ಕೆಜಿಎಫ್ ತಾಲ್ಲೂಕಿನ ಸಮಗ್ರ ಅಭಿವೃದ್ದಿಗೆ ಮಂಜೂರಾಗಿರುವ ಕಾಮಗಾರಿಗಳ ತ್ವರಿತ ಮುಗಿಸಿ-ಶಾಸಕಿ ರೂಪಶಶಿಧರ್ ಸೂಚನೆ

ವರದಿ: ಶಬ್ಬೀರ್ ಅಹಮ್ಮದ್, ಶ್ರೀನಿವಾಸಪುರ

ಕೋಲಾರ:- ಜಿಲ್ಲೆಯ ಕೆಜಿಎಫ್ ತಾಲ್ಲೂಕು ಸಮಗ್ರ ಅಭಿವೃದ್ಧಿಗೆ ಮಂಜೂರಾಗಿರುವ ಕಾಮಗಾರಿಗಳನ್ನು ತ್ವರಿಗತಿಯಲ್ಲಿ ಕಾರ್ಯಗತಗೊಳಿಸಬೇಕು ಎಂದು ಅಧಿಕಾರಿಗಳಿಗೆ ಶಾಸಕಿ ರೂಪ ಶಶಿಧರ್ ಸೂಚಿಸಿದರು.
ನಗರದ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಕೆಜಿಎಫ್ ಕ್ಷೇತ್ರದ ಅಭಿವೃದ್ಧಿ ಕುರಿತು ಅಧಿಕಾರಿಗಳೊಂದಿಗೆ ಚರ್ಚಿಸಿ ಮಾತನಾಡಿದ ಅವರು, ಕೆಜಿಎಫ್ ತಾಲ್ಲೂಕಾಗಿ ಘೋಷಣೆಯಾಗಿದೆ.
ಮಿನಿ ವಿಧಾನ ಸೌಧದ ಕಾಮಗಾರಿ ಪ್ರಗತಿಯಲ್ಲಿದೆ. ಎಪಿಎಂಸಿ ಮಾರುಕಟ್ಟೆ ನಿರ್ಮಾಣಕ್ಕೆ ಸರ್ಕಾದಿಂದ ಅನುಮೋದನೆ ದೊರೆತ್ತಿದ್ದು, ಕೂಡಲೇ ಜಾಗ ಗುರುತಿಸಿಕೊಡಬೇಕು ಎಂದು ಮನವಿ ಮಾಡಿದರು.
ತಾಲ್ಲೂಕು ಕೇಂದ್ರವಾಗಿದ್ದರೂ ಸಹಾ ಯಾವುದೇ ಭೂದಾಖಲೆಗಳು ಮಾತ್ರವಲ್ಲದೇ ಇತರೆಲ್ಲಾ ಕಂದಾಯ ಕೆಲಸಕ್ಕೂ ಜನತೆ ಬಂಗಾರಪೇಟೆ ತಾಲ್ಲೂಕು ಕಚೇರಿಗೆ ಹೋಗಬೇಕಾದ ದುಸ್ಥಿತಿ ಇದೆ ಎಂದು ವಿಷಾದಿಸಿದರು.
ಇದರಿಂದಾಗಿ ಕೆಜಿಎಫ್ ತಾಲ್ಲೂಕಿನ ದಾಖಲೆಗಳ ಅಭಿಲೇಕಾಲಯ ತೆರೆಯಬೇಕು. ಇದಕ್ಕೆ ಸೂಕ್ತ ಕಟ್ಟಡ ಒದಗಿಸಬೇಕು ಎಂದು ತಿಳಿಸಿದರು.
