

ಶ್ರೀನಿವಾಸಪುರ. ಮೆ..1: ಕಾರ್ಮಿಕರ ಬೆವರ ಹನಿ ಮಾಸುವ ಮುನ್ನ ದುಡಿಮೆಯ ಹಣವನ್ನು ಕಾರ್ಮಿಕರಿಗೆ ಪಾವತಿಸುವ ಜೊತೆಗೆ ಕಾರ್ಮಿಕರ ಇಲಾಖೆಯಲ್ಲಿ ನಕಲಿ ದಾಖಲೆ ಸೃಷ್ಟಿ ಮಾಡಿ, ಕೋಟಿ ಕೋಟಿ ಲೂಟಿ ಮಾಡುವ ದಲ್ಲಾಳಿಗಳ ಹಾವಳಿಗೆ ಕಡಿವಾಣ ಹಾಕಬೇಕೆಂದು ರಾಜ್ಯ ರೈತ ಸಂಘದ ಮಹಿಳಾ ಜಿಲ್ಲಾಧ್ಯಕ್ಷ ಎ.ನಳಿನಿಗೌಡ ಸರ್ಕಾರಗಳನ್ನು ಒತ್ತಾಯಿಸಿದರು.
ವಿಶ್ವ ಕಾರ್ಮಿಕರ ದಿನಾಚರಣೆಯನ್ನು ಪ್ರಗತಿಪರ ರೈತ ಮಹಿಳೆ ಸಶೀಲ ರವರು ಕೃಷಿ ಭೂಮಿಯಲ್ಲಿ ದುಡಿಯುವ ರೈತ ಮಹಿಳೆಯರಿಗೆ ಸಿಹಿ ಹಂಚಿ ಮಾತನಾಡಿದ ರವರು, ಕೃಷಿ ಕ್ಷೇತ್ರದಿಂದ ಪ್ರಾರಂಭವಾಗುವ ಕಾರ್ಮಿಕರ ದುಡಿಮೆ ಕೈಗಾರಿಕೆ ಕ್ಷೇತ್ರ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಕಾರ್ಮಿಕರ ಸೇವೆ ಊಹಸಿಕೊಳ್ಳಲಾಗದ ಸೇವೆಯಾಗಿದೆ ಎಂದು ಕಾರ್ಮಿಕರ ಕಾರ್ಯವೈಖರಿ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದರು.
ಪ್ರತಿಯೊಂದು ದೇಶದ ಆರ್ಥಿಕ ಅಭಿವೃದ್ಧಿಯ ಆ ದೇಶದ ಕಾರ್ಮಿಕರ ಮೇಲೆ ಅವಲಂಭಿತವಾಗಿರುತ್ತದೆ. ದಕ್ಷತೆಯಿಂದ ಕೂಡಿದ ಕಾರ್ಮಿಕ ವರ್ಗ ಮಾತ್ರ ದೇಶದ ಆರ್ಥಿಕ ಪ್ರಗತಿ ಸಾಧ್ಯ. ಕಾರ್ಮಿಕರ ಪ್ರತಿ ನಿಮಿಷದ ಹನಿಹನಿ ಬೆವರೂ ಸಹ ದೇಶದ ಆರ್ಥಿಕತೆಯ ಅಭಿವೃದ್ಧಿಯ ಮೆಟ್ಟಿಲು. ಕಾರ್ಮಿಕ ಕೈ ಬಿಟ್ಟರೆ ಆರ್ಥಿಕತೆ ನೆಲಕಚ್ಚುವ ಜೊತೆಗೆ ಕಾರ್ಮಿಕರಿಲ್ಲದ ದೇಶವನ್ನು ಊಹೆ ಮಾಡಿಕೊಳ್ಳಲು ಸಾಧ್ಯವಿಲ್ಲವೆಂದರು.
ದಿನದ 24 ಗಂಟೆ ದುಡಿಯುವ ಕಾರ್ಮಿಕನ ಬೆವರ ಹನಿಯೇ ಮಾಲೀಕನ ಶ್ರೀಮಂತಿಕೆಯ ಮೆಟ್ಟಿಲು. ಆದರೆ, ಅದೇ ಮಾಲೀಕ ಕಾರ್ಮಿಕರನ್ನು ಹೆಜ್ಜೆ ಹೆಜ್ಜೆಗೂ ವೇತನದಿಂದ ಹಿಡಿದು ಮೂಲಭೂತ ಸೌಕರ್ಯಗಳನ್ನು ನೀಡದೆ ವಂಚನೆ ಮಾಡುತ್ತಿರುವುದು ದುರಾದೃಷ್ಟಕರವಾಗಿದ್ದು, ಈ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸುವಲ್ಲಿ ಸರ್ಕಾರಗಳು ವಿಫಲವಾಗಿವೆ ಎಂದು ಅವ್ಯವಸ್ಥೆ ವಿರುದ್ಧ ಅಸಮಧಾನ ವ್ಯಕ್ತಪಡಿಸಿದರು.
