ಕೋಲಾರದ ನಮ್ಮಸುದ್ದಿ ಡಾಟ್ ನೆಟ್ ವೆಬ್‍ಸೈಟ್‍ಗೆ ವಿದ್ಯುಕ್ತ ಚಾಲನೆ
ಮಾದ್ಯಮಗಳು ಸಮಾಜಮುಖಿ ಜವಾಬ್ದಾರಿಯಿಂದ ಜಾರಿಕೊಳ್ಳಬಾರದು-ಡಾ.ಡೊಮಿನಿಕ್

ಕೋಲಾರ:- ಮಾಧ್ಯಮಗಳು ಎಷ್ಟೇ ಆಧುನಿಕಗೊಂಡರೂ, ಸಮಾಜ ಪರಿವರ್ತನೆ ಹಾಗೂ ಸಮಾಜ ಸುಧಾರಣೆ ಜವಾಬ್ದಾರಿಗಳಿಂದ ಜಾರಿಕೊಳ್ಳಬಾರದು ಎಂದು ಬೆಂಗಳೂರು ಉತ್ತರ ವಿಶ್ವವಿದ್ಯಾಲಯದ ಕುಲ ಸಚಿವ ಪ್ರೊ .ಡಾ.ಡಿ.ಡೊಮಿನಿಕ್ ತಿಳಿಸಿದರು.
ನಗರದ ಪತ್ರಕರ್ತರ ಭವನದಲ್ಲಿ ಮಂಗಳವಾರ ನಡೆದ ಕಾರ್ಯಕ್ರಮದಲ್ಲಿ ನಮ್ಮ ಸುದ್ದಿ ಡಾಟ್ ನೆಟ್ ಸುದ್ದಿ ವೆಬ್ ಸೈಟ್ ಉದ್ಘಾಟಿಸಿ, ಅಕ್ಷರದವ್ವ ಸಾವಿತ್ರಿಬಾಯಿ ಪುಲೆ ರವರ ಜನ್ಮದಿನಾಚರಣೆ ಪ್ರಯುಕ್ತ ಐವರು ಸಾಧಕ ಮಹಿಳೆಯರನ್ನು ಸನ್ಮಾನಿಸಿ ಮಾತನಾಡಿದ ಅವರು,
ಕಾರ್ಪೊರೇಟ್ ಜಗತ್ತಿನಲ್ಲಿ ಯಾವುದೇ ನವ ಕಾರ್ಯಗಳನ್ನು ಮಾಡುವಾಗಲು ಹಣದ ಮೌಲ್ಯವೇ ಪ್ರಧಾನವಾಗಿ ಬಿಂಬಿತವಾಗುತ್ತದೆ. ಡಾಲರ್ ಎದುರು ರೂಪಾಯಿಯ ಅಪಮೌಲ್ಯ ಹೆಚ್ಚಾದಂತೆ ಜನರ ಮೌಲ್ಯವು ಕಡಿಮೆಯಾಗುತ್ತದೆ ಎಂದ ಅವರು, ಇಂತ ಪರಿಸ್ಥಿತಿಯಲ್ಲಿಯೂ ಮಾದ್ಯಮಗಳು ಅದರಲ್ಲೂ ನವ ಮಾಧ್ಯಮಗಳು ಜನಸಾಮಾನ್ಯರ ಪರವಾದ ನ್ಯಾಯ ಸಮ್ಮತವಾದ ಸುದ್ದಿಯನ್ನು ಬಿತ್ತರಿಸಬೇಕು ಎಂದು ಹೇಳಿದರು.
ತಂತ್ರಜ್ಞಾನ ಬೆಳೆಯುತ್ತಿದ್ದು ಗೂಗಲ್, ಫೇಸ್ಬುಕ್ ಟ್ವಿಟ್ಟರ್, ಮೈಕ್ರೋಸಾಫ್ಟ್ ಹಾಗೂ ಇನ್ಸ್ಟಾಗ್ರಾಮ್ ಮೂಲಕ ಕ್ಷಣಮಾತ್ರದಲ್ಲಿ ಜಗತ್ತಿನಲ್ಲೇ ಹೆಸರುವಾಸಿಯಾಗಲು ಸಾಧ್ಯವಾಗಿದೆ. ಆದರೆ ಅದನ್ನು ಸಮಾಜದ ಒಳತಿಗಾಗಿ ಇವುಗಳನ್ನು ಬಳಸಿಕೊಳ್ಳುವುದು ಎಲ್ಲರ ಕರ್ತವ್ಯವಾಗಬೇಕೆಂದರು.
