ಚುನಾವಣಾ ವರ್ಷ-ಘೋಷಣೆಗಳಿಂದ ಸಾಲ ವಸೂಲಾತಿ ಮೇಲೆ ಪರಿಣಾಮ ಸಾಧ್ಯತೆ
ಡಿಸಿಸಿ ಬ್ಯಾಂಕ್ ಸಿಬ್ಬಂದಿಗಿದು ಅಗ್ನಿಪರೀಕ್ಷೆಯ ಕಾಲ-ಬ್ಯಾಲಹಳ್ಳಿ ಗೋವಿಂದಗೌಡ

ಕೋಲಾರ:- ಚುನಾವಣಾ ವರ್ಷವಾಗಿದ್ದು, ಬ್ಯಾಂಕ್ ಸಿಬ್ಬಂದಿಗೆ ಅಗ್ನಿಪರೀಕ್ಷೆಯ ಕಾಲ, ರಾಜಕೀಯ ಪಕ್ಷಗಳ ಘೋಷಣೆಗಳಿಂದಾಗಿ ಸಾಲ ವಸೂಲಾತಿ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದ್ದು, ಎಚ್ಚರಿಕೆಯಿಂದ ಬ್ಯಾಂಕ್ ಉಳಿಸುವ ಕೆಲಸ ಮಾಡಿ ಎಂದು ಕೋಲಾರ,ಚಿಕ್ಕಬಳ್ಳಾಪುರ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡ ಬ್ಯಾಂಕ್ ನೌಕರರು, ಅಧಿಕಾರಿಗಳಿಗೆ ತಾಕೀತು ಮಾಡಿದರು.
ನಗರದ ಡಿಸಿಸಿ ಬ್ಯಾಂಕ್ ಸಭಾಂಗಣದಲ್ಲಿ ಶನಿವಾರ ಜಿಲ್ಲೆಯ ಡಿಸಿಸಿ ಬ್ಯಾಂಕಿನ ಎಲ್ಲಾ ಶಾಖೆಗಳ ಅಧಿಕಾರಿ,ಸಿಬ್ಬಂದಿಗಳ ಸಭೆಯಲ್ಲಿ ಪ್ರಗತಿ ಪರಿಶೀಲನೆ ನಡೆಸಿ ಅವರು ಮಾತನಾಡುತ್ತಿದ್ದರು.
ಚುನಾವಣಾ ವರ್ಷವಾಗಿದ್ದು, ಸಾಲ ಮನ್ನಾ, ಬಡ್ಡಿಮನ್ನಾದಂತಹ ಘೋಷಣೆಗಳು ಈಗಾಗಲೇ ಮೊಳಗುತ್ತಿವೆ, ಇದು ಬ್ಯಾಂಕಿನ ಸಾಲ ವಸೂಲಾತಿಯ ಮೇಲೆ ಪರಿಣಾಮ ಬೀರಲಿದೆ, ಬ್ಯಾಂಕ್ ಸಿಬ್ಬಂದಿ ಸಾಲ ಪಡೆದವರ ಮನೆಗಳಿಗೆ ತೆರಳಿ ಮನವೊಲಿಸಿ ಸಾಲ ವಸೂಲಿ ಮಾಡಿ ಎಂದು ಸೂಚಿಸಿದರು.
ಮುಂದೆ ರಾಜಕೀಯ ಪಕ್ಷಗಳು ಅಧಿಕಾರಕ್ಕೆ ಬಂದು ಸರ್ಕಾರ ಜಾರಿಗೆ ತರುವ ಸಾಲ ಮನ್ನಾ,ಬಡ್ಡಿಮನ್ನಾದಂತಹ ಯೋಜನೆಗಳ ಜಾರಿಗೆ ಬ್ಯಾಂಕ್ ಸದಾ ಸಿದ್ದವಿದೆ ಆದರೆ ಚುನಾವಣಾ ಪೂರ್ವ ಭರವಸೆಗಳನ್ನು ನಂಬಿ ಸಾಲ ಪಡೆದ ಸ್ತ್ರೀಶಕ್ತಿಸಂಘಗಳು, ರೈತರು ಸಾಲ ಮರುಪಾವತಿಸದಿದ್ದರೆ ಬಡ್ಡಿಯ ಸುಳಿಗೆ ಸಿಲುಕುತ್ತಾರೆ ಎಂಬ ಅಂಶವನ್ನು ಗಮನಕ್ಕೆ ತನ್ನಿ ಎಂದು ಕಿವಿಮಾತು ಹೇಳಿದರು.
