

ಮುಂಬೈ: ಮಹಾರಾಷ್ಟ್ರದ ಥಾಣೆ ಬಳಿಯ ದಿವಾದಲ್ಲಿ ಕಿಕ್ಕಿರಿದು ತುಂಬಿದ್ದ ಲೋಕಲ್ ರೈಲಿನಿಂದ ಬಿದ್ದು ಆರು ಮಂದಿ ಪ್ರಯಾಣಿಕರು ಸಾವನ್ನಪ್ಪಿದ್ದು, ಏಳು ಮಂದಿ ಗಾಯಗೊಂಡಿದ್ದಾರೆ. ಕಾಲಿಡಲು ಜಾಗವಿಲ್ಲದಷ್ಟು ಕಿಕ್ಕಿರಿದು ತುಂಬಿದ್ದ ರೈಲು ಕಾಸರ ಕಡೆಗೆ ಹೋಗುತ್ತಿದ್ದಾಗ ದಿವಾ ಮತ್ತು ಕೋಪರ್ ರೈಲು ನಿಲ್ದಾಣಗಳ ನಡುವೆ ಈ ಘಟನೆ ಸಂಭವಿಸಿದೆ ಎಂದು ತಿಳಿದು ಬಂದಿದೆ.
ಬಿಡುವಿಲ್ಲದ ಸಮಯದಲ್ಲಿ ಬೆಳಗ್ಗೆ 9.30 ಗಂಟೆಗೆ ಹೆಚ್ಚಿನ ಪ್ರಯಾಣಿಕರಿಂದ ತುಂಬಿದ ರೈಲಿನಲ್ಲಿ ಅನೇಕ ಜನರು ಬಾಗಿಲುಗಳಲ್ಲಿ ನಿಂತು ನೇತಾಡುತ್ತಿದ್ದರು. ರೈಲು ಚಲಿಸುತ್ತಿದ್ದಂತೆಯೇ 10 ಪ್ರಯಾಣಿಕರು ಕೆಳಗೆ ಬಿದ್ದಿದ್ದಾರೆ. ಈ ಪೈಕಿ ಆರು ಮಂದಿ ಸಾವನ್ನಪ್ಪಿದ್ದು, ಉಳಿದವರು ಗಾಯಗೊಂಡು ಚಿಕಿತ್ಸೆಗಾಗಿ ಹತ್ತಿರದ ಆಸ್ಪತ್ರೆಗಳಿಗೆ ದಾಖಲಾಗಿಸಲಾಗಿದೆ. ಥಾಣೆಯ ಸಮೀಪದ ದಿವಾದಲ್ಲಿ ಈ ದುರ್ಘಟನೆ ನಡೆದಿದೆ. ಪ್ರಯಾಣಿಕರು ಸ್ಥಳೀಯ ರೈಲಿನ ಬಾಗಿಲುಗಳ ಮೇಲೆ ನಿಂತಿದ್ದರು. ಮೃತರೆಲ್ಲರೂ 30 ರಿಂದ 35 ವರ್ಷ ವಯಸ್ಸಿನವರು ಎನ್ನಲಾಗಿದೆ.
ಪ್ರಯಾಣಿಕರು ತಾವಾಗಿಯೇ ಕೆಳಗೆ ಬಿದ್ದಿದ್ದಾರೆಯೇ ಅಥವಾ ಬ್ಯಾಗ್ಗಳಿಂದಾಗಿ ಅಥವಾ ಯಾರಾದರೂ ತಳ್ಳಿದ್ದಾರೆಯೇ ಎಂಬುದು ಗೊತ್ತಾಗಲು ತನಿಖೆ ನಡೆಸಬೇಕು ಎಂದು ಶಿವಸೇನೆ ಸಂಸದ ನರೇಶ್ ಮ್ಹಾಸ್ಕೆ ಒತ್ತಾಯಿಸಿದ್ದಾರೆ.
ಇದು ಅತ್ಯಂತ ದುರದೃಷ್ಟಕರ ಘಟನೆ ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಹೇಳಿದ್ದಾರೆ ಮತ್ತು ಗಾಯಾಳುಗಳು ಹತ್ತಿರದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಘಟನೆಯ ಬಗ್ಗೆ ರೈಲ್ವೇ ತನಿಖೆ ಆರಂಭಿಸಿದೆ ಎಂದೂ ಅವರು ಮಾಹಿತಿ ನೀಡಿದ್ದಾರೆ.
ಆರಂಭದಲ್ಲಿ ರೈಲಿನಿಂದ ಕೆಳಗೆ ಬಿದ್ದ ಪ್ರಯಾಣಿಕರು ಮುಂಬೈ-ಲಖನೌ-ಪುಷ್ಪಕ್ ಎಕ್ಸ್ಪ್ರೆಸ್ನಿಂದ ಬಂದವರು ಎಂದು ತಿಳಿಸಲಾಯಿತು. ತದನಂತರ ಈ ಪ್ರಯಾಣಿಕರು ಮುಂಬೈ ಲೋಕಲ್ ರೈಲಿನಿಂದ ಬಂದವರು ಎಂಬುದು ಗೊತ್ತಾಗಿದೆ ಎಂದು ಕೇಂದ್ರ ರೈಲ್ವೆ ಸಾರ್ವಜನಿಕ ಸಂಪರ್ಕ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.
ಎನ್ ಸಿ ಪಿ ಶರದ್ ಪವಾರ್ ಬಣದಿಂದ ವಾಗ್ದಾಳಿ:
ಈ ಮಧ್ಯೆ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಮತ್ತು ಅದರ ರೈಲ್ವೆ ಸಚಿವಾಲಯ ರೈಲು ಪ್ರಯಾಣಿಕರಿಗೆ ಮೂಲಭೂತ ಸೇವೆಗಳನ್ನು ನೀಡುವಲ್ಲಿ ವಿಫಲವಾಗಿದೆ ಎಂದು ಎನ್ಸಿಪಿ ಎಸ್ಪಿ ನಾಯಕಿ ವಿದ್ಯಾ ಚವಾಣ್ ಹೇಳಿದ್ದಾರೆ. ರೈಲು ಸಂಖ್ಯೆಯನ್ನು ಹೆಚ್ಚಿಸಬೇಕು ಮತ್ತು ರೈಲುಗಳ ಬಾಗಿಲುಗಳನ್ನು ಸ್ವಯಂಚಾಲಿತವಾಗಿ ಮುಚ್ಚಬೇಕು. ಇದರಿಂದ ಅಂತಹ ಘಟನೆಗಳನ್ನು ತಪ್ಪಿಸಬಹುದು ಎಂದಿದ್ದಾರೆ.
ಈ ಘಟನೆಯ ನಂತರ ಮುಂಬೈ ಸಬರ್ಬನ್ಗಾಗಿ ತಯಾರಿಸುವ ಎಲ್ಲಾ ರೈಲುಗಳಿಗೂ ಸ್ವಯಂಚಾಲಿತವಾಗಿ ಬಾಗಿಲು ಮುಚ್ಚುವ ಸೇವೆಯಲ್ಲಿರುವ ಸೇವೆ ಇರುವಂತೆ ಮರುವಿನ್ಯಾಸಗೊಳಿಸಲು ರೈಲ್ವೆ ಸಚಿವಾಲಯ ನಿರ್ಧರಿಸಿದೆ ಎಂದು ತಿಳಿದು ಬಂದಿದೆ.