ಕೋಲಾರ:ಜಿಲ್ಲಾದ್ಯಂತ ಶಿಥಿಲಗೊಂಡಿರುವ ಸರ್ಕಾರಿ ಶಾಲೆಗಳನ್ನು ಅಭಿವೃದ್ಧಿಪಡಿಸಿ ಮಕ್ಕಳ ಭವಿಷ್ಯವನ್ನು ರೂಪಿಸಬೇಕು – ರೈತಸಂಘ

ವರದಿ: ಶಬ್ಬೀರ್ ಅಹ್ಮದ್, ಶ್ರೀನಿವಾಸಪುರ

ಕೋಲಾರ: ಜಿಲ್ಲಾದ್ಯಂತ ಶಿಥಿಲಗೊಂಡಿರುವ ಸರ್ಕಾರಿ ಶಾಲೆಗಳನ್ನು ಅಭಿವೃದ್ಧಿಪಡಿಸಿ ಸಕಾಲಕ್ಕೆ ಪಠ್ಯ ಪುಸ್ತಕ, ಸಮವಸ್ತ್ರ ಪೂರೈಕೆ ಮಾಡಿ ಖಾಲಿ ಇರುವ ಶಿಕ್ಷಕರ ನೇಮಕ ಮಾಡಿ ಮಕ್ಕಳ ಭವಿಷ್ಯವನ್ನು ರೂಪಿಸಬೇಕೆಂದು ರೈತಸಂಘದಿಂದ ಗುಡಿಸಲು ಸಮೇತ ಡಿಡಿಪಿಐ ಕಚೇರಿ ಆವರಣದಲ್ಲಿ ಪ್ರತಿಭಟನೆ ನಡೆಸಿ, ಡಿಡಿಪಿಐ ಕೃಷ್ಣಮೂರ್ತಿ ಅವರಿಗೆ ಮನವಿ ಸಲ್ಲಿಸಲಾಯಿತು.
ದೇಶದ ಭವಿಷ್ಯ ರೂಪಿಸುವ ಶಿಕ್ಷಣ ವ್ಯವಸ್ಥೆಯನ್ನು ಸರಿಪಡಿಸದೇ ಹೋದರೆ ಮುಂದಿನ ದಿನಗಳಲ್ಲಿ ಶಿಕ್ಷಣಕ್ಕಾಗಿ ಯುವಕರು ರಾಜಕಾರಣಿಗಳ ವಿರುದ್ಧ ಕಂಡಕಂಡಲ್ಲಿ ಕಲ್ಲಿನಿಂದ ಹೊಡೆಯುವ ಕಾಲ ದೂರವಿಲ್ಲ. ಇದನ್ನು ಸರ್ಕಾರ ಗಂಭೀರವಾಗಿ ಪರಿಗಣಿಸದೇ ಇದ್ದರೆ ದೇಶದಲ್ಲಿ ಅನಕ್ಷರಸ್ಥರ ಸಂಖ್ಯೆ ಹೆಚ್ಚಾಗಿ ಜವಾನನಿಂದ ದಿವಾನನವರೆಗೂ ಭ್ರಷ್ಟಾಚಾರ ಹೆಚ್ಚಾಗುತ್ತದೆ ಎಂದು ರೈತಸಂಘದ ಜಿಲ್ಲಾ ಮಹಿಳಾದ್ಯಕ್ಷೆ ಎ.ನಳಿನಿಗೌಡ ಸರ್ಕಾರಗಳಿಗೆ ಎಚ್ಚರಿಕೆ ನೀಡಿದರು.
ಸಾವಿರಾರು ಬಡ ರೈತ ಕೂಲಿ ಕಾರ್ಮಿಕರ ಮಕ್ಕಳು ತಮ್ಮ ಭವಿಷ್ಯ ರೂಪಿಸಿಕೊಳ್ಳಲು ಸರ್ಕಾರಿ ಶಾಲೆಗಳನ್ನೇ ಅವಲಂಭಿಸಿದ್ದಾರೆ. ನಮ್ಮನ್ನಾಳುವ ಸರ್ಕಾರಗಳು ದೇಶದ ಭವಿಷ್ಯ ರೂಪಿಸುವ ಮಕ್ಕಳಿಗೆ ಗುಣಮಟ್ಟದ ವಿದ್ಯಾಭ್ಯಾಸ ಕೊಡುವ ಬದಲು ತಮ್ಮ ವೇತನವನ್ನು ಹೆಚ್ಚಿಸಿಕೊಂಡು ಜ್ವಲಂತ ಸಮಸ್ಯೆಗಳ ಬಗ್ಗೆ ಚರ್ಚೆ ಮಾಡಬೇಕಾದ ವಿಧಾನಸೌಧ ಇಂದು ಬೀದಿ ನಾಯಿಗಳು ಜಗಳವಾಡುವ ಸೌಧವಾಗಿ ಮಾರ್ಪಟ್ಟಿದೆ ಎಂದು ಅಸಮಧಾನ ವ್ಯಕ್ತಪಡಿಸಿದರು.
