ಸತ್ತವರಿಗೆ ಸಾಲ ನೀಡಿದ್ದರೆ ಶೀಘ್ರ ತನಿಖೆ ನಡೆಸಿ ಎಫ್‌ಐಆರ್‌ ಹಾಕಿಸಿ ನಿಮ್ಮದೇ ಸರ್ಕಾರವಿದೆ ಸಚಿವರಿಗೆ ಬ್ಯಾಲಹಳ್ಳಿ ಗೋವಿಂದಗೌಡ ಸಲಹೆ

ವರದಿ: ಶಬ್ಬೀರ್ ಅಹ್ಮದ್, ಶ್ರೀನಿವಾಸಪುರ

ಕೋಲಾರ– ಮೃತಪಟ್ಟವರ ಹೆಸರಿನಲ್ಲಿ ಕೋಲಾರ – ಚಿಕ್ಕಬಳ್ಳಾಪುರ ಡಿಸಿಸಿ ಬ್ಯಾಂಕ್ ಮೂಲಕ ಸಾಲ ಮಂಜೂರಾಗಿದ್ದರೆ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಎಫ್‌ಐಆರ್‌ ದಾಖಲಿಸಿ ಎಂದು ಉಸ್ತುವಾರಿ ಸಚಿವ ಮುನಿರತ್ನ ಅವರಿಗೆ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡ ಮನವಿ ಮಾಡಿದರು . ನಗರದ ಡಿಸಿಸಿ ಬ್ಯಾಂಕ್ ಕಚೇರಿಯಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು , ಸತ್ತವರ ಹೆಸರಲ್ಲಿ ಸಾಲ ನೀಡಲಾಗಿದೆ ಎಂಬ ಸಚಿವರ ಆರೋಪವನ್ನು ತಳ್ಳಿಹಾಕಿ ಮಾತನಾಡುತ್ತಿದ್ದರು . ಸಾರ್ವಜನಿಕ ಜೀವನದಲ್ಲಿ ಕೆಲಸ ಮಾಡುತ್ತಿದ್ದೇವೆ . ಸಹಕಾರ ವ್ಯವಸ್ಥೆ ಬಡವರ ವ್ಯವಸ್ಥೆಯಾಗಿದೆ , ಸತ್ತವರ ಹೆಸರಿನಲ್ಲಿ ಸಾಲ ಕೊಟ್ಟಿದ್ದರೆ ನಿಮ್ಮ ಆರೋಪ ಗಂಭೀರವಾದುದು ಎಂದರು . ಅಧಿಕಾರ ತಮ್ಮ ಬಳಿಯೇ ಇದೆ , ನೀವು ಜಿಲ್ಲಾ ಉಸ್ತುವಾರಿ ಸಚಿವರೂ ಆಗಿದ್ದೀರಿ . ವ್ಯವಸ್ಥೆಗೆ ಯಾರು ದೊಡ್ಡವರಲ್ಲ . ತಪ್ಪು ಮಾಡಿದವರ ವಿರುದ್ಧ ಎಫ್‌ಐಆರ್ ಹಾಕಿಸಿ ಎಂದು ಸಲಹೆ ನೀಡಿದರು . ಸತ್ತವರ ಹೆಸರಿನಲ್ಲಿ ಸಾಲ ನೀಡಲು ಸಾಧ್ಯವೇ ಇಲ್ಲ . ಹೇಳಿಕೆ ಹೇಳಿಕೆಯಾಗಿ ಇರಬಾರದು . ತತ್‌ಕ್ಷಣ ತನಿಖೆ ನಡೆಸಿ ಎಫ್‌ಐಆರ್‌ ಹಾಕಿಸಿ . ತಪ್ಪು ಮಾಡಿದವರನ್ನು ಶಿಕ್ಷೆಗೆ ಒಳಪಡಿಸುವುದು ಅಧಿಕಾರದಲ್ಲಿರುವವರ ಜವಾಬ್ದಾರಿ . ಅಧ್ಯಕ್ಷನಾಗಿ ತಪ್ಪುಗಳು ಆಗದಂತೆ ಎರಡೂ ಜಿಲ್ಲೆಯಲ್ಲಿ ಎಚ್ಚರಿಕೆಯಿಂದ ನಡೆದುಕೊಂಡಿರುವ ಆತ್ಮತೃಪ್ತಿ ಇದೆ ಎಂದರು . ಬ್ಯಾಂಕಿನಲ್ಲಿ ಅವ್ಯವಹಾರ ನಡೆದಿರುವುದೇ ಆದರೆ ತ್ವರಿತವಾಗಿ ತನಿಖೆ ನಡೆಸಿ , ಕ್ರಮ ಕೈಗೊಳ್ಳಲಿ , ದಯಮಾಡಿ ಬ್ಯಾಂಕಿಂಗ್ ವ್ಯವಸ್ಥೆಗೆ ಧಕ್ಕೆಯಾಗುವ ಸುಳ್ಳು ಹೇಳಿಕೆಗಳನ್ನು ನೀಡದಿರಿ ಎಂದು ಮನವಿ ಮಾಡಿದರು . ಸಹಕಾರ ಸಂಘಗಳು ಬ್ಯಾಂಕಿನ ವ್ಯಾಪ್ತಿಗೆ ಒಳಪಡುವುದಿಲ್ಲ . ನಿಮ್ಮದೇ ಸರ್ಕಾರದ ಸಹಕಾರ ಇಲಾಖೆಯಡಿ ಕಾರ್ಯನಿರ್ವಹಿಸುತ್ತವೆ . ರೈತರು , ಮಹಿಳೆಯರು ಸಾಲಕ್ಕಾಗಿ ಸಂಘಕ್ಕೆ ಅರ್ಜಿ ಹಾಕಿದಾಗ ಬೇಡಿಕೆಗೆ ತಕ್ಕಂತೆ ಹಣ ನೀಡಲಾಗುತ್ತದೆ . ವಾಸ್ತವಾಂಶ ಅರಿತು ಮಾತನಾಡಿದರೆ ಸಮಾಜಕ್ಕೆ ಉತ್ತಮ ಸಂದೇಶ ನೀಡಿದಂತಾಗುತ್ತದ ಎಂದರು .
