ಬಜೆಟ್ ಮಂಡನೆ ಸಂಬಂಧ ನೌಕರರ ಸಂಘದ ಪದಾಧಿಕಾರಿಗಳೊಂದಿಗೆ ಮುಖ್ಯಮಂತ್ರಿ ಚರ್ಚೆ-ನೌಕರರಿಂದ ಬೇಡಿಕೆಗಳ ಮಂಡನೆ-ಸುರೇಶ್‍ಬಾಬು

ವರದಿ: ಶಬ್ಬೀರ್ ಅಹಮ್ಮದ್, ಶ್ರೀನಿವಾಸಪುರ

ಕೋಲಾರ:- ಮುಖ್ಯ ಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಕರೆದಿದ್ದ 2021-22ನೇ ಸಾಲಿನ ಆಯ-ವ್ಯಯ ಮಂಡನೆ ಸಂಬಂಧ ರಾಜ್ಯ ಸರ್ಕಾರಿ ನೌಕರರ ಸಂಘದ ಪದಾಧಿಕಾರಿಗಳೊಂದಿಗೆ ನಡೆಸಿದ ಪೂರ್ವಭಾವಿ ಸಭೆಯಲ್ಲಿ ಜಿಲ್ಲೆಯಿಂದ ರಾಜ್ಯ ಕಾರ್ಯದರ್ಶಿ ಹಾಗೂ ಜಿಲ್ಲಾಧ್ಯಕ್ಷರೂ ಆದ ಜಿ.ಸುರೇಶ್‍ಬಾಬು ಪಾಲ್ಗೊಂಡಿದ್ದರು.
ಆಯ-ವ್ಯಯ ಮಂಡನೆ ಪೂರ್ವದಲ್ಲಿ ರಾಜ್ಯ ಸರ್ಕಾರಿ ನೌಕರರಿಗೆ ಸಂಬಂಧಿಸಿದ ವಿಷಯಗಳ ಬಗ್ಗೆ ಚರ್ಚಿಸುವ ಸಂಪ್ರದಾಯದಂತೆ ಈ ಸಭೆ ನಡೆದಿದ್ದು, ಈ ಸಂದರ್ಭದಲ್ಲಿ ಆಯವ್ಯಯದಲ್ಲಿ ಸರ್ಕಾರಿ ನೌಕರರ ವಿವಿಧ ಬೇಡಿಕೆಗಳ ಕುರಿತಂತೆ ಕ್ರಮವಹಿಸಲು ಮನವಿ ಮಾಡಲಗಿದ್ದು, ಇದಕ್ಕೆ ಮುಖ್ಯಮಂತ್ರಿಗಳು ಸ್ಪಂದಿಸಿದರು ಎಂದು ಸುರೇಶ್‍ಬಾಬು ತಿಳಿಸಿದ್ದಾರೆ.
ಅದರಂತೆ ನೌಕರರ ಸಂಘ ನೀಡಿದ ಬೇಡಿಕೆಗಳಲ್ಲಿ ಮೈಸೂರು ಆಡಳಿತ ತರಬೇತಿ ಕೇಂದ್ರದ ಮಾದರಿಯಲ್ಲಿ ರಾಜ್ಯದ ಎಲ್ಲಾ ವಿಭಾಗಗಳಲ್ಲಿ ವಸತಿ ಸಹಿತ ಸರ್ಕಾರಿ ನೌಕರರ ತರಬೇತಿ ಕೇಂದ್ರಗಳನ್ನು ಸ್ಥಾಪಿಸುವಂತೆ ಮನವಿ ಮಾಡಲಾಯಿತು.
ಜಿಲ್ಲಾ ಕೇಂದ್ರಗಳಲ್ಲಿ ಸರ್ಕಾರಿ ವಸತಿ ಗೃಹ ನಿರ್ಮಾಣ/ ನಿರ್ವಹಣೆಗೆ ಅನುದಾನ ಮಂಜೂರು ಮಾಡುವುದು, ಜಿಲ್ಲಾ-ತಾಲ್ಲೂಕು ಕೇಂದ್ರಗಳಲ್ಲಿ ಸರ್ಕಾರಿ ನೌಕರರ ಭವನ ನಿರ್ಮಾಣ ಹಾಗೂ ನಿರ್ವಹಣೆಗೆ ಅನುದಾನ ಮಂಜೂರು ಮಾಡುವಂತೆ ಕೋರಲಾಯಿತು.