ಕೂಲಿಕಾರ್ಮಿಕ ಮಹಿಳೆ ಶೈಲಜ ಮಾತನಾಡಿ ದಿನದ 24 ಗಂಟೆ ದುಡಿಯುವ ಕಾರ್ಮಿಕರಿಗೆ ಕಾರ್ಮಿಕ ಇಲಾಖೆ ನಿಯಮದ ಪ್ರಕಾರ ಮಾಲೀಕನು ಕನಿಷ್ಠ ವೇತನ ನೀಡಬೇಕು. ಹಾಗೂ ಗುಣಮಟ್ಟದ ಆಹಾರ, ಆರೋಗ್ಯ, ಕಾರ್ಮಿಕರ ಮಕ್ಕಳಿಗೆ ಶಿಕ್ಷಣವನ್ನು ನೀಡಬೇಕಾದ ಮಾಲೀಕನು ಯಾವುದೇ ಕಾರ್ಮಿಕ ನಿಯಮಗಳನ್ನು ಪಾಲನೆ ಮಾಡದೆ ಕಾರ್ಮಿಕ ವಿರೋಧಿ ನೀತಿಗಳನ್ನು ಅನುಸರಿಸುವ ಮುಖಾಂತರ ಕಾರ್ಮಿಕರ ಮೇಲೆ ದಬ್ಬಾಳಿಕೆ ಮಾಡುತ್ತಿದ್ದಾರೆ ಎಂದು ಆರೋಪ ಮಾಡಿದರು.
ಕಾರ್ಮಿಕರ ಹೆಸರಿನಲ್ಲಿ ಹಗಲು ದರೋಡೆ ಮಾಡುತ್ತಿರುವ ಕಾರ್ಮಿಕ ಇಲಾಖೆ ದುಡಿಯುವ ಕೈಗೆ ಕೆಲಸ ನೀಡುವ ಸರ್ಕಾರ ಅದೇ ದುಡಿಯುವ ಕಾರ್ಮಿಕರಿಗೆ ಸರ್ಕಾರದಿಂದ ವಿವಿಧ ಅನುದಾನಗಳ ಹೆಸರಿನಲ್ಲಿ ಕೋಟ್ಯಾಂತರ ರೂಪಾಯಿ ಹಣ ಬಿಡುಗಡೆಯಾಗುತ್ತಿದ್ದರೂ ಅಧಿಕಾರಿಗಳು ನಕಲಿ ದಾಖಲೆಗಳನ್ನು ಸೃಷ್ಠಿ ಮಾಡಿ ಕೋಟಿಕೋಟಿ ಹಣವನ್ನು ಕಾರ್ಮಿಕರ ಹೆಸರಿನಲ್ಲಿ ಹಗಲು ದರೋಡೆ ಮಾಡಿ ನೆಪ ಮಾತ್ರಕ್ಕೆ ಶೇ.10ರಷ್ಟು ಕಾರ್ಮಿಕರಿಗೆ ನೆಪ ಮಾತ್ರದ ಯೋಜನೆಗಳನ್ನು ಕೈಗೆ ಕೊಟ್ಟು ತಪ್ಪಿಸಿಕೊಳ್ಳುತ್ತಿದ್ದಾರೆ ಎಂದು ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಕಾರ್ಮಿಕರ ವರ್ಗವನ್ನು ಶ್ರಮಿಕರ ವರ್ಗವೆಂದು ಪರಿಗಣಿಸಿ ಸರ್ಕಾರ ಕಾರ್ಮಿಕರನ್ನು ವಂಚನೆ ಮಾಡುವ ಕಾರ್ಖಾನೆಗಳ ಜೊತೆಗೆ ವಿವಿಧ ಕ್ಷೇತ್ರಗಳಲ್ಲಿನ ಕಾರ್ಮಿಕರ ರಕ್ಷಣೆಗೆ ಪ್ರಭಲ ಕಾನೂನು ಜಾರಿಗೆ ತರುವ ಮುಖಾಂತರ ಬೆವರ ಹನಿಗೆ ತಕ್ಕ ಪ್ರತಿಫಲ ಸಿಗುವಂತೆ ಮಾಡಬೇಕೆಂದು ಈ ಸಂದರ್ಭದಲ್ಲಿ ಸರ್ಕಾರವನ್ನು ಒತ್ತಾಯಿಸಿದರು.
ಕಾರ್ಯಕ್ರಮದಲ್ಲಿ ರೈತ ಸಂಘದ ರಾಜ್ಯ ಉಪಾಧ್ಯಕ್ಷ ಕೆ.ನಾರಾಯಣಗೌಡ, ಜಿಲ್ಲಾದ್ಯಕ್ಷ ಈಕಂಬಳ್ಳಿ ಮಂಜುನಾಥ್, ಯಾರಂಘಟ್ಟ ಗಿರೀಶ್, ಪುತ್ತೇರಿ ರಾಜು, ಭಾಗ್ಯಮ್ಮ, ರತ್ನಮ್ಮ, ವೆಂಕಟಮ್ಮ, ಮುನಿರತ್ನ, ಗೌರಮ್ಮ, ಸುನಿತಮ್ಮ ಮುಂತಾದವರು ಇದ್ದರು.