ತಾಲ್ಲೂಕಿನ ಸಾಕಷ್ಟು ಮಂದಿ ರೈತರು ಟೊಮೆಟೊ, ಕ್ಯಾಪ್ಸಿಕಾಂ ಸೇರಿದಂತೆ ವಿವಿಧ ರೀತಿಯ ತರಕಾರಿಗಳನ್ನು ಬೆಳೆಯುತ್ತಿದ್ದಾರೆ. ಸರಿಯಾದ ಮಾರುಕಟ್ಟೆ ವ್ಯವಸ್ಥೆಯಿಲ್ಲದ ಕಾರಣ ಕೋಲಾರ, ಗಡಿ ರಾಜ್ಯಗಳಾದ ಆಂಧ್ರ, ತಮಿಳುನಾಡಿಗೆ ತೆಗೆದುಕೊಂಡು ಹೋಗುತ್ತಿದ್ದಾರೆ. ಇಲ್ಲಿ ಎಪಿಎಂಸಿ ಮಾರುಕಟ್ಟೆ ಸ್ಥಾಪನೆ ಮಾಡಿದರೆ ಬೇರೆ ರಾಜ್ಯಗಳಿಂದಲು ತರಕಾರಿ ತರುತ್ತಾರೆ ತೆರಿಗೆ ಹಣ ನಮ್ಮ ರಾಜ್ಯದ ಬೊಕ್ಕಸಕ್ಕೆ ಸೇರುತ್ತದೆ ಎಂದರು.
ಕೆಜಿಎಫ್‍ನಲ್ಲಿ ರೈಲ್ವೆ ಸಂಚಾರಕ್ಕೂ ಅವಕಾಶ ಇದೆ. ಇದರ ಜೊತೆಗೆ ಚೆನ್ನೈ, ಬೆಂಗಳೂರು ಕಾರಿಡಾರ್ ಎಕ್ಸ್‍ಪ್ರೇಸ್ ಹೆದ್ದಾರಿ ನಿರ್ಮಾಣ ಶುರುವಾಗಿದೆ.
ವಿ.ಕೋಟ ಮುಖ್ಯರಸ್ತೆಯಲ್ಲಿ ಕದರಿಗಾನಕುಪ್ಪ ಬಳಿ 40 ಎಕರೆ ಜಾರಿ ಗುರುತಿಸಲಾಗಿದೆ. ಇದಕ್ಕೆ ಆಡಳಿತಾತ್ಮಕ ಅನುಮೋದನೆ ಕೂಡಲೇ ನೀಡಬೇಕು. ಕಾರ್ಮಿಕ ಭವನ ನಿರ್ಮಾಣಕ್ಕೆ 2 ಎಕರೆ ಜಾಗ ಗುರುತಿಸಲಾಗಿದ್ದು, ಕಡತ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಬಾಕಿ ಉಳಿದುಕೊಂಡಿದ್ದು ವಿಲೇವಾರಿ ಮಾಡಬೇಕು ಎಂದು ಸಲಹೆ ನೀಡಿದರು.
ತಾಲ್ಲೂಕಿನಾದ್ಯಂತ ಕೆಲ ಗ್ರಾಮಗಳಲ್ಲಿ ಸ್ಮಶಾನ ಜಾಗ ಹಾಗೂ ಸರ್ಕಾರಿ ಜಾಗ ಒತ್ತುವರಿಯಾಗಿದೆ. ಸರ್ವೇ ಮಾಡಿಸಿ ಬೇಲಿ ನಿರ್ಮಿಸಬೇಕು ಎಂದು ತಿಳಿಸಿದರು.
ಇದಕ್ಕೆ ಜಿಲ್ಲಾಧಿಕಾರಿ ಡಾ.ಆರ್.ಸೆಲ್ವಮಣಿ ಪ್ರತಿಕ್ರಿಯಿಸಿ, ಮಿನಿ ವಿಧಾನಸೌಧ ಕಾಮಗಾರಿ ಪ್ರಗತಿಯಲಿದೆ. ಕಟ್ಟಡದ ಕೆಲಸ ಪೂರ್ಣಗೊಂಡ ನಂತರ ಪ್ರತ್ಯೇಕ ಒಂದು ಭದ್ರತಾ ಕೊಠಡಿ ಮೀಸಲು ಇಡಲಾಗುವುದು. ಅಲ್ಲಿಯ ತನಕ ಬಂಗಾರಪೇಟೆ ತಾಲ್ಲೂಲು ಕಚೇರಿಯಲ್ಲಿಯೇ ಕಾರ್ಯನಿರ್ವಹಿಸಲಿ. ಈಗ ಸ್ಥಳಾಂತರ ಮಾಡಿದರೆ ದಾಖಲೆಗಳು ನಾಪತ್ತೆಯಾಗಬಹುದು ಎಂದು ಹೇಳಿದರು.
