

ಶ್ರೀನಿವಾಸಪುರ : ಸಮಾಜಜೀವಿಯಾದ ಮನುಷ್ಯನನ್ನು ಸಮಾಜಮುಖಿಯಾಗಿಸುವ ಶಿಕ್ಷಣ ಪ್ರತಿಯೊಬ್ಬರಿಗೂ ಅವಶ್ಯ . ಸುಶಿಕ್ಷಿತರ ಪ್ರಮಾಣದ ಮೇಲೆ ದೇಶದ ಸಾಮಾಜಿಕ ಸ್ಥಿತಿ ಅವಲಂಬಿತ ಎಂಬ ಮಾತು ಅಕ್ಷರಶಃ ಸತ್ಯ . ಗ್ರಾಮೀಣ ಭಾಗದಲ್ಲಿಯೂ ಉತ್ತಮ ಪ್ರತಿಭೆಗಳಿದ್ದು , ಬಡತನದಿಂದ ಅವಕಾಶ ವಂಚಿತರಾಗುತ್ತಿದ್ದಾರೆಂದು ಉನ್ನತ ಶಿಕ್ಷಣ ಸಚಿವರ ಆಪ್ತ ಕಾರ್ಯದರ್ಶಿ ರಾಮೇಗೌಡ ವಿಷಾದ ವ್ಯಕ್ತಪಡಿಸಿದರು.
ತಾಲೂಕಿನ ದಳಸನೂರು ಪ್ರೌಡಶಾಲೆಯಲ್ಲಿ ಬೆಂಗಳೂರಿನ ಕಂಕರಿ ಮಹಿಳಾ ಸ್ವಯಂ ಸೇವಾ ಸಂಸ್ಥೆ ವತಿಯಿಂದ ಶನಿವಾರ 2024-25 ನೇ ಸಾಲಿನ ಎಸ್ಎಸ್ಎಲ್ಸಿ ಹೆಚ್ಚು ಅಂಕಗಳನ್ನು ಗಳಿಸಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ, ಶಾಲಾ ವಿದ್ಯಾರ್ಥಿಗಳಿಗೆ ಉಚಿತ ನೋಟ್ ಪುಸ್ತಕಗಳು, ಲೇಖನಿ ಸಾಮಾಗ್ರಿಗಳು, ನೀರಿನ ಬಾಟಲ್ಗಳನ್ನು ವಿತರಿಸಿ ಮಾತನಾಡಿದರು.
ಉಪನ್ಯಾಸಕ ಶಂಕರೇಗೌಡ ಮಾತನಾಡಿ ವಿದ್ಯಾರ್ಥಿಗಳು ಸಮಯವನ್ನು ವ್ಯರ್ಥಮಾಡದೇ ಅಧ್ಯಯನ ಮಾಡಬೇಕು .ಅಧ್ಯಯನವನ್ನು ಇಷ್ಟಪಟ್ಟು ಮಾಡಬೇಕು. ಯಾವುದೇ ಕೆಲಸವನ್ನು ಇಷ್ಟವಿಲ್ಲದೇ ಮಾಡಿದರೆ ಅದು ಫಲನೀಡುವುದಿಲ್ಲ. ಹಾಗಾಗಿ ಅಧ್ಯಯನದಲ್ಲಿ ಶ್ರದ್ಧೆ, ಛಲ, ಸಮಯಪಾಲನೆ ಸೇರಿದಂತೆ ಶಿಸ್ತುಬದ್ದ ಜೀವನ ನಡೆಸುವ ಮೂಲಕ ಯಶಸ್ಸುಗಳಿಸಬೇಕು ಎಂದರು.
ಕಂಕರಿ ಮಹಿಳಾ ಸ್ವಯಂ ಸೇವಾ ಸಂಸ್ಥೆ ಅಧ್ಯಕ್ಷೆ ಪವಿತ್ರ ರಾಮೇಗೌಡ, ದಾನಿಗಳಾದ ಟೋನಿಥಾಮಸ್, ನಿವೃತ್ತ ದೈಹಿಕ ಶಿಕ್ಷಕ ವೀರಭದ್ರಪ್ಪ ಸಹಾಯಧನ ಹಾಗು ಲೇಖನಿ ಸಾಮಾಗ್ರಿಗಳನ್ನು ವಿತರಿಸಿದರು . ಉಪನ್ಯಾಸಕರಾದ ಜಿ.ಕೆ.ನಾರಾಯಣಸ್ವಾಮಿ, ಗೋಪಿನಾಥ್, ಶ್ರೀನಾಥ್, ಶಿಕ್ಷಣ ಸಂಯೋಜಕ ಆರ್.ಸುಬ್ರಮಣಿ, ಮುಖ್ಯ ಶಿಕ್ಷಕ ದಿವ್ಯಜಂಗಿನ ಮಠ, ಶಿಕ್ಷಕರಾದ ನವೀನ್,ನಾರಾಯಣಸ್ವಾಮಿ, ಲಕ್ಷ್ಮಮ್ಮ, ಲಕ್ಷ್ಮಿ, ವೆಂಕಟರಮಣಪ್ಪ, ನಾಗರಾಜ್, ನಾಗನಾಯಕನಹಳ್ಳಿ ಶಾಲೆಯ ಮುಖ್ಯ ಶಿಕ್ಷಕಿ ವಿಜಯಲಕ್ಷ್ಮಿ, ಸಿಆರ್ಪಿ ಜಿ.ಎನ್.ಚನ್ನಪ್ಪ ಇದ್ದರು.