

ದಿನಾಂಕ 15/06/2025 ರಂದು ತಲ್ಲೂರು ಸಂತ ಫ್ರಾನ್ಸಿಸ್ ಆಸ್ಸಿಸಿ ಚರ್ಚಿನ ಕುಟುಂಬ ಆಯೋಗದ ನೇತೃತ್ವದಲ್ಲಿ ಅಪ್ಪಂದಿರ ದಿನಾಚರಣೆಯನ್ನು ಆಚರಿಸಲಾಯಿತು.
ಅಪ್ಪಂದಿರಿಗಾಗಿ ವಿಶೇಷ ಬಲಿಪೂಜೆಯನ್ನು, ಕಟ್ಕೆರೆ ಚರ್ಚಿನ ಧರ್ಮ ಗುರುಗಳಾದ ವಂದನೀಯ ಫಾ. ಜೊಸಿ. ಸಿದ್ದಕಟ್ಟೆ ಇವರು ಪ್ರಧಾನ ಗುರುಗಳಾಗಿ ಆಗಮಿಸಿ ಬಲಿಪೂಜೆ ನೆರವೇರಿಸಿದರು.
ತದನಂತರ ನಡೆದ ಸಭಾ ಕಾರ್ಯಕ್ರಮದಲ್ಲಿ ವೈ.ಸಿ.ಎಸ್. ಸಂಘದ ಸದಸ್ಯರು, ಅಪ್ಪಂದಿರಿಗೆ ಶಾಲು ಹೊದೆಸಿ ಗೌರವಪೂರ್ವಕವಾಗಿ ಸಭಾಂಗಣಕ್ಕೆ ಬರಮಾಡಿಕೊಂಡರು.
ಕಾರ್ಯಕ್ರಮದಲ್ಲಿ ಮುಖ್ಯ ಅಥಿತಿಗಳಾದ ವಂದನೀಯ ಫಾ. ಜೊಸ್ಸಿ ಸಿದ್ದಕಟ್ಟೆ ಗುರುಗಳು ಮಾತನಾಡಿ, ನಮ್ಮ ಜೀವನದಲ್ಲಿ ತಂದೆ, ತಾಯಿ ತುಂಬಾ ಶ್ರೇಷ್ಠ ವ್ಯಕ್ತಿಗಳು. ಅಮ್ಮ ಭೂಮಿ ಆದರೆ ಅಪ್ಪ ಆಕಾಶ ಇದ್ದಂತೆ.ಅಪ್ಪನ ಮನಸ್ಸು ಅರ್ಥ ಮಾಡಿಕೊಳ್ಳುವುದು ಕಷ್ಟ. ಏಕೆಂದರೆ ತನ್ನೆಲ್ಲ ಕಷ್ಟ- ಕಾರ್ಪಣ್ಯಗಳನ್ನು ಯಾರೊಂದಿಗೂ ಹಂಚಿಕೊಳ್ಳದೆ ತನ್ನೊಳಗೇ ಇಟ್ಟು ಕೊಂಡು, ಹೊರ ಜಗತ್ತಿಗೆ ನಗುವಿನಲ್ಲೇ ಕಾಣಿಸಿಕೊಳ್ಳುವವನು ಅಪ್ಪ ಮಕ್ಕಳಿಗೆ ಅಪ್ಪನ ಸ್ಥಾನ, ಜವಾಬ್ದಾರಿ ಯಾವಾಗ ಬರುವುದೋ ಆಗ ಅಪ್ಪನ ಮೌಲ್ಯ, ಕರ್ತವ್ಯದ ಅರಿವಾಗುವುದು. ತನ್ನ ಪತ್ನಿ ಯಾವಾಗ ಗರ್ಭಿಣಿ ಯೆಂದು ತಿಳಿಯುವುದೋ ಆ ಕ್ಷಣದಿಂದ ಆತ ತನ್ನ ಮಗುವಿನ ಬಗ್ಗೆ ಕನಸು ಕಾಣುತ್ತಾನೆ. ಅದರ ಪ್ರೀತಿ ಮಾಡುತ್ತಾನೆ, ಅದರ ಭವಿಷ್ಯದ ಬಗ್ಗೆ ಯೋಚಿಸುತ್ತಾನೆ. ತಂದೆಯ ಜವಾಬ್ದಾರಿ ತುಂಬಾ ಕಷ್ಟಕರವಾದದ್ದು ಹಾಗೂ ಅರ್ಥಗರ್ಭಿತವಾದದ್ದು.ಇಂದು ಪವಿತ್ರ ಸಭೆಯು ಜೀವಂತ ಇದೆ ಎಂದಾದರೆ ಅದು ಒಬ್ಬ ಒಳ್ಳೆಯ ತಂದೆಯಿಂದ ಮಾತ್ರ ಸಾಧ್ಯ ಎಂದು ‘ಅಪ್ಪಂದಿರ ದಿನ’ ದ ಮಹತ್ವದ ಬಗ್ಗೆ ತಿಳಿಸಿದರು.