೨೦೧೪ ಕ್ಕೆ ಮುನ್ನಾ ದಿವಾಳಿಯಾಗಿ ಸತ್ತು ಹೋಗಿದ್ದಂತಹ ಬ್ಯಾಂಕಿಗೆ ಶಕ್ತಿ ತುಂಬಿ ಬದುಕಿಸಲಾಗಿದೆ . ಇಲ್ಲಿ ನಮಗೇನು ಅಧಿಕಾರ ಶಾಶ್ವತವಲ್ಲ . ಬೆಳೆ ಸಾಲ ಕೊಡುವಾಗ ಮಾರ್ಟ್‌ಗೇಜ್ ಮಾಡಿಯೇ ಸಾಲ ಮಂಜೂರು ಮಾಡಲಾಗುತ್ತದೆ . ರೈತರು ಆನ್‌ಲೈನ್ ಮೂಲಕವೇ ವ್ಯವಹಾರ ನಡೆಸುತ್ತಾರೆ . ಹೀಗಿರುವಾಗ ಹೇಗೆ ಅವ್ಯವಹಾರ ನಡೆಸಲು ಸಾಧ್ಯ ಎಂದು ಪ್ರಶ್ನಿಸಿದರು .
ಬಡ್ಡಿ ಕ್ರೈಮ್ ಮಾಡುವುದು ಇಲಾಖೆಯ ಅಧಿಕಾರಗಳ ಜವಾಬ್ದಾರಿ . ಬಿಲ್‌ ತಯಾರಿಸುವುದು ಅಧಿಕಾರಿಗಳ ಜವಾಬ್ದಾರಿ . ವ್ಯವಸ್ಥೆಯಲ್ಲಿ ಯಾರು ತಪ್ಪು ಮಾಡಿದರೂ ಶಿಕ್ಷೆ ಅನುಭವಿಸಲೇಬೇಕು , ಡಾ.ಬಿ.ಆರ್.ಅಂಬೇಡ್ಕರ್ ಬರದಿರುವ ಸಂವಿಧಾನದಡಿ ಬದುಕುತ್ತಿದ್ದೇವೆ . ತಪ್ಪು ಮಾಡಿರುವುದು ಸಾಭೀತಾದರೆ ಜೈಲಿಗೆ ಹೋಗುವುದು ಖಚಿತ . ದೇಶದಲ್ಲಿ ಕಾನೂನಿಗಿಂತ ದೊಡ್ಡವರು ಯಾರು ಇಲ್ಲ ಎಂದು ಸ್ಪಷ್ಟಪಡಿಸಿದರು . ವಿನಾಕಾರಣ ರಾಜಕೀಯ ಸ್ವಾರ್ಥಕ್ಕಾಗಿ ಬಡವರು , ರೈತರು , ತಾಯಂದಿರಿಗೆ ಆರ್ಥಿಕ ಬಲ ತುಂಬಿರುವ ಬ್ಯಾಂಕ್ ವಿರುದ್ಧ ಮಾತನಾಡಿ , ಬ್ಯಾಂಕಿನ ಘನತೆಗೆ ಚ್ಯುತಿ ತಾರದಿರಿ , ಬ್ಯಾಂಕನ್ನು ಹಾಳು ಮಾಡಿದರೆ ಅದು ರೈತರು , ಮಹಿಳೆಯರಿಗೆ ಮಾಡಿದ ದ್ರೋಹವಾಗುತ್ತದೆ , ತಪ್ಪಾಗಿದ್ದರೆ ತನಿಖೆ ನಡೆಸಿ ಕ್ರಮ ಕೈಗೊಳ್ಳಿ ಎಂದು ಸಲಹೆ ನೀಡಿದರು .