

ಶ್ರೀನಿವಾಸಪುರ: ಪಟ್ಟಣದ ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜು ಆವರಣದಲ್ಲಿ ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ ಉಪ ವಿಭಾಗದಿಂದ ವಿಧ್ಯಾರ್ಥಿಗಳಿಗೆ ವಿದ್ಯುತ್ ಸುರಕ್ಷತೆ ಕುರಿತು ತಾಲೂಕು ಮಟ್ಟದ ಪ್ರಬಂಧ ಸ್ಪರ್ಧೆ ಏರ್ಪಡಿಸಲಾಗಿತ್ತು.
ಬೆಸ್ಕಾಂ ಉಪ ವಿಭಾಗದ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ರಾಮತೀರ್ಥ ಪ್ರಬಂಧ ಸ್ಪರ್ಧೆ ಉದ್ಘಾಟಿಸಿ ಮಾತನಾಡಿ, ವಿದ್ಯಾರ್ಥಿಗಳು ವಿದ್ಯುತ್ ಸುರಕ್ಷತೆ ಬಗ್ಗೆ ಎಚ್ಚರ ವಹಿಸಬೇಕು ಎಂದು ಹೇಳಿದರು.
ವಿದ್ಯುತ್ ಸುರಕ್ಷತೆ ಕುರಿತು ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಉದ್ದೇಶದಿಂದ ವಿಷಯಕ್ಕೆ ಸಂಬಂಧಿಸಿದಂತೆ ಚಿತ್ರಕಲೆ, ಪ್ರಬಂಧ ಸ್ಪರ್ಧೆ ಹಾಗೂ ಭಾಷಣ ಸ್ಪರ್ಧೆ ಏರ್ಪಡಿಸಲಾಗಿದೆ. ಪ್ರತಿ ವಿಭಾಗದಲ್ಲೂ 3 ಬಹುಮಾನ ನೀಡಲಾಗುವುದು ಎಂದು ಹೇಳಿದರು.
ಸ್ಪರ್ಧೆಯಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳು ವಿದ್ಯುತ್ ಅವಘಡ ತಪ್ಪಿಸಲು ಬೆಸ್ಕಾಂನೊಂದಿಗೆ ಸಹಕರಿಸಬೇಕು. ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಬೇಕು. ಎಲ್ಲೇ ಆದರೂ ವಿದ್ಯುತ್ ತಂತಿಗಳು ಅಥವಾ ಕಂಬಗಳು ಅಪಾಯದ ಪರಿಸ್ಥಿತಿಯಲ್ಲಿ ಕಂಡುಬಂದರೆ ಪರಿಸ್ಥಿತಿಯಲ್ಲಿ ಕಂಡುಬಂದರೆ ವಿದ್ಯುತ್ ಇಲಾಖೆ ಗಮನಕ್ಕೆ ತರಬೇಕು. ತುಂಡಾಗಿ ನೆಲದ ಮೇಲೆ ವಿದ್ಯುತ್ ತಂತಿ ಬಿದ್ದಿದ್ದರೆ ಅದರಿಂದ ದೂರವಿದ್ದು, ಅದನ್ನು ಜನರು ತುಳಿಯದಂತೆ ಹೇಳಬೇಕು ಎಂದು ಹೇಳಿದರು.
ಜೆ ಇಇ ನಂಜುಂಡೇಶ್ವರ ಮಾತನಾಡಿ, ಈಗಾಗಲೆ ಚಿತ್ರಕಲಾ ಸ್ಪರ್ಧೆ ನಡೆಸಲಾಗಿದೆ. ಡಿ.22 ರಂದು ಮಧ್ಯಾಹ್ನ 12 ಗಂಟೆಗೆ ವಿದ್ಯುತ್ ಸುರಕ್ಷತೆ ಕುರಿತು ಭಾಷಣ ಸ್ಪರ್ಧೆ ಏರ್ಪಡಿಸಲಾಗಿದೆ. ಸ್ಪರ್ಧೆಯಲ್ಲಿ ಹೆಚ್ಚಿನ ಸಂಖ್ಯೆಯ ವಿದ್ಯಾರ್ಥಿಗಳು ಸ್ವಯಂ ಪ್ರೇರಣೆಯಿಂದ ಭಾಗವಹಿಸಬೇಕು ಎಂದು ಹೇಳಿದರು.
ಬಿಆರ್ಸಿ ವಸಂತ, ಉಪ ಪ್ರಾಂಶುಪಾಲ ಶ್ರೀಧರ್, ಬೆಸ್ಕಾಂ ಇನ್ಸ್ಪೆಕ್ಟರ್ ಸುದರ್ಶನ್, ಸಿಆರ್ಪಿ ನಟರಾಜ್, ಚನ್ನಪ್ಪ ಇದ್ದರು.