

ಕೋಲಾರ:- ಡಿಸಿಸಿ ಬ್ಯಾಂಕಿನಿಂದ ಅಸ್ಥಿತ್ವದಲ್ಲಿರದ ಯಾವುದೇ ಮಹಿಳಾ ಸ್ವಸಹಾಯ ಸಂಘಗಳಿಗೆ ಸಾಲ ನೀಡಿಲ್ಲ, ದಾಖಲೆಗಳ ನಿರ್ವಹಣೆ ಸರಿಯಾಗಿದೆ ಎಂದು ಸರ್ಕಾರವೇ ನೇಮಿಸಿದ್ದ ಸಹಕಾರ ಸಂಘಗಳ ಜಂಟಿ ನಿರ್ದೇಶಕ ಕಲ್ಲಪ್ಪ ಓಬಣ್ಣಗೋಳ್ ನೇತೃತ್ವದ ಪರಿಶೀಲನಾ ಸಮಿತಿ ವರದಿ ನೀಡಿದ್ದರೂ ವಿನಾಕಾರಣ ಆರೋಪ ಮಾಡಲಾಗುತ್ತಿದೆ, ಆಡಳಿತ ಮಂಡಳಿ ಬ್ಯಾಂಕನ್ನು ಕಣ್ಣಲ್ಲಿಕಣ್ಣಿಟ್ಟು ಕಾಪಾಡಿದ್ದೇವೆ ಎಂದು ಕೋಲಾರ,ಚಿಕ್ಕಬಳ್ಳಾಪುರ ಡಿಸಿಸಿ ಬ್ಯಾಂಕ್ ಮಾಜಿ ಅಧ್ಯಕ್ಷರಾದ ಬ್ಯಾಲಹಳ್ಳಿ ಗೋವಿಂದಗೌಡ ತಿಳಿಸಿದರು.
ನಗರದ ಪತ್ರಕರ್ತರ ಭವನದಲ್ಲಿ ಈ ಸಂಬಂಧ ಸುದ್ದಿಗೋಷ್ಟಿ ನಡೆಸಿ, ದಾಖಲೆಗಳನ್ನು ಪ್ರದರ್ಶಿಸಿ ಮಾತನಾಡಿದ ಅವರು, ಮಹಿಳಾ ಸಂಘಗಳ ಬಡ್ಡಿ ಕ್ಲೈಂ, ಸಾಲ ನೀಡಿಕೆಯಲ್ಲಿ ಅವ್ಯವಹಾರಗಳ ಆರೋಪ ಮಾಡುತ್ತಿರುವ ಹಿನ್ನಲೆಯಲ್ಲಿ ಜನತೆಗೆ ಸತ್ಯ ತಿಳಿಸುವ ದೃಷ್ಟಿಯಿಂದ ಮಾಹಿತಿ ಹಂಚಿಕೊಳ್ಳುತ್ತಿರುವುದಾಗಿ ತಿಳಿಸಿದರು.
ಸರ್ಕಾರವೇ ನೇಮಿಸಿದ್ದ ಸಹಕಾರ ಸಂಘಗಳ ಜಂಟಿ ನಿರ್ದೇಶಕ ಕಲ್ಲಪ್ಪ ಓಬಣ್ಣಗೋಳ್ ನೇತೃತ್ವದ ಪರಿಶೀಲನಾ ಸಮಿತಿ ಮಹಿಳಾ ಸ್ವಸಹಾಯ ಸಂಘಗಳ ಗುಂಪುಗಳ ಪ್ರತಿನಿಧಿ, ಸದಸ್ಯರನ್ನೇ ಭೇಟಿ ಮಾಡಿ ಮಾಹಿತಿ ಸಂಗ್ರಹಿಸಿ ಈ ವರದಿ ನೀಡಿದ್ದು, ಅಸ್ಥಿತ್ವದಲ್ಲಿ ಇರದ ಯಾವುದೇ ಸ್ವಸಹಾಯ ಗುಂಪುಗಳಿಗೆ ಸಾಲ ನೀಡಿರುವ ಪೂರಕ ದಾಖಲೆ ಕಂಡು ಬಂದಿಲ್ಲ ಎಂದು ಉಲ್ಲೇಖಿಸಿದೆ ಎಂದು ತಿಳಿಸಿದರು.
