ಮೇ.16 ರಿಂದ ಶಾಲೆ ಆರಂಭ-ಪ್ರಾರಂಭೋತ್ಸವ ಸಂಭ್ರಮಕ್ಕೆ ಸಿದ್ದತೆ:ಶಾಲಾ ಸ್ವಚ್ಚತೆಗಾಗಿ ಮೇ.15 ಭಾನುವಾರ ಶ್ರಮದಾನ-ಸಿ.ಆರ್.ಅಶೋಕ್

ವರದಿ: ಶಬ್ಬೀರ್ ಅಹ್ಮದ್, ಶ್ರೀನಿವಾಸಪುರ

ಕೋಲಾರ:- ಶಾಲೆಗಳು ಮೇ.16 ರಂದು ಆರಂಭಗೊಳ್ಳುತ್ತಿರುವುದರಿಂದ ಮೇ.15 ರ ಭಾನುವಾರ ಒಂದು ದಿನ ಎಲ್ಲಾ ಶಿಕ್ಷಕರು,ಸಿಬ್ಬಂದಿ ಶಾಲಾ ಪ್ರಾರಂಭದ ಪೂರ್ವದಲ್ಲಿ ಶಾಲೆಗಳನ್ನು ಸಿದ್ದಗೊಳಿಸಿ ಆಕರ್ಷಣೀಯತಗೊಳಿಸಲು ಕ್ರಮ ವಹಿಸುವಂತೆ ಕ್ಷೇತ್ರ ಶಿಕ್ಷಣಾಧಿಕಾರಿ ಸಿ.ಆರ್.ಅಶೋಕ್ ಕರೆ ನೀಡಿದ್ದಾರೆ.
ನಗರದ ಕ್ಷೇತ್ರ ಸಂಪನ್ಮೂಲ ಕೇಂದ್ರದಲ್ಲಿ ನಡೆದ ಕ್ಷೇತ್ರ ಸಿಬ್ಬಂದಿಗಳ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಶಾಲಾಭಿವೃದ್ದಿ ಸಮಿತಿ, ಪೋಷಕರು,ಶಿಕ್ಷಕರು ಜತೆಗೂಡಿ ಶಾಶಲೆಗಳನ್ನು ಸ್ವಚ್ಚಗೊಳಿಸಿ, ತಳಿರುತೋರಣಗಳಿಂದ ಅಲಂಕರಿಸಿ ಮಕ್ಕಳನ್ನು ಆಹ್ವಾನಿಸಲು ಸಿದ್ದರಿರುವಂತೆ ಅವರು ಸೂಚಿಸಿ, ಪ್ರತಿ ಶಿಕ್ಷಕರು,ಸಿಬ್ಬಂದಿಯೂ ಶ್ರಮದಾನದಲ್ಲಿ ಪಾಲ್ಗೊಳ್ಳಲು ಮನವಿ ಮಾಡಿ, ಶಾಲಾ ಆರಂಭದ ಸಿದ್ದತೆಗಳ ಕುರಿತು ಕ್ಷೇತ್ರ ಸಿಬ್ಬಂದಿ ಶಾಲೆಗಳಿಗೆ ಭೇಟಿ ನೀಡಿ ಗಮನಹರಿಸಲು ಸೂಚಿಸಿದರು.
ಸರ್ಕಾರಿ 2022-23 ಕಲಿಕಾ ಚೇತರಿಕಾ ವರ್ಷ ಆಚರಿಸುತ್ತಿದ್ದು, ಶಿಕ್ಷಕರಿಗೆ ತರಬೇತಿಯನ್ನು ನೀಡಿದೆ, ಮೊದಲ ದಿನದ ಪಾಠದ ಬದಲಿಗೆ ಮಕ್ಕಳಿಗೆ ವಿನೋದದೊಂದಿಗೆ ಖುಷಿಪಡಿಸಿ ಅವರು ಪ್ರೀತಿಯಿಂದ ಶಾಲೆಗೆ ಬರುವ ವಾತಾವರಣ ಸೃಷ್ಟಿಸಲು ಶಿಕ್ಷಕರಿಗೆ ತಿಳಿಸಿ ಎಂದರು.
ಭಾನುವಾರ ಶಾಲೆಗಳಲ್ಲಿ ಎಲ್ಲರ ಸಹಕಾರ ಪಡೆದ ಶ್ರಮದಾನ ನಡೆಸಿ, ಶಾಲಾ ವೇಳಾಪಟ್ಟಿ ತಯಾರಿಕೆ, ಶಿಕ್ಷಕರ ದಾಖಲೆಗಳ ಸಿದ್ದತೆ ಸೇರಿದಂತೆ ಶಾಲಾ ಆರಂಭಕ್ಕೆ ಸಂಬಂಧಿಸಿದಂತೆ ಎಲ್ಲಾ ದಾಖಲೆಗಳನ್ನು ಸಿದ್ದಪಡಿಸಿಕೊಟ್ಟುಕೊಳ್ಳಲು ತಿಳಿಸಿದರು.
