

ಶ್ರೀನಿವಾಸಪುರ : ಮಾವಿನ ಹಣ್ಣಿಗೆ ಬೆಂಬಲ ಬೆಲೆ ಘೋಷಿಸಲು ಒತ್ತಾಯಿಸಿ ಶ್ರೀನಿವಾಸಪುರ ವಿಧಾನಸಭಾ ಕ್ಷೇತ್ರದ ಶಾಸಕ ಜಿ.ಕೆ. ವೆಂಕಟಶಿವಾರೆಡ್ಡಿ ಅವರು ತೋಟಗಾರಿಕೆ ಹಾಗೂ ಗಣಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ ಅವರಿಗೆ ಪತ್ರ ಬರೆದು ರೈತರ ಆರ್ಥಿಕ ಹಿತಕಾಪಡಲು ತಕ್ಷಣ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದಾರೆ.
ಈ ಕುರಿತು ವಿವರ ನೀಡಿದ ಶಾಸಕರು, ಶ್ರೀನಿವಾಸಪುರ ಕ್ಷೇತ್ರವು ಏಷ್ಯಾದಲ್ಲಿ ಅತಿ ಹೆಚ್ಚು ಮಾವು ಉತ್ಪಾದನೆ ಮಾಡುವ ಪ್ರದೇಶವೆಂದು ಉಲ್ಲೇಖಿಸಿ, ಈ ಬಾರಿ ಮಾರುಕಟ್ಟೆಯಲ್ಲಿ ಬೆಲೆ ಇಲ್ಲದ ಕಾರಣದಿಂದಾಗಿ ರೈತರು ತೀವ್ರ ಸಂಕಷ್ಟದಲ್ಲಿದ್ದಾರೆ ಎಂದರು. ಮಾವಿನ ಹಣ್ಣುಗಳಿಗೆ ಸಾರ್ವಜನಿಕರಿಂದ ಖರೀದಿ ಕಡಿಮೆಯಾದಿದ್ದು, ಆಂಧ್ರಪ್ರದೇಶದ ಜ್ಯೂಸ್ ಫ್ಯಾಕ್ಟರಿಗಳೂ ಹಣ್ಣು ಖರೀದಿಗೆ ಮುಂದಾಗಿಲ್ಲ. ಪರಿಣಾಮವಾಗಿ ವ್ಯಾಪಾರಿಗಳು ನಷ್ಟದಲ್ಲಿದ್ದು, ರೈತರು ಹಣ್ಣುಗಳನ್ನು ಮಾರಲು ಸಾಧ್ಯವಾಗದೆ ತೋಟದಲ್ಲಿಯೇ ಬಿಟ್ಟುಬಿಡುವ ಪರಿಸ್ಥಿತಿ ಎದುರಾಗಿದೆ.
ಆಂಧ್ರಪ್ರದೇಶ ಮಾದರಿಯಲ್ಲಿ ಕ್ರಮಕ್ಕೆ ಆಗ್ರಹ
ಆಂಧ್ರಪ್ರದೇಶದಲ್ಲಿ ತೋತಾಪುರಿ ಮಾವಿಗೆ ಕೆಜಿಗೆ ₹12 ಬೆಂಬಲ ಬೆಲೆ ನಿಗದಿ ಮಾಡಲಾಗಿದ್ದು, ಚಿತ್ತೂರು ಜಿಲ್ಲೆಯಲ್ಲಿ 4.5 ಲಕ್ಷ ಟನ್ ಇಳುವರಿಯಾಗಿದೆ. ಆ ರಾಜ್ಯದ ಮಾದರಿಯಲ್ಲಿ ಕರ್ನಾಟಕ ಸರ್ಕಾರ ಕೂಡ ತಕ್ಷಣ ಬೆಂಬಲ ಬೆಲೆ ಘೋಷಿಸಬೇಕೆಂದು ಶಾಸಕರು ಆಗ್ರಹಿಸಿದ್ದಾರೆ. “ಮಾವು ತಿರುಳಿನ ಕೈಗಾರಿಕೆಗಳು ಮಾವಿಗೆ ಕೆಜಿಗೆ ₹8 ಪಾವತಿಸಿದರೆ, ಸರ್ಕಾರ ₹4 ಸಬ್ಸಿಡಿ ನೀಡುತ್ತದೆ” ಎಂಬ ಆಂಧ್ರ ಮಾದರಿಯ ಜಾರಿಕೆಗೆ ಕನ್ನಡನಾಡು ತಯಾರಾಗಬೇಕೆಂದು ಅವರು ಅಭಿಪ್ರಾಯಪಟ್ಟರು.