ಸಾವಿತ್ರಿಬಾಯಿ ಪುಲೆ ಅವರ ಆದರ್ಶವನ್ನು ಮೈಗೂಡಿಸಿಕೊಂಡು ಪ್ರತಿ ಮಹಿಳೆಯು ವಿದ್ಯಾವಂತರಾಗಿ ನಿಮ್ಮ ಸಮಾಜದಲ್ಲಿರುವವರನ್ನು ವಿದ್ಯಾವಂತರನ್ನಾಗಿ ಮಾಡುವ ಮೂಲಕ ಸ್ಪರ್ಧಾತ್ಮಕ ಯುಗದಲ್ಲಿ ಜೀವನ ನಡೆಸಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.
ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಬಿ.ವಿ.ಗೋಪಿನಾಥ್ ಅಧ್ಯಕ್ಷತೆವಹಿಸಿ ಮಾತನಾಡಿ, ಸಮ ಸಮಾಜ ನಿರ್ಮಿಸಲು ಶ್ರಮಿಸಬೇಕಾಗಿದ್ದ ಪತ್ರಿಕೋದ್ಯಮವು ಈಗ ಜಾಹೀರಾತುದಾರರ ಸಂತೋಷಪಡಿಸುವ ಸುದ್ದಿಗಳನ್ನು ಪ್ರಸಾರ ಮಾಡಲು ಸೀಮಿತವಾಗುತ್ತಿದೆ, ಜನಪರ ಮಾಧ್ಯಮವು ನಶಿಸಿ, ಧನಪರ ಮಾಧ್ಯಮವಾಗಿ ಮಾರ್ಪಡುತ್ತಿದೆ, ಬರೆಯುವ ಪತ್ರಕರ್ತರಿಗಿಂತಲೂ ಬರೆಸುವ ಪತ್ರಕರ್ತರು ಹೆಚ್ಚಾಗುತ್ತಿದ್ದಾರೆ, ಇದಕ್ಕೆ ಕಡಿವಾಣ ಹಾಕಿ ಸಮಾಜಮುಖಿ ಸುದ್ದಿಗಳನ್ನು ನೀಡುವ ಕಾರ್ಯ ಮಾಡಬೇಕಾಗಿದೆ ಎಂದು ತಿಳಿಸಿದರು.
ಪತ್ರಕರ್ತರ ಸಹಕಾರ ಸಂಘದ ಅಧ್ಯಕ್ಷ ಕೆ.ಎಸ್. ಗಣೇಶ್ ಮಾತನಾಡಿ, ಮಾದ್ಯಮಗಳು ಮಾಲೀಕರ ಮೂಗಿನ ನೇರಕ್ಕೆ, ಮಾಲೀಕರು ಪ್ರತಿನಿ„ಸುವ ಧರ್ಮ, ರಾಜಕೀಯ ಪಕ್ಷ ಮತ್ತು ಅವರು ಬೆಂಬಲಿಸುವ ಸರಕಾರಗಳಿಗೆ ನಿಷ್ಠೆ ತೋರುತ್ತಿದ್ದು, ಜನಸಾಮಾನ್ಯರು ಸಾಮಾಜಿಕ ಜಾಲತಾಣಗಳನ್ನು ತಮ್ಮ ಅಭಿಪ್ರಾಯ ಹಂಚಲು ಬಳಸಿಕೊಳ್ಳುತ್ತಿದ್ದಾರೆ, ಸಾಮಾಜಿಕ ಜಾಲ ತಾಣಗಳಲ್ಲಿಯೂ ನಂಬಿಕೆ ವಿಶ್ವಾಸಾರ್ಹತೆ ಕಡಿಮೆಯಾಗುತ್ತಿದ್ದು, ಜನಪರ ಮಾದ್ಯಮ ರೂಪಿಸುವುದು ಎಲ್ಲರ ಜವಾಬ್ದಾರಿಯಾಗಬೇಕಿದೆ ಎಂದರು.
