ಕೋಟೇಶ್ವರ – ಪ್ರಾಚೀನ ನಾಗಾಲಯದಲ್ಲಿ ನಾಗ ಪುನರ್ ಪ್ರತಿಷ್ಠೆ

ವರದಿ : ಕೆ.ಜಿ.ವೈದ್ಯ,ಕುಂದಾಪುರ

ಕುಂದಾಪುರ : ಕೋಟೇಶ್ವರ ರಥ ಬೀದಿಯಲ್ಲಿನ ಶತಮಾನಕ್ಕೂ ಪ್ರಾಚೀನ ನಾಗ ದೇವಸ್ಥಾನದಲ್ಲಿ  ಶ್ರೀ ನಾಗ ಬಿಂಬಗಳ ಪುನರ್ ಪ್ರತಿಷ್ಠಾಪನೆ ನೆರವೇರಿತು.
ನಾಗ ಗುಡಿಯನ್ನು ಜೀರ್ಣೋದ್ಧಾರಗೊಳಿಸುವ ಉದ್ದೇಶದಿಂದ, ಜುಲೈ 11 ರ ಭಾನುವಾರ, ತಂತ್ರಿ – ವೇದಮೂರ್ತಿ ಪ್ರಸನ್ನ ಕುಮಾರ ಐತಾಳರ ನಿರ್ದೇಶನದಲ್ಲಿ ನಾಗ ಕಲಾ ಸಂಕೋಚ ನಡೆಸಲಾಗಿತ್ತು.

ಜಲಾಧಿವಾಸಗೊಳಿಸಿದ್ದ 32 ನಾಗ ಶಿಲೆಗಳನ್ನು  ತಂತ್ರಿಯವರು ಪುನರ್ಪ್ರತಿಷ್ಠೆ  ಮಾಡಿದರು. ಪ್ರತಿಷ್ಠಾ ವಿಧಿಯಂಗವಾಗಿ ವೇದಮೂರ್ತಿ ಪರಮೇಶ್ವರ ಐತಾಳ, ವೇದಮೂರ್ತಿ ಡಾ. ರಾಮಕೃಷ್ಣ ಉಡುಪ,  ವೇದಮೂರ್ತಿ ಮಂಜುನಾಥ ಅಡಿಗ, ವೇದಮೂರ್ತಿ ವಿಶ್ವೇಶ್ವರ ಉಡುಪ, ವೇದಮೂರ್ತಿ ಈಶ ಭಟ್ ತಂಡದವರು ಕಲಶಾಧಿವಾಸ ಹೋಮ, ತತ್ವ ಹೋಮ ನಡೆಸಿ ನವಕ ಪ್ರಧಾನ ಕಲಶಾಭಿಷೇಕ ಮಾಡಿದರು.  ನೆರೆದ ಭಕ್ತಗಡಣದ ಸಮ್ಮುಖದಲ್ಲಿ ಪ್ರಸನ್ನ ಪೂಜೆ ನೆರವೇರಿಸಲಾಯಿತು.

ಗೋಪಾಲಕೃಷ್ಣ ಕ್ರಮಧಾರಿ, ಶ್ರೀಧರ ಉಡುಪ, ಗಣಪತಿ ವೈದ್ಯ ಮೊದಲಾದವರು ಸಹಕರಿಸಿದರು. ನವೀಕೃತ ಗುಡಿಯನ್ನು ಮೀರಾ ಶೇಟ್ ರವರು ಸೇವಾರ್ಥ ವೈವಿಧ್ಯಮಯ ಪುಷ್ಪ ಮಾಲೆಗಳಿಂದ ಸಿಂಗರಿಸಿದ್ದರು. ಸಂಜೆ ಮಹಿಳೆಯರಿಂದ ದೀಪಾರಾಧನೆ, ಭಜನೆ ನಡೆಯಿತು. ಮೀರಾ ಶೇಟ್, ಅರುಂಧತಿ ವೈದ್ಯ, ಶಾಂತಾ ಶೇಟ್,  ವಿದ್ಯಾ ಶೇಟ್, ಮನೋರಮಾ, ಕಮಲಾ ಇನ್ನಿತರರು ಭಾಗವಹಿಸಿದ್ದರು.