ಶ್ರೀನಿವಾಸಪುರ : ಗ್ರಾಮೀಣ ಮಕ್ಕಳ 9 ದಿನಗಳ ಬೇಸಿಗೆ ಶಿಬಿರಕ್ಕೆ ಗ್ರಂಥಾಲಯ ಮೇಲ್ವಿಚಾರಕ ಎನ್.ನಾಗೇಂದ್ರ ಇವರಿಂದ ಚಾಲನೆ

ಶ್ರೀನಿವಾಸಪುರ 1 : ಮಕ್ಕಳ ವ್ಯಕ್ತಿತ್ವ ವಿಕಸನಕ್ಕೆ ಪೂರಕವಾಗಿ ನಾಯಕತ್ವ , ನೈತಿಕತೆ , ಸಹಾನುಭೂತಿ, ಜವಾಬ್ದಾರಿ ನಿರ್ವಹಣೆ, ತಂಡ ನಿರ್ವಹಣೆ, ಸಾಮಾಜಿಕ ಹೊಂದಾಣಿಕೆ ಮತ್ತು ನಾಗರಿಕೆ ಪ್ರಜ್ಞೆ ವಿಷಯವಾಗಿ ವಿವಿಧ ಚಟುವಟಿಕೆಗಳನ್ನು ನಡೆಸುವುದೇ ಈ ಶಿಬಿರದ ಆಶಯವಾಗಿರುತ್ತದೆ ಎಂದು ಗ್ರಂಥಾಲಯ ಮೇಲ್ವಿಚಾರಕ ಎನ್.ನಾಗೇಂದ್ರ ಹೇಳಿದರು.
ತಾಲೂಕಿನ ಲಕ್ಷ್ಮೀಪುರ ಗ್ರಂಥಾಲಯದಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ವತಿಯಿಂದ ಗ್ರಾಮಪಂಚಾಯಿತಿ ಗ್ರಂಥಾಲಯ ಮತ್ತು ಮಾಹಿತಿ ಕೇಂದ್ರದಲ್ಲಿ ಶುಕ್ರವಾರ ಗ್ರಾಮೀಣ ಮಕ್ಕಳ 9 ದಿನಗಳ ಬೇಸಿಗೆ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದರು.
ಗ್ರಾಮೀಣ ಪ್ರದೇಶದಲ್ಲಿರುವ ಮಕ್ಕಳು ತಮ್ಮ ಬೇಸಿಗೆ ರಜೆಯನ್ನು ಮನರಂಜನೀಯವಾಗಿ ಹಾಗೂ ಪರಿಣಾಮಕಾರಿಯಾಗಿ ಬಳಿಸಿಕೊಳ್ಳಲು ಬೇಸಿಗೆ ಶಿಬಿರವನ್ನು ಆಯೋಜಿಸಲಾಗುತ್ತಿದೆ. ಓದುವ , ಬರೆಯುವ , ಅಂಕಿಸಂಖ್ಯೆ, ವಿಜ್ಞಾನ ವಿಷಯಗಳು,ನಾಯಕತ್ವ ಮತ್ತು ಸಂವಹನ ಕೌಶಲ್ಯವನ್ನು ಅಭಿವೃದ್ಧಿಪಡಿಸುವ ಉದ್ದೇಶವನ್ನು ಹೊಂದಲಾಗಿದೆ. ಪರಿಸರ ಕಾಳಜಿ, ಸಾಮಾಜಿಕ ಕಾಳಜಿ ಬೆಳಸುವುದು ಮತ್ತು ಸ್ಥಳೀಯ ಸಂಸ್ಕøತಿ, ಜೀವನ ಶೈಲಿ, ಇತಿಹಾಸ ಅಂಶಗಳನ್ನು ತಿಳಿಯುವಂತೆ ಮಾಡುವುದು ಹಾಗೂ ಮಕ್ಕಳಲ್ಲಿರುವ ಸೃಜನಾತ್ಮಕ ಸಾಮಥ್ರ್ಯವನ್ನು ಅಭಿವೃದ್ಧಿಪಡಿಸುವುದು ಬೇಸಿಗೆ ಶಿಬಿರದ ಆಶಯವಾಗಿರುತ್ತದೆ. ತನ್ಮೂಲಕ ಗ್ರಾಮಪಂಚಾಯಿತಿ ಗ್ರಂಥಾಲಯಗಳಲ್ಲಿ ಲಭ್ಯವಿರುವ ಸೌಲಭ್ಯಗಳನ್ನು ಬಳಸಲು ಮಕ್ಕಳನ್ನು ಪ್ರೇರೇಪಿಸುವುದು.
