ಕೋಟೇಶ್ವರ ; ರಾಜ್ಯ ಮಟ್ಟದ ಕುಣಿತ ಭಜನಾ ಸ್ಪರ್ಧೆ ಉದ್ಘಾಟನೆ

ಕುಂದಾಪುರ : ಧರ್ಮ ನಮ್ಮ ದೇಶದ ಕೇಂದ್ರ ಬಿಂದು. ದೇವರು ಧರ್ಮದ ಕೇಂದ್ರ ಬಿಂದು. ದೇವರು ಸಾಕ್ಷಾತ್ ಬಂದು ನಡೆದಾಡಿದ, ನಮ್ಮನ್ನು ತಿದ್ದಿ ತೀಡಿದ ವಿಶ್ವದ ಏಕೈಕ ದೇಶ ಭಾರತ. ಇತರೆಡೆ ದೇವದೂತರು ಎಂದು ಕರೆಸಿಕೊಳ್ಳುವವರಿದ್ದರು ಅಷ್ಟೇ. ರಾಮ, ಕೃಷ್ಣರೆಲ್ಲಾ ಇಲ್ಲಿ ದೇವರಾಗಿಯೇ ಹುಟ್ಟಿದ್ದಲ್ಲ. ದುಷ್ಟರ ನಾಶ, ಶಿಷ್ಟರ ರಕ್ಷಣೆ, ನಿಸ್ವಾರ್ಥ ಬದುಕಿನಿಂದಾಗಿ ಅವರು ದೈವತ್ವಕ್ಕೇರಿದರು. ಹಾಗೆ ಯಾರು ಬೇಕಾದರೂ ಒಳ್ಳೆಯ ನಡೆಗಳಿಂದ ದೇವರಾಗಬಹುದು. ಆದರೆ ಇಂದು ಜನರನ್ನು ದೈವ ಚಿಂತನೆಗಳಿಂದ ವಿಮುಖಗೊಳಿಸುವ ಯತ್ನಗಳೇ ಎಲ್ಲೆಡೆ ವ್ಯವಸ್ಥಿತವಾಗಿ ನಡೆಯುತ್ತಿವೆ. ಭಜನೆ, ನಾಮ ಸಂಕೀರ್ತನೆಗಳಿಂದ ನಮ್ಮ ಮನಸ್ಸಿನ ದೃಢತೆ, ಏಕಾಗ್ರತೆ ಸಾಧಿಸಬಹುದು. ಇತ್ತೀಚೆಗೆ ಭಜನೆಯ ಸಂಸ್ಕೃತಿ ಎಲ್ಲೆಡೆ ಮತ್ತೆ ಬೆಳೆಯುತ್ತಿರುವುದು ಸಮಾಧಾನಕರ. ಭಜನೆ ಎಂದೂ ಸಂಸಾರಗಳನ್ನು ವಿಭಜನೆ ಮಾಡುವುದಿಲ್ಲ ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ದಕ್ಷಿಣ ಮಧ್ಯ ಕ್ಷೇತ್ರೀಯ ಕಾರ್ಯಕಾರಿಣಿ ಸದಸ್ಯ ಡಾ. ಕಲ್ಲಡ್ಕ ಪ್ರಭಾಕರ ಭಟ್ ಹೇಳಿದರು.