ಮಾರುಕಟ್ಟೆ ಕುಸಿತದಿಂದ ಹಾನಿಯಾದ ರೈತರು
ಮಾರುಕಟ್ಟೆಯಲ್ಲಿ ಮಾವಿಗೆ ಕೆಜಿಗೆ ಕೇವಲ ₹4 ಲಭ್ಯವಿರುವುದರಿಂದ, ದಾಸ್ತಾನು ಮಾಡಿರುವ ಹಣ್ಣುಗಳು ಕೊಳೆತುತ್ತಿವೆ. ರೈತರು ಲಾಲ್ಬಾಗ್ ಮುಂತಾದ ಮಾರುಕಟ್ಟೆಗಳಿಗೆ ನೇರವಾಗಿ ಮಾರಾಟಕ್ಕೆ ಹೋದರೂ ಜನರು ಖರೀದಿಸಲು ಹಿಂದೇಟು ಹಾಕುತ್ತಿದ್ದಾರೆ. ಕೆಲ ರೈತರು ಉಚಿತವಾಗಿ ಹಣ್ಣುಗಳನ್ನು ವಿತರಿಸುವವರೆಗೆ ಸ್ಥಿತಿ ತಲಪಿದೆ ಎಂದು ಶಾಸಕರು ತಮ್ಮ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಶ್ರೀನಿವಾಸಪುರ ತೀವ್ರ ಪೆಟ್ಟು
ರಾಜ್ಯದಾದ್ಯಂತ 1.5 ಲಕ್ಷ ಹೆಕ್ಟರ್ ಪ್ರದೇಶದಲ್ಲಿ ಮಾವಿನ ತೋಟವಿದ್ದರೆ, ಕೋಲಾರ ಜಿಲ್ಲೆಯಲ್ಲಿಯೇ ಸುಮಾರು 50 ಸಾವಿರ ಹೆಕ್ಟರ್ ಮಾವು ಬೆಳೆಯಲಾಗುತ್ತದೆ. ಇದರಲ್ಲಿ ಶ್ರೀನಿವಾಸಪುರ ತಾಲೂಕಿನಲ್ಲಿ ಮಾತ್ರ 15 ಸಾವಿರ ಹೆಕ್ಟರ್ ಪ್ರದೇಶವಿದೆ. ಕೋಲಾರ ಜಿಲ್ಲೆಯು ಸುಮಾರು 10 ಲಕ್ಷ ಟನ್ ಮಾವಿನ ಇಳುವರಿ ಹೊಂದಿದ್ದು, ಪ್ರತಿಟನ್ ಗೆ ₹15,000 ಬೆಂಬಲ ಬೆಲೆ ನಿಗದಿ ಮಾಡಬೇಕೆಂದು ರೈತ ಸಂಘಗಳು ಆಗ್ರಹಿಸುತ್ತಿವೆ.
ರಾಜ್ಯ ಸರ್ಕಾರ ಸ್ಪಂದಿಸಲಿ
ಆಂಧ್ರಪ್ರದೇಶದಂತೆ ನಮ್ಮ ರಾಜ್ಯ ಸರ್ಕಾರ ಕೂಡ ಸ್ಪಂದಿಸಿ ಬೆಂಬಲ ಬೆಲೆ ಘೋಷಿಸಿದರೆ ರೈತರ ಜೊತೆಗೆ ವ್ಯಾಪಾರಿಗಳು ಕೂಡ ಉಪಯೋಗ ಪಡಿಕೊಳ್ಳಲಿದ್ದಾರೆ. ರೈತರ ಭವಿಷ್ಯ ಉಳಿಸುವ ನಿಟ್ಟಿನಲ್ಲಿ ತ್ವರಿತ ಕ್ರಮ ಕೈಗೊಳ್ಳಬೇಕು ಎಂಬುದು ಶಾಸಕರ ಮನವಿ.