ಮಕ್ಕಳಲ್ಲಿ ಸೃಜನಾತ್ಮಕತೆಗೆ ಸಹಾಯಕವಾಗಿ ಮಕ್ಕಳ ಪುಸ್ತಕ , ದಿನಪತ್ರಿಕೆ , ನಿಯತಕಾಲಿಕೆಗಳನ್ನು ಓದುವುದು, ಚಿತ್ರ ಓದುವಿಕೆ, ಕಥೆ ಕಟ್ಟುವಿಕೆ , ನಿಧಿ ಶೋಧ, ಗಟ್ಟಿ ಓದು ಮತ್ತು ಪತ್ರ ಬರವಣಿಗೆಗೆ ಸಂಬಂಧಿಸಿದಂತೆ ವಿವಿಧ ಚಟುವಟಿಕೆಗಳನ್ನು ಶಿಬಿರದ ಅವಧಿಯಲ್ಲಿ ಆಯೋಜಿಸಲಾಗುವುದು ಹಾಗೂ ಮಕ್ಕಳ ಪಾಲ್ಗೊಳ್ಳುವಿಕೆಯನ್ನು ಉತ್ತೇಜಿಸಲು ದೈನಂದಿನ ಬದುಕಿನಲ್ಲಿ ಕಾಣುವ ಚಟಿವಟಿಕೆಗಳನ್ನು ಅರಿಯಲು , ಶೋಧನಾ ಪ್ರವೃತ್ತಿ ಪ್ರೋತ್ಸಾಹಿಸಲು ಮತ್ತು ಕಲಿತದ್ದನ್ನು ವರದಿ ಮಾಡಲು ಯೋಜನಾ ಚಟುವಟಿಕೆಗಳನ್ನು ಹಮ್ಮಿಕೊಳ್ಳುವುದರಿಂದ ಪೋಷಕರು ತಮ್ಮ ಮಕ್ಕಳನ್ನು ಶಿಬಿರದಲ್ಲಿ ಪಾಲ್ಗುಳ್ಳುವಂತೆ ಪ್ರೋತ್ಸಾಹಿಸಬೇಕು ಎಂದು ಮನವಿ ಮಾಡಿದರು.
19 ರಿಂದ 27 ದಿನಾಂಕದವರೆಗೂ 9 ದಿನಗಳ ಬೇಸಿಗೆ ಶಿಬಿರವು ಪ್ರತಿದಿನ ಬೆಳಿಗ್ಗೆ 10 ಗಂಟೆಯಿಂದ ಮಧ್ಯಾಹ್ನ 1;30ರ ವರಗೆ ನಡೆಯಲಿದ್ದು, ಈ ಸಮಯದಲ್ಲಿ ಹೊಸ ಹೊಸ ವಿನೂತನ ಚಟುವಟಿಕೆಗಳನ್ನು ಮಾಡಿಸಿ ಮಕ್ಕಳನ್ನು ಗ್ರಂಥಾಲಯದ ಕಡೆ ಸಳೆಯುವ ಪ್ರಯತ್ನವನ್ನು ಮಾಡಲಾಗುವುದು.
ಮಕ್ಕಳಿಗೆ ಪಠ್ಯ, ಪಠ್ಯೇತರ ಚಟುವಟಿಕೆಗಳ ಮೂಲಕ ಮಕ್ಕಳಲ್ಲಿನ ಕೌಶಲ್ಯವನ್ನು ಪತ್ತೆ ಹಚ್ಚಿ ಮುಂದಿನ ದಿನಗಳಲ್ಲಿ ವೇದಿಕೆ ನಿರ್ಮಿಸಿ ಕೊಡುವುದೇ ಈ ಶಬಿರದ ಉದ್ದೇಶ ಎಂದು ತಿಳಿಸುತ್ತಾ ಈ ಬೇಸಿಗೆ ಶಿಬಿರವನ್ನು ಮಕ್ಕಳು ಸದಪಯೋಗ ಪಡಿಸಿಕೊಳ್ಳುವಂತೆ ಸಲಹೆ ನೀಡಿದರು. ಈ ಗ್ರಂಥಾಲಯವು ಡಿಜಟಲೀಕರಣವಾಗಿರುವುದರಿಂದ ಮಕ್ಕಳು ಇಂಟರ್ ನೆಟ್ ಬಳಸಿಕೊಂಡು ತಮ್ಮಗೆ ಆಸಕ್ತಿ ಇರುವಂತೆ ಪುಸ್ತಕಗಳನ್ನು ಓದಬಹುದು ಎಂದರು.
ಗ್ರಾ.ಪಂ. ಬಿಲ್ ಕಲೆಕ್ಟರ್ ಶಿವಣ್ಣ, ಗ್ರಾ.ಪಂ. ಸಿಬ್ಬಂದಿಗಳಾದ ಚಿಕ್ಕವೆಂಕಟರಮಣ, ವೆಂಕಟೇಶ್, ವಿದ್ಯಾರ್ಥಿಗಳು ಹಾಗು ಮಹಿಳಾ ಸಂಘಗಳ ಸದಸ್ಯರು ಭಾಗವಹಿಸಿದ್ದರು.