ಈ ನಿಟ್ಟಿನಲ್ಲಿ ಈದಿನ ಡಾಟ್ ಕಾಮ್ ಕುವೆಂಪು ಜನ್ಮದಿನಾಚರಣೆಯಂದು ಆರಂಭವಾಗಿದ್ದು, ಕರ್ನಾಟಕದಲ್ಲಿ ಜನಪರಮಾಧ್ಯಮವನ್ನು ಜನರಿಂದಲೇ ರೂಪಿಸುವ ಮಾದರಿಯ ಪ್ರಬಲ ಮಾದ್ಯಮವಾಗಿ ರೂಪುಗೊಳ್ಳುತ್ತಿದ್ದು, ಜನಪರ ಹೋರಾಟಗಾರರು, ಸಾರ್ವಜನಿಕರು, ಜನಸಾಮಾನ್ಯರು, ವಿದ್ಯಾರ್ಥಿ ಯುವಕ ಯುವತಿಯರು ಈ ಕ್ರಾಂತಿಕಾರಿ ಯೋಜನೆಯ ಭಾಗವಾಗಬೇಕೆಂದು ಮನವಿ ಮಾಡಿಕೊಂಡರು.
ಬೆಂಗಳೂರು ಉತ್ತರ ವಿವಿ ಪ್ರಾಧ್ಯಾಪಕಿ ಡಾ.ನೇತ್ರಾವತಿ ಸಾವಿತ್ರಿ ಬಾಯಿಪುಲೆ ಕುರಿತಂತೆ ಉಪನ್ಯಾಸ ನೀಡಿ, ಸಾವಿತ್ರಿಬಾಯಿ ಪುಲೆ ಸಾಮಾಜಿಕ ಕೌಟುಂಬಿಕವಾಗಿ ಸಾಕಷ್ಟು ಸಮಸ್ಯೆ ಸವಾಲುಗಳನ್ನು ಎದುರಿಸಿದರೂ ಹೆಣ್ಣು ಮಕ್ಕಳಿಗೆ ಶಿಕ್ಷಣ ಕಲಿಸಬೇಕೆಂಬ ವಿಚಾರದಿಂದ ಹಿಂದೆ ಸರಿಯಲಿಲ್ಲ, ಜೀವಮಾನವಿಡಿ ತಮ್ಮ ಪತಿ ಜ್ಯೋತಿ ಬಾಯಿ ಪುಲೆ ಸಹಕಾರದಿಂದ ಹೆಣ್ಣು ಮಕ್ಕಳ ಶಿಕ್ಷಣ ಮತ್ತು ಹೆಣ್ಣು ಮಕ್ಕಳ ಮೇಲೆ ಹೇರಿದ್ದ ಅನಿಷ್ಠ ಪದ್ಧತಿಗಳ ನಿವಾರಣೆಗೆ ಶ್ರಮಿಸಿದರೆಂದು ವಿವರಿಸಿದರು.
ಮಹಿಳಾ ಸಾಧಕರಾದ ಸಮಾಜ ಸೇವಕಿ ವಿನುತ ಕೃಷ್ಣ, ನಿರೂಪಕರಾದ ರೇಣುಕಾ, ಮಂಜುಳ ಕೊಂಡರಾಜನಹಳ್ಳಿ, ವಕೀಲರಾದ ಶಹತಾಜ್ ನಸೀಮ್ ಹಾಗೂ ಮಹಿಳಾ ರೈತ ಮುಖಂಡರಾದ ನಳಿನಿಗೌಡರನ್ನು ಸಾವಿತ್ರಿ ಬಾಯಿಪುಲೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ವಿವಿಧ ಸಂಘಟನೆ ಮುಖಂಡರು, ಹಿರಿಯ ಪತ್ರಕರ್ತರು ಸಾರ್ವಜನಿಕರು ಉಪಸ್ಥಿತರಿದ್ದರು.
ಮತ್ತಿಕುಂಟೆ ಕೃಷ್ಣರಿಂದ ಕುವೆಂಪು ಅನಿಕೇತನ ಆಶಯಗೀತೆ ಗಾಯನ, ಕೆ.ರಾಮಮೂರ್ತಿ ನಿರೂಪಿಸಿ, ಸಿ.ವಿ.ನಾಗರಾಜ್ ಸ್ವಾಗತಿಸಿದರು.