ಕ್ರೀಡೆಯಿಂದ ಮಾನಸಿಕ , ದೈಹಿಕ ಸದೃಢತೆ – ಗುಂಜೂರು ಆರ್ . ಶ್ರೀನಿವಾಸರೆಡ್ಡಿ

JANANUDI.COM NETWORK

ಶ್ರೀನಿವಾಸಪುರ : ಯುವ ಪೀಳಿಗೆ ಕ್ರೀಡೆಯಿಂದ ತಮ್ಮಲ್ಲಿರುವ ಪ್ರತಿಭೆಯನ್ನು ಹೊರಹಾಕುವ ಅವಕಾಶದ ಜೊತೆಗೆ ದೈಹಿಕವಾಗಿ , ಮಾನಸಿಕವಾಗಿ ಸದೃಢರಾಗುತ್ತಾರೆ ಎಂದು ಸಮಾಜ ಸೇವಕ ಗುಂಜೂರು ಆರ್ . ಶ್ರೀನಿವಾಸರೆಡ್ಡಿ ತಿಳಿಸಿದರು .
ಶ್ರೀನಿವಾಸಪುರ ವಿಧಾನಸಭಾ ಕ್ಷೇತ್ರದ ಮುದುವಾಡಿ ಗ್ರಾಮದಲ್ಲಿ ಏರ್ಪಡಿಸಲಾಗಿದ್ದ ‘ ಮುದುವಾಡಿ – ಹೊಸಹಳ್ಳಿ ಪ್ರೀಮಿಯರ್ ಲೀಗ್ ‘ ಕ್ರಿಕೆಟ್ ಪಂದ್ಯಾವಳಿಗಳನ್ನು ಉದ್ಘಾಟನೆ ಮಾಡಿ ಮಾತನಾಡಿದ ಅವರು ಕ್ರೀಡೆಗಳು ಯುವಕರಲ್ಲಿ ಆತ್ಮವಿಶ್ವಾಸ , ಉಲ್ಲಾಸ ಹೆಚ್ಚಿಸುತ್ತವೆ , ಸೋಲುಗೆಲುವು ಸಹಜ , ಕ್ರೀಡಾಪಟುಗಳು ತಮಗೆ ದೊರೆತ ಅವಕಾಶ ಸದ್ಬಳಕೆ ಮಾಡಿಕೊಂಡು ಪ್ರತಿಭೆ ಹೊರಹಾಕಬೇಕು . ಪ್ರತಿಯೊಬ್ಬರೂ ಯಾವುದಾದರೊಂದು ಕ್ರೀಡೆಯಲ್ಲಿ ತೊಡಗಿಸಿಕೊಳ್ಳುವ ಮೂಲಕ ದೈಹಿಕರಾಗಿ ಸಧೃಡರಾಗಬೇಕು .
ಕ್ರೀಡೆಗಳು ಮನುಷ್ಯನ ಮಾನಸಿಕ ದೈಹಿಕ ಆರೋಗ್ಯದ ಜೊತೆಗೆ ಮಾನಸಿಕ ಆರೋಗ್ಯವನ್ನು ಸ್ಥಿರವಾಗಿರಿಸುತ್ತದೆ . ಅಲ್ಲದೇ ದಿನಪೂರ್ತಿ ಉತ್ಸಾಹದಿಂದ ಕಾರ್ಯನಿರ್ವಹಿಸಲು ಸಹಕಾರಿಯಾಗಿದೆ . ಪ್ರತಿಯೊಬ್ಬರಲ್ಲೂ ಒಂದೊಂದು ಕಲೆ ಅಡಗಿರುತ್ತದೆ . ಕ್ರೀಡೆಯು ಸಹ ಒಂದು ಕಲೆಯಂತೆಯೇ ಕಾಣಬಹುದು . ಕ್ರೀಡೆಯಿಂದ ದೈಹಿಕ ಆರೋಗ್ಯದ ಜೊತೆಯಲ್ಲಿ ಜ್ಞಾನ ವಿಕಸನವು ಆಗುತ್ತದೆ .
ಭಾರತದಲ್ಲಿ ಕ್ರೀಡೆಗಳಿಗೆ ಮತ್ತು ಕ್ರೀಡಾ ಪಟುಗಳಿಗೆ ಹೆಚ್ಚು ಗೌರವವಿದೆ. ಇಂದು ಎಲ್ಲಾ ಕ್ಷೇತ್ರಗಳಲ್ಲಿ ಕ್ರೀಡೆಗೆ ಹೆಚ್ಚು ಪ್ರಾಶಸ್ತ್ರವಿದ್ದು , ವಿದ್ಯಾರ್ಥಿಗಳು ಪಠ್ಯದ ಜೊತೆಗೆ ಕ್ರೀಡಾ ಚಟುವಟಿಕೆಗಳಲ್ಲಿ ಭಾಗವಹಿಸಬೇಕು . ಕ್ರೀಡೆಯಿಂದ ದೈಹಿಕ ಸಾಮರ್ಥ್ಯ ಹೆಚ್ಚಳ ಹಾಗೂ ಬೌದ್ಧಿಕ ಮಟ್ಟ ವೃದ್ಧಿ ಆಗುತ್ತದೆ . ಹೀಗಾಗಿ ಪ್ರತಿಯೊಬ್ಬರು ಕ್ರೀಡಾ ಚಟುವಟಿಕೆಯಲ್ಲಿ ಪಾಲ್ಗೊಳ್ಳಬೇಕು .
