ಅಡಿಕೆ ಬೆಳೆಗಾರರ ಸಮಸ್ಯೆಗಳ ಬಗ್ಗೆ ಮಾನ್ಯ ಗೃಹ ಸಚಿವರು ಮತ್ತು ಕ್ಯಾಂಪ್ಕೋ ಅಧ್ಯಕ್ಷರ ನೇತೃತ್ವದಲ್ಲಿ ಕೇಂದ್ರದ ವಿವಿಧ ಸಚಿವರ ಜೊತೆ ಚರ್ಚೆ-ಸಚಿವರಿಂದ ಸಕರಾತ್ಮಕ ಸ್ಪಂದನೆ.

ರಾಜ್ಯ ಗೃಹ ಸಚಿವರು ಮತ್ತು ಅಡಿಕೆ ಬೆಳೆಗಾರರ ಕಾರ್ಯಪಡೆಯ ಅಧ್ಯಕ್ಷರಾದ ಶ್ರೀ.ಆರಗ ಜ್ಞಾನೇಂದ್ರ ,ಮಾನ್ಯ ಕೇಂದ್ರ ಸಚಿವೆ ಶೋಭ ಕರಂದ್ಲಾಜೆ ಮತ್ತು ಕ್ಯಾಂಪ್ಕೊ ಅಧ್ಯಕ್ಷರಾದ ಶ್ರೀ.ಎ.ಕಿಶೋರ್ ಕುಮಾರ್ ಕೊಡ್ಗಿಯವರ ನೇತೃತ್ವದಲ್ಲಿ ಅಡಿಕೆ ಬೆಳೆಗಾರರ ಸಹಕಾರಿ ಸಂಘಗಳ ಪ್ರಮುಖರನ್ನೊಳಗೊಂಡ ನಿಯೋಗ ಇಂದು ಕೇಂದ್ರದ ವಿವಿಧ ಸಚಿವರನ್ನು ಭೇಟಿ ಮಾಡಿತು.ಭೇಟಿಯ ಸಮಯದಲ್ಲಿ ಅಡಿಕೆ ಕೃಷಿಕರ ಸಮಸ್ಯೆಗಳು ಮತ್ತು ಮಾರುಕಟ್ಟೆ ವಿಷಯಗಳಲ್ಲಿ ಸರಕಾರದ ನೀತಿಗಳಲ್ಲಿ ಆಗಬೇಕಾದ ಬದಲಾವಣೆಗಳ ಕುರಿತು ಮನವಿ ಸಲ್ಲಿಸಲಾಯಿತು.
ಕೇಂದ್ರದ ಹಣಕಾಸು ಸಚಿವೆ ಶ್ರೀಮತಿ.ನಿರ್ಮಲಾ ಸೀತಾರಮನ್ ರನ್ನು ಬೇಟಿ ಮಾಡಿದ ನೀಯೋಗ ಹಲವು ಬೆಡಿಕೆಗಳನ್ನು ಈಡೇರಿಸುವಂತೆ ಮನವಿ ಮಾಡಲಾಯಿತು.CIB/FCO 1985 ಪರವಾನಗಿಗಳ ಅಡಿಯಲ್ಲಿ ತಯಾರಿಸಲ್ಪಡುವ ಕಾಪರ್ ಸಲ್ಫೇಟ್ ಗಳ ಮೇಲೆ 5% ಜಿ ಎಸ್ ಟಿ ವಿಧಿಸುವುದು,ರೈತರಿಗೆ ಅನುಕೂಲವಾಗುವಂತೆ ಕಾರ್ಬನ್ ಫೈಬರ್ ದೋಟಿಯ ಮೇಲಿನ ಆಮದು ಸುಂಕವನ್ನು ಕಡಿಮೆ ಮಾಡುವುದು ಮತ್ತು ಅಡಿಕೆಯ ಮೇಲಿನ ಜಿ ಎಸ್ ಟಿಯನ್ನು ಕಡಿಮೆ ಮಾಡುವಂತೆ ಮನವಿ ಸಲ್ಲಿಸಲಾಯಿತು.
