ಡಾ.ವೈಎಎನ್ ಹಾಗೂ ಡಿಸಿ ನೇತೃತ್ವದಲ್ಲಿ ನೌಕರ,ಶಿಕ್ಷಕ ಮುಖಂಡರ ಸಭೆ ಗ್ರಾಮೀಣ ಪ್ರದೇಶದಲ್ಲಿ ಲಸಿಕೆ ಅಭಿಯಾನ ಯಶಸ್ಸಿಗೆ ಸಹಕರಿಸಲು ಕರೆ

ವರದಿ: ಶಬ್ಬೀರ್ ಅಹಮ್ಮದ್, ಶ್ರೀನಿವಾಸಪುರ

ಕೋಲಾರ:- ಲಸಿಕೆ ನೀಡಿಕೆಯಲ್ಲಿ ಜಿಲ್ಲೆ ರಾಜ್ಯಕ್ಕೆ ಮೊದಲಾಗಲು ಶಿಕ್ಷಕರ ಸಹಕಾರ ಅಗತ್ಯ, ಗ್ರಾಮಗಳಲ್ಲಿ ಅಭಿಯಾನ ನಡೆಸಿ,ಜನತೆಯಲ್ಲಿ ಜಾಗೃತಿ ಮೂಡಿಸಲು ಸಹಕರಿಸಿ ಎಂದು ವಿವಿಧ ಶಿಕ್ಷಕ,ನೌಕರರ ಸಂಘಟನೆಗಳ ಮುಖಂಡರಿಗೆ ವಿಧಾನಪರಿಷತ್ ಶಾಸಕ ಡಾ.ವೈ.ಎ.ನಾರಾಯಣಸ್ವಾಮಿ ಹಾಗೂ ಜಿಲ್ಲಾಧಿಕಾರಿ ಡಾ.ಆರ್.ಸೆಲ್ವಮಣಿ ಕರೆ ನಿಡಿದರು.
ಜಿಲ್ಲಾಡಳಿತ ಭವನದಲ್ಲಿ ವಿಧಾನಪರಿಷತ್ ಶಾಸಕ ಡಾ.ವೈ.ಎ.ನಾರಾಯಣಸ್ವಾಮಿ ನೇತೃತ್ವದಲ್ಲಿ ಆಯೋಜಿಸಿದ್ದ ವಿವಿಧ ಶಿಕ್ಷಕ,ನೌಕರರ ಸಂಘಟನೆಗಳ ಸಭೆಯಲ್ಲಿ ಅವರು ಮಾತನಾಡುತ್ತಿದ್ದರು.
ಡಿಸಿ ಡಾ.ಸೆಲ್ವಮಣಿ ಮಾತನಾಡಿ, ಕೋವಿಡ್ ತಡೆಗೆ ಲಸಿಕೆಯೊಂದೇ ಅಸ್ತ್ರವಾಗಿದೆ, ಜಿಲ್ಲೆಯಲ್ಲಿ ಸುಮಾರು 17 ಲಕ್ಷ ಜನಸಂಖ್ಯೆ ಇದ್ದು, ಇದರಲ್ಲಿ 18 ನಂತರದ ವಯಸ್ಸಿನವರು ಸುಮಾರು 10-12 ಲಕ್ಷ ಇದ್ದಾರೆ, ಇವರೆಲ್ಲರಿಗೂ ಲಸಿಕೆ ನೀಡುವ ಮೂಲಕ ಕೋವಿಡ್ ತಡೆಯಬಹುದಾಗಿದೆ ಎಂದರು.
ಅಮೇರಿಕಾ,ಇಸ್ರೇಲ್ ದೇಶಗಳಲ್ಲಿ ಲಸಿಕೆ ಹಾಕಿಸಿಕೊಂಡವರಿಗೆ ಮಾಸ್ಕ್ ಅಗತ್ಯವಿಲ್ಲ ಎಂಬ ಘೋಷಣೆ ಕುರಿತು ಪ್ರಸ್ತಾಪಿಸಿದ ಅವರು, ಲಸಿಕೆ ಹಾಕಿಸಿಕೊಂಡರೆ ಜೀವ ಹಾನಿ ಇಲ್ಲ ಎಂಬುದನ್ನು ಮನಗಂಡು ಪ್ರತಿಯೊಬ್ಬರೂ ಲಸಿಕೆ ಹಾಕಿಸಿಕೊಳ್ಳುವಂತೆ ಮಾಡಲು ಶಿಕ್ಷಕರು ಸಹಕಾರ ನೀಡಿ ಎಂದರು.
ಮುಳಬಾಗಿಲು,ಶ್ರೀನಿವಾಸಪುರ ಲಸಿಕೆ ಹಾಕಿಸಿಕೊಂಡಿರುವುದರಲ್ಲಿ ಮೊದಲ ಸ್ಥಾನಗಳಲ್ಲಿದ್ದು, ಕೋಲಾರ,ಬಂಗಾರಪೇಟೆ, ಕೆಜಿಎಫ್‍ಗಳಲ್ಲಿ ಲಸಿಕೆ ಅಭಿಯಾನಕ್ಕೆ ಹಿನ್ನಡೆಯಾಗಿದೆ ಎಂದರು.
ಶಿಕ್ಷಕರು ತಮ್ಮ ಗ್ರಾಮಗಳಲ್ಲಿ ಕನಿಷ್ಟ 50 ಮಂದಿಯ ಪಟ್ಟಿ ಮಾಡಿ ಲಸಿಕೆ ಹಾಕಿಸಲು ಮುಂದೆ ಬಂದರೆ ಅಲ್ಲಿಯೇ ಬಂದು ಶಿಬಿರ ನಡೆಸಿ ಲಸಿಕೆ ಹಾಕಿಸಲು ಸೂಚಿಸುವುದಾಗಿ ಭರವಸೆ ನೀಡಿ,ಸಾಮಾಜಿಕ ಜಾಲತಾಣದಲ್ಲಿ ಲಸಿಕೆ ಕುರಿತು ಮಾಡುತ್ತಿರುವ ಅಪಪ್ರಚಾರಕ್ಕೆ ಕಿವಿಗೊಡದಿರಿ ಎಂದರು
.