ಸರ್ಕಾರದ ಸೌಲಭ್ಯಗಳನ್ನು ಜಾರಿಯಾದರೆ ಒದಗಿಸಲು, ಅದರ ಪ್ರಯೋಜನ ರೈತರು,ಮಹಿಳೆಯರಿಗೆ ತಲುಪಿಸಲು ಬ್ಯಾಂಕ್ ಬದ್ದತೆ ಹೊಂದಿದೆ ಎಂದ ಅವರು, ಗ್ರಾಹಕರು ಈಗ ಭರವಸೆಗಳನ್ನು ನಂಬಿ ಸಂಕಷ್ಟಕ್ಕೆ ಸಿಲುಕುವ ಸಾಧ್ಯತೆಯೂ ಇದೆ, ಇದರಿಂದ ಬ್ಯಾಂಕಿನ ಆರ್ಥಿಕ ಪರಿಸ್ಥಿತಿಯ ಮೇಲೆ ಪರಿಣಾಮವೂ ಬೀರುತ್ತದೆ ಎಂದು ಎಚ್ಚರಿಸಿದರು.
ಬ್ಯಾಂಕಿನ ಎನ್‍ಪಿಎ ಕಡಿಮೆಯಾಗಬೇಕು, ಸಾಲದ ಬಾಕಿ ಕಂತುಗಳು ಸಕಾಲಕ್ಕೆ ಪಾವತಿಸದವರ ಮನವೊಲಿಸಿ, ಅಗತ್ಯವಾದರೆ ನೋಟೀಸ್ ನೀಡಿ, ಸಾಲ ವಸೂಲಾತಿ ಮೂಲಕ ಬ್ಯಾಂಕಿನ ಆರ್ಥಿಕ ಶಕ್ತಿ ಕುಂದದಂತೆ ನೋಡಿಕೊಳ್ಳಿ, ಇಲ್ಲವೇ ನೀವೇ ಕಷ್ಟಕ್ಕೆ ಸಿಲುಕುತ್ತೀರಿ ಎಂದು ಎಚ್ಚರಿಸಿದರು.
ಡಿ.31ಕ್ಕೆ ರೈತರಿಗೆ ನೀಡಿರುವ ಬೆಳೆಸಾಲ, ಮಹಿಳಾ ಸಂಘಗಳಿಗೆ ನೀಡಿರುವ ಬಡ್ಡಿರಹಿತ ಸಾಲ, ಮಧ್ಯಮಾವಧಿ, ಚಿನ್ನದ ಮೇಲಿನ ಸಾಲ ಯಾವುದೇ ಇರಲಿ ಕಂತು ಬಾಕಿ ಇದ್ದರೆ ಕ್ಷಮಿಸುವುದಿಲ್ಲ, ಬ್ಯಾಂಕಿನಲ್ಲಿ ಕುಳಿತು ಏನು ಮಾಡುತ್ತೀರಿ, ವಸೂಲಾತಿಗೆ ಕ್ರಮವಹಿಸಿ ಎಂದರು.


500 ಕೋಟಿರೂ ಠೇವಣಿ ಗುರಿ


ಡಿಸಿಸಿ ಬ್ಯಾಂಕ್ ಎಲ್ಲಾ ರೀತಿಯ ಆರ್ಥಿಕವ್ಯವಹಾರಗಳು, ಸಾಲ ವಿತರಣೆ, ವಸೂಲಾತಿ, ಕಂಪ್ಯೂಟರೀಕರಣ ಎಲ್ಲಾ ವಿಷಯಗಳಲ್ಲೂ ದೇಶಕ್ಕೆ ನಂ.1 ಆಗಿದೆ ಆದರೆ ಠೇವಣಿ ಸಂಗ್ರಹದಲ್ಲಿ ನಿರೀಕ್ಷಿತ ಗುರಿ ತಲುಪಲು ಸಾಧ್ಯವಾಗಿಲ್ಲ ಎಂದು ವಿಷಾದಿಸಿದ ಅವರು,ಬ್ಯಾಂಕ್ ಸಿಬ್ಬಂದಿ ಶ್ರದ್ಧೆ ವಹಿಸಿ, ಈ ಸಾಲಿನಲ್ಲಿ 500 ಕೋಟಿ ಠೇವಣಿ ಸಂಗ್ರಹದ ಗುರಿ ಸಾಧನೆಗೆ ಕೆಲಸ ಮಾಡಿ ಎಂದು ಕಿವಿ ಮಾತು ಹೇಳಿದರು.
