ಫೋನ್ ಇನ್ ಕಾರ್ಯಕ್ರಮ-ಎಸ್ಸೆಸ್ಸೆಲ್ಸಿ ಮಕ್ಕಳ ಗೊಂದಲ ನಿವಾರಣೆ 850ಕರೆ 1100 ಪ್ರಶ್ನೆ-ಸಂಪನ್ಮೂಲ ಶಿಕ್ಷಕರ ಉತ್ತರ-ಕೃಷ್ಣಮೂರ್ತಿ

ವರದಿ: ಶಬ್ಬೀರ್ ಅಹಮ್ಮದ್, ಶ್ರೀನಿವಾಸಪುರ

ಕೋಲಾರ:- ಕೋವಿಡ್ 2ನೇ ಅಲೆಯ ಭೀತಿಯ ನಡುವೆ ಎಸ್ಸೆಸ್ಸೆಲ್ಸಿ ಮಕ್ಕಳ ಗೊಂದಲ ನಿವಾರಣೆಗೆ ಶಿಕ್ಷಣ ಇಲಾಖೆ ನಡೆಸಿದ ಈ ಸಾಲಿನ 2ನೇ ಫೋನ್ ಇನ್ ಕಾರ್ಯಕ್ರಮದಲ್ಲಿ 850 ಕರೆಗಳು ಮಾಡಿದ ವಿದ್ಯಾರ್ಥಿ,ಪೋಷಕರು 1100ಕ್ಕೂ ಹೆಚ್ಚು ಪ್ರಶ್ನೆಗಳನ್ನು ಕೇಳಿದ್ದು, ಸಂಪನ್ಮೂಲ ವ್ಯಕ್ತಿಗಳಿಂದ ಸಮರ್ಪಕ ಉತ್ತರ ನೀಡಲಾಗಿದೆ ಎಂದು ಡಿಡಿಪಿಐ ಕೃಷ್ಣಮೂರ್ತಿ ತಿಳಿಸಿದರು.
ಸಾರ್ವಜನಿಕ ಶಿಕ್ಷಣ ಇಲಾಖೆ ಆಶ್ರಯದಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆ ಎದುರಿಸಲಿರುವ ಮಕ್ಕಳಲ್ಲಿನ ಗೊಂದಲ ನಿವಾರಣೆಗಾಗಿ ಗುರುವಾರ ತಮ್ಮ ಕಚೇರಿ ಸಭಾಂಗಣದಲ್ಲಿ ನಡೆಸಿದ 2ನೇ ಫೋನ್ ಇನ್ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡುತ್ತಿದ್ದರು.
ಪ್ರಶ್ನೆ ಕೇಳಿದ ಕೆಲವು ಪೋಷಕರು ಕೋವಿಡ್ ಭಯ ವ್ಯಕ್ತಪಡಿಸಿದರು. ಆದರೆ ಮಕ್ಕಳಲ್ಲಿ ಕೋವಿಡ್ ಮತ್ತು ಪರೀಕ್ಷಾ ಭಯ ಕಾಣಲಿಲ್ಲ, ಪ್ರತಿಯೊಬ್ಬರೂ ಪರೀಕ್ಷಾ ಸಿದ್ದತೆ, ಪಠ್ಯ ಕಡಿತದ ಮಾಹಿತಿ, ಪರೀಕ್ಷಾ ವಿಧಾನ, ಪ್ರಶ್ನೆಪತ್ರಿಕೆ ಮಾದರಿ ಹೀಗೆ ಗೊಂದಲ ಪರಿಹಾರಕ್ಕೆ ಪ್ರಶ್ನೆ ಕೇಳಿದರೆ ಕೆಲವು ಮಕ್ಕಳು ಪರೀಕ್ಷೆ ನಡೆಯುವುದೇ ಎಂದು ಪ್ರಶ್ನಿಸಿದರು.
ಕೋವಿಡ್ ಸೋಂಕು ತೀವ್ರಗತಿಯಲ್ಲಿ ಏರಿಕೆಯಾಗುತ್ತಿರುವುದರಿಂದ ಪೋಷಕರಲ್ಲಿ ಭಯ ಸರ್ವೇಸಾಮಾನ್ಯ, ಪರೀಕ್ಷೆ ಹೇಗೆ ನಡೆಸುತ್ತೀರಿ ಎಂಬ ಪ್ರಶ್ನೆಗಳೂ ಪೋಷಕರಿಂದ ಕೇಳಿ ಬಂದಿದ್ದು, ಅವರ ಗೊಂದಲ ನಿವಾರಿಸಲಾಗಿದೆ ಎಂದರು.
