

ಶ್ರೀನಿವಾಸಪುರ : ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲೂಕಿನ ಯದರೂರು ಗ್ರಾಮದ ಸಮೀಪ ಕೈಗಾರಿಕೆಗಳ ಸ್ಥಾಪನೆಗಾಗಿ ಜಮೀನು ಗುರುತಿಸುವ ಸಂಬಂಧ ಕೆಐಡಿಬಿ ಅಧಿಕಾರಿಗಳು ಸೋಮವಾರ ಗ್ರಾಮಕ್ಕೆ ತೆರಳಿ ಸಭೆ ನಡೆಸಿ ರೈತರಿಂದ ಆಕ್ಷೇಪಣೆಗಳನ್ನು ಸ್ವೀಕರಿಸಿದರು.
ಈಗಾಗಲೇ ಯದರೂರು ಗ್ರಾಮದ ಸಮೀಪ ಕೈಗಾರಿಕೆಗಳಿಗಾಗಿ 1273 ಎಕರೆ ಜಮೀನು ಗುರುತಿಸಿದ್ದು, ಇದಕ್ಕೆ ಕೆಲವು ರೈತರಿಂದ ವಿರೋಧವೂ ವ್ಯಕ್ತವಾಗಿದ್ದು, ಕೆಲವು ರೈತರು ಹೆಚ್ಚಿನ ಪರಿಹಾರಕ್ಕೆ ಬೇಡಿಕೆಯನ್ನೂ ಇಟ್ಟಿದ್ದಾರೆ.
ಈ ನಡುವೆ ಕೈಗಾರಿಕೆಗಳಿಗಾಗಿ ಗುರುತಿಸಿರುವ ಜಮೀನಿಗೆ ಸಂಬಂಧಿಸಿದಂತೆ 551 ಮಂದಿ ಖಾತೆದಾರರಿದ್ದಾರೆ, ಈ ಭಾಗದಲ್ಲಿ ಕೈಗಾರಿಕೆಗಳು ಸ್ಥಾಪನೆ ಆಗಬೇಕೇ, ಬೇಡವೇ ಎಂಬದರ ಬಗ್ಗೆ ರೈತರಿಂದ ಆಕ್ಷೇಪ ಸ್ವೀಕರಿಸಲು ನೋಟೀಸ್ ನೀಡಲಾಗಿತ್ತು. ಆದರಂತೆ ಕೈಐಡಿಬಿ ವಿಶೇಷ ಭೂ ಸ್ವಾಧಿನಾಧಿಕಾರಿ ವೆಂಕಟಲಕ್ಷ್ಮಿ ಅವರ ನೇತೃತ್ವದಲ್ಲಿ ಸಭೆ ನಿಗಧಿಪಡಿಸಿದ್ದರು.
ಸೋಮವಾರ ನಿಗಧಿಪಡಿಸಿದ್ದ ಸಮಯಕ್ಕೆ ಸರಿಯಾಗಿ ಸಭೆಯನ್ನು ಏರ್ಪಡಿಸಲಾಗಿತ್ತು, ಆದರೆ ಕೆಲವರು ಕೈಗಾರಿಕೆಗಳನ್ನು ಇಲ್ಲಿ ಸ್ಥಾಪನೆ ಮಾಡುವುದು ಬೇಡ ಎಂದು ಅಧಿಕಾರಿಗಳನ್ನು ಒತ್ತಾಯಿಸಿದರು.
ಇದಕ್ಕೆ ಗ್ರಾಮದ ಖಾತೆದಾರರು ಕೆಲವರು ಇಲ್ಲಿ ಕೈಗಾರಿಕೆಗಳನ್ನು ಬೇಡ ಅಂತಿರುವವರು ಗ್ರಾಮಸ್ಥರಲ್ಲ, ಬೇರೆ ಊರುಗಳವರು, ಗ್ರಾಮಸ್ಥರ ಅಭಿಪ್ರಾಯ ಪಡೆದು ಕ್ರಮಕೈಗೊಳ್ಳಬೇಕು ಎಂದು ಮನವಿ ಮಾಡಿದರು.
ಆಗ ಮಧ್ಯ ಪ್ರವೇಶಿಸಿದ ಶಾಸಕ ಜಿ.ಕೆ. ವೆಂಕಟಶಿವಾರೆಡ್ಡಿ ಅವರು, ರೈತರ ಅಭಿಪ್ರಾಯ ಸಂಗ್ರಹಿಸಲು ಅಧಿಕಾರಿಗಳು ಬಂದಿದ್ದಾರೆ,ಸರ್ಕಾರವು ಕೈಗಾರಿಕೆಗಳಿಗೆ ಸೂಕ್ತ ಜಾಗವನ್ನು ಗುರುತಿಸಿದೆ. ತಕರಾರರು ಏನಾದರು ಇದ್ದರೆ ಸಲ್ಲಿಸಲು ಅವಕಾಶ ಇದೆ ಎಂದು ಹೇಳಿದರು.
