ಮನುಷ್ಯ ಸೇವೆಯಲ್ಲಿ ಸಾರ್ಥಕತೆ ಕಂಡುಕೊಳ್ಳಬೇಕು: ರೋಟರಿ ಸೆಂಟ್ರಲ್ ಶ್ರೀನಿವಾಸಪುರ ಸಂಸ್ಥೆಯ ನೂತನ ಅಧ್ಯಕ್ಷ ಡಾ. ವೈ.ವಿ.ವೆಂಕಟಾಚಲ

ವರದಿ: ಶಬ್ಬೀರ್ ಅಹಮ್ಮದ್, ಶ್ರೀನಿವಾಸಪುರ

ಶ್ರೀನಿವಾಸಪುರ: ಮನುಷ್ಯ ಸೇವೆಯಲ್ಲಿ ಸಾರ್ಥಕತೆ ಕಂಡುಕೊಳ್ಳಬೇಕು. ಸಮ ಸಮಾಜ ಕಲ್ಪನೆ ಸಾಕರಗೊಳ್ಳಲು ಸಮುದಾಯದಲ್ಲಿ ಮಾನವೀಯ ಪ್ರಜ್ಞೆ ಗರಿಗೆದರಬೇಕು ಎಂದು ರೋಟರಿ ಸೆಂಟ್ರಲ್ ಶ್ರೀನಿವಾಸಪುರ ಸಂಸ್ಥೆಯ ನೂತನ ಅಧ್ಯಕ್ಷ ಡಾ. ವೈ.ವಿ.ವೆಂಕಟಾಚಲ ಹೇಳಿದರು.
ಪಟ್ಟಣದ ವೆಂಟೇಶಗೌಡ ಕಲ್ಯಾಣ ಮಂಟಪದ ಆವರಣದಲ್ಲಿ ಬುಧವಾರ ಏರ್ಪಡಿಸಿದ್ದ ಪದಗ್ರಹಣ ಸಮಾರಂಭದಲ್ಲಿ ರೋಟರಿ ಸೆಂಟ್ರಲ್ ಶ್ರೀನಿವಾಸಪುರ ಸಂಸ್ಥೆಯ ನೂತನ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿ ಮಾತನಾಡಿ, ಸೇವೆಗೆ ಜಾತಿ, ಮತ, ಭಾಷೆಯ ಎಲ್ಲೆ ಇರುವುದಿಲ್ಲ. ಅಗತ್ಯ ಇರುವ ವ್ಯಕ್ತಿಗಳಿಗೆ ಸಹಾಯ ಹಸ್ತ ನಿಡುವುದು ಮಾನವ ಧರ್ಮ ಎಂದು ಹೇಳಿದರು.
ಶಾಂತಿ ಬೆಳೆಸುವುದು ಹಾಗೂ ಅಶಾಂತಿ ಹೋಗಲಾಡಿಸುವುದು, ಸಮ ಸಮಾಜ ನಿರ್ಮಾಣಕ್ಕೆ ಪ್ರತ್ನಿಸುವುದು, ಶ್ರೇಷ್ಠ ಜೀವನದೆಡೆಗೆ ಜನರನ್ನು ಕೊಂಡೊಯ್ಯುವುದು ಸೇವಾ ಸಂಸ್ಥೆಯ ಉದ್ದೇಶವಾಗಿದೆ. ಈ ಉದ್ದೇಶ ನೆರವೇರಲು ಮಾನವೀಯ ನೆಲೆಯಲ್ಲಿ, ಸಮರ್ಪಣಾ ಭಾವದಿಂದ ಕಾರ್ಯನಿರ್ವಹಿಸಬೇಕು ಎಂದು ಅಭಿಪ್ರಾಯಪಟ್ಟರು.