ದಾಖಲಾತಿ ಹೆಚ್ಚಳಕ್ಕೆ
ಶಿಕ್ಷಕರು ಶ್ರಮವಹಿಸಿ
ಸರ್ಕಾರಿ ಶಾಲೆಗಳಲ್ಲಿ ದಾಖಲಾತಿ ಹೆಚ್ಚಳಕ್ಕೆ ಅಗತ್ಯ ದಾಖಲಾತಿ ಆಂದೋಲನ ನಡೆಸಿ, ಮಕ್ಕಳನ್ನು ಶಾಲೆಗೆ ಸ್ವಾಗತಿಸಿ, ಮತ್ತಷ್ಟು ಮಕ್ಕಳಿಗೆ ನಿಮ್ಮ ಕಾರ್ಯ ಪ್ರೇರಣೆ ನೀಡುವಂತಿರಲಿ ಎಂದರು.
ಶಾಲಾರಂಭದ ಕುರಿತು
ಮುಖ್ಯಶಿಕ್ಷಕರ ಸಭೆ
ಶಾಲಾ ಪ್ರಾರಂಭೋತ್ಸವದ ಕುರಿತಂತೆ ಮುಖ್ಯಶಿಕ್ಷಕರಿಗೆ ಸೂಕ್ತ ಮಾರ್ಗದರ್ಶನ ನೀಡುವ ಸಲುವಾಗಿ ಮೇ 14 ಶನಿವಾರ ಬೆಳಗ್ಗೆ 11 ಗಂಟೆಗೆ ಬೆಂಗಳೂರು ರಸ್ತೆಯ ಸೆಂಟ್‍ಆನ್ಸ್ ಶಾಲೆಯಲ್ಲಿ ಕರೆಯಲಾಗಿದ್ದು, ಎಲ್ಲಾ ಸರ್ಕಾರಿ,ಅನುದಾನಿತ, ಅನುದಾನರಹಿತ ಪ್ರೌಢಶಾಲೆಗಳ ಮುಖ್ಯಶಿಕ್ಷಕರು ತಪ್ಪದೇ ಸಭೆಗೆ ಹಾಜರಾಗಲು ಅವರು ಕೋರಿದರು.
ಶಾಲೆಗಳಲ್ಲಿ ಸ್ವಚ್ಚತೆ ಕಾಪಾಡುವುದರ ಕುರಿತು ಕ್ಷೇತ್ರ ಸಿಬ್ಬಂದಿ ಭೇಟಿ ನೀಡಿ ಪರಿಶೀಲಿಸುವಂತೆ ಸೂಚಿಸಿದ ಅವರು, ಶಾಲೆಗಳಲ್ಲಿ ಮಕ್ಕಳ ಕಲಿಕೆಗೆ ಪೂರಕವಾದ ಮತ್ತು ಆಕರ್ಷಣೀಯವಾದ ರೀತಿಯಲ್ಲಿ ಸಜ್ಜುಗೊಳಲಿಸಲು ಸೂಚಿಸಿದರು.
ಶಾಲೆಗಳಲ್ಲಿ ನೀರಿನ ಟ್ಯಾಂಕ್, ಅಡುಗೆ ಕೋಣೆ, ದಾಸ್ತಾನು ಕೋಣೆ, ತರಗತಿ ಕೊಠಡಿಗಳ ಸ್ವಚ್ಚತೆಗೆ ಒತ್ತು ನೀಡಬೇಕು, ಅಡುಗೆ ಪಾತ್ರೆಗಳನ್ನು ಬಿಸಿನೀರಿನಿಂದ ಸ್ವಚ್ಚಗೊಳಿಸಿ ಅಡುಗೆಗೆ ಅಣಿ ಮಾಡಿಕೊಳ್ಳಬೇಕು, ಶುದ್ದ ಕುಡಿಯುವ ನೀರಿನ ವ್ಯವಸ್ಥೆ ಮತ್ತು ಶೌಚಾಲಯಗಳಲ್ಲಿ ನೀರಿನ ವ್ಯವಸ್ಥೆಗೆ ಕ್ರಮವಹಿಸಲು ಸೂಚಿಸಿದರು.