ಯುವ ಜನತೆ ಕ್ರೀಡೆಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ತೊಡಗಬೇಕು . ಮುಖ್ಯವಾಗಿ ದುಶ್ಚಟಗಳಿಗೆ ಸಾಕಷ್ಟು ದೂರವಿರಬೇಕು . ಅಂದಾಗಲೇ ಗಟ್ಟಿಯಾಗಿ ಇರಲು ಸಾಧ್ಯ ಗ್ರಾಮೀಣ ಪ್ರದೇಶಗಳ ಕ್ರೀಡೆಯನ್ನು ಉಳಿಸಿ ಬೆಳೆಸುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ . ದೇಶಿಯ ಕ್ರೀಡೆಗಳು ಉಳಿಸಿ ಬೆಳೆಸಿ , ಮುನ್ನಡೆಸಿಕೊಂಡು ಹೋಗಬೇಕು .
ಇಂದಿನ ಯುವ ಪೀಳಿಗೆ ಮೊಬೈಲ್ , ಕಂಪ್ಯೂಟರ್‌ಗಳಂತಹ ಗೇಮ್‌ಗಳಿಗೆ ಮಾರು ಹೋಗದೆ ಗ್ರಾಮೀಣ ಪ್ರದೇಶಗಳಲ್ಲಿ ಪರಂಪರೆಯಾಗಿ ಬಂದಿರುವ ನಾನಾ ಬಗೆಯ ಕ್ರೀಡೆಗಳನ್ನು ಆಯೋಜಿಸಬೇಕು . ಇಂತಹ ಕ್ರೀಡೆಗಳನ್ನು ಮುಂದುವರೆಸಿಕೊಂಡು ಹೋಗಬೇಕು.
ಈ ಹಿಂದೆ ಹಳ್ಳಿಗಳಲ್ಲಿ ಗ್ರಾಮೀಣ ಕೀಡೆಗಳನ್ನು ಆಯೋಜಿಸಲಾಗುತ್ತಿತ್ತು . ಆದರೆ ಸ್ಪರ್ಧಾತ್ಮಕ ಜಗತ್ತಿನಲ್ಲಿ ಎಲ್ಲರೂ ಒತ್ತಡದಿಂದ ಜೀವನ ನಡೆಸುತ್ತಿರುವ ಪರಿಣಾಮ ಕ್ರೀಡೆಗಳನ್ನು ಮರೆಯುತ್ತಿದ್ದಾರೆ . ನಮ್ಮ ದೇಸಿ ಕ್ರೀಡೆಯನ್ನು ಉಳಿಸಿ ಬೆಳೆಸಿಕೊಂಡು ಹೋಗುವುದು ಅಗತ್ಯವಿದೆ . ಅಂದಾಗಲೇ ಇದು ಮುಂದಿನ ಪೀಳಿಗೆಗೆ ಉಳಿಯಲು ಸಾಧ್ಯ . ಇದನ್ನು ಅರ್ಥ ಮಾಡಿಕೊಳ್ಳ ಬೇಕಿದೆ . ದೇಶಿಯ ಆಟಗಳು ಅವಸಾನದ ಅಂಚಿನಲ್ಲಿವೆ .
ಈ ಭಾಗದ ಮುಖಂಡರು ಮನರಂಜನೆ ಜೊತೆಗೆ ದೈಹಿಕ ಮತ್ತು ಮಾನಸಿಕ ಸಾಮರ್ಥ್ಯ ವೃದ್ಧಿಸುವ ಕೆಲಸವನ್ನು ಮಾಡುತ್ತಿರುವುದು ಶ್ಲಾಘನೀಯ . ಉದಾಹರಣೆಗೆ ದೇಶೀಯ ಆಟಗಳಿಂದ ಮಕ್ಕಳನ್ನು ಮೊಬೈಲ್ ವ್ಯಾಮೋಹದಿಂದ ದೂರವಿಡಲು ಸಹಕಾರಿಯಾಗುತ್ತದೆ
ಪೋಷಕರು ತಮ್ಮ ಮಕ್ಕಳಿಗೆ ದೇಶಿಯ ಆಟಗಳ ಬಗ್ಗೆ ಆಗಾಗ ತಿಳಿಸಿಕೊಡುವ ಕೆಲಸ ಮಾಡುವಂತೆ ಆಗಬೇಕು . ದೇಶೀಯ ಅನೇಕ ಗ್ರಾಮೀಣ ಆಟಗಳ ಹೆಸರುಗಳನ್ನು ಮರೆಯುತ್ತಿದ್ದೇವೆ . ಮೊದಲೆಲ್ಲ ದೇಶಿಯ ಆಟಗಳಿಗೆ ಹೆಚ್ಚು ಪ್ರಾಮುಖ್ಯತೆ ನೀಡುತ್ತಿದ್ದರು ಎಂದರು .
ಈ ಸಂದರ್ಭದಲ್ಲಿ ಗುಂಜೂರು ಆರ್ . ಶ್ರೀನಿವಾಸರೆಡ್ಡಿ ಬಣದ ಮುಖಂಡರು , ಕ್ರೀಡಾಪಡುಗಳು , ಮುದುವಾಡಿ – ಹೊಸಹಳ್ಳಿ ಗ್ರಾಮಸ್ಥರು ಹಾಜರಿದ್ದರು
.