ತನಿಖಾ ವರದಿಗಳನ್ನು
ಲಾಮೇಕರ್ಗಳು ಗಮನಿಸಲಿ
ನಾನು ಲಾ ಮೇಕರ್ ಅಲ್ಲ, ಶಾಸನ ಸಭೆಯಲ್ಲಿ ಇರುವವರಿಗೆ ಕಾನೂನು ರಚಿಸುವ ಅವಕಾಶ ಇದೆ, ಸರ್ಕಾರವೇ ರಚಿಸಿದ ಸಮಿತಿ ವರದಿ ನಂತರವೂ ಇಂತಹ ಆರೋಪಗಳು ಬಂದರೆ ಹೇಗೆ ಎಂದು ಪ್ರಶ್ನಿಸಿದ ಅವರು,ನನ್ನ ವಿರುದ್ದ 7 ಎಫ್ಐಆರ್ ಹಾಕಿಸಲಾಗಿದೆ, ಎಲ್ಲವೂ ಕಟ್ ಅಂಡ್ ಪೇಸ್ಟ್ ಮಾಡಿರೋದು, ದುರುದ್ದೇಶದಿಂದ ಮಾಡಿರುವ ಆರೋಪಗಳಾಗಿದ್ದು, ನಿಯಮಾನುಸಾರ ನ್ಯಾಯಾಲಯ ಇದಕ್ಕೆ ತಡೆಯಾಜ್ಞೆ ನೀಡಿದೆ ಎಂದರು.
ಬೋರ್ಡ್ ಇದ್ದಾಗ ಕಣ್ಣಲ್ಲಿ ಕಣ್ಣಿಟ್ಟು ಬ್ಯಾಂಕ್ ನಡೆಸಿದ್ದೇವೆ. ಬ್ಯಾಂಕ್ ಬೆಳೆಸಿದ್ದೇವೆ, ಉಳಿಸಿದ್ದೇವೆ, ಈಗ ಲಾ ಮೇಕರ್ಗಳು ಏನು ಬೇಕಾದರು ಮಾತನಾಡುತ್ತಾರೆ, ಶಾಸನ ಸಭೆಯಲ್ಲಿ ಕುಳಿತಿರುವರು ಕಾನೂನು ಜಾರಿ ಮಾಡುವವರು ಅವರು ಮಾತನಾಡಲಿ ಎಂದರು.
ಶಾಸಕರಾದ ಕೊತ್ತೂರು ಮಂಜುನಾಥ್ ಅವರು ಇತ್ತೀಚೆಗೆ ಜಾತ್ರೆಯೊಂದರಲ್ಲಿ ಮಾಧ್ಯಮಗಳಿಗೆ ನೀಡಿರುವ ಹೇಳಿಕೆ ನೀಡಿ ಬ್ಯಾಂಕ್, ಸಹಕಾರ ಸಂಘಗಳ ಹಣ ತಿಂದವರಿಗೆ ರೋಗ ಬರಲಿ ಎಂದು ಹೇಳಿದ್ದಾರೆ ಇದಕ್ಕೆ ನನ್ನ ಸಹಮತವಿದೆ ಎಂದು ತಿಳಿಸಿದರು.