ಕೋಟೇಶ್ವರದ ಶ್ರೀ ರಾಮ ಕೋಟೀಶ್ವರ ಕಲಾ ಸಂಘದ ಆಶ್ರಯದಲ್ಲಿ ಮಹಾ ಶಿವರಾತ್ರಿಯ ಪ್ರಯುಕ್ತ ಕೋಟೇಶ್ವರದಲ್ಲಿ ನಡೆಯುವ ಎರಡು ದಿನಗಳ ರಾಜ್ಯ ಮಟ್ಟದ ಪುರುಷ ಮತ್ತು ಮಹಿಳೆಯರ ಕುಣಿತ ಭಜನಾ ಸ್ಪರ್ಧೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಶ್ರೀ ರಾಮ ಕೋಟೀಶ್ವರ ಕಲಾ ಸಂಘದ ಅಧ್ಯಕ್ಷ ಬಿ. ಜಿ. ಸೀತಾರಾಮ ಧನ್ಯ ಅಧ್ಯಕ್ಷತೆ ವಹಿಸಿದ್ದರು. ಸುಮಶ್ರೀ ಧನ್ಯ ಪ್ರಾರ್ಥಿಸಿದರು. ಕಲಾಸಂಘದ ಗೌರವ ಸಲಹೆಗಾರ ಎಂ. ಪ್ರಭಾಕರ ಶೆಟ್ಟಿ ಸ್ವಾಗತಿಸಿದರು. ಸಂಘದ ಗೌರವಾಧ್ಯಕ್ಷ ಎಚ್. ರಾಮಚಂದ್ರ ವರ್ಣ, ಉಪಾಧ್ಯಕ್ಷ ಸುಬ್ರಹ್ಮಣ್ಯ ಶೆಟ್ಟಿ, ಕಾರ್ಯದರ್ಶಿ ದಿನೇಶ್ ಎಚ್. ಸುವರ್ಣ, ಪ್ರಧಾನ ಸಂಚಾಲಕ ರಮೇಶ್ ಪುತ್ರನ್ ಉಪಸ್ಥಿತರಿದ್ದರು. ಗೌರವ ಸಲಹೆಗಾರ ಕೆ. ಜಿ. ವೈದ್ಯ ಕಾರ್ಯಕ್ರಮ ನಿರೂಪಿಸಿ ಒಂದಿಸಿದರು.
ಕಾರ್ಯಕ್ರಮ ಆರಂಭ ದಲ್ಲಿ ಸುಮಂಗಲಿಯರು ಪೂರ್ಣಕುಂಭ ಸ್ವಾಗತದೊಂದಿಗೆ ಗಣ್ಯರನ್ನು ಬರಮಾಡಿಕೊಂಡರು. ಹಳೆಅಳಿವೆಯ ಶ್ರೀ ರಾಮ ಭಜನಾ ಮಂಡಳಿಯ ಮಹಿಳೆಯರು ಕುಣಿತ ಭಜನೆ ಮತ್ತು ಬಂಡಿಮಠ ನಾಗರಾಜ ಅಡಿಗ ಭಕ್ತಿ ಗೀತೆಗಳನ್ನು ಹಾಡಿ ರಂಜಿಸಿದರು. ಮಹಿಳಾ ಕುಣಿತ ಭಜನಾ ಸ್ಪರ್ಧೆಯಲ್ಲಿ 14 ತಂಡಗಳು ಭಾಗವಹಿಸಿದ್ದವು. ಮಂಗಳೂರು ಹೊಸಬೆಟ್ಟಿನ ಬಾಲವಿಕಾಸ ಭಜನಾ ಮಂಡಳಿ ಪ್ರಥಮ ಬಹುಮಾನ ರೂ.25, 555, ಉಡುಪಿ ಮುಳ್ಳುಗುಡ್ಡೆಯ ಬನಶಂಕರಿ ಮಹಿಳಾ ಭಜನಾ ಮಂಡಳಿ ದ್ವಿತೀಯ (ರೂ.15,555) ಮತ್ತು ಕಾರ್ಕಳ ಕಡ್ತಲದ ದುರ್ಗಾಪರಮೇಶ್ವರಿ ಭಜನಾ ಮಂಡಳಿ ತೃತೀಯ ಬಹುಮಾನ (ರೂ. 10,555) ವಿಜೇತರಾದರು. ಬಿ. ಜಿ. ಸೀತಾರಾಮ ಧನ್ಯ, ಪಿ. ಗಣಪಯ್ಯ ಚಡಗ, ರವೀಂದ್ರ ಐತಾಳ್ ಮತ್ತು ಭಾಗ್ಯಲಕ್ಷ್ಮಿ ತೀರ್ಪುಗಾರರಾಗಿ ಸಹಕರಿಸಿದರು
.