ಪ್ರತಿ ಬಾರಿಯೂ ಶೈಕ್ಷಣಿಕ ವರ್ಷ ಪ್ರಾರಂಭವಾದಾಗ ಸರ್ಕಾರಿ ಶಾಲೆಗಳಿಗೆ ಮೂಲಭೂತ ಸೌಕರ್ಯಗಳನ್ನು ನೀಡುವ ಜೊತೆಗೆ ಹಾಳು ಬಿದ್ದಿರುವ ಸರ್ಕಾರಿ ಶಾಲೆಗಳನ್ನು ಅಭಿವೃದ್ಧಿಪಡಿಸಿ ಗುಣಮಟ್ಟದ ಶಿಕ್ಷಣ ಕೊಡಬೇಕಾದ ಸರ್ಕಾರ ಅನುದಾನದ ಕೊರತೆ ನೆಪದಲ್ಲಿ ಖಾಸಗಿ ಶಾಲೆಗಳಿಗೆ ಹಿಂಬಾಗಿಲಿನಿಂದ ಕುಮ್ಮಕ್ಕು ನೀಡುವ ಮುಖಾಂತರ ಬಡವರ ಶಿಕ್ಷಣವನ್ನು ಕಸಿದುಕೊಳ್ಳುತ್ತಿದೆ ಎಂದು ಆರೋಪಿಸಿದರು.
ರೈತ ಸಂಘದ ಜಿಲ್ಲಾದ್ಯಕ್ಷ ಐತಾಂಡಹಳ್ಳಿ ಮಂಜುನಾಥ್ ಮಾತನಾಡಿ, ಅನವಶ್ಯಕವಾಗಿ ಕೆಲಸಕ್ಕೆ ಬಾರದ ಕಾಮಗಾರಿಗಳಿಗೆ ಸಾವಿರಾರು ಕೋಟಿ ಬಿಡುಗಡೆ ಮಾಡುವ ಸರ್ಕಾರ ಶಿಥಿಲಗೊಂಡಿರುವ ಸರ್ಕಾರಿ ಶಾಲೆಗಳನ್ನು ಹಿಂದೇಟು ಹಾಕುತ್ತಿರುವುದು ಏಕೆ ? ಭೀಕರವಾದ ಮಳೆ ಸುರಿಯುವಾಗ ಸರ್ಕಾರಿ ಶಾಲೆಗಳು ಒಂದಲ್ಲಾ ಒಂದು ಸಮಸ್ಯೆ ಎದುರಿಸುತ್ತಿದೆ.

     ಒಂದು ದಿನ ಗೋಡೆ ಬಿದ್ದರೆ ಮತ್ತೊಂದು ದಿನ ಕಾಂಪೌಂಡ್ ಆನಂತರ ಛಾವಣಿ ಕುಸಿಯುತ್ತಿರುವುದರಿಂದ ಮಕ್ಕಳನ್ನು ಸರ್ಕಾರಿ ಶಾಲೆಗಳಿಗೆ ಕಳುಹಿಸಲು ಪೋಷಕರು ಹಿಂದೇಟು ಹಾಕಿ ಸಾಲ ಮಾಡಿಯಾದರೂ ಖಾಸಗಿ ಶಾಲೆಗಳತ್ತ ಮುಖ ಮಾಡುತ್ತಿದ್ದಾರೆ ಎಂದು ಹೇಳಿದರು. 
 ಸಕಾಲಕ್ಕೆ ಪೂರೈಕೆಯಾಗದ ಸಮವಸ್ತ್ರ, ಪಠ್ಯ ಪುಸ್ತಕ ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಸರ್ಕಾರ ನೂರೊಂದು ಭಾಗ್ಯಗಳನ್ನು ನೀಡುವ ಮುಖಾಂತರ ಬಡವರ ಹೆಸರಿನಲ್ಲಿ ಕೋಟಿ ಕೋಟಿ ಹಣ ಲೂಟಿಯಾಗುತ್ತಿದೆ. ಪ್ರತಿವರ್ಷ ಶಾಲೆ ಆರಂಭಕ್ಕೆ ಮುನ್ನ ಮಕ್ಕಳಿಗೆ ಬೇಕಾಗುವ ಸಮವಸ್ತ್ರ, ಪಠ್ಯ ಪುಸ್ತಕ ವಿತರಣೆ ಮಾಡಬೇಕಾದ ಸರ್ಕಾರ ಜಾಣ ನಿದ್ರೆಯಲ್ಲಿದ್ದು, ಶಾಲೆ ಪ್ರಾರಂಭವಾದ ನಂತರ ಸರ್ಕಾರದಿಂದ ಅನುಮತಿಯಿಲ್ಲ. ಟೆಂಡರ್ ಕರೆದಿಲ್ಲ ಎಂದು ಬೇಜವಾಬ್ದಾರಿಯಿಂದ ಬಡ ಮಕ್ಕಳ ವಿದ್ಯಾಭ್ಯಾಸಕ್ಕೆ ತೊಂದರೆಯಾಗುತ್ತಿದೆ ಎಂದು ಆರೋಪಿಸಿದರು. 
