ಕೆ. ಶಾರದಾ ಭಟ್‍ರಿಗೆ ಕೋ.ಮ.ಕಾರಂತ ಪ್ರಶಸ್ತಿ ಪ್ರದಾನ : ಸಮರ್ಥರು ಗೌರವಕ್ಕೆ ಪಾತ್ರರಾದರೆ ಸಂತೋಷ

JANANUDI.COM NETWORK

ಕುಂದಾಪುರ, ಜ. ಸರಕಾರ, ಖಾಸಗಿ ಸಂಸ್ಥೆಗಳು ನೀಡುವ ಪ್ರಶಸ್ತಿ ಪಡೆಯಲು ನಡೆಯುವ ಹೋರಾಟಗಳನ್ನು ನಾವು ಗಮನಿಸುತ್ತಿದ್ದೇವೆ . ಇಂತಹ ಕಾಲದಲ್ಲಿ ಸಮರ್ಥರು ಗೌರವಕ್ಕೆ ಪಾತ್ರರಾದರೆ ಸಂತೋಷವಾಗುತ್ತದೆ. ಕುಂದಪ್ರಭ ಸಂಸ್ಥೆ ಕೋ.ಮ.ಕಾರಂತ ಪ್ರಶಸ್ತಿ ಸಮರ್ಥರಿಗೆ ನೀಡುತ್ತಾ ಬಂದು ಪ್ರಶಸ್ತಿಯ ಗೌರವ ಹೆಚ್ಚಿಸಿದೆ. ಮಾಧ್ಯಮದ ಮಂದಿ ಸುದ್ಧಿ ಜಾಹಿರಾತು ಸಂಗ್ರಹದೊಂದಿಗೆ ನಿಜವಾಗಿ ಸಾಧನೆ ಮಾಡಿದವರನ್ನು ಬೆಳಕಿಗೆ ತರಬೇಕು, ಪ್ರೋತ್ಸಾಹಿಸಬೇಕು. ಗುಣಮಟ್ಟ ಇದ್ದಲ್ಲಿ ಗೌರವ ಇರುತ್ತದೆ. ನಮ್ಮ ಕ್ಯಾಂಪ್ಕೊ ಸಹ, ವಿಸ್ತರಣೆಯೊಂದಿಗೆ ಗುಣಮಟ್ಟ ಉಳಿಸಿಕೊಳ್ಳುವಲ್ಲಿ ಜಾಗೃತಿ ವಹಿಸುತ್ತದೆ. ಕುಂದಾಪುರ ಪರಿಸರದಲ್ಲಿಯೂ ಇನ್ನೊಂದು ಕೇಂದ್ರ ಸ್ಥಾಪನೆಗೆ ಚಿಂತಿಸಲಾಗಿದೆಎಂದು ಕ್ಯಾಂಪ್ಕೊ ಅಧ್ಯಕ್ಷ ಕಿಶೋರ್ ಕುಮಾರ್ ಕೊಡ್ಗಿ ಹೇಳಿದ್ದಾರೆ
ಕುಂದಾಪುರದ ಸರಕಾರಿ ಪ.ಪೂ.ಕಾಲೇಜಿನ ರೋಟರಿ ಲಕ್ಷ್ಮೀ ನರಸಿಂಹ ಕಲಾಮಂದಿರದಲ್ಲಿ ನಡೆದ ಸಮಾರಂಭದಲ್ಲಿ ಪ್ರತಿಭಾವಂತ ಹಿರಿಯ ಲೇಖಕಿ ಕೆ. ಶಾರದಾ ಭಟ್ ಅವರಿಗೆ ಕೋ.ಮ.ಕಾರಂತ ಪ್ರಶಸ್ತಿ ಆದಿತ್ಯವಾರ ಪ್ರದಾನ ಮಾಡಲಾಯಿತು.
ಕ್ಯಾಂಪ್ಕೋ ಅಧ್ಯಕ್ಷ ಕಿಶೋರ್ ಕುಮಾರ್ ಕೊಡ್ಗಿ ಸಮಾರಂಭ ಉದ್ಘಾಟಿಸಿ ಅಧ್ಯಕ್ಷತೆ ವಹಿಸಿದ್ದರು.
ಕುಂದಾಪುರ ತಾಲ್ಲೂಕು ಆರೋಗ್ಯಾಧಿಕಾರಿ ಡಾ. ನಾಗಭೂಷಣ ಉಡುಪ, ಡಾ. ಎನ್.ಆರ್.ಆಚಾರ್ಯ ಸ್ಮಾರಕ ಆಸ್ಪತ್ರೆ ಕೋಟೇಶ್ವರದ ಡಾ.ಎನ್. ಭಾಸ್ಕರ್ ಆಚಾರ್ಯ, ಕಥೆಗಾರ, ವಿಮರ್ಶಕ ಬೆಳಗೋಡು ರಮೇಶ್ ಭಟ್ ಪ್ರಧಾನ ಅತಿಥಿಗಳಾಗಿ ಭಾಗವಹಿಸಿದ್ದರು.