ನಿಯೋಗವು ಕೇಂದ್ರದ ಮಾನ್ಯ ಕೃಷಿ ಸಚಿವರಾದ ಶ್ರೀ.ನರೇಂದ್ರ ಸಿಂಗ್ ತೋಮಾರ್ ರನ್ನು ಭೇಟಿ ಮಾಡಿ ಮಾತುಕತೆ ನಡೆಸಿತು.ಈ ಸಂದರ್ಭದಲ್ಲಿ ಅಡಿಕೆಯಲ್ಲಿನ ತೇವಾಂಶದ ಗರಿಷ್ಠ ಮಿತಿಯನ್ನು 11% ಹೆಚ್ಚಿಸಿ FSSAI ಮೂಲಕ ಮಾರ್ಗಸೂಚಿಯನ್ನು ಬಿಡುಗಡೆಗೊಳಿಸುವಂತೆ ಮನವಿ ಮಾಡಿತು.ಈ ಬಗ್ಗೆ ಕ್ಯಾಂಪ್ಕೊದ ವ್ಯವಸ್ಥಾಪಕ ನಿರ್ದೇಶಕರಾದ ಶ್ರೀ.ಕೃಷ್ಣ ಕುಮಾರ್ ರವರ ವಿವರಣೆಯಿಂದ ಸಚಿವರಿಗೆ ಮನವರಿಕೆಯಾಗಿದ್ದು ಅವರಿಂದ ಸಕರಾತ್ಮಕ ಸ್ಪಂದನೆ ಸಿಕ್ಕಿದೆ.FSSAI ಈಗಾಗಲೇ ಅಡಿಕೆಯ ತೇವಾಂಶದ ಗರಿಷ್ಠ ಮಿತಿಯನ್ನು 7%ಗೆನಿಗಧಿಪಡಿಸಿ ಮಾರ್ಗಸೂಚಿಯನ್ನು ಬಿಡುಗಡೆಗೊಳಿಸಿತ್ತು.ಇದರಿಂದ ಹೊಸ ಅಡಿಕೆಯ ಪ್ರಾರಂಭದಲ್ಲಿ ಮತ್ತು ಮಳೆಗಾಲದಲ್ಲಿ ಅಡಿಕೆ ಮಾರಾಟಕ್ಕೆ ಸಮಸ್ಯೆಯಾಗುತ್ತಿದೆ.
ಕೇಂದ್ರದ ವಾಣಿಜ್ಯ ಸಚಿವರಾದ ಸನ್ಮಾನ್ಯ ಪಿಯೂಷಿ ಗೋಯಲ್ ರವರನ್ನು ಭೇಟಿ ಮಾಡಿದ ನಿಯೋಗವು ಅಡಿಕೆಯ ಆಮದಿನಿಂದ ದೇಶೀಯ ಅಡಿಕೆಯ ದರ ಏರಿಳಿತದ ಬಗ್ಗೆ ಚರ್ಚೆ ನಡೆಸಿತು.ಹೆಚ್ಚಾದ ಅಡಿಕೆಯ ಉತ್ಪಾದನಾ ವೆಚ್ಚಕ್ಕೆ ಅನುಸರಿಸಿ ಅಡಿಕೆಯ ಕನಿಷ್ಠ ಆಮದು ದರವನ್ನು ಚಾಲಿ ಅಡಿಕೆಗೆ ಕೆ.ಜಿ ಗೆ 360/- ರೂಪಾಯಿ ಮತ್ತು ಕೆಂಪಡಿಕೆ ಕೆ.ಜಿಗೆ 420ರೂಪಾಯಿಗೆ ಹೆಚ್ಚಿಸುವಂತೆ ಮನವಿ ಮಾಡಲಾಯಿತು. ನಿಯೋಗದ ಬೇಡಿಕೆಗೆ ಸಚಿವರು ಒಪ್ಪಿಗೆಯನ್ನು ನೀಡಿರುತ್ತಾರೆ.
ನಿಯೋಗದಲ್ಲಿ ಶ್ರೀ.ಮಂಜಪ್ಪ ಹೊಸಬಾಳೆ,ಮುಖ್ಯಮಂತ್ರಿಯವರ ರಾಜಕೀಯ ಕಾರ್ಯದರ್ಶಿ ಶ್ರೀ.ಜೀವರಾಜ್, ಕ್ಯಾಂಪ್ಕೊ ವ್ಯವಸ್ಥಾಪಕ ನಿರ್ದೇಶಕರಾದ ಶ್ರೀ.ಹೆಚ್ .ಎಮ್.ಕೃಷ್ಣ ಕುಮಾರ್, ಅಡಿಕೆ ಮಹಾಮಂಡಳದ ಅಧ್ಯಕ್ಷರಾದ ಶ್ರೀ.ಸುಬ್ರಹ್ಮಣ್ಯ ಯಡಗೆರೆ,ಅಖಿಲ ಭಾರತ ಸಹಕಾರ ಭಾರತೀಯ ಸಂರಕ್ಷಕ್ ಮಾನ್ಯ.ಸುರೇಶ್ ವೈದ್ಯ,ತುಮ್ಕೋಸ್ ಅಧ್ಯಕ್ಷರಾದ ಶ್ರೀ.ಆರ್.ಎಮ್.ರವಿ, ಕ್ಯಾಂಪ್ಕೊ ನಿರ್ದೇಶಕರು ಮತ್ತು ಸಹಕಾರ ಭಾರತಿಯ  ರಾಜ್ಯ ಕಾರ್ಯದರ್ಶಿ  ಶ್ರೀ.ಕೃಷ್ಣ ಪ್ರಸಾದ್ ಮಡ್ತಿಲ,ಟಿಎಸ್ಎಸ್ ನ ನಿರ್ದೇಶಕರಾದ ಶ್ರೀ.ಶಶಾಂಕ್ ಎಸ್. ಹೆಗಡೆ ಹಾಗೂ ಮಹಾಮಂಡಳದ ನಿರ್ದೇಶಕರಾದ ಶ್ರೀ.ಶಿವಕುಮಾರ್  ಅವರು ಭಾಗವಹಿಸಿದ್ದರು.