ಪರೀಕ್ಷೆ ನಡೆಸಲು ಸರ್ಕಾರ ಸೂಚಿಸಿದರೆ ಕೋವಿಡ್ ಮಾರ್ಗಸೂಚಿಯನ್ನು ಕಟ್ಟುನಿಟ್ಟಾಗಿ ಪಾಲಿಸಿ ನಡೆಸಲು ಇಲಾಖೆ ಸಿದ್ದತೆ ನಡೆಸಲಿದೆ, ಆದರೆ ಸರ್ಕಾರ, ಶಿಕ್ಷಣ ಇಲಾಖೆಯೇ ಅಂತಿಮ ಎಂದರು.
ಗಣಿತ ವಿಷಯದ್ದೇ
ಅತಿ ಹೆಚ್ಚು ಪ್ರಶ್ನೆ
ಪರೀಕ್ಷಾ ನೋಡಲ್ ಅಧಿಕಾರಿ ಎ.ಎನ್.ನಾಗೇಂದ್ರಪ್ರಸಾದ್, ಫೋನ್ ಇನ್ ಕಾರ್ಯಕ್ರಮದಲ್ಲಿ ಮಕ್ಕಳು ಕೇಳಿದ ಪ್ರಶ್ನೆಗಳ ಕುರಿತು ಮಾಹಿತಿ ನೀಡಿ, ಪರೀಕ್ಷಾ ವಿಧಾನಕ್ಕೆ ಸಂಬಂಧಿಸಿದಂತೆ 80 ಪ್ರಶ್ನೆಗಳು ಮಕ್ಕಳಿಂದ ಬಂತು ಎಂದರು.
ಉಳಿದಂತೆ ಕನ್ನಡ ವಿಷಯಕ್ಕೆ ಸಂಬಂಧಿಸಿದಂತೆ 135 ಕರೆ,140 ಪ್ರಶ್ನೆ, ಇಂಗ್ಲೀಷ್ ವಿಷಯಕ್ಕೆ 97 ಕರೆ 110 ಪ್ರಶ್ನೆ, ಹಿಂದಿಗೆ 102ಕರೆ 210 ಪ್ರಶ್ನೆ, ಗಣಿತ ವಿಷಯಕ್ಕೆ ಸಂಬಂಧಿಸಿದಂತೆ 151 ಕರೆ 200 ಪ್ರಶ್ನೆ, ವಿಜ್ಞಾನ ವಿಷಯಕ್ಕೆ 146 ಕರೆ 180 ಪ್ರಶ್ನೆ ಹಾಗೂ ಸಮಾಜವಿಜ್ಞಾನ ವಿಷಯಕ್ಕೆ ಸಂಬಂಧಿಸಿದಂತೆ 129 ಕರೆ ಹಾಗೂ 160 ಪ್ರಶ್ನೆಗಳನ್ನು ಮಕ್ಕಳು ಕೇಳಿದರು ಎಂದು ವಿವರಿಸಿದರು.
ಮಕ್ಕಳು ಅತಿ ಹೆಚ್ಚು ಅಂಕ ಗಳಿಸಲು ಏನು ಮಾಡಬೇಕು ಎಂಬ ಪ್ರಶ್ನೆಗೆ ಉತ್ತರಿಸಿದ ನಾಗೇಂದ್ರಪ್ರಸಾದ್, ಪಠ್ಯಪುಸ್ತಕ ಓದುವ ಅಭ್ಯಾಸ ರೂಢಿಸಿಕೊಳ್ಳಿ, ಪ್ರತಿಅಧ್ಯಾಯದ ಅಭ್ಯಾಸದಲ್ಲಿನ ಪ್ರಶ್ನೆಗಳಿಗೆ ಉತ್ತರಿಸಿ, ಇಲಾಖೆ ನೀಡಿರುವ ಅಧ್ಯಾಯವಾರು ಪ್ರಶ್ನೆಪತ್ರಿಕೆ, `ನನ್ನನ್ನೊಮ್ಮೆ ಗಮನಿಸಿ’ಪ್ರಶ್ನೋತ್ತರ ಮಾಲಿಕೆಯನ್ನು ಓದಿ, ಪ್ರಶ್ನೆಗಳಿಗೆ ನೀವೇ ಉತ್ತರ ಬರೆದು ಅಭ್ಯಾಸ ಮಾಡಿ ಎಂದು ಸಲಹೆ ನೀಡಿದರು.
