ಸಂತ ಲಾರೆನ್ಸ್ ಪ ಪೂರ್ವ ಕಾಲೇಜಿಗೆ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಮಾರುತಿಯವರು ಭೇಟಿ ನೀಡಿ ಕಾಲೇಜಿನಲ್ಲಿ ಕೋವಿಡ್ 19 ಸಂಬಂಧಿತ ನಿಯಮಾವಳಿಗಳ ಪಾಲನೆ ಪರಿಶೀಲಿಸಿದರು

JANANUDI.COM NETWORK

ಇಂದು ಮೂಡುಬೆಳ್ಳೆಯ ಸಂತ ಲಾರೆನ್ಸ್ ಪ ಪೂರ್ವ ಕಾಲೇಜಿಗೆ ಉಡುಪಿ ಜಿಲ್ಲೆಯ ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕರಾದ ಶ್ರೀ ಮಾರುತಿ ಸರ್ ಇವರು ಭೇಟಿ ನೀಡಿ ಕಾಲೇಜಿನಲ್ಲಿ ಕೋವಿಡ್ 19 ಸಂಬಂಧಿತ ನಿಯಮಾವಳಿಗಳ ಪಾಲನೆಯ ಪರಿಶೀಲನೆ ಮತ್ತು ವಿದ್ಯಾರ್ಥಿಗಳೊಡನೆ ಸಂವಾದ ನಡೆಸಿದರು. ವಿದ್ಯಾರ್ಥಿಗಳಿಗೆ ನಡೆಯುತ್ತಿರುವಂತಹ ಆಫ್ಲೈನ್ ಪಾಠಗಳ ಕುರಿತು ಮಾಹಿತಿಯನ್ನು ಸಂಗ್ರಹಿಸಿದರು. ಹಾಗೆಯೇ ವಿದ್ಯಾರ್ಥಿಗಳ ಕಲಿಕೆಯನ್ನು ಗಮನಿಸಿದರು.

ಈ ಸಂದರ್ಭದಲ್ಲಿ ಅವರು ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿ “ಎಲ್ಲ ವಿದ್ಯಾರ್ಥಿಗಳು ಕಲಿಕೆಗೆ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡಬೇಕು. ಈ ಬಾರಿ ವಿದ್ಯಾರ್ಥಿಗಳಿಗೆ ಇಲಾಖೆಯು ವ್ಯವಸ್ಥಿತವಾಗಿ ತರಗತಿಗಳ ಯೋಜನೆಯನ್ನು ಮಾಡಿದೆ .ಆದ್ದರಿಂದ ಪ್ರತಿಯೊಬ್ಬ ವಿದ್ಯಾರ್ಥಿಯು ಉತ್ತಮವಾಗಿ ಕಲಿತು ತನ್ನ ಸಂಸ್ಥೆ ಮತ್ತು ಹೆತ್ತವರಿಗೆ ಉತ್ತಮ ಹೆಸರನ್ನು ತರಬೇಕು. ಯಾವುದೇ ವಿದ್ಯಾರ್ಥಿಗಳು ಪರೀಕ್ಷೆಗೆ ಭಯಪಡಬಾರದು .ಶಿಸ್ತುಬದ್ಧ ಕಲಿಕೆ ಮತ್ತು ಉಪನ್ಯಾಸಕರ )ಮಾರ್ಗದರ್ಶನವನ್ನು ಪಡೆದು ಎಲ್ಲ ವಿದ್ಯಾರ್ಥಿಗಳು ಉತ್ತಮ ಅಂಕಗಳನ್ನು ಪಡೆಯಲು ಪ್ರಯತ್ನಿಸಬೇಕು. ಉಪನ್ಯಾಸಕರು ಮಾಡುವ ಎಲ್ಲ ಪಾಠಗಳನ್ನು ವಿದ್ಯಾರ್ಥಿಗಳು ಸರಿಯಾಗಿ ಅರ್ಥಮಾಡಿಕೊಂಡು ಕಲಿಯಬೇಕು. ಏನಾದರೂ ಸಂಶಯವಿದ್ದಲ್ಲಿ ತಕ್ಷಣವೇ ಪರಿಹರಿಸಿಕೊಳ್ಳಬೇಕು. ಹೀಗೆ ಕಲಿತಲ್ಲಿ ಆತ್ಮವಿಶ್ವಾಸದಿಂದ ಪರೀಕ್ಷೆಯನ್ನು ಎದುರಿಸಲು ಸಾಧ್ಯ “ಎಂದು ಶುಭಹಾರೈಸಿದರು.

ಪ್ರಾಂಶುಪಾಲರಾದ ಎಡ್ವರ್ಡ್ ಲಾರ್ಸನ್ ಡಿಸೋಜ ಸ್ವಾಗತಿಸಿ, ಹಿರಿಯ ಉಪನ್ಯಾಸಕಿ ಜೆಸಿಂತಾ ನತಾಲಿಯಾ ಲೋಬೊ ವಂದಿಸಿದರು. ಈ ಸಂಧರ್ಭದಲ್ಲಿ ಸಂಸ್ಥೆಯ ಶಿಕ್ಷಕ ಶಿಕ್ಷಕೇತರ ವೃಂದದರು ಉಪಸ್ಥಿತರಿದ್ದರು.