ನೂರಾರು ಶಾಲೆಗಳು ಮಕ್ಕಳ ಹಾಜರಾತಿ ಇಲ್ಲದೆ ಮುಚ್ಚಿದ್ದರೂ ಅಲ್ಲಿನ ಶಿಕ್ಷಕರು ಹೆಚ್ಚಿನ ಹಾಜರಾತಿ ಇರುವ ಶಾಲೆಗಳಿಗೆ ನಿಯೋಜನೆ ಮಾಡುವಲ್ಲಿ ಶಿಕ್ಷಣ ಇಲಾಖೆ ವಿಫಲವಾಗಿದೆ. ಇನ್ನು ಖಾಲಿ ಇರುವ ಶಿಕ್ಷಕರು ನಿಯೋಜನೆಗೊಂಡಿರುವ ಶಾಲೆಗಳಿಗೆ ಹೋಗದೆ ರಾಜಕೀಯ ಒತ್ತಡ ತಂದು ಬಡ್ಡಿ, ರಿಯಲ್ ಎಸ್ಟೇಟ್, ರಾಜಕೀಯದಲ್ಲಿ ತೊಡಗಿಕೊಳ್ಳುವ ಮುಖಾಂತರ ಗುರುಕುಲಕ್ಕೆ ಅಪಮಾನ ಮಾಡುತ್ತಿದ್ದಾರೆ.

ಅಲ್ಲದೆ ಲಕ್ಷ ಲಕ್ಷ ಸಂಬಳ ಪಡೆದು ಶಾಲೆಗೆ ಹೋಗದೆ ನೂರೊಂದು ನೆಪ ಹೇಳುತ್ತಿರುವ ಶಿಕ್ಷಕರು ಶಾಲೆಗಳಿಗೆ ತೆರಳಲು ಹಿಂದೇಟು ಹಾಕುತ್ತಿದ್ದು, ಕಡ್ಡಾಯವಾಗಿ ಬಯೋಮೆಟ್ರಿಕ್ ಅಳವಡಿಸುವ ಮೂಲಕ ಶಿಕ್ಷಕರ ಅವ್ಯವಹಾರಗಳಿಗೆ ಕಡಿವಾಣ ಹಾಕಬೇಕು ಎಂದು ಆಗ್ರಹಿಸಿದರು.
ಮನವಿ ಸ್ವೀಕರಿಸಿ ಮಾತನಾಡಿದ ಡಿಡಿಪಿಐ ಕೃಷ್ಣಮೂರ್ತಿ, ಸರ್ಕಾರಿ ಶಾಲೆಗಳ ಅವ್ಯವಸ್ಥೆ ಹಾಗೂ ಪಠ್ಯ ಪುಸ್ತಕ, ಸಮವಸ್ತ್ರದ ಬಗ್ಗೆ ಶಿಕ್ಷಣ ಸಚಿವರಿಗೆ ಪತ್ರ ಬರೆದು ಸಮಸ್ಯೆ ಬಗೆಹರಿಸುವ ಭರವಸೆ ನೀಡಿದರು.
ಹೋರಾಟದಲ್ಲಿ ರೈತಸಂಘದ ರಾಜ್ಯ ಉಪಾಧ್ಯಕ್ಷ ಕೆ.ನಾರಾಯಣಗೌಡ ರಾಜ್ಯ ಸಂಚಾಲಕ ಬಂಗವಾದಿ ನಾಗರಾಜಗೌಡ, ತಾಲೂಕು ಅಧ್ಯಕ್ಷ ಈಕಂಬಳ್ಳಿ ಮಂಜುನಾಥ್, ಮಂಗಸಂದ್ರ ತಿಮ್ಮಣ್ಣ, ಕುವ್ವಣ್ಣ, ವೆಂಕಟೇಶಪ್ಪ, ಗೋವಿಂದಪ್ಪ, ಮಾಲೂರು ತಾಲೂಕು ಅಧ್ಯಕ್ಷ ಯಲ್ಲಣ್ಣ, ಹರೀಶ್, ಮರಗಲ್ ಮುನಿಯಪ್ಪ, ತೆರ್ನಹಳ್ಳಿ ಆಂಜಿನಪ್ಪ, ಯಲುವಳ್ಳಿ ಪ್ರಭಾಕರ್, ಫಾರೂಖ್ ಪಾಷ, ವಿಜಯ್ ಪಾಲ್, ಮುದುವಾಡಿ ಚಂದ್ರಪ್ಪ, ರಾಮಸಾಗರ ವೇಣು, ಸಂದೀಪ್‍ರೆಡ್ಡಿ, ಸಂದೀಪ್‍ಗೌಡ, ವಿಶ್ವ, ಮುಂತಾದವರಿದ್ದರು.