ಕುಂದಾಪುರದಲ್ಲಿ ನ್ಯಾಯಾಲಯ ನೂತನ ಕಟ್ಟಡ ಉದ್ಘಾಟನೆ – ಕಡಿಮೆ ಖರ್ಚಿನಲ್ಲಿ ನ್ಯಾಯ ಒದಗಿಸಿ: ಸು ಸ್ಟೀಸ್ ಎಸ್. ಅಬ್ದುಲ್ ನಜೀರ್

JANANUDI.COM NETWORK

ಕುಂದಾಪುರ: ಕೆಲವೊಮ್ಮೆ ಆಕಸ್ಮಿಕವಾಗಿ ಬದುಕಿನಲ್ಲಿ ರೋಗಗಳು ಬರುವಂತೆ ಪ್ರಕರಣಗಳುಗಳು ಎದುರಾಗುತ್ತವೆ. ರೋಗಿ ವೈದ್ಯರ ಬಳಿ ಹೋಗುವಂತೆ ಕಕ್ಷಿದಾರರು ನ್ಯಾಯಕ್ಕಾಗಿ ವಕೀಲರ ಹತ್ತಿರ ಬರುತ್ತಾರೆ. ನ್ಯಾಯ ಕೊಡಿಸುವವರಿಗೆ ಗುರುತರ ಜವಾಬ್ದಾರಿಗಳಿರುತ್ತದೆ.
ಕುಂದಾಪುರ ಭಾಗದಲ್ಲಿ ರೈತರು ಹಾಗೂ ಕೃಷಿಕರು ಜಾಸ್ತಿ. ಗ್ರಹಚಾರ ಕೆಟ್ಟವರು ಪ್ರಕರಣದ ಹಿನ್ನೆಲೆ ಬರುತ್ತಾರೆ. ಅಂತವರಿಗೆ ಕಡಿಮೆ ಖರ್ಚಿನಲ್ಲಿ ನ್ಯಾಯ ಒದಗಿಸಿ ಕೊಡಿ. ಮೋಟಾರು ವಾಹನದ ಅಪಘಾತಗಳ ಪರಿಹಾರದಲ್ಲಿ ಪರ್ಸಂಟೇಜ್ ಪಡೆಯುವ ವ್ಯವಸ್ಥೆ ಬೇಡ. ಇನ್ವೆಸ್ಟ್ ಮೆಂಟ್ ಲಿಟಿಗೇಶನ್ ಮಾಡಬೇಡಿ ಎಂದು ಸರ್ವೋಚ್ಛ ನ್ಯಾಯಾಲಯದ ನ್ಯಾಯಮೂರ್ತಿ ಎಸ್. ಅಬ್ದುಲ್ ನಜೀರ್ ವಕೀಲರಿಗೆ ಕಿವಿ ಮಾತು ಹೇಳಿದರು.
ಚಿಕ್ಕದಾದ ಜಾಗದಲ್ಲಿ ಸುಂದರವಾದ ನ್ಯಾಯಾಲಯ ಕಟ್ಟಡ ಎದ್ದು ನಿಂತಿದೆ. ಮಹಿಳಾ ವಕೀಲರು ಸೇರಿದಂತೆ ಎಲ್ಲರ ಆದ್ಯತೆಗಳನ್ನು ಪರಿಗಣಿಸಿ ನೂತನ ಕಟ್ಟಡವನ್ನು ನಿರ್ಮಾಣ ಮಾಡಲಾಗಿದೆ. ಪ್ರಸ್ತುತ ಇದ್ದ ನ್ಯಾಯಾಲಯ ಕಟ್ಟಡದ ದುರಸ್ತಿಗೂ ಆದ್ಯತೆ ನೀಡಬೇಕು. ನ್ಯಾಯಾಲಯಕ್ಕೆ ಅಗತ್ಯವಾಗಿರುವ ಮೂಲಭೂತ ಸೌಕರ್ಯ ಹಾಗೂ ನ್ಯಾಯಾಧೀಶರನ್ನು ನೀಡುವುದು ಉಚ್ಛ ನ್ಯಾಯಾಲಯ ಹಾಗೂ ಸರ್ಕಾರದ ಜವಾಬ್ದಾರಿಯಾಗಿದೆ.
