ಶ್ರೀನಿವಾಸಪುರ:ತಾಡಿಗೋಳ್ ಬಳಿ ವಿದ್ಯಾರ್ಥಿನೀಯರ ಮೇಲೆ ನಡೆದ ಘಟನೆಯನ್ನು ಖಂಡಿಸಿ ದಲಿತ ಸಂಘಟನೆಗಳ 11 ಕಿ.ಮೀಟರ್ ಕಾಲ್ನಡಿಗೆ ಜಾಥ

ವರದಿ : ಶಬ್ಬೀರ್ ಅಹ್ಮದ್ ,ಶ್ರೀನಿವಾಸಪುರ

ಶ್ರೀನಿವಾಸಪುರ:ತಾಡಿಗೋಳ್ ಬಳಿ ವಿದ್ಯಾರ್ಥಿನೀಯರ ಮೇಲೆ ನಡೆದ ಘಟನೆಯನ್ನು ಖಂಡಿಸಿ ಸೋಮವಾರ 11 ದಲಿತ ಸಂಘಟನೆಗಳ ಕಾರ್ಯಕರ್ತರು 11 ಕಿ.ಮೀಟರ್ ಕಾಲ್ನಡಿಗೆ ಜಾಥ ಮೂಲಕ ಘಟನೆಯನ್ನು ಖಂಡಿಸಿ ಮತ್ತೊಂದು ಬಾರಿ ಯಾವ ಹೆಣ್ಣು ಮಗುವಿನ ಮೇಲೆ ಈ ರೀತಿಯ ದಬ್ಬಾಳಿಕೆ, ದೌರ್ಜನ್ಯ ನಡೆಯಬಾರದು ಎಂದು ಒತ್ತಾಯಿಸಿ ದಲಿತ ಸಂಘಟನೆಗಳ ಕಾರ್ಯಕರ್ತರು ಬೃಹತ್ ಶಕ್ತಿ ಪ್ರದರ್ಶನ ನಡೆಸಿದರು.ಬೆಳಿಗ್ಗೆ 10 ಗಂಟೆಗೆ ತಾಡಿಗೋಳ್ ಗ್ರಾಮದಿಂದ ಹೊರಟ ದಲಿತ ಸಂಘಟನೆಗಳ ನೂರಾರು ಕಾರ್ಯಕತರು ಜಾಥ ಹಮ್ಮಿಕೊಂಡರು. ರಸ್ತೆಯುದ್ದಕ್ಕೂ ಜಾಥದಲ್ಲಿ ರಾಜ್ಯದ ವಿವಿಧ ಮೂಲೆಗಳಿಂದ ಬಂದ ದಲಿತ ಸಂಘಟನೆಗಳ ಮುಖಂಡರುಗಳು ಜಾಥಗೆ ಸಾಥ್ ನೀಡಿದರು. ಕೋಲಾರ-ಮದನಪಲ್ಲಿ ರಸ್ತೆ ಮೂಲಕ ಜಾಥ ಸಾಗಿ ಬರುತ್ತಿದ್ದಾಗ ಟ್ರಾಫಿಕ್ ಜಾಮ್ ಆಗದಂತೆ ಪೊಲೀಸರು ಹರಸಾಹಸ ಪಡುತ್ತಿದ್ದರು.
ಶ್ರೀನಿವಾಸಪುರಕ್ಕೆ ಜಾಥ ಬರುವೊಳಗಾಗಿ ಸಾವಿರಕ್ಕೂ ಹೆಚ್ಚು ಕಾರ್ಯಕರ್ತರು ಜಮಾ ಆದರು ಪ್ರವಾಸಿ ಮಂದಿರದಿಂದ ತಾಲ್ಲೂಕು ಕಛೇರಿಯ ತನಕ ಬೃಹತ್ ಪ್ರತಿಭಟನೆಯಲ್ಲಿ ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ವಿರುದ್ದ ಘೋಷಣೆಗಳನ್ನು ಕೂಗುತ್ತಾ ಈ ಎರಡು ಸರ್ಕಾರಗಳನ್ನು ಕಿತ್ತೊಗೆಯ ತನಕ ನಮ್ಮ ಮೇಲೆ ದೌರ್ಜನ್ಯಗಳು ನಡೆಯುತ್ತಲೆ ಇರುತ್ತವೆ ಮುಂದಿನ ದಿನಗಳಲ್ಲಿ ಇದಕ್ಕೆ ಒಂದು ಇತಿಶ್ರೀ ಹಾಡಲೇಬೇಕು ಎಂದು ದಲಿತ ಮುಖಂಡರಿಂದ ಕೆಳಿ ಬರುತ್ತಿತ್ತು. ರಸ್ತೆಯುದ್ದಕ್ಕೂ ಕ್ರಾಂತಿಗೀತೆಗಳನ್ನು ಹಾಡುತ್ತಾ ತಮಟೆ ವಾದ್ಯಗಳ ಸದ್ದು ಕೇಳಿ ಬರುತ್ತಿತ್ತು.