“ಸಮಸ್ಯೆ ಉಂಟಾಗುವ ಮೊದಲೇ ಕ್ರಮದ ಜವಾಬ್ದಾರಿ ಸರಕಾರದ್ದು’’ ನಮ್ಮ ಜವಾಬ್ದಾರಿಯಿಂದ ನಾವು ಹಿಂದೆ ಸರಿಯಲ್ಲ :ಸಚಿವ ಮಂಕಾಳ ಎಸ್ ವೈದ್ಯ

ಮಂಗಳೂರು, ಜೂ.17: ಇಂದು ಮೀನುಗಾರಿಕೆ, ಬಂದರು ಮತ್ತು ಜಲಸಾರಿಗೆ ಸಚಿವ ಮತ್ತು ಭಟ್ಕಳ ಶಾಸಕರಾದ ಮಂಕಾಳ ಎಸ್ ವೈದ್ಯ ಮಂಗಳೂರಿಗೆ ಬಂದಿದ್ದರು. “ಸಮಸ್ಯೆ ಉಂಟಾಗುವ ಮೊದಲೇ ಕ್ರಮ ಕೈಗೊಳ್ಳಬೇಕಾದುದು ಸರಕಾರದ ಜವಾಬ್ದಾರಿ’’ ನಮ್ಮ ಜವಾಬ್ದಾರಿಯಿಂದ ನಾವು ಹಿಂದೆ ಸರಿಯಲ್ಲ ಎಂದರು. ಮೀನುಗಾರರ ಸಮಸ್ಯೆಗಳು, ಕಡಲ್ಕೊರೆತ, ಡಿಸೆಲ್ ಸಬ್ಸಿಡಿ ಇತ್ಯಾದಿ ಬಗ್ಗೆ ಕಾಳಜಿಯಿಂದ ಮಾತನಾಡಿದ ಬಗ್ಗೆ ಮಾಧ್ಯಮಗಳಲ್ಲಿ ಓದಿದೆ. ಇದಕ್ಕೆ ಅಧಿಕಾರಶಾಹಿ ಹೇಗೆ ಸ್ಪಂದಿಸಬಲ್ಲುದು ಕಾದು ನೋಡಬೇಕು.

2013 ರ ಚುನಾವಣೆಯಲ್ಲಿ ಅವರು ಸ್ವತಂತ್ರ ಅಭ್ಯರ್ಥಿಯಾಗಿ ಗೆದ್ದ ನೆನಪು. ಕೊಂಕಣಿ ಅಕಾಡೆಮಿಯ ಅಂದಿನ ಅಧ್ಯಕ್ಷರಾದ ರೊಯ್ ಕ್ಯಾಸ್ತೆಲಿನೊ ರವರ ಮುತುವರ್ಜಿಯಿಂದ ಮಂಗಳೂರು ವಿವಿಯಲ್ಲಿ ಕೊಂಕಣಿ ಅಧ್ಯಯನ ಪೀಠಕ್ಕೆ ಮಂಜೂರಾತಿ ನೀಡಿತ್ತು. ಕುಲಪತಿ ಡಾ. ಭೈರಪ್ಪ ಪೀಠ ಉದ್ಘಾಟನೆ ಕೂಡಾ ಮಾಡಿಸಿದ್ದರು. ಆದರೆ ಪೀಠಕ್ಕೆ ಘೋಷಿಸಿದ 2 ಕೋಟಿ ಅನುದಾನ ತಾರದೇ ಕೆಲಸಗಳು ಶುರುವಾಗುವಂತಿರಲಿಲ್ಲ. ಸರಕಾರದಿಂದ ಹೊಸ ಘೋಷಣೆಗಳನ್ನು ಮಾಡಿಸಬಹುದು. ಆದರೆ ಅನುದಾನ ತರುವುದು ಸಮುದ್ರ ಮಂಥನ ಮಾಡಿದಷ್ಟೇ ಕಷ್ಟದ ಕೆಲಸ.

ಇಂತಹ ಹೊತ್ತಿನಲ್ಲಿ ಆಪದ್ಭಾಂದವನಂತೆ ದೊರೆತವರೇ ಈ ವೈದ್ಯರು. ಉತ್ತರ ಕನ್ನಡದಲ್ಲಿ ಕೊಂಕಣಿ ಅಕಾಡೆಮಿ ವತಿಯಿಂದ ನಡೆದ ವಿವಿಧ ಕಾರ್ಯಕ್ರಮಗಳಿಗಾಗಿ ಹಲವಾರು ಸಲ ಅವರನ್ನು ಭೇಟಿಯಾದ ಕಾರಣಕ್ಕೆ ಅವರಿಗೆ ನಮ್ಮ ತಂಡದ ಪರಿಚಯವಿತ್ತು. ಬೆಂಗಳೂರಿಗೆ ಹೋದಾಗ ಅವರನ್ನು ಭೇಟಿಯಾಗಿ ಚರ್ಚಿಸಲಾಗಿ ನೇರವಾಗಿ ಸಿ. ಎಮ್. ಬಳಿ ಕರೆದುಕೊಂಡು ಹೋಗಿ ಹೂ ಎತ್ತಿದಷ್ಟೇ ಸಲೀಸಾಗಿ 2 ಕೋಟಿ ಮಂಜೂರು ಮಾಡಿಸಲು ಸಹಕರಿಸಿದ್ದರು. ನಂತರ ಸರಕಾರಿ ಔಪಚಾರಿಕತೆಗಳು ಮುಗಿದು ಆರ್ಥಿಕ ವರ್ಷ ಮುಗಿಯುವುದರೊಳಗೆ ಚೆಕ್ ದೊರೆತಿತ್ತು.

ಸಹಜ ಮಾನವ ಕಾಳಜಿ ಇರುವ ವ್ಯಕ್ತಿಗಳು ಅಧಿಕಾರದಲ್ಲಿರುವಾಗ ಅವರಿಗೆ ಇದೆಲ್ಲಾ ಸಲೀಸು. ಏಕೆಂದರೆ ಇದೇ ಕೆಲಸಕ್ಕಾಗಿ ಅವರ ಆಯ್ಕೆಯಾಗಿದೆ ಎಂಬುದು ಅವರ ಗಮನದಲ್ಲಿರುತ್ತದೆ. ಕಾಂಗ್ರೆಸಿನ ಪಂಚ ಗ್ಯಾರಂಟಿಗಳು ಇದೇ ಮಾನವೀಯ ಅಂತ:ಕರಣದ ಉತ್ಪನ್ನಗಳು. ಇಂದು ಮಾಂಕಾಳ ವೈದ್ಯರು ಮಂಗಳೂರಿಗೆ ಬಂದ ಬಗ್ಗೆ ಕೇಳಿದಾಗ ಇದೆಲ್ಲಾ ನೆನಪಾಯಿತು.