ರಾಜ್ಯ ಸರ್ಕಾರಿ ನೌಕರರ ಕ್ರೀಡಾ ಮತ್ತು ಸಾಂಸ್ಕøತಿಕ ಹಾಗೂ ಇನ್ನಿತರ ಸಂಘದ ಕಾರ್ಯಕ್ರಮಗಳ ನಿರ್ವಹಣೆ ಉದ್ದೇಶಕ್ಕೆ ಸಹಾಯಾನುದಾನ ಮಂಜೂರು ಮಾಡಬೇಕು,
ರಾಜ್ಯದ ಸರ್ಕಾರಿ ನೌಕರರಿಗೆ – ಕುಟುಂಬದ ಸದಸ್ಯರಿಗೆ ನಗದು ರಹಿತ ಚಿಕಿತ್ಸಾ ಯೋಜನೆಯನ್ನು ಈ ಹಿಂದೆ ಆದೇಶಿಸಿರುವಂತೆ ಏಪ್ರಿಲ್ 2021ರಿಂದ ಜಾರಿಗೆ ತರುವುದು. ಸರ್ಕಾರಿ ನೌಕರರಿಗೆ ಸುಗಮ ಸೇವೆಗಾಗಿ ಕೆ.ಜಿ.ಐ.ಡಿ. ಕಛೇರಿಗಳ ಗಣಕೀಕರಣ ಕಾರ್ಯವನ್ನು ಏಪ್ರಿಲ್ 2021ರಿಂದ ಜಾರಿಗೆ ತರುವಂತೆಯೂ ಕೋರಲಾಯಿತು.
ರಾಜ್ಯ ಸರ್ಕಾರಿ ನೌಕರರ ಎಲ್ಲಾ ಸೇವೆಗಳನ್ನು ಆನಲೈನ್ ಮೂಲಕ ಜಾರಿಗೊಳಿಸುವುದು. ಇಲಾಖೆಗಳಲ್ಲಿ ಖಾಲಿಯಿರುವ ಸರ್ಕಾರಿ ಹುದ್ದೆಗಳನ್ನು ಶೀಘ್ರ ಭರ್ತಿ ಮಾಡಿ, ಹಾಲಿ ನೌಕರರ ಮೇಲಿನ ಕಾರ್ಯಭಾರ ಒತ್ತಡವನ್ನು ತಗ್ಗಿಸುವುದು. ರಾಜ್ಯದ ಶಿಕ್ಷಣ ಇಲಾಖೆಯಲ್ಲಿನ ನೌಕರರ ವೇತನ ತಾರತಮ್ಯವನ್ನು ಸರಿಪಡಿಸುವುದು. ಪ್ರಾಥಮಿಕ ಶಾಲಾ ಶಿಕ್ಷಕರು, ಪ್ರೌಢ ಶಾಲಾ ಶಿಕ್ಷಕರು ಹಾಗೂ ಉಪನ್ಯಾಸಕರಿಗೆ 15,20,25,30 ವರ್ಷಗಳ ವೇತನ ಬಡ್ತಿಯಲ್ಲಿ ಉಂಟಾಗಿರುವ ತಾರತಮ್ಯವನ್ನು ಸರಿಪಡಿಸುವಂತೆ ಕೋರಲಾಯಿತು.
ಕೇಂದ್ರ ಸರ್ಕಾರಿ ನೌಕರರ ಮಾದರಿಯಲ್ಲಿ ರಾಜ್ಯದ ನೌಕರರಿಗೂ ವೇತನ ಪರಿಷ್ಕರಣೆ ಮಾಡುವುದು, ನೂತನ ಪಿಂಚಣಿ ಯೋಜನೆಯನ್ನು ರದ್ದುಪಡಿಸಿ ಹಳೆ ಪಿಂಚಣಿ ಯೋಜನೆಯನ್ನು ಜಾರಿಗೊಳಿಸುವುದು. ಮಾಸಿಕ ವೇತನ ಆಧಾರದ ಮೇಲೆ ಕರ್ತವ್ಯ ನಿರ್ವಹಿಸುತ್ತಿರುವ ಗ್ರಾಮ ಸಹಾಯಕರಿಗೆ ರೂ. 21,000/- ಕನಿಷ್ಠ ವೇತನ ನಿಗಧಿಪಡಿಸುವಂತೆಯೂ ಆಗ್ರಹಿಸಲಾಯಿತು.