ನಾನು ಯಾವುದೇ ಸಾಲ ಡಿಸಿಸಿ ಬ್ಯಾಂಕ್ ಕಾರ್ಯಕಾರಿ ಸಮಿತಿ ಗಮನಕ್ಕೆ ಬಾರದೆ ನೀಡಿದ್ದರೆ ಅದಕ್ಕೆ ನಾನು ಜವಾಬ್ದಾರನಾಗಿರುವೆ ಎಂದು ಸ್ಪಷ್ಟಪಡಿಸಿದ ಅವರು, ಸಾಲ ನೀಡಿಕೆಗೆ ಬ್ಯಾಂಕ್ ಆಡಳಿತ ಮಂಡಳಿ ಒಪ್ಪಿಗೆ ಪಡೆದು ಮಾತ್ರವೇ ವಿತರಿಸಲಾಗಿದೆ ಎಂದು ತಿಳಿಸಿದರು.
ನನ್ನ ಮೇಲೆ ಹಾಕಿರುವ ಎಫ್ಐಆರ್ ಪ್ರತಿಗಳನ್ನು ಗಮನಿಸಿದರೆ ಎಲ್ಲಾ ಒಂದೇ ರೀತಿ ಇದೆ, ಇದು ದುರುದ್ದೇಶಪೀಡಿತವಾಗಿ ನೀಡಿರುವ ದೂರು ಎಂದು ಅರ್ಥವಾಗುತ್ತದೆ, ಸೊಸೈಟಿಗಳಲ್ಲಿ ಯಾವುದೇ ರೀತಿ ಸಾಲ ಬಾಕಿಯಿಲ್ಲ, ಹೊರ ಬಾಕಿಯಿಲ್ಲ ಎಂಬುದಕ್ಕೆ ಬ್ಯಾಂಕಿನಿಂದ ಪ್ರಮಾಣ ಪತ್ರ ನೀಡಿದ್ದಾರೆ ಎಂದು ತಿಳಿಸಿದರು.
ಬ್ಯಾಂಕ್ಗೆ ಸಂಬಂಧಿಸಿದ ಪರಿವೀಕ್ಷಣಾ ವರದಿಯಲ್ಲಿ ಹಿಂದೆ ಬಿಲ್ ಕ್ಲೈಮ್ ಆಗಿರುವ ಬಗ್ಗೆ ಮಾಹಿತಿ ಲಗತ್ತಿಸಲಾಗಿದೆ. ಚಿಂತಾಮಣಿ ಶಾಖೆ ಸೇರಿದಂತೆ ವಿವಿಧ ಕಡೆ 11 ಕೋಟಿ ಅವ್ಯವಹಾರ ನಡೆದಿದೆ, ಈ ಬಗ್ಗೆ ತನಿಖೆ ಮಾಡಿ ವ್ಯವಸ್ಥಾಪಕ ನಿರ್ದೇಶಕರು ತಪ್ಪಿತಸ್ಥರ ವಿರುದ್ಧ ಶಿಸ್ತು ಕ್ರಮ ಜರುಗಿಸಿ, ಸರ್ಕಾರಕ್ಕೆ ವರದಿ ನೀಡಿದ್ದಾರೆ ಎಂದು ತಿಳಿಸಿದರು.