ಪ್ರಶಸ್ತಿ ಸ್ವೀಕರಿಸಿದ ಕೆ. ಶಾರದಾ ಭಟ್ ಮಾತನಾಡಿ “ನಾನು ಯಾವ ಸಾಧನೆಯನ್ನು ಪ್ರಶಸ್ತಿ ನಿರೀಕ್ಷಿಸಿ ಮಾಡಿಲ್ಲ. ನನ್ನ ತಿಳುವಳಿಕೆಯ , ಅನುಭವ ಆಧಾರದ ಮೇಲೆ ಬರೆಯುತ್ತಿದ್ದೆ. ಸಂಘಟನಾ ಕಾರ್ಯಗಳಲ್ಲೂ ತೊಡಗಿಸಿಕೊಳ್ಳುತ್ತಿದ್ದೆ. ನನ್ನ ಬರಹಗಳನ್ನು ಮೆಚ್ಚಿದ ಓದುಗರು, ಪ್ರಕಟಿಸಿದ ಪ್ರಕಾಶಕರು, ಪ್ರೇರಣೆ ನೀಡಿದ ಮಾಧ್ಯಮಗಳಿಗೆ ಅಭಾರಿಯಾಗಿದ್ದೇನೆ. ಪ್ರಶಸ್ತಿಗಳು ಜಾತಿ, ಧರ್ಮ, ಪ್ರಭಾವಗಳ ಆಧಾರದಲ್ಲಿ ಆಯ್ಕೆಯಾಗಬಾರದು. ನನಗೆ ಈ ಅನುಭವ ಆಗಿದೆ. ನನಗೆ ಶಿಫಾರಸು ಆದ ಪ್ರಶಸ್ತಿ ಎರಡು ದಿನಗಳ ನಂತರ ಮಾಧ್ಯಮಗಳಲ್ಲಿ ಪ್ರಕಟವಾದಾಗ ಬೇರೆಯವರಿಗೆ ಘೋಷಿಸಲ್ಪಟ್ಟಿತ್ತು. ಇದಕ್ಕೆ ಕಾರಣ ತಿಳಿದು ನನಗೆ ಬೇಸರವಾಯಿತು. ಕೋ.ಮ.ಕಾರಂತ ಪ್ರಶಸ್ತಿ ಸ್ವೀಕರಿಸಲು ನನಗೆ ಸಂತೋಷವಾಗಲು ಕಾರಣ, ನನಗೆ ಸಂಘಟಕರ ಎರಡು ದಶಕಗಳ ನಿಸ್ವಾರ್ಥ ನಿರ್ವಹಣೆ ಪರಿಚಯವಿರುವುದರಿಂದ. ಕುಂದಪ್ರಭ ಬಳಗ ಇನ್ನಷ್ಟು ಸತ್ಕಾರ್ಯ ಮಾಡುವಲ್ಲಿ ಯಶಸ್ವಿಯಾಗಲಿ ಎಂದು ಹಾರೈಸುತ್ತೇನೆ” ಎಂದರು.
ಕುಂದಾಪುರ ಕಡಲ ತೀರ, ನದಿ ತೀರಗಳಲ್ಲಿರುವ ತ್ಯಾಜ್ಯಗಳನ್ನು ಪ್ರತಿವಾರ ಸ್ವಚ್ಚಗೊಳಿಸುವ “ಕ್ಲೀನ್ ಕುಂದಾಪುರ ಪ್ರಾಜೆಕ್ಟ್‍ನ” ಸ್ವಯಂ ಸೇವಕರನ್ನು ಗೌರವಿಸಿ ಅಭಿನಂದನಾ ಪತ್ರ ನೀಡಲಾಯಿತು.
ಕೋವಿಡ್ 19 ಲಾಕ್‍ಡೌನ್ ಸಂದರ್ಭದಲ್ಲಿ ಸಾರ್ವಜನಿಕರಿಗೆ ವಲಸೆ ಕಾರ್ಮಿಕರಿಗೆ, ಬಡಕುಟುಂಬಗಳಿಗೆ ನೆರವಾದ ಸಂಸ್ಥೆಗಳನ್ನು ಅಭಿನಂದಿಸಲಾಯಿತು.

