

112 ವರ್ಷಗಳ ಇತಿಹಾಸವಿರುವ ಎಂ.ಸಿ.ಸಿ. ಬ್ಯಾಂಕ್ ತನ್ನ ವ್ಯಾಪ್ತಿಯನ್ನು ಕರ್ನಾಟಕ ರಾಜ್ಯಕ್ಕೆ ರಾಜ್ಯಾದ್ಯಂತ ವ್ಯಾಪಿಸಿದ್ದು, ಇದೇ ವರ್ಷದ ಮಾರ್ಚ್ ತಿಂಗಳಲ್ಲಿ ತನ್ನ 17ನೇ ಹೊಸ ಶಾಖೆಯನ್ನು ಬ್ರಹ್ಮಾವರದಲ್ಲಿ ಪ್ರಾರಂಭಿಸಿದೆ.
ಈ ವರ್ಷದ ದೀಪಾವಳಿ ಹಬ್ಬದ ಪ್ರಯುಕ್ತ ಕರಾವಳಿ ಭಾಗದ ಕುಂದಾಪುರ, ಬ್ರಹ್ಮಾವರ, ಉಡುಪಿ ಶಾಖೆಗಳ ವತಿಯಿಂದ ಸಾರ್ವಜನಿಕರಿಗೆ ದೀಪಗಳ ಜೊತೆ ಸಮೂಹ ಭಾವಚಿತ್ರ ಸ್ಪರ್ಧೆಯನ್ನು ಏರ್ಪಡಿಸಲಾಗಿದೆ.
ಈ ಸ್ಪರ್ಧೆಯ ಪೋಸ್ಟರ್ ಅನಾವರಣ ಕಾರ್ಯಕ್ರಮವು ದಿನಾಂಕ 24/10/2024 ರಂದು ಎಂ.ಸಿ.ಸಿ. ಬ್ಯಾಂಕಿನ ಬ್ರಹ್ಮಾವರ ಶಾಖೆಯಲ್ಲಿ ಜರಗಿತು. ಬ್ರಹ್ಮಾವರ ಪರಿಸರದ ಖ್ಯಾತ ಉದ್ಯಮಿಗಳಾದ ಶ್ರೀಯುತ ಅರುಣ್ ವಾರಂಬಳ್ಳಿ ಯವರು ಸ್ಪರ್ಧೆಗಳ ಪೋಸ್ಟರ್ ಅನಾವರಣಗೊಳಿಸಿ ಶುಭಕೋರಿದರು. ಈ ಸಂದರ್ಭದಲ್ಲಿ ಸ್ಥಳೀಯ ಉದ್ಯಮಿಗಳಾದ ರೋಶನ್, ರವಿ, ಯೋಗೀಶ್, ಗಣೇಶ್ ಮತ್ತು ಗ್ರಾಹಕರಾದ ಆನಂದ್, ಪ್ರತಿಮಾ, ಪ್ರವೀಣ್ ಹಾಗೂ ಬ್ರಹ್ಮಾವರ ಶಾಖೆಯ ಸಿಬ್ಬಂದಿಗಳು ಹಾಜರಿದ್ದರು.
ಎಂ.ಸಿ.ಸಿ. ಬ್ಯಾಂಕಿನ ನಿರ್ದೇಶಕರಾದ ಶ್ರೀಯತ ಎಲ್ರಾಯ್ ಕಿರಣ್ ಕ್ರಾಸ್ಟೊರವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಬ್ರಹ್ಮಾವರ ಶಾಖೆಯ ಪ್ರಬಂಧಕರಾದ ಶ್ರೀಯುತ ಒವಿನ್ ರೆಬೆಲ್ಲೊರವರು ಸರ್ವರನ್ನು ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.
ದೀಪಗಳ ಜೊತೆಯಿರುವ ಭಾವಚಿತ್ರ ಹಾಗೂ 15 ಸೆಕೆಂಡುಗಳ ವಿಡಿಯೋ ತುಣುಕಿರಬೇಕು. ಐದು ಅಥವಾ ಐದಕ್ಕಿಂತ ಹೆಚ್ಚು ಜನರು ಇರತಕ್ಕದ್ದು. ಸಾಂಪ್ರದಾಯಿಕ ಉಡುಗೆ ಹಾಗೂ ಕ್ರಿಯಾತ್ಮಕ ಪ್ರಸ್ತುತಿಗೆ ಹೆಚ್ಚಿನ ಪ್ರಾಶಸ್ತ್ಯವನ್ನು ನೀಡಲಾಗುವುದು ಹಾಗೂ ನೋಂದಾಯಿಸುವ ತಂಡದ ನಾಯಕರ ಮೊಬೈಲ್ ಸಂಖ್ಯೆ ಹಾಗೂ ಆಧಾರ್ ಕಾರ್ಡ್ ಪ್ರತಿಯನ್ನು ಸ್ಪರ್ಧೆಯ ವಾಟ್ಸಪ್ ಸಂಖ್ಯೆ 7090700113 ಗೆ 03-11-24 ರ ಸಂಜೆ 5 ರ ಒಳಗೆ ಕಳುಹಿಸಬೇಕೆಂದು ತಿಳಿಸಲಾಗಿದೆ. ಈ ಸ್ಪರ್ಧೆಯಲ್ಲಿ ನಮ್ಮ ಕರ್ನಾಟಕದ ಎಲ್ಲಾ ಜನರು ಭಾಗವಹಿಸಬಹುದು ಎಂದು ತಿಳಿಸಲಾಗಿದೆ.
ಸ್ಪರ್ಧೆಯ ವಿಭಾಗದಲ್ಲಿ ರೂ. 5000 (ಪ್ರಥಮ), ರೂ. 3000 (ದ್ವಿತೀಯ), ರೂ. 2000 (ತೃತೀಯ) ಹಾಗೂ ರೂ. 1000 (ಸಮಾಧಾನಕರ) ಬಹುಮಾನಗಳನ್ನು ನೀಡಲಾಗುವುದು. ವಿಜೇತರಿಗೆ ಬಹುಮಾನಗಳನ್ನು 10/11/2024 ರಂದು ಎಂ.ಸಿ.ಸಿ. ಬ್ಯಾಂಕಿನ ಉಡುಪಿ ಶಾಖೆಯ ಸ್ಥಳಾಂತರದ ಕಾರ್ಯಕ್ರಮದಲ್ಲಿ ನೀಡಲಾಗುವುದು ಎಂದು ತಿಳಿಸಲಾಗಿದೆ.