ಡಿಸಿಸಿ ಬ್ಯಾಂಕಿನ ಪರಿವೀಕ್ಷಾಣಾ ವರದಿಯಲ್ಲಿ ಮೈಸೂರು ಜಿಲ್ಲಾ ಸಹಕಾರ ಸಂಘಗಳ ಉಪನಿಬಂಧಕ ಎಸ್.ಜಿ.ಮಂಜುನಾಥ್ ಸಿಂಗ್ ಅವರು ತಿಳಿಸಿರುವಂತೆ 2016-17ನೇ ಸಾಲಿನಿಂದ 2020-21ನೇ ಸಾಲಿನ ಅವಧಿಯಲ್ಲಿ ಸ್ವಸಹಾಯ ಸಂಘಗಳಿಗೆ ನೀಡಿರುವ ಸಾಲದ ಮೇಲೆ ಮಾಡಲಾದ ಬಡ್ಡಿ ಕ್ಲೈಂ ಬಿಲ್ಲುಗಳಲ್ಲಿ ಸರ್ಕಾರದಿಂದ ಹೆಚ್ಚಿನ ಮೊತ್ತ ಕ್ಲೈಂ ಮಾಡಿಲ್ಲ ಮತ್ತು ಬಿಡುಗಡೆಯಾದ ಮೊತ್ತ ಕಾಲಕಾಲಕ್ಕೆ ಆಯಾ ಗುಂಫುಗಳಿಗೆ ವರ್ಗಾವಣೆಯಾಗಿದೆ ಎಂದು ತಿಳಿಸಿರುವ ಅವರು,ಈ ಸಂಬಂಧ ಹಣ ದುರುಪಯೋಗ, ಅವ್ಯವಹಾರ ಕಂಡು ಬಂದಿಲ್ಲ ಎಂದು ವರದಿ ನೀಡಿದ್ದಾರೆ ಎಂದು ವರದಿ ಪ್ರತಿ ಪ್ರದರ್ಶಿಸಿದರು.
ಇಷ್ಟಾದರೂ ಬ್ಯಾಂಕಿನ ವಿರುದ್ದ ಅಪಪ್ರಚಾರ ನಡೆಸುತ್ತಿದ್ದು, ಇದು ಬ್ಯಾಂಕಿನ ಆರ್ಥಿಕ ಸ್ಥಿತಿಯ ಮೇಲೆ ದುಷ್ಪರಿಣಾಮ ಬೀರಲಿದೆ, ಬ್ಯಾಂಕ್ ಮತ್ತೆ 15 ವರ್ಷಗಳ ಹಿಂದಿನ ದುಸ್ಥಿತಿಗೆ ತಲುಪಲಿದೆ ಎಂಬ ಆತಂಕದಿಂದ ಹಾಗೂ ರೈತರು,ಮಹಿಳೆಯರಿಗೂ ಅನ್ಯಾಯವಾಗುವುದನ್ನು ತಪ್ಪಿಸಲು ಈ ಸುದ್ದಿಗೋಷ್ಟಿ ನಡೆಸಿ ಮಾಹಿತಿ ನೀಡುತ್ತಿರುವುದಾಗಿ ತಿಳಿಸಿದರು.
ಸಾಲ ಮನ್ನಾದ ಹಣ ದುರುಪಯೋಗದ ಕುರಿತ ಆರೋಪಗಳ ಕುರಿತು ಡಿಸಿಸಿ ಬ್ಯಾಂಕ್ ಮುಖ್ಯಕಾರ್ಯನಿರ್ವಹಣಾಧಿಕಾರಿಗಳ ಸಮಿತಿ ನಡೆಸಿದ ತನಿಖೆಯಲ್ಲೂ `ರಾಜ್ಯ ಸರ್ಕಾರ ರೈತರಿಗಾಗಿ ಜಾರಿಗೆ ತಂದಿದ್ದ ಸಾಲ ಮನ್ನಾ ಯೋಜನೆಯಡಿ ರೈತರ ಸಾಲ ಮನ್ನಾದ ಮೊತ್ತ ನೇರವಾಗಿ ಸರ್ಕಾರದಿಂದ ರೈತರ ಖಾತೆಗಳಿಗೆ ಜಮಾ ಆಗಿರುವುದು ಕಂಡು ಬಂದಿದೆ ಎಂದು ದೃಢೀಕರಿಸಿದ್ದಾರೆ ಎಂದರು.
