ಚೆಕ್ ಪಡೆದುಕೊಂಡಿರುವ ಹಾಲು ಉತ್ಪಾದಕರು ಮತ್ತೆ ಕಡ್ಡಾಯವಾಗಿ ರಾಸುಗಳನ್ನು ಖರೀದಿಸಬೇಕು:ಕೋಚಿಮುಲ್ ನಿರ್ದೇಶಕ ಎನ್.ಹನುಮೇಶ್

ವರದಿ: ಶಬ್ಬೀರ್ ಅಹಮ್ಮದ್, ಶ್ರೀನಿವಾಸಪುರ

ಶ್ರೀನಿವಾಸಪುರ: ಚೆಕ್ ಪಡೆದುಕೊಂಡಿರುವ ಹಾಲು ಉತ್ಪಾದಕರು ಮತ್ತೆ ಕಡ್ಡಾಯವಾಗಿ ರಾಸುಗಳನ್ನು ಖರೀದಿಸಬೇಕು ಎಂದು ಕೋಚಿಮುಲ್ ನಿರ್ದೇಶಕ ಎನ್.ಹನುಮೇಶ್ ಹೇಳಿದರು.
ಪಟ್ಟಣದ ಕೋಚಿಮುಲ್ ಶಿಬಿರ ಕಚೇರಿಯಲ್ಲಿ ಗುರುವಾರ ಏರ್ಪಡಿಸಿದ್ದ ಸಮಾರಂಭದಲ್ಲಿ ಹಾಲು ಉತ್ಪಾದಕರಿಗೆ ಮೃತ ರಾಸುಗಳ ವಿಮಾ ಪರಿಹಾರ ಚೆಕ್ ವಿತರಿಸಿ ಮಾತನಾಡಿ, ಬೇರೆ ಬೇರೆ ಕಾರಣಗಳಿಂದ ಹಸು ಕಳೆದುಕೊಂಡ 14 ಹಾಲು ಉತ್ಪಾದಕರಿಗೆ ರೂ.7.90 ಲಕ್ಷ ವಿಮಾ ಪರಿಹಾರ ನೀಡಲಾಗಿದೆ. ಕರ್ನಾಟಕ ಹಾಲು ಮಹಾ ಮಂಡಳಿ ವತಿಯಿಂದ ಕಟ್ಟಡ ನಿರ್ಮಾಣ ಅನುದಾನವಾಗಿ ಶೀಗಲಪಾಳ್ಯ, ಬೂರಗನಹಳ್ಳಿ ಹಾಗೂ ಅಡವಿ ಚಂಬಕೂರು ಹಾಲು ಉತ್ಪಾದಕರ ಸಹಕಾರ ಸಂಘಗಳಿಗೆ ತಲಾ ರೂ.1.50 ಲಕ್ಷ ನೀಡಲಾಗಿದೆ ಎಂದು ಹೇಳಿದರು.
ಶಿಬಿರ ಕಚೇರಿ ಉಪ ವ್ಯವಸ್ಥಾಪಕ ಎ.ಎಸ್.ನರಸಿಂಹಯ್ಯ ಮಾತನಾಡಿ, ರೈತರು ಹಾಲಿನ ಗುಣಮಟ್ಟ ಹೆಚ್ಚಿಸಲು ಪೂರಕವಾಗಿ ಒಣ ಹಾಗೂ ಹಸಿ ಹುಲ್ಲಿನ ಜತೆಗೆ ಪಶು ಆಹಾರ, ಖನಿಜ ಮಿಶ್ರಣ, ಗೋಧಾರ ಶಕ್ತಿ ಮತ್ತು ಬಲವರ್ಧಕ ಪುಡಿಗಳನ್ನು ನೀಡಬೇಕು. ಕೆಚ್ಚಲು ಬಾವು ನಿಯಂತ್ರಣಕ್ಕೆ ಸಹಕಾರ ನೀಡಬೇಕು ಎಂದು ಹೇಳಿದರು.
ವಿಸ್ತರಣಾಧಿಕಾರಿಗಳಾದ ಎಂ.ಜಿ.ಶ್ರೀನಿವಾಸ್, ಎಸ್.ವಿನಾಯಕ, ನರಸಿಂಹರಾಜು, ಎನ್.ಶಂಕರ್, ಕೆ.ಪಿ.ಶ್ವೇತಾ, ಜಿ.ಎನ್.ಗೋಪಾಲಕೃಷ್ಣಾರೆಡ್ಡಿ ಇದ್ದರು.