

ಶ್ರೀನಿವಾಸಪುರ: ತಾಲ್ಲೂಕಿನ ಮಾಸ್ತೇನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ತೆರ್ನಹಳ್ಳಿ ಕ್ಷೇತ್ರದಿಂದ ಒಂದು ಸದಸ್ಯ ಸ್ಥಾನಕ್ಕೆ ಈಚೆಗೆ ನಡೆದ ಉಪ ಚುನಾವಣೆಯಲ್ಲಿ ಜೆಡಿಎಸ್ ಬೆಂಬಲಿತ ಅಭ್ಯರ್ಥಿ ಟಿ.ವಿ.ಮಂಜುನಾಥ್ ಆಯ್ಕೆಯಾಗಿದ್ದಾರೆ.
ಪಟ್ಟಣದ ತಾಲ್ಲೂಕು ಕಚೇರಿ ಸಭಾಂಗಣದಲ್ಲಿ ಬುಧವಾರ ಮತ ಎಣಿಕೆ ನಡೆಯಿತು. ಟಿ.ವಿ.ಮಂಜುನಾಥ್ 562 ಮತ ಪಡೆದು ವಿಜೇತರಾಗಿದ್ದಾರೆ. ಅವರ ಪ್ರತಿಸ್ಪರ್ಧಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ರಾಧಾಕೃಷ್ಣ 319 ಮತ ಪಡೆದುಕೊಂಡಿದ್ದಾರೆ.
ಮತ ಎಣಿಕೆ ಮುಗಿದ ಮೇಲೆ ತಹಶೀಲ್ದಾರ್ ಶಿರಿನ್ ತಾಜ್ ವಿಜೇತ ಅಭ್ಯರ್ಥಿ ಟಿ.ವಿ.ಮಂಜುನಾಥ್ ಅವರಿಗೆ ಪ್ರಮಾಣ ಪತ್ರ ನೀಡಿದರು. ನಾರಾಯಣಸ್ವಾಮಿ ಚುನಾವಣಾಧಿಕಾರಿಯಾಗಿ ಕಾರ್ಯನಿರ್ವಹಿಸಿದರು.
ವಿಜಯೋತ್ಸವ: ಮತ ಎಣಿಕೆ ಬಳಿಕ ವಿಜೇತ ಅಭ್ಯರ್ಥಿ ಟಿ.ವಿ.ಮಂಜುನಾಥ್ ಬೆಂಬಲಿಗರು ಹಾಗೂ ಜೆಡಿಎಸ್ ಕಾರ್ಯಕರ್ತರು ವಿಜಯೋತ್ಸವ ಆಚರಿಸಿ, ಸಿಹಿ ಹಂಚಿದರು.