ಒತ್ತುವರಿದಾರರು ಎಷ್ಟೇ ಪ್ರಬಲರಾಗಿರಲಿ, ಯಾರ ಒತ್ತಡಕ್ಕೂ ಮಣಿಯದೆ ತೆರವುಗೊಳಿಸಲಾಗುವುದು. ಅಭಿವೃದ್ಧಿ ಕಾರ್ಯಕ್ರಮಗಳ ಅನುಷ್ಠಾನದ ಬಗ್ಗೆ ಪ್ರತಿದಿನವೂ ವರದಿ ನೀಡಬೇಕು ಎಂದು ತಹಶೀಲ್ದಾರ್ ಸುಜಾತರವರಿಗೆ ಸೂಚಿಸಿದರು.
ಶಾಸಕಿ ರೂಪ ಶಶಿಧರ್ ಮಾತನಾಡಿ, ಕಂದಾಯ ಇಲಾಖೆಯಲ್ಲಿ ಸಿಬ್ಬಂದಿ ಕೊರತೆಯಿದೆ. ತಾಲ್ಲೂಕಿಗೆ ಆಗಿರುವ ಭೂ ಮಂಜೂರಾತಿ ಸಂಬಂಧ ಕಡತಗಳು ನಾಪತ್ತೆಯಾಗಿವೆ. ಅವುಗಳನ್ನು ಹುಡುಕಿಸಬೇಕು. ಈಗಾಗಲೇ ವಿವಿಧ ಉದ್ದೇಶಕ್ಕೆ ಮಂಜೂರು ಮಾಡಿರುವ ಭೂ ಮಂಜೂರು ಸಂಬಂಧಿಸಿದ ಮೂಲದಾಖಲೆಗಳನ್ನು ಪರಿಶೀಲಿಸಿ ಅನುಮೋದನೆ ನೀಡಬೇಕು ಎಂದರು.
ಡಿಸಿ ಡಾ.ಆರ್.ಸೆಲ್ವಮಣಿ ಪ್ರತಿಕ್ರಿಯಿಸಿ, ಇಲಾಖೆಯಲ್ಲಿ ಸಾಕಷ್ಟು ಹುದ್ದೆಗಳು ಖಾಲಿ ಇವೆ. ಕೆಲವರು ಮಾಡಬಾರದ ಕೆಲಸಗಳನ್ನು ಮಾಡಿ ಕೆಲಸದಿಂದ ಹೊರಹೋಗಿದ್ದಾರೆ. ಇಂತಹ ಸಂದರ್ಭದಲ್ಲಿ ಬೇರೆಯವರನ್ನು ನಿಯೋಜನೆ ಮಾಡಲು ಸಿಬ್ಬಂದಿ ಕೊರತೆಯಿದೆ ಎಂದು ಹೇಳಿದರು.
ಈಗಾಗಲೇ ಭೂ ಮಂಜೂರು ಸಂಬಂಧ ಭೂ ದಾಖಲೆಗಳ ಕಡತಗಳನ್ನು ನಾಪತ್ತೆಯಾಗಿರುವ ಬಗ್ಗೆ ದೂರು ಬಂದಿದೆ. ಎಡಿಸಿ ನೇತೃತ್ವದಲ್ಲಿ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ಸ್ನೇಹ, ತಹಸೀಲ್ದಾರ್ ಸುಜಾತ ಹಾಜರಿದ್ದರು.