ರೈತರ ಉತ್ಪಾದಕರ ಸಂಸ್ಥೆಗಳು, ಕೃಷಿ ಹಾಗೂ ತೋಟಗಾರಿಕಾ ಉತ್ಪನ್ನವನ್ನು ನೇರವಾಗಿ ರೈತರಿಂದ ಖರೀದಿಸಿ ಬೇರೆಡೆಗೆ ರವಾನಿಸುತ್ತವೆ

ವರದಿ: ಶಬ್ಬೀರ್ ಅಹ್ಮದ್, ಶ್ರೀನಿವಾಸಪುರ

ಶ್ರೀನಿವಾಸಪುರ: ರೈತರ ಉತ್ಪಾದಕರ ಸಂಸ್ಥೆಗಳು, ಕೃಷಿ ಹಾಗೂ ತೋಟಗಾರಿಕಾ ಉತ್ಪನ್ನವನ್ನು ನೇರವಾಗಿ ರೈತರಿಂದ ಖರೀದಿಸಿ ಬೇರೆಡೆಗೆ ರವಾನಿಸುತ್ತವೆ ಇದರಿಂದ ರೈತರಿಗೆ ಹೆಚ್ಚಿನ ಪ್ರಯೋಜವಾಗುತ್ತದೆ ಎಂದು ಸಂಸದ ಎಸ್.ಮುನಿಸ್ವಾಮಿ ಎಂದು ಹೇಳಿದರು.
ತಾಲ್ಲೂಕಿನ ಶ್ಯಾಗತ್ತೂರು ಗ್ರಾಮದಲ್ಲಿ ಬುಧವಾರ ಏರ್ಪಡಿಸಿದ್ದ ಪೌಷ್ಟಿಕ ಆಹಾರ ಸೇವಾ ಮಾಸಾಚರಣೆ, ಸ್ವಚ್ಛತಾ ಆಂದೋಲನ ಮತ್ತು ಶ್ರಮದಾನ ಶಿಬಿರ ಹಾಗೂ ಆಶಾ ರೈತ ಉತ್ಪಾದಕ ಸಂಸ್ಥೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಕಾಯ್ದೆ ತಿದ್ದುಪಡಿಯಿಂದ ಎಪಿಎಂಸಿಗಳ ಕಾರ್ಯನಿರ್ವಹಣೆಗೆ ಅಡ್ಡಿಯಾಗಿಲ್ಲ. ಬದಲಿಗೆ ರೈತ ಮಧ್ಯವರ್ತಿಗಳ ಕಪಿಮುಷ್ಠಿಯಿಂದ ಪಾರಾಗಲು ಸಾಧ್ಯವಾಗಿದೆ ಎಂದು ಹೇಳಿದರು.
ರೈತರ ಉತ್ಪನ್ನಕ್ಕೆ ಲಾಭದಾಯಕ ಬೆಲೆ ಸಿಗುವಂತೆ ಮಾಡಲು 10 ಸಾವಿರ ಎಫ್‍ಪಿಒಗಳನ್ನು ಪ್ರಾರಂಭಿಸಲು ನಿರ್ಧರಿಸಲಾಗಿದೆ. ಕೇಂದ್ರ ಸರ್ಕಾರದ ಹಣಕಾಸು ಯೋಜನೆಯಡಿ ಪ್ರತಿ ಗ್ರಾಮ ಪಂಚಾಯಿತಿಯಲ್ಲಿ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲು ರೂ.15 ಲಕ್ಷದಿಂದ ರೂ.1 ಕೋಟಿ ವರೆಗೆ ನೀಡಲಾಗುವುದು ಎಂದು ಹೇಳಿದರು.
ಜಿಲ್ಲಾ ಬಿಜೆಪಿ ಘಟಕದ ಅಧ್ಯಕ್ಷ ಡಾ. ಕೆ.ಎನ್.ವೇಣುಗೋಪಾಲ್ ಮಾತನಾಡಿ, ನರೇಂದ್ರ ಮೋದಿ ಅವರ ನೇತೃತ್ವದ ಕೇಂದ್ರ ಸರ್ಕಾರ ಕೈಗೊಂಡ ಸಕಾಲಿಕ ಕ್ರಮಗಳಿಂದಾಗಿ ದೇಶದಲ್ಲಿ ಕೋವಿಡ್ ನಿಯಂತ್ರಣ ಸಾಧ್ಯವಾಯಿತು. ಕೋವಿಡ್ ನಿರೋಧಕ ಲಸಿಕೆ ಸಂಶೋಧನೆ, ಉತ್ಪಾದನೆ ಹಾಗೂ ನೀಡುವ ಪ್ರಕ್ರಿಯೆ ಅತ್ಯಂತ ವೇಗವಾಗಿ ನಡೆಯಿತು. ಅದರ ಪರಿಣಾಮವಾಗಿ ಅಸಂಖ್ಯಾತ ಜನರ ಜೀವ ಉಳಿಯಿತು ಎಂದು ಹೇಳಿದರು.
ಹಿರಿಯ ತೋಟಗಾರಿಕಾ ಸಹಾಯಕ ನಿರ್ದೇಶಕ ಶ್ರೀನಿವಾಸನ್ ಮಾತನಾಡಿ, ತೋಟಗಾರಿಕೆ ಇಲಾಖೆ ವತಿಯಿಂದ ರೈತರಿಗೆ ಸಿಗುವ ಸೌಲಭ್ಯಗಳ ಮಾಹಿತಿ ನೀಡಿದರು.
ಮುಖಂಡರಾದ ಜಯರಾಮರೆಡ್ಡಿ, ಎಸ್.ಬಿ.ಮುನಿವೆಂಕಟಪ್ಪ, ನಾಗರಾಜ್, ಡಾ. ಆರ್.ನಾರಾಯಣಸ್ವಾಮಿ, ಎ.ಅಶೋಕ್ ರೆಡ್ಡಿ, ಕೊಟ್ರಗುಳಿ ನಾರಾಯಣಸ್ವಾಮಿ, ಪದ್ಮನಾಭ, ಚಲಪತಿ, ಇ.ಶಿವಣ್ಣ, ರವಿಕುಮಾರ್, ರಾಮಾಂಜಿ, ವಿನೋದ್ ಕುಮಾರ್, ರಮೇಶ್ ಹಾಜರಿದ್ದರು.