ಅದೇ ರೀತಿ ಬ್ಯಾಂಕಿನ ಬಂಗಾರಪೇಟೆ ಶಾಖೆಯಿಂದ ಸವೆನ್ ಸ್ಟಾರ್ ಕನ್ಸೂಮರ್ ಕೋ.ಆಪರೇಟಿವ್ ಸೊಸೈಟಿಗೆ ಬ್ಯಾಂಕಿನ ಎಲ್ಲಾ ನಿಯಮಗಳನ್ನು ಪಾಲಿಸಿಯೇ ಸಾಲ ನೀಡಲಾಗಿದೆ.ಸಾಲ ನೀಡುವಾಗ ಅಗತ್ಯಕ್ಕಿಂತ ಹೆಚ್ಚಿನ ಸೆಕ್ಯೂರಿಟಿ ತೆಗೆದುಕೊಳ್ಳಲಾಗಿತ್ತು.ನೀಡಿರುವ ಸಾಲ ಮರುಪಾವತಿಯಲ್ಲಿ ಗೋಲ್ ಮಾಲ್ ಆಗಿದೆ ಎಂಬ ಆರೋಪದ ಕುರಿತು ಬ್ಯಾಂಕಿನ ಮ್ಯಾನೇಜರ್ ನೀಡಿರುವ ಮಾಹಿತಿಯ ಪ್ರತಿ ಪ್ರದರ್ಶಿಸಿದ ಅವರು, ಕಳೆದ 9-12-2021 ರಂದೇ ಸಾಲದ ಅಸಲು ಮತ್ತು ಬಡ್ಡಿ ಸಮೇತ ತೀರುವಳಿ ಮಾಡಿರುತ್ತಾರೆ ಎಂದು ತಿಳಿಸಿದರು.
ಕೋಲಾರ,ಚಿಕ್ಕಬಳ್ಳಾಪುರ ಡಿಸಿಸಿ ಬ್ಯಾಂಕಿನಲ್ಲಿ ಯಾವುದೇ ಅವ್ಯವಹಾರ ನಡೆದಿಲ್ಲ ಎಂದು ಇಷ್ಟೊಂದು ತನಿಖಾ ವರದಿಗಳು ತಿಳಿಸಿದ್ದರೂ ವಿನಾಕರಣ ಅಪಪ್ರಚಾರ ನಡೆಸುವ ಮೂಲಕ ಬ್ಯಾಂಕಿನ ಘನತೆಗೆ ಕುತ್ತು ತರುತ್ತಿದ್ದು, ಇದು ಮುಂದಿನ ದಿನಗಳಲ್ಲಿ ಬ್ಯಾಂಕ್ ಸೆಕ್ಷೆನ್ 11 ರಡಿ ಸಿಲುಕಿ ರೈತರು,ಮಹಿಳೆಯರು ಸಾಲ ಸೌಲಭ್ಯಗಳಿಂದ ವಂಚಿತರಾಗುವ ಆತಂಕವಿದೆ ಎಂದು ತಿಳಿಸಿ, ಇನ್ನಾದರೂ ಆರೋಪ ಮಾಡುವ ಮಹನೀಯರು ಸತ್ಯಾಂಶ ಅರಿತು ಮಾತನಾಡಲಿ ಎಂದು ತಾಕೀತು ಮಾಡಿದರು.
ಚಿತ್ರಶೀರ್ಷಿಕೆ:(ಫೋಟೊ-25ಕೋಲಾರ1):ಕೋಲಾರ,ಚಿಕ್ಕಬಳ್ಳಾಪುರ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡ ಕೋಲಾರ ನಗರದ ಪತ್ರಕರ್ತರ ಭವನದಲ್ಲಿ ಈ ಸಂಬಂಧ ಸುದ್ದಿಗೋಷ್ಟಿ ನಡೆಸಿ,ಬ್ಯಾಂಕಿನಲ್ಲಿ ಅವ್ಯವಹಾರಗಳ ಕುರಿತ ಆರೋಪಗಳನ್ನು ತಳ್ಳಿಹಾಕಿ ತನಿಖಾ ವರದಿಗಳ ದಾಖಲೆ ಪ್ರದರ್ಶಿಸಿದರು