ಬಿಇಒಗಳ ಮೂಲಕ ಲಸಿಕೆ ಅಭಿಯಾನ


ವಿಧಾನಪರಿಷತ್ ಶಾಸಕ ಡಾ.ವೈ.ಎ.ನಾರಾಯಣಸ್ವಾಮಿ ಮಾತನಾಡಿ, ಬಿಇಒಗಳ ಸಭೆ ಕರೆದು ಎಲ್ಲೆಲ್ಲಿ ಲಸಿಕೆ ಶಿಬಿರ ನಡೆಸಲು ಸಾಧ್ಯ ಎಂಬುದನ್ನು ಪಟ್ಟಿ ಮಾಡಿ ಶಿಕ್ಷಕರ ಮೂಲಕ ಈ ಕಾರ್ಯ ಯಶಸ್ವಿಗೊಳಿಸಿ, ಲಸಿಕೆ ಅಭಿಯಾಣದಲ್ಲಿ ಕೋಲಾರ ಪ್ರಥಮವಾಗಲು ಶ್ರಮಿಸಿ ಎಂದರು. ಶಿಕ್ಷಕರು ಸಮುದಾಯಕ್ಕೆ ಲಸಿಕೆ ಹಾಕಿಸಿಕೊಳ್ಳಲು ಜಾಗೃತಿ ಮೂಡುಸುವುದು ಪುಣ್ಯದ ಕೆಲಸ, ಓರ್ವಶಿಕ್ಷಕ ದಿನಕ್ಕೆ ಕನಿಷ್ಟ 10 ಮಂದಿಗೆ ಲಸಿಕೆ ಹಾಕಿಸಿದರೆ 15 ದಿನಕ್ಕೆ ನಮ್ಮ ಗುರಿ ತಲುಪುವುದು ಸಾಧ್ಯ ಎಂದ ಅವರು, ಬುದ್ದಿ,ಸಮಯ ಬಳಸಿ ಜೀವದಾನದ ಈ ಮಹತ್ಕಾರ್ಯದಲ್ಲಿ ಸ್ಪಂದಿಸಿ ಎಂದು ಕಿವಿಮಾತು ಹೇಳಿದರು.

ಬಿಇಒ ಕಚೇರಿ ಬಳಿ ಲಸಿಕಾ ಶಿಬಿರ


ಕೋಲಾರ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಆವರಣದಲ್ಲಿ, ಸರ್ಕಾರಿ,ಖಾಸಗಿ,ಅನುದಾನಿತ ಶಿಕ್ಷಕರು,ಅವರ ಕುಟಂಬದವರಿಗೆ ಲಸಿಕೆ ಅಭಿಯಾನ ನಡೆಸಲು ಕ್ರಮವಹಿಸುವಂತೆ ಸ್ಥಳದಲ್ಲಿದ್ದ ಬಿಇಒ ನಾಗರಾಜಗೌಡರಿಗೆ ಅವರು ಸೂಚಿಸಿದರು.