ಈ ನ್ಯಾಯಲಯ ಸೌಲಭ್ಯಗಳ ಸದುದ್ದೇಶವಾಗಬೇಕಾದರೆ ವಕೀಲರ ಹಾಗೂ ಕಕ್ಷಕಿದಾರರ ಪಾತ್ರವೂ ಅತಿ ಮುಖ್ಯ ಎಂದರು.
ಕಾರ್ಯಕ್ರಮದಲ್ಲಿ ಮಾತನಾಡಿದ ಕರ್ನಾಟಕ ಉಚ್ಛ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿ ರಿತು ರಾಜ್ ಅವಸ್ಥಿ ಅವರು, ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಪ್ರಮುಖ ಕೇಂದ್ರಗಳಲ್ಲಿ ಒಂದಾಗಿ ಗುರುತಿಸಿಕೊಂಡಿರುವ ಕುಂದಾಪುರ, ಧಾರ್ಮಿಕ ಹಾಗೂ ಸಾಂಸ್ಕೃತಿಕವಾಗಿ ಕರಾವಳಿಯ ಪ್ರಮುಖ ತಾಣವೂ ಆಗಿದೆ. ಇಲ್ಲಿನ ವಿಶಿಷ್ಠ ಕುಂದಗನ್ನಡ ಭಾಷೆ ಹಾಗೂ ಪಂಚಗಂಗಾವಳಿ ಸಂಗಮ ಇಲ್ಲಿನ ವೈಶಿಷ್ಟ್ಯವನ್ನು ಹೆಚ್ಚಿಸಿದೆ. ಇಲ್ಲಿ ಕಾರ್ಯಾಚರಿಸುತ್ತಿರುವ 5 ನ್ಯಾಯಾಲಯಗಳ ಅವಶ್ಯಕತೆಗಾಗಿ ಅಂದಾಜು 6 ಕೋಟಿ ರೂ. ವೆಚ್ಚದಲ್ಲಿ ಸುಸಜ್ಜಿತ ಕಟ್ಟಡ ನಿರ್ಮಾಣವಾಗಿದೆ. ಒಳ್ಳೆಯ ವಾತಾವರಣದಲ್ಲಿ ನ್ಯಾಯದಾನ ಪ್ರಕ್ರಿಯೆಗಳು ನಡೆಯುವುದರಿಂದ ಎಲ್ಲರಿಗೂ ಒಳಿತಾಗಲಿ ಎಂದು ಅವರು ಹಾರೈಸಿದರು
ಕರ್ನಾಟಕ ಉಚ್ಛ ನ್ಯಾಯಾಲಯ ಹಾಗೂ ಆಡಳಿತಾತ್ಮಕ ನ್ಯಾಯಮೂರ್ತಿ ರಂಗಸ್ವಾಮಿ ನಟರಾಜ್ ಅವರು, ಮಗು ಬೆಳೆದಂತೆ ಅಗತ್ಯತೆಗಳು ಹೆಚ್ಚುತ್ತವೆ. ಎಲ್ಲ ವ್ಯವಸ್ಥೆಗಳು ಹಾಗೆಯೇ, ಇದಕ್ಕೆ ನ್ಯಾಯಾಲಯವೂ ಹೊರತಾಗಿಲ್ಲ. ಹಿಂದಿನ ಕಟ್ಟಡದಲ್ಲಿ ಕಕ್ಷಿದಾರರಿಗೆ ಹಾಗೂ ವಕೀಲರಿಗೆ ಒತ್ತಡದ ವಾತಾವರಣಗಳಿತ್ತು. ನ್ಯಾಯಾಲಯಕ್ಕೆ ಬರುವ ಕಕ್ಷಿದಾರರು ಹಾಗೂ ಇತರರಿಗೆ ಒಳ್ಳೆಯ ವಾತಾವರಣದ ಅವಶ್ಯಕತೆ ಇರುತ್ತದೆ. ಹಳೆಯ ಉಪಯೋಗಕ್ಕೆ ಬಾರದ ವಸ್ತುಗಳ ವಿಲೆವಾರಿಯಾಗಬೇಕು. ನೂತನವಾಗಿ ಆರಂಭಿಸಲಾಸದ ಇ-ಸೇವಾ ಕೇಂದ್ರದ ಉಪಯೋಗ ಜನರು ಪಡೆದುಕೊಳ್ಳಬೇಕು.ಮುಂಬರುವ ರಾಷ್ಟ್ರೀಯ ಲೋಕ ಅದಾಲತ್ ಗೆ ಸರ್ವರ ಸಹಕಾರವೂ ಬೇಕು. ನ್ಯಾಯಾಲಯಕ್ಕೆ ಅಗತ್ಯವಾಗಿರುವ ಮೂಲಭೂತ ಸೌಲಭ್ಯಗಳನ್ನು ಕೇಳಿ ಪಡೆದುಕೊಂಡು, ಅದನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದರು.