ಶೇ.10 ರಷ್ಟು ಮಾತ್ರ
ಕಠಿಣ ಪ್ರಶ್ನೆಗಳು
ನಿರಂತರ ಪುನರ್ಮನನ ಮಾಡಿದರೆ ಎಲ್ಲಾ ಉತ್ತರಗಳು ನೆನಪಿನಲ್ಲಿರಲು ಸಾಧ್ಯ, ಎಂದ ಅವರು, ಈ ಬಾರಿ ಪ್ರಶ್ನೆ ಪತ್ರಿಕೆ ಸುಲಭವಾಗಿರಲಿದೆ, ಶೇ.10 ರಷ್ಟು ಮಾತ್ರ ಕಠಿಣ ಪ್ರಶ್ನೆಗಳು ಇರುತ್ತವೆ, ಪುಸ್ತಕದಲ್ಲಿನ ಮಾಹಿತಿ ಹೊರತು ಪಡಿಸಿ ಬೇರಾವುದೇ ಪ್ರಶ್ನೆ ಕೇಳುವುದಿಲ್ಲ ಎಂದು ಸ್ವಷ್ಟಪಡಿಸಿದರು.
ಕನ್ನಡ,ಇಂಗ್ಲೀಷ್, ಹಿಂದಿಯಲ್ಲಿ ಮಕ್ಕಳು ವ್ಯಾಕರಣದ ಕುರಿತು ಹೆಚ್ಚು ಪ್ರಶ್ನೆ ಕೇಳಿದರೆ, ಗಣಿತದಲ್ಲಿ 4 ಅಂಕಗಳ ಪ್ರಶ್ನೆ,ಗ್ರಾಪ್ ಲೆಕ್ಕಗಳ ಕುರಿತು ಪ್ರಶ್ನೆ ಕೇಳಿದರು.
ವಿಜ್ಞಾನದಲ್ಲಿ ಅನುವಂಶಿಕತೆ ಮತ್ತು ಮಾನವಿ ವಿಕಾಸದ ಅಧ್ಯಾಯಗಳಿಂದ ಹೆಚ್ಚಿನ ಪ್ರಶ್ನೆ ಕೇಳಿದ ಮಕ್ಕಳು, ಸಮಾಜದಲ್ಲಿ 3-4 ಅಂಕದ ಪ್ರಶ್ನೆಗಳ ಕುರಿತು ಮಾಹಿತಿ ಕೇಳಿದರು.
ಫೋನ್ ಇನ್ ಕಾರ್ಯಕ್ರಮದಲ್ಲಿ ಶಿಕ್ಷಣಾಧಿಕಾರಿ ಸಿ.ಆರ್.ಅಶೋಕ್,
ವಿಷಯ ಪರಿವೀಕ್ಷಕರಾದ ಗಾಯತ್ರಿ,ಶಶಿವಧನ, ಕೃಷ್ಣಪ್ಪ, ವೆಂಕಟೇಶಪ್ಪ ಹಾಜರಿದ್ದರು.
ಮಕ್ಕಳ ಪ್ರಶ್ನೆಗಳಿಗೆ ಸಂಪನ್ಮೂಲ ವ್ಯಕ್ತಿಗಳಾದ ನರಸಿಂಹಪ್ರಸಾದ್, ಮುಖ್ಯಶಿಕ್ಷಕ ಹನುಮನಹಳ್ಳಿ ಬಿ.ಕೆ.ನಾಗರಾಜ್, ಬಿ.ಎ.ಕವಿತಾ, ಎನ್.ಎಸ್.ಭಾಗ್ಯ ಚಿತ್ರಾ, ಬಸವರಾಜಯ್ಯ, ರಮಾ, ವೇಣುಗೋಪಾಲ್, ಕವಿತಾ, ಶ್ರೀನಿವಾಸಗೌಡ ಮತ್ತಿತರರು ಮಕ್ಕಳ ಪ್ರಶ್ನೆಗಳಿಗೆ ಉತ್ತರ ನೀಡಿ ಗೊಂದಲ ಪರಿಹರಿಸಿದರು
.