್ಡಿ ಅವರದು ಅಪರೂಪದ ವ್ಯಕ್ತಿತ್ವ. ಅವರು ಸಮಸ್ಯೆಗಳೊಂದಿಗೆ ಎಂದೂ ರಾಜಿ ಮಾಡಿಕೊಂಡವರಲ್ಲ. ಬಡವರ ಸಮಸ್ಯೆಗಳ ನಿವಾರಣೆಗಾಗಿ ಶಕ್ತಿ ಮೀರಿ ಶ್ರಮಿಸುತ್ತಿದ್ದರು. ಅವರ ನಿಧನದಿಂದ ಸಮಾಜಕ್ಕೆ ದೊಡ್ಡ ನಷ್ಟ ಉಂಟಾಗಿದೆ ಎಂದು ಹೇಳಿದರು.
ಮುಖಂಡರಾದ ಕೆ.ಕೆ.ಮಂಜು, ಎನ್.ವೀರಪ್ಪರೆಡ್ಡಿ, ಆಂಜಲಮ್ಮ, ವಿ.ಆನಂದ್, ಜಯಮ್ಮ, ಸೈಯದ್, ಲಿಂಬ್ರಾವಾಟರ್, ಅಸ್ಲಾಂ ಪಾಷ, ನಾಸೀರ್, ಷರೀಫ್, ಕೆ.ವಿ.ನಾಗರಾಜ್, ಉಪೇಂದ್ರ, ಕೃಷ್ಣಪ್ಪ, ಆರ್.ವೆಂಕಟೇಶ್, ಹೊದಲಿ ನಾರಾಯಣಸ್ವಾಮಿ ಮಾತನಾಡಿ, ಜಿ.ವಿ.ಶ್ರೀರಾಮರೆಡ್ಡಿ ಅವರ ಸಮಾಜ ಸೇವೆಯನ್ನು ಕೊಂಡಾಡಿದರು.