

ಕುಂದಾಪುರ, ಜೂ.9: “ಅವಮಾನವನ್ನು ಸನ್ಮಾನವನ್ನಾಗಿ ಬದಲಿಸುವ ಶಕ್ತಿ ಶಿಕ್ಷಣಕ್ಕಿದೆ. ಶಿಕ್ಷಣವು ವಿದ್ಯಾರ್ಥಿಯಲ್ಲಿ ಶಿಸ್ತು, ವಿನಮ್ರತೆ, ವಿಧೇಯತೆ , ಭ್ರಾತೃತ್ವ , ಮಾನವತೆ ಚಾರಿತ್ರ್ಯವನ್ನು ವೃದ್ಧಿಸುವಂತಿರಬೇಕು.ಶೈಕ್ಷಣಿಕ ಹಾದಿಯಲ್ಲಿ ಶ್ರದ್ಧೆ, ಅಧ್ಯಯನಶೀಲತೆ , ಆತ್ಮವಿಶ್ವಾಸ , ಕಠಿಣ ಪರಿಶ್ರಮದಿಂದ ಗುರಿಯಡೆಗೆ ಮುನ್ನುಗ್ಗುವ ವಿದ್ಯಾರ್ಥಿಗಳು ಸಮಾಜದಲ್ಲಿ ಗೌರವಯುತ ಸ್ಥಾನವನ್ನು ಪಡೆಯಬಹುದು ” ಎಂದು ಸಂಪನ್ಮೂಲ ವ್ಯಕ್ತಿಗಳಾದ ಕುಂದಾಪುರದ ಆರ್ ಎನ್ ಶೆಟ್ಟಿ ಸಂಯುಕ್ತ ಪದವಿ ಪೂರ್ವ ಕಾಲೇಜಿನ ಹಿಂದಿ ಉಪನ್ಯಾಸಕಿ ಶ್ರೀಮತಿ ಜಯಶೀಲಾ ಕೃಷ್ಣದಾಸ್ ಕಾಮತ್ ರವರು ನುಡಿದರು.
ಶ್ರೀ ಕಾಶಿ ಮಠ ಸಂಸ್ಥಾನ ವಾರಣಾಸಿ ಇದರ ಅಂಗ ಸಂಸ್ಥೆಯಾದ ಬಸ್ರೂರಿನ ಶ್ರೀ ಭುವನೇಂದ್ರ ಬಾಲಕಾಶ್ರಮದಲ್ಲಿ ವಿದ್ಯಾರ್ಥಿಗಳಿಗೆ ” ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಣದ ಮಹತ್ವ ” ಎಂಬ ವಿಷಯದ ಕುರಿತು ಜೂನ್ 9 ರಂದು ವಿಶೇಷ ಉಪನ್ಯಾಸ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಬಾಲಕಾಶ್ರಮದ ವಿದ್ಯಾರ್ಥಿಗಳು, ಪೋಷಕರು, ಶ್ರೀರಾಮಚಂದ್ರ ಪಡಿಯಾರ್ ಶ್ರೀಮತಿ ಸ್ಮಿತಾ ಭಟ್ ಇವರು ಉಪಸ್ಥಿತರಿದ್ದರು.