ನೂತನ ಕಟ್ಟಡದಲ್ಲಿ ಪ್ರಾರಂಭಿಸಲಾದ ಇ-ಸೇವಾ ಕೇಂದ್ರ, ಸಹಾಯವಾಣಿ ಕೇಂದ್ರ ಹಾಗೂ ವಿಡಿಯೋ ಕಾನ್ಫರೆನ್ಸ್ ಕೊಠಡಿಯ ಉದ್ಘಾಟನೆ ನಡೆಯಿತು. ಲೋಕೋಪಯೋಗಿ ಇಲಾಖೆಯ ಮುಖ್ಯ ಇಂಜಿನಿಯರ್ ಕಾಂತರಾಜು ಬಿ.ಟಿ ಅವರನ್ನು ಕುಂದಾಪುರ ವಕೀಲರ ಸಂಘದ ವತಿಯಿಂದ ಅಭಿನಂದಿಸಲಾಯಿತು.
ಕರ್ನಾಟಕ ಉಚ್ಛ ನ್ಯಾಯಾಲಯದ ಮಹಾ ವಿಲೇಖನಾಧಿಕಾರಿಗಳಾದ ಟಿ.ಜಿ ಶಿವಶಂಕರೇ ಗೌಡ, ಕರ್ನಾಟಕ ಸರ್ಕಾರದ ಕಾನೂನು ಇಲಾಖೆಯ ಪ್ರಧಾನ‌ ಕಾರ್ಯದರ್ಶಿಗಳಾದ ಟಿ. ವೆಂಕಟೇಶ್ ನಾಯ್ಕ್ , ಸಮೀರ್ ನಜೀರ್, ಅರ್ಚನಾ ನಟರಾಜ್, ಲೋಕೋಪಯೋಗಿ ಇಲಾಖೆಯ ಮುಖ್ಯ ಇಂಜಿನಿಯರ್ ಕಾಂತರಾಜು ಬಿ.ಟಿ ಹಾಗೂ ಕುಂದಾಪುರ ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿ ಹೆಚ್.ಪ್ರಮೋದ್ ಹಂದೆ ಉಪಸ್ಥಿತರಿದ್ದರು.
ಉಡುಪಿ ಜಿಲ್ಲಾ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಸುಬ್ರಮಣ್ಯ ಜೆ.ಎನ್ ಸ್ವಾಗತಿಸಿದರು,ಮಾಲಿನಿ ರಮೇಶ್ ಪ್ರಾರ್ಥಿಸಿದರು, ಕುಂದಾಪುರ ವಕೀಲರ‌ ಸಂಘದ ಅಧ್ಯಕ್ಷ ಸಳ್ವಾಡಿ ನಿರಂಜನ್ ಹೆಗ್ಡೆ ವಂದಿಸಿದರು, ಉಪಾಧ್ಯಕ್ಷ ರಾಘವೇಂದ್ರ ಚರಣ್ ನಾವಡ ನಿರೂಪಿಸಿದರು.