ಗಿಳಿಯಾರು ಕುಶಲ ಹೆಗ್ಡೆ ಮೆಮೋರಿಯಲ್ ಚಾರಿಟೇಬಲ್ ಟ್ರಸ್ಟ್‍ನ ಪರವಾಗಿ ಸ್ನೇಹಾ ರೈ ಅಭಿನಂದನಾ ಪತ್ರ ಸ್ವೀಕರಿಸಿದರು. ಟ್ರಸ್ಟಿಗಳಾದ ಜಿ. ಸಂತೋಷ ಕುಮಾರ್ ಶೆಟ್ಟಿ ಕೆ. ನಾರಾಯಣ, ಕೆ.ಕೆ.ರಾಮನ್ ಉಪಸ್ಥಿತರಿದ್ದರು. ಜನರಿಗಾಗಿ ಆಹಾರ ಧಾನ್ಯ, ಆರೋಗ್ಯ ಇಲಾಖೆಗೆ ವಾಹನ ಸೌಲಭ್ಯ ಗಿಳಿಯಾರು ಕುಶಲ ಹೆಗ್ಡೆ ಟ್ರಸ್ಟ್ ನೀಡಿದೆ.
ಆದರ್ಶ ಆಸ್ಪತ್ರೆಯನ್ನು ಕೊರೊನಾ ಸೋಂಕಿತರ ಚಿಕಿತ್ಸೆಗಾಗಿ ಆರೋಗ್ಯ ಇಲಾಖೆಗೆ ಬಿಟ್ಟುಕೊಟ್ಟ ಡಾ. ಆದರ್ಶ ಹೆಬ್ಬಾರ್ ಅವರನ್ನು ಗೌರವಿಸಲಾಯಿತು.
ಕುಂದಾಪುರ ಸರಕಾರಿ ಆಸ್ಪತ್ರೆ ಕೋವಿಡ್ ವಿಭಾಗಕ್ಕೆ ಅಗತ್ಯ ಉಪಕರಣ ಒದಗಿಸಿದ ಕಿಶೋರ್ ಕುಮಾರ್ ಕೊಡ್ಗಿಯವರನ್ನು ಅಭಿನಂದಿಸಲಾಯಿತು.
ಲಾಕ್‍ಡೌನ್ ಸಂದರ್ಭದಲ್ಲಿ ಅಸಹಾಯಕರಿಗೆ, ಸರಕಾರಿ ಆಸ್ಪತ್ರೆ ರೋಗಿಗಳ ಸಂಬಂಧಿಕರಿಗೆ , ಸಿಬ್ಬಂದಿಗಳಿಗೆ ಕಾರ್ಮಿಕರಿಗೆ ಊಟದ ವ್ಯವಸ್ಥೆಯನ್ನು 45 ದಿನಗಳ ಕಾಲ ನಿರ್ವಹಿಸಿದ ಜೆಸಿಐ ಕುಂದಾಪುರ ಸಿಟಿಯ ಸ್ಥಾಪಕ ಅಧ್ಯಕ್ಷ ಹುಸೈನ್ ಹೈಕಾಡಿ ಅಭಿನಂದನಾ ಪತ್ರ ಸ್ವೀಕರಿಸಿದರು.
ತಾಲ್ಲೂಕಿನಾದ್ಯಂತ ಹಲವು ಗ್ರಾಮಗಳಲ್ಲಿ ಆಹಾರ ಧಾನ್ಯದ ಕಿಟ್ ಹಾಗೂ ಇತರ ಸೌಲಭ್ಯ ಒದಗಿಸಿದ ರೆಡ್‍ಕ್ರಾಸ್ ಸೊಸೈಟಿ ಸದಸ್ಯರನ್ನು ಅಭಿನಂದಿಸಲಾಯಿತು. ಅಧ್ಯಕ್ಷ ಜಯಕರ ಶೆಟ್ಟಿ ಪುರಸ್ಕಾರ ಪತ್ರ ಸ್ವೀಕರಿಸಿದರು.

ಪ್ರದಾನ ಅತಿಥಿ ಕೆ. ಭಾಸ್ಕರ ಆಚಾರ್ಯ ಮಾತನಾಡಿ, ಬರಹ ಹಾಗೂ ಸಂಘಟನೆ, ಚಿಂತನೆ ಮೂಲಕ ತನ್ನದೇ ಆದ ರೀತಿಯಲ್ಲಿ ಸಾಹಿತ್ಯ ಸೇವೆ , ಸಮಾಜ ಸೇವೆ ಮಾಡುತ್ತಿರುವ ಕೆ. ಶಾರದಾ ಭಟ್ ಅವರಿಗೆ ಕೋ.ಮ.ಕಾರಂತ ಪ್ರಶಸ್ತಿ ನೀಡಿರುವುದು ಶ್ಲಾಘನೀಯ” ಕಾರ್ಯ ಎಂದರು.