ಜಿಲ್ಲೆಯ ಎಲ್ಲಾ ಕೃಷಿ ಪತ್ತಿನ ಸಹಕಾರ ಸಂಘಗಳು ಈಗಾಗಲೇ ಗಣಕೀಕರಣಕ್ಕೆ ಒಳಪಟ್ಟಿವೆ, ಆದರೆ ಆಯಾ ದಿನದ ಲೆಕ್ಕ,ವಹಿವಾಟು ಆಯಾ ದಿನವೇ ಅಪ್‍ಡೇಟ್ ಆಗಬೇಕು, ಆನ್‍ಲೈನ್‍ನಲ್ಲಿ ಮಾಹಿತಿ ಸಿಗಬೇಕು. ಗಣಕೀಕೃತ ಲೆಕ್ಕಪರಿಶೋಧನೆಗೆ ಸುಲಭವಾಗಬೇಕು ಎಂದು ತಾಕೀತು ಮಾಡಿದರು. ಗಣಕೀಕರಣದಲ್ಲಿ ಯಾವುದಾದರೋ ದೋಷವಿದ್ದರೆ ವಿ-ಸಾಫ್ಟ್ ಸಿಬ್ಬಂದಿ ಗಮನಕ್ಕೆ ತನ್ನಿ ಎಂದು ತಿಳಿಸಿದರು.
ಸಾಲಕ್ಕೆ ಮಾತ್ರ ಬ್ಯಾಂಕಿಗೆ ಬರುವವರಿಗೆ ಸೌಲಭ್ಯ ನೀಡದಿರಿ, ಡಿಸಿಸಿ ಬ್ಯಾಂಕಿನಲ್ಲೇ ವಹಿವಾಟು ನಡೆಸಲು ಸೂಚಿಸಿ ಎಂದ ಅವರು, ಬ್ಯಾಂಕ್‍ಸಿಬ್ಬಂದಿ ಜವಾಬ್ದಾರಿಯಿಂದ ಕೆಲಸ ಮಾಡಿ, ಠೇವಣಿ ಹೆಚ್ಚಿಸಿ ಎಂದು ತಿಳಿಸಿ, ಜಿಲ್ಲೆಯ ಪ್ಯಾಕ್ಸ್‍ಗಳ ಕಾರ್ಯದರ್ಶಿಗಳು ತಲಾ 50 ಲಕ್ಷ ಠೇವಣಿ ಸಂಗ್ರಹಿಸಿಕೊಡಲು ಮನವೊಲಿಸಿ ಎಂದು ಸೂಚಿಸಿದರು.
ಇದೇ ಸಂದರ್ಭದಲ್ಲಿ ಸಾಲ ವಸೂಲಾತಿಯಲ್ಲಿ ನಿರೀಕ್ಷಿತ ರೀತಿ ಕೆಲಸ ಮಾಡದ ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡ ಅವರು, ಬ್ಯಾಂಕ್ ನಿಮಗೆ ಅನ್ನನೀಡುತ್ತಿದೆ, ನಿಮ್ಮ ಕುಟಂಬದ ಆರೋಗ್ಯ ರಕ್ಷಣೆಗೆ ವಿಮಾ ಯೋಜನೆ ನೀಡಿದ್ದೇವೆ, ಜವಾಬ್ದಾರಿ ಅರಿತು ಕೆಲಸ ಮಾಡಿ ಎಂದರು. ಈ ಸಂದರ್ಭದಲ್ಲಿ ಎಲ್ಲಾ ಶಾಖೆಗಳ ಅಧಿಕಾರಿಗಳು, ತಮಗೆ ನೀಡಿರುವ ಠೇವಣಿ ಸಂಗ್ರಹ, ಸಾಲ ವಸೂಲಾತಿಯ ಗುರಿ ಸಾಧನೆಯ ಭರವಸೆ ನೀಡಿದರು.
ಸಭೆಯಲ್ಲಿ ಬ್ಯಾಂಕಿನ ಎಜಿಎಂ ಶಿವಕುಮಾರ್, ಹುಸೇನ್ ದೊಡ್ಡಮುನಿ, ಬೈರೇಗೌಡ,ಬಾಲಾಜಿ, ಅರುಣ್‍ಕುಮಾರ್, ಹ್ಯಾರೀಸ್,ಪದ್ಮಮ್ಮ, ತಿಮ್ಮಯ್ಯ, ವಿ-ಸಾಫ್ಟ್ ಸಿಬ್ಬಂದಿ ವಿಶ್ವಪ್ರಸಾದ್, ಸಿರೀಶ್, ಫರ್ನಾಂಡೀಸ್ ಮತ್ತಿತರರಿದ್ದರು.