ಸೈಂಟ್ ಕ್ರಿಸ್ಟೋಫರ್ ಎಸೋಸಿಯೇಶನ್ ಅಧ್ಯಕ್ಷರಾಗಿ ಡಾ| ಜೊನ್ ಎಡ್ವರ್ಡ್ ಡಿ’ಸಿಲ್ವಾ ಪುನರಾಯ್ಕೆ- ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪುರಸ್ಕಾರ

ಮಂಗಳೂರು; ಸೈಂಟ್ ಕ್ರಿಸ್ಟೋಫರ್ ಎಸೋಸಿಯೇಶನ್ (ರಿ) ಮಂಗಳೂರು, ಇದರ ವಾರ್ಷಿಕ ಹಬ್ಬ ಹಾಗೂ ಮಹಾಸಭೆಯು ತಾ. 06.08.2023 ರಂದು ನಡೆಯಿತು. ಮಂಗಳೂರಿನ ನಿವೃತ್ತ ಬಿಷಪ್ ಅ|ವಂ|ಡಾ| ಎಲೋಸಿಯಸ್ ಪಾವ್ಲ್ ಡಿ’ಸೋಜ, ನಗರದ ರೊಜಾರಿಯೊ ಚರ್ಚಿನಲ್ಲಿ ಬಲಿದಾನ ಪೂಜೆ ನೆರವೇರಿಸಿ, ಸದಸ್ಯರ ವಾಹನಗಳನ್ನು ಆಶೀರ್ವದಿಸಿದರು.
ಬಳಿಕ ರೊಜಾರಿಯೋ ಕಲ್ಚರಲ್ ಹಾಲ್ ನಲ್ಲಿ ನಡೆದ ವಾರ್ಷಿಕ ಮಹಾಸಭೆಗೆ ವಂ| ಬಿಷಪರು ಕಾರ್ಯಧ್ಯಕ್ಷರಾಗಿ ಆಗಮಿಸಿದರು. ಮುಖ್ಯ ಅತಿಥಿಗಳಾಗಿ ಕರ್ನಾಟಕ ಬ್ಯಾಂಕಿನ ಜನರಲ್ ಮ್ಯಾನೇಜರ್ ಆದ ಶ್ರೀಮತಿ ಸ್ಯಾಂಡ್ರಾ ಮರೀಯ ಲೋರಿನ್ ಹಾಜರಿದ್ದರು.
ಈ ಸಂದರ್ಭ, ಸಂಸ್ಥೆಯ ಸದಸ್ಯರ 29 ಮಕ್ಕಳಿಗೆ ಅವರ ಎಸ್.ಎಸ್. ಎಲ್.ಸಿ, ಪಿಯುಸಿ, ಡಿಗ್ರಿ ಹಾಗೂ ಸ್ನಾತಕೋತ್ತರ ಪದವಿಯಲ್ಲಿ ಪಡೆದ ಡಿಸ್ಟಿಂಕ್ಷನ್, ರೇಂಕ್ ಹಾಗೂ ಶ್ರೇಷ್ಟ ಅಂಕಗಳಿಗೋಸ್ಕರ ನಗದು ಹಾಗೂ ಪುರಸ್ಕಾರ ನೀಡಿ ಗೌರವಿಸಲಾಯಿತು.
ರಾಷ್ಟ್ರೀಯ ನೆಲೆಯಲ್ಲಿ ಪಿಸ್ತೂಲ್ ಶೂಟಿಂಗ್ ನಲ್ಲಿ ಸ್ಥಾನ ಪಡೆದ ಕುಮಾರಿ ಪ್ರೀಮಲ್ ಪುರ್ಟಾಡೊ ಇವರಿಗೆ, ಹಾಗೂ ಶ್ರೀ ಡೆನ್ಜಿಲ್ ಅಂಟೋನಿ ಲೋಬೊರಿಗೆ ಸಮಗ್ರ ಕೃಷಿ ಪದ್ಧತಿ ವಿಭಾಗದಲ್ಲಿ ಶ್ರೇಷ್ಠ ಕೃಷಿಕ ಪ್ರಶಸ್ತಿಗಾಗಿ ಶಾಲು ಹೊದಿಸಿ ಹೂಗುಚ್ಛ ನೀಡಿ ಸನ್ಮಾನಿಸಲಾಯಿತು.