ಬೆಳಗೋಡು ರಮೇಶ್ ಭಟ್ ಮಾತನಾಡಿ ” ಕೆ. ಶಾರದಾ ಭಟ್ ಅವರ ಸಾಧನೆ ಗುರುತಿಸುವಲ್ಲಿ ಸಮಾಜದ ಕೆಲವರು ಕೆಲವು ಗಣ್ಯ ಸಂಸ್ಥೆಗಳೂ ಎಡವಿರುವಾಗ ಕುಂದಪ್ರಭ ಸಂಸ್ಥೆ ಅವರನ್ನು ಗೌರವಿಸಿ ಉತ್ತಮ ಕಾರ್ಯ ಮಾಡಿದೆ. ಶಾರದಾ ಭಟ್ ಅವರು ಪದರುಗಳು ಕೃತಿಗೆ ಬರಬೇಕಾದ ಪ್ರಶಸ್ತಿಯನ್ನು ಸ್ತ್ರೀವಾದಿ ಲೇಖಕಿಯೊಬ್ಬರು ಜಾತಿ ರಾಜಕಾರಣ ಮುಂದಿಟ್ಟು ತಪ್ಪಿಸಿ ಅನ್ಯಾಯ ಮಾಡಿರುವುದನ್ನು ನಾನು ಮರೆಯಲಾರೆ. ಶಾರದಾ ಭಟ್ ಕೃತಿಗಳನ್ನು ಸರಿಯಾಗಿ ಅಧ್ಯಯನ ಮಾಡದೇ ಕೆಲವರು ಕಡೆಗಣಿಸಿದರೆ, ಲಾಬಿ ಕೇಳಿ ಪ್ರಶಸ್ತಿ ಪಡೆಯುವ ಜಾಯಮಾನದವರಲ್ಲದ ಶಾರದಾ ಭಟ್ ಲಾಬಿ ಮಾಡುವ ಪ್ರಯತ್ನಕ್ಕೆ ಹೋಗದೇ ಅವರಿಗೆ ಸಿಗಬೇಕಾದ ಗೌರವದಿಂದ ವಂಚಿತರಾದರು. ಕೋ.ಮ.ಕಾರಂತ ಹೆಸರಲ್ಲಿ ಅವರಿಗೆ ಸಕಾಲದಲ್ಲಿ ಪ್ರಶಸ್ತಿ ನೀಡಿರುವುದು ಅಭಿನಂದನೀಯ ಎಂದರು.
ಹೆಬ್ರಿ ತಾಲ್ಲೂಕು ಸಾಹಿತ್ಯ ಸಮ್ಮೇಳನದ ಅಧ್ಯಕ್ಷೆ ಸಂಧ್ಯಾ ಶೆಣೈಯವರನ್ನು ಅಭಿನಂದಿಸಲಾಯಿತು. ಕುಂದಪ್ರಭದ ಸಂಚಾಲಕ ಯು.ಎಸ್.ಶೆಣೈ ಸ್ವಾಗತಿಸಿದರು.

ಕೋ. ಶಿವಾನಂದ ಕಾರಂತ, ಶ್ರೀಮತಿ ಕುಸುಮಾ ಕಾರಂತ ಅತಿಥಿಗಳನ್ನು ಗೌರವಿಸಿದರು. ವಿಶ್ವನಾಥ ಕರಬ ಅಭಿನಂದನಾ ಪತ್ರ ವಾಚಿಸಿದರು.
ಕೆ.ಕೆ.ರಾಮನ್ , ಎಚ್.ಸೋಮಶೇಖರ ಶೆಟ್ಟಿ, ಸುರೇಶ ಕೋಟೇಕಾರ್ ಅತಿಥಿಗಳನ್ನು ಪರಿಚಯಿಸಿದರು.
ಡಿ.ಕೆ.ಪ್ರಭಾಕರ “ಪುರಸ್ಕಾರ” ಪಡೆದವರ ಸಾಧನೆಯ ವಿವರ ನೀಡಿದರು.
ಯು. ದೀಪಿಕಾ ಶ್ಯಾನುಭಾಗ್ , ಯು. ಸಂಗೀತಾ ಶೆಣೈ, ಶ್ರೀಮತಿ ಗಾಯತ್ರಿ ಕಾರಂತ ಅತಿಥಿಗಳಿಗೆ ಸ್ಮರಣಿಕೆ ನೀಡಿದರು.
ತೆಂಕನಿಡಿಯೂರು ಸರಕಾರಿ ಪ.ಪೂ.ಕಾಲೇಜಿನ ಪ್ರಾಂಶುಪಾಲ ವಿಶ್ವನಾಥ ಕರಬ ಕಾರ್ಯಕ್ರಮ ನಿರೂಪಿಸಿದರು. ಲೇಖಕ ಪಿ.ಜಯವಂತ ಪೈ ವಂದಿಸಿದರು.