ಗಣಿತವನ್ನು ಸಂತಸದಿಂದ ಕಲಿಸಿ ; ಸಿ ಆರ್ ಅಶೋಕ್

ವರದಿ: ಶಬ್ಬೀರ್ ಅಹ್ಮದ್, ಶ್ರೀನಿವಾಸಪುರ

ಕೋಲಾರ ಡಿ. 4 : ವಿಶ್ವ ಉದಯ ಆದಾಗಿನಿಂದಲೂ ಅದರೊಟ್ಟಿಗೆ ಗಣಿತವೂ ಸಾಗಿಬಂದಿದೆ ಪ್ರತಿಯೊಂದಕ್ಕೂ ಗಣಿತ ಲೆಕ್ಕಾಚಾರ ಬೇಕೇಬೇಕು. ಆದ್ದರಿಂದ ವಿದ್ಯಾರ್ಥಿಗಳಲ್ಲಿ ಹೆಚ್ಚು ಗಣಿತಕ್ಕೆ ಹೆಚ್ಚು ಒಲವು ನೀಡಿ, ಸಂತಸದಿಂದ ಕಲಿಯಲು ಶಿಕ್ಷಕರು ನೆರವಾಗುವ ಅಗತ್ಯವಿದೆ ಎಂದು ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆ ಶಿಕ್ಷಣಾಧಿಕಾರಿ ಸಿ.ಆರ್.ಅಶೋಕ್ ತಿಳಿಸಿದರು
ನಗರದ ಸ್ಕೌಟ್ ಭವನದಲ್ಲಿ ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ ಕರ್ನಾಟಕ ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಮಂಡಳಿ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆ ವತಿಯಿಂದ ನಡೆಯುತ್ತಿರುವ ಪ್ರೌಢಶಾಲಾ ಗಣಿತ ಶಿಕ್ಷಕರ ಕಾರ್ಯಾಗಾರದಲ್ಲಿ ಶಿಕ್ಷಕರಿಗೆ ಪ್ರಶಸ್ತಿ ಪತ್ರ ನೀಡಿ, ಸಮಾರೋಪ ಭಾಷಣ ಮಾಡಿ ಅವರು ಮಾತನಾಡುತ್ತಿದ್ದರು .
ಮಕ್ಕಳಿಗೆ ಗಣಿತ ಎಂದರೆ ಜೀವನದ ಲೆಕ್ಕಾಚಾರವಿದ್ದಂತೆ ಇದನ್ನು ಶಿಕ್ಷಕರು ತಿಳಿಸುವ ಮೂಲಕ ಮಕ್ಕಳಿಗೆ ಜೀವನದ ಪಾಠ ಕಲಿಸಬೇಕು.ಶಿಕ್ಷಕರು ಗಣಿತವನ್ನು ವಿದ್ಯಾರ್ಥಿಗಳಿಗೆ ಮನಮುಟ್ಟುವಂತೆ ಲೆಕ್ಕಗಳ ಮೂಲಕ ತಿಳಿಸಬೇಕು ಇದಕ್ಕೆ ಬೇಕಾದ ಜ್ಞಾನವನ್ನು ಗಣಿತ ಕಾರ್ಯಾಗಾರಗಳಿಂದ ಪಡೆದುಕೊಳ್ಳಬೇಕು ಎಂದರು .
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ ಅಧ್ಯಕ್ಷ ಡಾ. ಕೆ.ಶ್ರೀನಿವಾಸ್ ಮಾತನಾಡಿ ಸಮಿತಿಯ ವತಿಯಿಂದ ಈಗಾಗಲೇ ಅನೇಕ ಕಾರ್ಯಕ್ರಮಗಳನ್ನು ನಡೆಸುತ್ತಿದ್ದು ಶಿಕ್ಷಕರಿಗಾಗಿ ಗಣಿತ, ವಿಜ್ಞಾನ ಕಾರ್ಯಕ್ರಮಗಳನ್ನು ಮುಂದುವರಿಸುವುದಾಗಿ ತಿಳಿಸಿದರು .
ಭಾಗವಹಿಸುವ ಶಿಕ್ಷಕರಿಗೆ ಪ್ರಶಸ್ತಿ ಪತ್ರಗಳನ್ನು ವಿತರಿಸಿದ ಈ ಸಮಾರಂಭದಲ್ಲಿ ಶಿಕ್ಷಣ ಇಲಾಖೆಯ ವಿಷಯ ಪರಿವೀಕ್ಷಕ ವಿ.ಕೃಷ್ಣಪ್ಪ, ಜಿಲ್ಲಾ ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ ಗೌರವಾಧ್ಯಕ್ಷ ಜಿ.ಶ್ರೀನಿವಾಸ್, ಜಿಲ್ಲಾ ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯರ ಸಂಘದ ಉಪಾಧ್ಯಕ್ಷ ಬಂಗವಾದಿ ನಾಗರಾಜ್ ಮತ್ತಿತರರು ಉಪಸ್ಥಿತರಿದ್ದರು
ಸಮಿತಿಯ ಉಪಾಧ್ಯಕ್ಷ ಎಂ.ವಿ.ಜನಾರ್ಧನ್ ಸ್ವಾಗತಿಸಿ, ಖಜಾಂಚಿ ಡಾ.ಎಸ್.ಪಿ.ವೆಂಕಟಕೃಷ್ಣಪ್ಪ ನಿರೂಪಿಸಿ ಕಾರ್ಯದರ್ಶಿ ವಿಟ್ಟಪನಹಳ್ಳಿ ಜಗನ್ನಾಥ್ ವಂದಿಸಿದರು