ಜನರು ಹಾಗೂ ಸಾಕು ಪ್ರಾಣಿಗಳ ಆರೋಗ್ಯ ರಕ್ಷಣೆಗೆ ಪೂರಕವಾಗಿ ಉಚಿತ ಆರೋಗ್ಯ ಶಿಬಿರಗಳನ್ನು ಏರ್ಪಡಿಸಲಾಗುವುದು. ಅಂಗ ದಾನದ ಮಹತ್ವ ಕುರಿತು ಜನರಲ್ಲಿ ಅರಿವು ಮೂಡಿಸಲಾಗುವುದು. ಕೋವಿಡ್ ತಡೆಗೆ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಸಮುದಾಯದ ಗಮನ ಸೆಳೆಯಲಾಗುವುದು. ಸಂಸ್ಥೆಯ ಪದಾಧಿಕಾರಿಗಳು ಹಾಗೂ ಸದಸ್ಯರ ಸಹಕಾರದಿಂದ ಸಮಾಜ ಸೇವಾ ಕಾರ್ಯಗಳನ್ನು ಕೈಗೊಳ್ಳಲಾಗುವುದು ಎಂದು ಹೇಳಿದರು.
ರೋಟರಿ ಶ್ರೀನಿವಾಸಪುರ ಸೆಂಟ್ರಲ್‍ನ ನಿಕಟಪೂರ್ವ ಅಧ್ಯಕ್ಷ ಶಿವಮೂರ್ತಿ ಮಾತನಾಡಿ, ತಮ್ಮ ಅಧಿಕಾರಾವಧಿಯಲ್ಲಿ ಕೋವಿಡ್ ಸಂಕಷ್ಟದ ನಡುವೆಯೂ 148 ಯೋಜನೆಗಳನ್ನು ರೂಪಿಸಿ ಜಾರಿಗೆ ತರಲಾಯಿತು. ಯೋಜನೆಗಳ ಲಾಭವನ್ನು ಅರ್ಹ ಫಲಾನುಭವಿಗಳಿಗೆ ತಲುಪಿಸಲಾಯಿತು. ಈಗಾಗಲೇ ಸಮಾಜ ಸೇವೆಯಲ್ಲಿ ತಮ್ಮದೇ ಆಧ ಛಾಪು ಮೂಡಿಸಿರುವ ಡಾ. ವೈ.ವಿ.ವೆಂಕಟಾಚಲ ಅವರು ಸಮಾಜ ಮುಖಿ ಯೋಜನೆಗಳನ್ನು ರೂಪಿಸಿ ಜಾರಿಗೊಳಿಸುತ್ತಾರೆ ಎಂಬ ವಿಶ್ವಾಸವಿದೆ ಎಂದು ಹೇಳಿದರು.
ಸಂಸ್ಥೆಯ ಜಿಲ್ಲಾ ಗೌರ್ನರ್ ಉದಯ್ ಕುಮಾರ್ ಭಾಸ್ಕರ್, ಸುಧಾರಕರ್, ಬಿ.ಶ್ರೀನಿವಾಸ್, ಸೀತರೆಡ್ಡಿ, ಕೃಷ್ಣಮೂರ್ತಿ, ಶ್ರೀನಿವಾಸರೆಡ್ಡಿ, ಎನ್.ಬಿ.ಗೋಪಾಲಗೌಡ ಸೇವೆಯ ಮಹತ್ವ ಕುರಿತು ಮಾತನಾಡಿದರು.
ಕಾರ್ಯದರ್ಶಿ ಎಚ್.ಎನ್.ನಾರಾಯಣಸ್ವಾಮಿ, ಮುಖಂಡರಾದ ಎಲ್.ಗೊಪಾಲಕೃಷ್ಣ, ಕೆ.ವಿ.ಶಂಕರಪ್ಪ, ಎನ್.ರಾಜೇಂದ್ರ ಪ್ರಸಾದ್, ಗೋಪಾಲರೆಡ್ಡಿ, ಟಿ.ಎಸ್.ರಾಮಚಂದ್ರೇಗೌಡ, ರವೀಂದ್ರಯ್ಯ ಕುಲಕರ್ಣಿ, ಎಂ.ಎನ್.ರಾಮಚಂದ್ರೇಗೌಡ, ಎಸ್.ಎನ್.ಮಂಜುನಾಥರೆಡ್ಡಿ, ವೀರವೆಂಕಟಪ್ಪ, ಲಕ್ಷ್ಮಣಗೌಡ, ಕೃಷ್ಣಾರೆಡ್ಡಿ, ನಾಗರಾಜ್, ಟಿ.ಎಸ್.ಮಾಯಾ, ಡಾ. ಶುಭಾ, ಬಾಲಚಂದ್ರ ಇದ್ದರು.