ಚರ್ಚಿನ ಧರ್ಮ ಗುರುಗಳಾದ ವಂದನೀಯ ಫಾ. ಎಡ್ವಿನ್ ಡಿಸೋಜರವರು ಮಾತನಾಡಿ,ಸಮಾಜದ ಚಿಕ್ಕ ಘಟಕವಾದ ಕುಟುಂಬದಲ್ಲಿರುವ ಸಂತೋಷ, ಸಮಾಧಾನ ಬೇರೆಲ್ಲೂ ಸಿಗುವುದಿಲ್ಲ. ತಂದೆ ಯಾವಾಗಲೂ ತನ್ನ ಹೆಂಡತಿ ಮಕ್ಕಳನ್ನು ಪ್ರೀತಿಯ ವರ್ತುಲದಲ್ಲಿ ಇಡಬೇಕು. ಹೊರ ದೇಶದಲ್ಲಿ ದುಡಿಯುವ ತಂದೆ ವರ್ಷ್ಕೊಮ್ಮೆ ಆದರೂ ಊರಿಗೆ ಬಂದು ಹೆಂಡತಿ ಮಕ್ಕಳೊಂದಿಗೆ ಕಾಲ ಕಳೆಯಬೇಕು. ಇದರಿಂದ ಕುಟುಂಬದಲ್ಲಿ ಉತ್ತಮ ಹೊಂದಾಣಿಕೆ, ಪರಸ್ಪರ ಮನೋಭಾವ, ಅನ್ಯೋನ್ಯತೆ ಇರುತ್ತದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಕೆಲವು ಅಪ್ಪಂದಿರು ತಮ್ಮ ಅನಿಸಿಕೆಗಳನ್ನು ವ್ಯಕ್ತ ಪಡಿಸಿದರು. ಚರ್ಚಿನ ಧರ್ಮ ಗುರುಗಳು ಅತೀ ಹೆಚ್ಚು ಮಕ್ಕಳನ್ನು ಹೊಂದಿದ್ದ ತಂದೆಯರನ್ನು ಸನ್ಮಾನಿಸಿದರು.
ವೈ.ಸಿ.ಎಸ್. ಸಂಘದ ಸದಸ್ಯರು ಸ್ವಾಗತ ನ್ರತ್ಯ ಹಾಗೂ ಶುಭಾಶಯ ಗೀತೆಯ ಮೂಲಕ’ ಅಪ್ಪಂದಿರ’ದಿನಕ್ಕೆ ಹೆಚ್ಚು ಮೆರಗನ್ನು ನೀಡಿದರು.
ಈ ಕಾರ್ಯಕ್ರಮದಲ್ಲಿ ಚರ್ಚಿನ ಪಾಲನಾ ಮಂಡಳಿಯ ಅಧ್ಯಕ್ಷ ಕಾರ್ಯದರ್ಶಿಗಳು, 20 ಆಯೋಗದ ಸಂಚಾಲಕರು ಹಾಗೂ ಚರ್ಚಿನ ಧರ್ಮ ಭಗಿನಿಯರು ಹಾಜರಿದ್ದರು.




