ನೌಕರರ ಕುಟುಂಬಕ್ಕೆ ಕೋವಿಡ್‍ಕೇರ್ ಕೇಂದ್ರ


ಜಿಲ್ಲಾ ನೌಕರರ ಸಂಘದ ಅಧ್ಯಕ್ಷ ಜಿ.ಸುರೇಶ್‍ಬಾಬು ಇದೇ ಸಂದರ್ಭದಲ್ಲಿ ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿ, ಆದ್ಯತೆಯ ಮೇರೆಗೆ ಸರ್ಕಾರಿ ನೌಕರರಿಗೆ ಲಸಿಕೆ ಹಾಕಿಸಲು ಕ್ರಮಕೈಗೊಳ್ಳಲು ಮನವಿ ಮಾಡಿದರು.
ಜನರ ಸೇವೆ ಮಾಡುತ್ತಿರುವ ಸರ್ಕಾರಿ ನೌಕರರು ಮತ್ತು ಅವರ ಕುಟುಂಬದವರು ಕೋವಿಡ್ ಸೊಂಕಿಗೆ ತುತ್ತಾದರೆ ಅವರ ಸೂಕ್ತ ಚಿಕಿತ್ಸೆಗಾಗಿ ಪ್ರತ್ಯೇಕ ಕೋವಿಡ್ ಕೇರ್ ಸೆಂಟರ್ ಸ್ಥಾಪಿಸಲು ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿದರು.
ಖಾಸಗಿ ಶಾಲೆ,ಕಾಲೇಜುಗಳ ವತಿಯಿಂದ ಸಭೆಯಲ್ಲಿ ಸಹ್ಯಾದ್ರಿ ಉದಯಕುಮಾರ್,ಎಸ್.ಬಿ.ಮುನಿವೆಂಕಟಪ್ಪ, ಮುನಿಯಪ್ಪ, ಶ್ರೀಕೃಷ್ಣ, ರಾಜೇಶ್‍ಸಿಂಗ್ ಮತ್ತಿತರರು ಭಾಗವಹಿಸಿದ್ದು, ಲಸಿಕೆ ಅಭಿಯಾನಕ್ಕೆ ಸಹಕಾರದ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ನೌಕರರ ಸಂಘದ ಅಧ್ಯಕ್ಷ ಜಿ.ಸುರೇಶ್‍ಬಾಬು,ಖಜಾಂಚಿ ವಿಜಯ್, ರಾಜ್ಯಪರಿಷತ್ ಸದಸ್ಯ ಗೌತಮ್, ಕೆಜಿಎಫ್ ಅಧ್ಯಕ್ಷ ರವಿರೆಡ್ಡಿ, ಪ್ರಾಥಮಿಕ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಅಪ್ಪಯ್ಯಗೌಡ, ಪ್ರಧಾನ ಕಾರ್ಯದರ್ಶಿ ನಾಗರಾಜ್, ನೌಕರರ ಸಂಘ,ವೃಂದ ಸಂಘಗಳ ಮುಖಂಡರಾದ ಎಸ್.ಚೌಡಪ್ಪ,ಟಿ.ಕೆ.ನಟರಾಜ್,ರತ್ನಪ್ಪ,ಅಶ್ವಥ್ಥನಾರಾಯಣ, ಸುಬ್ರಮಣಿ,ಶ್ರೀನಿವಾಸರೆಡ್ಡಿ, ಪುರುಷೋತ್ತಮ್,ಅಜಯ್, ರವಿ,ಮುರಳಿಮೋಹನ್, ನಾಗಾನಂದ್ ಕೆಂಪರಾಜ್,ಚಂದ್ರಪ್ಪ, ಗೋಪಿಕೃಷ್ಣನ್, ಮುನಿರಾಮಯ್ಯ, ಕಾಂತರಾಜ್, ರಾಜಪ್ಪ,ಅರುಣ್ ಕುಮಾರ್, ಶಿವಕುಮಾರ್,ಮುಕುಂದ,ಶ್ರೀಧರಬಾಬು ಮತ್ತಿತರರಿದ್ದರು.