ಸಂತ ಸೇವಾಲಾಲ್ ಆದರ್ಶ ಪಾಲನೆ ಇಂದಿನ ಅಗತ್ಯವಾಗಿದೆ : ಶಿರಸ್ತೇದಾರ್ ಮನೋಹರ ಮಾನೆ

ವರದಿ: ಶಬ್ಬೀರ್ ಅಹಮ್ಮದ್, ಶ್ರೀನಿವಾಸಪುರ

ಶ್ರೀನಿವಾಸಪುರ: ಸಂತ ಸೇವಾಲಾಲ್ ಅವರ ಆದರ್ಶ ಪಾಲನೆ ಇಂದಿನ ಅಗತ್ಯವಾಗಿದೆ ಎಂದು ಶಿರಸ್ತೇದಾರ್ ಮನೋಹರ ಮಾನೆ ಹೇಳಿದರು.
ಪಟ್ಟಣದ ತಾಲ್ಲೂಕು ಕಚೇರಿ ಸಭಾಂಗಣದಲ್ಲಿ ತಾಲ್ಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮತಿ ವತಿಯಿಂದ ಸೊಮವಾರ ಏರ್ಪಡಿಸಿದ್ದ ಸಂತ ಸೇವಾಲಾಲ್ ಜಯಂತಿ ಸಮಾರಂಭದಲ್ಲಿ ಮಾತನಾಡಿದ ಅವರು, ಸಾಮಾನ್ಯ ದನಗಾಹಿ ಕುಟುಂಬದಲ್ಲಿ ಜನಿಸಿದ ಸೇವಾಲಾಲ್ ಅವರು ಮಾನವತಾವಾದಿಯಾಗಿದ್ದರು ಎಂದು ಹೇಳಿದರು.
ಸೇವಾಲಾಲರು ನಿಸ್ವಾರ್ಥ ಭಾವನೆಯಿಂದ ಜನರನ್ನು ಸಂಘಟಿಸಿ, ಜನವಿರೋಧಿಗಳನ್ನು ಮಟ್ಟಹಾಕಿದರು. ತಮ್ಮ ಧೈರ್ಯ ಹಾಗೂ ಮಾನವೀಯ ಗುಣಗಳಿಂದ ಮನೆ ಮಾತಾಗಿದ್ದಾರೆ. ವಿಶೇಷವಾಗಿ ಬಂಜಾರ ಜನಾಂಗದ ಆರಾಧ್ಯ ದೈವವಾಗಿದ್ದಾರೆ. ಅವರ ಸೇವಾ ಮನೋಭಾವ ಇತರರಿಗೆ ಮಾರ್ಗದರ್ಶನವಾಗಿದೆ ಎಂದು ಹೇಳಿದರು.
ವಿದ್ಯಾವಂತ ಸಮುದಾಯ ಸಂತ ಸೇವಾಲಾಲ್ ಅವರ ಜೀವನ ಚರಿತ್ರೆ ಓದಬೇಕು. ಅದರಂತೆ ಬದುಕಲು ಪ್ರಯತ್ನಿಸಬೇಕು. ಇಂಥ ಮಹನೀಯರನ್ನು ಸಮಜದ ಎಲ್ಲ ವರ್ಗದ ಜನರೂ ಗೌರವಿಸುತ್ತಾರೆ ಎಂದು ಹೇಳಿದರು.
ಉಪ ತಹಶೀಲ್ದಾರ್ ಚಂದ್ರಪ್ಪ, ಹಿರಿಯ ಕಂದಾಯ ನಿರೀಕ್ಷಕ ಬಿ.ವಿ.ಮುನಿರೆಡ್ಡಿ, ಗಾಯಿತ್ರಿ ಇದ್ದರು.