ಗ್ರಾಮದ ಸರ್ಕಾರಿ ಶಾಲಾ ಆವರಣದಲ್ಲಿ ಏರ್ಪಡಿಸಿದ್ದ ಸಭೆಯಲ್ಲಿ ರೈತರನ್ನು ಕ್ರಮ ಸಂಖ್ಯೆಯಂತೆ ಕರೆದು ಆಕ್ಷೇಪಗಳನ್ನು ವಿಶೇಷ ಭೂಸ್ವಾಧಿನಾಧಿಕಾರಿ ವೆಂಕಟಲಕ್ಷಿ$?ಮ ಸಂಗ್ರಹಿಸಲು ಮುಂದಾದರು. ಆಗ ಇದಕ್ಕೆ ಸಿಪಿಎಂ ಮುಖಂಡ ಸೂರ್ಯ ನಾರ್ಯನಾರಾಯಣ, ಕಾಂಗ್ರೆಸ್ ಮುಖಂಡರಾದ ಕೆ.ಕೆ. ಮಂಜುನಾಥ್, ಬ್ಯಾಟಪ್ಪ, ನವೀನ್ ಕುಮಾರ್ ಜತೆಗೆ ಕೆಲ ಗ್ರಾಮಸ್ಥರು ವಿರೋಧ ವ್ಯಕ್ತಪಡಿಸಿ, ಬಹುತೇಕ ಮಂದಿಗೆ ನೋಟೀಸ್ ಕೈ ಸೇರಿಲ್ಲ. ಇನ್ನು 10 ದಿನಗಳ ಕಾಲ ಕಾಲಾವಕಾಶ ನೀಡಬೇಕು ಎಂದು ಒತ್ತಾಯಿಸಿ ಲಿಖಿತವಾಗಿ ಮನವಿ ಸಲ್ಲಿಸಿದರು.
ಮನವಿಗೆ ಸ್ಪಂದಿಸಿದ ಅಧಿಕಾರಿಗಳು, ಈ ಭಾಗದಲ್ಲಿ ಕೈಗಾರಿಕೆಗಳಿಗೆ ಜಾಗ ಗುರುತು ಮಾಡಲಾಗಿದ್ದು, ಆದರೆ ಇನ್ನು ನೋಟೀಫಿಕೇಶನ್ ಆಗಿಲ್ಲ. ಈಗಾಗಲೇ ನೋಟೀಸ್ ನೀಡಲಾಗಿರುವ ರೈತರಿಂದ ಆಕ್ಷೇಪಣೆಗಳನ್ನು ಸ್ವೀಕರಿಸಿ ಅಭಿಪ್ರಾಯನ್ನು ಸಂಗ್ರಹಿಸಲಾಗುವುದು, ಯಾರಿಗೆ ನೋಟೀಸ್ ಸಿಕ್ಕಿಲ್ಲವೊ ಅವರಿಂದ 10 ದಿನಗಳ ನಂತರ ಆಕ್ಷೇಪಣೆ ಸ್ವೀಕರಿಸಲಾಗುವುದು ಎಂದು ತಿಳಿಸಿ ಸಮಾಧಾನಪಡಿಸಿದರು.
ಕೈಗಾರಿಕೆಗಳಿಂದ ಅಭಿವೃದ್ಧಿ – ಶಾಸಕ
ಆಕ್ಷೇಪಣೆಗಳನ್ನು ಸ್ವೀಕರಿಸುವ ಸಭೆಗೂ ಮುನ್ನ ಶಾಸಕ ಜಿ.ಕೆ.ವೆಂಕಟಶಿವಾರೆಡ್ಡಿ ಮಾತ ನಾಡಿ, ಕೈಗಾರಿಕೆಗಳ ಸ್ಥಾಪನೆಯಿಂದ ಸ್ಥಳಿಯ ಅಭಿವೃದ್ಧಿ ಜತೆಗೆ, ನಿರುದ್ಯೋಗಿ ಯುವಕರಿಗೆ ಕೆಲಸ ದೊರೆಯುತ್ತದೆ. ಮುಂದಾಲೋಚನೆ ಇಟ್ಟುಕೊಂಡು ಕೈಗಾರಿಕೆಗಳು ಸ್ಥಾಪನೆ ಆಗುತ್ತವೆ, ಇದೀಗ ಅಧಿಕಾರಿಗಳು ಅವಗಾಹನೆಗೆ ಬಂದಿದ್ದಾರೆ. ನಿಮ್ಮ ಆಕ್ಷೇಪಣೆ, ಅಭಿಪ್ರಾಯ ತಿಳಿಸಿ, ಸರ್ಕಾರದಿಂದಲೂ ಭೂಮಿ, ಬೆಳೆಗಳಿಗೆ ಪರಿಹಾರ ನೀಡುತ್ತಾರೆ. ಯಾರಿಗೂ ಅನ್ಯಾಯ ವಾಗಲು ಬಿಡುವುದಿಲ್ಲ ಎಂದು ಹೇಳಿದರು.