ಮುಖ್ಯ ಅತಿಧಿ ತಮ್ಮ ಭಾಷಣದಲ್ಲಿ, 1967 ರಲ್ಲಿ ಸ್ಥಾಪಿಸಲ್ಪಟ್ಟ ಈ ಸಂಸ್ಥೆಯು ತಮ್ಮ ಸದಸ್ಯರೊಂದಿಗೆ ಇರುವ ಸಂಬಂಧ ಮತ್ತು ಅವರಿಗಾಗಿ ನೀಡುತ್ತಿರುವ ಅನೇಕ ಉಪಯುಕ್ತ ಕಾರ್ಯಕ್ರಮಗಳನ್ನು ಶ್ಲಾಘಿಸಿದರು. ಪ್ರಶಸ್ತಿ ಪಡೆದ ಎಲ್ಲಾ ವಿದ್ಯಾರ್ಥಿಗಳನ್ನು ಅಭಿನಂದಿಸಿ ಶುಭ ಹಾರೈಸಿದರು.
ಅಧ್ಯಕ್ಷ ಸ್ಥಾನದಿಂದ ಮಾತನಾಡಿದ ವಂ|ಬಿಷಪ್ ರವರು ಕಲಿಕೆಯಲ್ಲಿ ಉನ್ನತ ಸ್ಥಾನ ಪಡೆದ ಸಂಸ್ಥೇಯ ಸದಸ್ಯರ ಮಕ್ಕಳು ಅಷ್ಟಕ್ಕೆ ತೃಪ್ತರಾಗದೆ, ಮುಂದೆ ಪರದೇಶದಲ್ಲಿ ಸೇವೆಯನ್ನು ಅರಸಿ ಹೋಗದೆ ತಮ್ಮ ದೇಶದಲ್ಲಿಯೇ ದುಡಿದು ತಮ್ಮ ಕುಟುಂಬಕ್ಕೆ ಆಧಾರವಾಗುವುದಲ್ಲದೆ, ಸಮಾಜಕ್ಕೆ ಹಾಗೂ ದೇಶಕ್ಕೆ ಮಾದರಿ ಯಾಗಬೇಕೆಂದು ಕರೆಕೊಟ್ಟರು. ಸಂಸ್ಥೆಗೆ ಹಾಗೂ ಎಲ್ಲಾ ಸದಸ್ಯರಿಗೆ ಅವರು ಶುಭ ಹಾರೈಸಿದರು.
ಆರಂಭದಲ್ಲಿ ಸಂಸ್ಥೆಯ ಅಧ್ಯಕ್ಷರಾದ ಡಾ| ಜೊನ್ ಡಿಸಿಲ್ವಾ ಅವರು ಸಭೆಗೆ ಆಗಮಿಸಿದ ಸರ್ವರಿಗೂ ಸ್ವಾಗತ ಕೋರಿದರು. ಕಾರ್ಯದರ್ಶಿ ಶ್ರೀ ಸುನೀಲ್ ಪೀಟರ್ ಲೋಬೊ ರವರು ವರದಿ ವಾಚಿಸಿ ಮಂಜೂರು ಮಾಡಲಾಯಿತು. ಮುಂದಿನ 2023-24 ನೇ ವರದಿ ವರುಷಕ್ಕೆ ಲೆಕ್ಕ ಪರಿಶೋಧಕರಾಗಿ ನಗರದ ಮೆ.|ಸುನೀಲ್ ಗೊನ್ಸಾಲ್ವಿಸ್, ಚಾರ್ಟರ್ಡ್ ಎಕೌಂಟೆಂಟ್ಸ್ ಇವರನ್ನು ನೇಮಿಸಲಾಯಿತು.
ಮುಂದಿನ 2023-24ರ ಅವಧಿಗೆ ಆಡಳಿತ ಮಂಡಳಿ ಸದಸ್ಯರ ಚುನಾವಣೆಯನ್ನು, ಸಂಸ್ಥೆಯ ಗೌರವ ಅಧ್ಯಕ್ಷರಾದ ಶ್ರೀ ವಿಕ್ಟರ್ ಮಿನೇಜಸ್ ರವರು ನಡೆಸಿಕೊಟ್ಟರು. ಉಪಾಧ್ಯಕ್ಷ, ಶ್ರೀ ಜೋನ್ ಬ್ಯಾಪಿಸ್ಟ್ ಗೋಮ್ಸ್ ಧನ್ಯವಾದವಿತ್ತರು. ಕಾರ್ಯನಿರ್ವಾಹಕರಾಗಿ ಶ್ರೀಮತಿ ಲೀನಾ ಡಿ’ಸೋಜಾ ಮತ್ತು ಶ್ರೀ ಲ್ಯಾನ್ಸಿ ಡಿ’ಸೋಜಾ ನಡೆಸಿಕೊಟ್ಟರು. ಸಭೆಗೆ ಸಹಕಾರ್ಯದರ್ಶಿ ಶ್ರೀ ಜೆರಾಲ್ಡ್ ಡಿ’ಸೋಜಾ ಹಾಜರಿದ್ದರು.