16 ರಿಂದ 30ರವರೆಗೂ
ಮಿಂಚಿನ ಸಂಚಾರ
ಡಿಡಿಪಿಐ ಹಾಗೂ ಬಿಇಒ ನೇತೃತ್ವದ ತಂಡಗಳಿಂದ ಮಿಂಚಿನ ಸಂಚಾರ ನಡೆಯಲಿದೆ. ಮಿಂಚಿನ ಸಂಚಾರದ ತಂಡಗಳು ಜಿಲ್ಲಾದ್ಯಂತ ಶಾಲೆಗಳಿಗೆ ಭೇಟಿ ನೀಡಿ, ಶಾಲಾ ಸ್ವಚ್ಚತೆ, ಶಾಲಾ ಪ್ರಾರಂಭೋತ್ಸವಕ್ಕೆ ಕೈಗೊಂಡಿರುವ ಕ್ರಮಗಳು, ದಾಖಲೆಗಳನಿರ್ವಹಣೆ ಸೇರಿದಂತೆ ವಿವಿಧ ವಿಷಯಗಳ ಕುರಿತು ಪರಿಶೀಲನೆ ನಡೆಸಲಿದೆ ಎಂದು ತಿಳಿಸಿದರು.
ಮಕ್ಕಳ ನಿರಂತರ ಹಾಜರಾತಿಗಾಗಿ ಶಿಕ್ಷಕರ ತಂಡಗಳು ಮನೆ ಮನೆ ಭೇಟಿ ಕಾರ್ಯಕ್ರಮ ಹಾಕಿಕೊಳ್ಳಿ, ಯಾವುದೇ ಮಗು ಶಾಲೆಯಿಂದ ಹೊರಗುಳಿಯದಂತೆ ಎಚ್ಚರವಹಿಸಿ, ಪೋಷಕರು, ಎಸ್‍ಡಿಎಂಸಿ ಸಹಕಾರ ಪಡೆದು ಶಾಲೆ ಬಿಟ್ಟ ಮಕ್ಕಳನ್ನು ಮತ್ತೆ ಶಾಲೆಗೆ ಕರೆತರುವ ಕೆಲಸ ಮಾಡಿ ಎಂದು ತಾಕೀತು ಮಾಡಿದರು.
8, 9ನೇ ತರಗತಿಗಳಲ್ಲಿ ಶುಲ್ಕ ಪಾವತಿಸಿಲ್ಲ ಎಂದು ಮಕ್ಕಳನ್ನು ಮುಂದಿನ ತರಗತಿಗಳಿಗೆ ದಾಖಲಿಸಿಕೊಳ್ಳುವುದಿಲ್ಲ ಎಂದರೆ ಅದು ಅಪರಾಧವಾಗುತ್ತದೆ, ಶಾಲೆಗಳಲ್ಲಿ ಮೂಲಭೂತ ಸೌಲಭ್ಯಗಳ ಕೊರತೆ ಇದ್ದರೆ ಪಟ್ಟಿ ಮಾಡಿ, ಶಿಕ್ಷಕರ ಕೊರತೆ ಇದ್ದರೆ ಅಗತ್ಯ ಅತಿಥಿ ಶಿಕ್ಷಕರ ನೇಮಕಕ್ಕೆ ಇಲಾಖೆಗೆ ಮಾಹಿತಿ ರವಾನಿಸಲು ಸೂಚಿಸಿ ಎಂದು ತಿಳಿಸಿದರು.
ಶಿಕ್ಷಕರು, ಮಕ್ಕಳು ಕೋವಿಡ್ ಲಸಕೆ ಹಾಕಿಸಿಕೊಂಡಿರುವ ಕುರಿತು ದೃಢಪಡಿಸಿಕೊಳ್ಳಿ, ಅಗತ್ಯವಿದ್ದರೆ ಹಾಕಿಸಲು ಕ್ರಮವಹಿಸಿ ಎಂದು ಸೂಚಿಸಿದರು.
ಸಭೆಯಲ್ಲಿ ಕ್ಷೇತ್ರ ಸಮನ್ವಯಾಧಿಕಾರಿ ರಾಮಕೃಷ್ಣಪ್ಪ, ಇಸಿಒಗಳಾದ ಮುನಿರತ್ನಯ್ಯಶೆಟ್ಟಿ, ಆರ್.ಶ್ರೀನಿವಾಸನ್, ರಾಘವೇಂದ್ರ, ವೆಂಕಟಾಚಲಪತಿ, ಬಿಆರ್‍ಪಿ ಪ್ರವೀಣ್ ಮತ್ತಿತರರಿದ್ದು, ತಾಲ್ಲೂಕಿನ ಎಲ್ಲಾ ಇಸಿಒಗಳು, ಬಿಆರ್‍ಪಿಗಳು, ಸಿಆರ್‍ಪಿಗಳು ಸಭೆಯಲ್ಲಿ ಹಾಜರಿದ್ದರು.