ಗ್ರಾಮಸ್ಥರಿಂದ ಅಡ್ಡಿಗೆ ಯತ್ನ
ಅಧಿಕಾರಿಗಳು ರೈತರಿಂದ ಆಕ್ಷೇಪಣೆಗಳನ್ನು ಸ್ವೀಕರಿಸುತ್ತಿದ್ದ ಸಂದರ್ಭದಲ್ಲಿ ಹೊರಗಿನ ಕೆಲವ್ಯಕ್ತಿಗಳು ವಿನಾಕಾರಣ ಅಡ್ಡಿಪಡಿಸಲು ಯತ್ನಿಸಿ, ಚೇರು, ಟೇಬಲ್ಗಳನ್ನು ಎಳೆದಾಡಿದರು. ಇದಕ್ಕೆ ಗರಂ ಆದ ಯದರೂರು ಗ್ರಾಮದ ಕೆಲ ಯುವರು, ನಮ್ಮೂರಿನ ಸಮಸ್ಯೆಯಿದು, ನಾವು ಬಗೆಹರಿಸಿಕೊಳ್ಳುತ್ತೆವೆ. ಹೊರಗಿನ ವ್ಯಕ್ತಿಗಳಿಗೇನು ಕೆಲಸ ಇಲ್ಲಿ, ನಮಗೆ ಕೈಗಾರಿಕೆಗಳು ಬೇಕು, ಇದರಿಂದ ನಮ್ಮ ವಿದ್ಯಾಹರ್ತೆಯನ್ನು ಗುರುತಿಸಿ ಕೆಲಸ ಕೊಡುತ್ತಾರೆ ಎಂದು ತಿಳಿಸಿದರು.
ಸ್ಥಳದಲ್ಲಿ ಜಮಾಯಿಸಿದ್ದ ಎರಡೂ ಗುಂಪುಗಳ ನಡುವೆ ವಾಗ್ವಾದ ನಡೆಯಿತು, ಎರಡೂ ಕಡೆಯವರು ಪರ ವಿರೋಧ ಘೋಷಣೆಗಳನ್ನು ಕೂಗಿದರು. ಪೊಲೀಸರು ಮಧ್ಯೆ ಪ್ರವೇಶಿಸಿ ಪರಿಸ್ಥಿತಿಯನ್ನು ಹತೋಟಿಗೆ ತಂದರು.
ಗ್ರಾಮದಲ್ಲಿ ಸುಮಾರು 300ಕ್ಕೂ ಹೆಚ್ಚು ವಿದ್ಯಾವಂತ ಯುವಕರಿದ್ದಾರೆ. ಕೆಲಸಗಳಿಗಾಗಿ ಬೇರೆ ಊರುಗಳಿಗೆ ಹೋಗುವ ಪರಿಸ್ಥಿತಿಯಲಿಲ್ಲ. ಕೆಲವರು ಬೇಕಾಗಿಯೇ ಅಡ್ಡಿ ಪಡಿಸುತ್ತಿದ್ದಾರೆ. ಅವರ ಒತ್ತಡಕ್ಕೆ ಮಣಿದು ಕ್ರಮಕೈಗೊಳ್ಳಬಾರದು. ನಮ್ಮ ಅಭಿಪ್ರಾಯಪಡೆದು ಕೈಗಾರಿಕೆಗಳನ್ನು ಸ್ಥಾಪನೆ ಮಾಡಬೇಕು ಎಂದು ಯದರೂರು ಯುವಕ ಮನೋಹರ್ ಒತ್ತಾಯಿಸಿದರು.
ಕೆಐಡಿಬಿ ವಿಶೇಷ ಭೂಸ್ವಾಧಿನಾಧಿಕಾರಿ ವೆಂಕಟಲಕ್ಷ್ಮಿ ಮಾತನಾಡಿ, ಸಮುದಾಯಕ್ಕೆ ವ್ಯವಸಾಯ ಎಷ್ಟು ಮುಖ್ಯವೋ, ಕೈಗಾರಿಕೆಗಳು ಸಹ ಅಷ್ಟೇ ಮುಖ್ಯ. ಈ ಭಾಗದ ಶಾಸಕರು ಕೈಗಾರಿಕೆಗಳ ವಿಚಾರದಲ್ಲಿ ಬಹಷ್ಟು ಅಸಕ್ತಿ ತೋರಿದ್ದು, ಪ್ರತಿ ಹಂತದಲ್ಲೂ ಒತ್ತಡ ಹೇರುತ್ತಿದ್ದಾರೆ. ಕಾನೂನು ಪ್ರಕಾರ ಕ್ರಮಕೈ ಗೊಳ್ಳಲಾಗಿದ್ದು, ಅಭಿಪ್ರಾಯ ಸಂಗ್ರಹಿಸಿ ಸರ್ಕಾರದ ಗಮನಕ್ಕೆ ತರಲಾಗುವುದು ಎಂದು ಹೇಳಿದರು.