ಕರ್ನಾಟಕ ದಿನಗೂಲಿ ಕ್ಷೇಮಾಭಿವೃದ್ಧಿ ಅಧಿನಿಯಮ-2012 ರಲ್ಲಿ ಅಧಿಸೂಚಿಸಲ್ಪಟ್ಟ ಕ್ಷೇಮಾಭಿವೃದ್ಧಿ ದಿನಗೂಲಿ ನೌಕರರಿಗೆ ಸರ್ಕಾರದ ಆದೇಶದಂತೆ ಪೂರ್ಣ ಪ್ರಮಾಣದಲ್ಲಿ ಮನೆ ಬಾಡಿಗೆ ಭತ್ಯೆ, ವಾರ್ಷಿಕ ವೇತನ ಬಡ್ತಿ ಹಾಗೂ ನಗದು ರಹಿತ ಆರೋಗ್ಯ ಸೌಲಭ್ಯವನ್ನು ನೀಡುವುದು, ಬಿ.ಬಿ.ಎಂ.ಪಿ. ವ್ಯಾಪ್ತಿಯಲ್ಲಿ ಕೆಲಸ ನಿರ್ವಹಿಸುತ್ತಿರುವ ಸರ್ಕಾರಿ ನೌಕರರಿಗೆ ನೀಡುತ್ತಿರುವ ಮನೆ ಬಾಡಿಗೆ ಭತ್ಯೆ ದರ ಶೇ.24% ರಷ್ಟನ್ನು ಬೆಂಗಳೂರು ನಗರ ಜಿಲ್ಲೆಗೂ ವಿಸ್ತರಿಸುವಂತೆ ಮುಖ್ಯಮಂತ್ರಿಗಳಲ್ಲಿ ಕೋರಲಾಯಿತು.
ತಡೆಹಿಡಿದಿರುವ
ಡಿಎ ನೀಡಿಕೆಗೆ ಆಗ್ರಹ
ಇದೇ ಸಂದರ್ಭದಲ್ಲಿ ಕೋವಿಡ್ ಹಿನ್ನಲೆಯಲ್ಲಿ ತಡೆಹಿಡಿದಿರುವ ಡಿಎ ಕೂಡಲೇ ಮಂಜೂರು ಮಾಡಬೇಕು, ಕೇಂದ್ರ ಸರ್ಕಾರ ತನ್ನ ನೌಕರರಿಗೆ ನೀಡಿರುವ ದಿನಾಂಕದಿಂದಲೇ ಈ ಮಂಜೂರಾತಿ ನೀಡಲು ಮನವಿ ಮಾಡಲಾಯಿತು.
ಈ ಸಭೆಯಲ್ಲಿ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್. ಷಡಾಕ್ಷರಿ, ಪ್ರಧಾನ ಕಾರ್ಯದರ್ಶಿ ಜಗದೀಶ್ ಗೌಡಪ್ಪ ಪಾಟೀಲ್, ಖಜಾಂಚಿ ಆರ್. ಶ್ರೀನಿವಾಸ್, ಗೌರವಾಧ್ಯಕ್ಷ ವಿ.ವಿ.ಶಿವರುದ್ರಯ್ಯ, ಕೇಂದ್ರ ಸಂಘದ ಪದಾಧಿಕಾರಿಗಳಾದ ಬಸವರಾಜ್, ರುದ್ರಪ್ಪ, ಮೋಹನ್ ಕುಮಾರ್, ರಾಜ್ಯ ಕಾರ್ಯದರ್ಶಿ ಹಾಗೂ ಕೋಲಾರ ಜಿಲ್ಲಾಧ್ಯಕ್ಷರಾದ ಜಿ.ಸುರೇಶ್ ಬಾಬು,ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಸ್.ಚೌಡಪ್ಪ, ಮಲ್ಲಿಕಾರ್ಜುನ್,ಸುರೇಶ್ ಇತರರು ಭಾಗವಹಿಸಿ ಮುಖ್ಯ ಮಂತ್ರಿಗಳು ಹಾಗೂ
ಸರ್ಕಾರದ ಉನ್ನತ ಅಧಿಕಾರಿಗಳೊಂದಿಗೆ ಸುದೀರ್ಘವಾಗಿ ಚರ್ಚೆ ನಡೆಸಿದರು.