

ಶ್ರೀನಿವಾಸಪುರ : ಶಿಕ್ಷಕರು ವಿದ್ಯಾರ್ಥಿಗಳನ್ನು ತಿದ್ದಬೇಕು, ತೀಡಬೇಕು, ವಿದ್ಯಾರ್ಥಿಗಳ ಚಿಂತನೆಗಳನ್ನ ಚರ್ಚಿಸಿ, ಅವುಗಳನ್ನು ಪ್ರೋತ್ಸಾಹಿಸಿ ಅವರನ್ನ ವಜ್ರದ ರೀತಿಯಲ್ಲಿ ತಯಾರಿಸುವ ಜವಾಬ್ದಾರಿ ಶಿಕ್ಷಕರ ಮೇಲಿದೆ. ವಿಶೇಷವಾಗಿ ವಿದ್ಯಾರ್ಥಿಗಳ ಪೋಷಕರು ಶಿಕ್ಷಕರೊಂದಿಗೆ ಕೈಜೋಡಿಸಿ ವಿದ್ಯಾರ್ಥಿಗಳ ಗುರಿಯನ್ನು ಮಟ್ಟುವಂತೆ ಪ್ರೋತ್ಸಾಹಿಸಬೇಕು ಎಂದು ನಿವೃತ್ತ ಐಎಎಸ್ ಅಧಿಕಾರಿ ಎನ್.ಸಿ.ಮುನಿಯಪ್ಪ ಎಂದರು.
ತಾಲೂಕಿನ ರೋಣೂರು ಕ್ರಾಸ್ ಬಳಿಯ ವಿಐಪಿ ಶಾಲೆಯ ಆವರಣದಲ್ಲಿ ಶುಕ್ರವಾರ ನಡೆದ ಶಾಲಾಕಾಲೇಜು ವಾರ್ಷಿಕೋತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಸಮಾಜಕ್ಕೆ ಪ್ರತಿಷ್ಟ ವ್ಯಕ್ತಿಗಳನ್ನು ರೂಪಿಸುವ ಶಿಕ್ಷಣ ಸಂಸ್ಥೆಯಾಗಿದ್ದು, ಇಂದಿನ ದಿನಗಳಲ್ಲಿ ಪ್ರತಿಯೊಬ್ಬರಿಗೂ ಸಹ ಶಿಕ್ಷಣ ಬೇಕು . ಶಿಕ್ಷಣವಿಲ್ಲದ ಸಮಾಜವನ್ನು ನಾವು ನೋಡಲು ಸಾಧ್ಯವಾಗುವುದಿಲ್ಲ. ಆದ್ದರಿಂದ ಪ್ರತಿಯೊಬ್ಬರು ಸಹ ಸ್ಪರ್ಧಾತ್ಮಿಕ ಜಗತ್ತನ್ನು ಮನಗಂಡು ಉತ್ತಮ ಶಿಕ್ಷಣವನ್ನು ಪಡೆಯುವಂತೆ ತಿಳಿಸಿದರು.
ವಿಐಪಿ ಶಾಲಾಕಾಲೇಜಿನ ಆಡಳಿತ ಮಂಡಲಿ ಅಧ್ಯಕ್ಷ ಡಾ||ಕೆ.ಎನ್.ವೇಣುಗೋಪಾಲ್ರೆಡ್ಡಿ ಮಾತನಾಡಿ ಸ್ಪರ್ಧಾತ್ಮಕ ಜಗತ್ತಿನಲ್ಲಿ ಕಲಿಯುತ್ತಿರುವ ಮಕ್ಕಳಿಗೆ ಪ್ರಸಕ್ತ ವಿದ್ಯಾಮಾನಗಳು ಜ್ಞಾನ ಅತ್ಯವಶ್ಯಕ .ಇಂತಹ ಜ್ಞಾನವನ್ನು ವೃದ್ದಿಗೊಳಿಸಲು ವಿದ್ಯಾರ್ಥಿಗಳು ಹೆಚ್ಚು ಆಸಕ್ತಿ ವಹಿಸಿಕೊಳ್ಳಬೇಕಾಗಿದೆ .
ಈ ಕಾರ್ಯಕ್ರಮದಲ್ಲಿ ಕಳೆದ ಸಾಲಿನಲ್ಲಿ ಎಸ್ಎಸ್ಎಲ್ಸಿ ಮತ್ತು ಪಿಯುಸಿ ಪರೀಕ್ಷೆ ಹೆಚ್ಚು ಅಂಕಗಳನ್ನು ಪಡೆದ ವಿದ್ಯಾರ್ಥಿಗಳನ್ನು ಹಾಗು ಪೋಷಕರನ್ನ ಸನ್ಮಾನಿಸಲಾಯಿತು. ಬೆಂಗಳೂರಿನ ಕಿಮ್ಸ್ ಆಸ್ಪತ್ರೆಯ ಚೇರ್ಮೆನ್ ಡಾ|| ವಿ.ನಾರಾಯಣಸ್ವಾಮಿ, ಅಸಿಸ್ಟೆಂಟ್ ಇನ್ಕಮ್ ಟ್ಯಾಕ್ಸ್ ಅಧಿಕಾರಿ ಡಾ||ಗೌತಮ್ , ಅಗ್ರಿಕ್ಲಚರಲ್ ನಿವೃತ್ತ ಅಧಿಕಾರಿ ನಾರಾಯಣಪ್ಪ , ವಿಐಪಿ ಶಾಲಾಕಾಲೇಜಿನ ಆಡಳಿತ ಮಂಡಲಿ ಕಾರ್ಯದರ್ಶಿ ಕವಿತಾ, ಪಿಯುಸಿ ಪ್ರಾಂಶುಪಾಲ ಡಾ|| ರಾಜಕುಮಾರ್, ಪ್ರಾಂಶುಪಾಲೆ ತಬ್ಸುಮ್ಸುಲ್ತಾನ ಹಾಗು ಶಾಲಾಕಾಲೇಜಿನ ಸಿಬ್ಬಂದಿ ಇದ್ದರು.

