ಕಟ್ಕರೆ ಬಾಲ ಯೇಸುವಿನ ಆಶ್ರಮದಲ್ಲಿ ಕಾರ್ಮೆಲ್ ಮಾತೆಯ ಭಕ್ತಿ ಪೂರ್ವಕ ಹಬ್ಬ

ಕುಂದಾಪುರ, ಜು.16: ಕೊಟೇಶ್ವರ ಕಟ್ಕರೆ ಕಾರ್ಮೆಲ್ ಮೇಳದ ಧರ್ಮಗುರುಗಳ ಬಾಲ ಯೇಸುವಿನ ಆಶ್ರಮದಲ್ಲಿ ತಮ್ಮ ಮೇಳದ ಪಾಲಕಿಯಾದ ಕಾರ್ಮೆಲ್ ಮಾತೆಯ ಹಬ್ಬವನ್ನು ಜು. 15 ರಂದು ಭಕ್ತಿಪೂರ್ವಕವಾದ ದಿವ್ಯ ಬಲಿದಾನ ಅರ್ಪಿಸುವ ಮೂಲಕ ಆಚರಿಸಲಾಯಿತು.

     ಹಬ್ಬದ ಈ ಬಲಿದಾನವನ್ನು ಉಡುಪಿ ಧರ್ಮಪ್ರಾಂತ್ಯದ ಅ|ವಂ|ಮೊನ್ಸಿಂಜೊರ್ ಫರ್ಡಿನಾಂಡ್ ಗೊನ್ಸಾಲ್ವಿಸ್ ಇವರ ನೇತ್ರತ್ವದಲ್ಲಿ ನಡೆಯಿತು. ಅವರು ಕಾರ್ಮೆಲ್ ಮಾತೆಯ ವಿಶೇಷತೆಯನ್ನು ತಿಳಿಸಿ “ಕಾರ್ಮೆಲ್ ಮಾತೆ, ಕಾರ್ಮೆಲ್ ಮೇಳದ ಧರ್ಮಗುರುಗಳಿಗೆ ಕಾರ್ಮೆಲ್ ಗುಡ್ಡೆಯಲ್ಲಿ ಮೇರಿ ಮಾತೆ ಕಾರ್ಮೆಲ್ ಮಾತೆಯ ರೂಪದಲ್ಲಿ ಪ್ರತ್ಯೆಕ್ಷೆಯಾಗಿ, ಧರ್ಮಗುರುಗಳಿಗೆ ರಕ್ಷಣೆ ನೀಡುತ್ತೇನೆಂದು, ಪವಿತ್ರವಾದ ಪೋಷಾಕನ್ನು ಧರಿಸಲು ನೀಡಿದಳು, ಇದನ್ನು ನೀವು ಧರಿಸಿದರೆ ನೀವು ರಕ್ಷಣೆಗೆ ಪಾತ್ರರಾಗುತ್ತೀರಿ, ನಿಮ್ಮ ಆತ್ಮವು ನಾಶವಾಗಲಾರದು,  ಎಂದು ಹೇಳಿದಳು. ಅಂದು ಅದು ದೊಡ್ಡ ಪೋಷಾಕಾಗಿತ್ತು, ಥರಹ ನಾವು ಅದನ್ನು ಕೊರಳಲ್ಲಿ ಧರಿಸುತೀದ್ದೆವೆ, ನಾವು ಕಾರ್ಮೆಲ್ ಮಾತೆಯನ್ನು ಪ್ರೀತಿಸೋಣ, ಕಾರ್ಮೆಲ್ ಮಾತೆಯ ಸಾಂಗಾತ್ಯ ನಮಗೆ ಶಕ್ತಿ ನೀಡಲಿ” ಎಂದು ಅವರು  ತಮ್ಮ ಸಂದೇಶದಲ್ಲಿ ತಿಳಿಸಿದರು.       

    ಕುಂದಾಪುರ ವಲಯ ಪ್ರಧಾನರಾದ ಅ|ವಂ|ಸ್ಟ್ಯಾನಿ ತಾವ್ರೊ, ವಂ|ಧರ್ಮಗುರು ಸುನೀಲ್ ವೇಗಸ್, ವಂ|ಧರ್ಮಗುರು ಎಡ್ವಿನ್ ಡಿಸೋಜಾ, ವಂ|ಧರ್ಮಗುರು ಆಲ್ಬರ್ಟ್ ಕ್ರಾಸ್ತಾ, ವಂ|ಧರ್ಮಗುರು ರೆಜಿನಾಲ್ಡ್ ಪಿಂಟೊ, ವಂ|ಧರ್ಮಗುರು ಅನಿಲ್ ಕರ್ನೇಲಿಯೊ. ಕುಂದಾಪುರದ ಸಹಾಯಕ ಧರ್ಮಗುರು ವಂ|ಫಾ|ಅಶ್ವಿನ್ ಅರನ್ನಾ, ಕಟ್ಕೆರೆ ಬಾಲ ಯೇಸುವಿನ ಕಾರ್ಮೆಲ್ ಆಶ್ರಮದ ಧರ್ಮಗುರುಗಳಾದ ವಂ|ಧರ್ಮಗುರು ಜೋನ್ ಸಿಕ್ವೇರಾ, ವಂ|ಧರ್ಮಗುರು ಜೋ ತಾವ್ರೊ, ವಂ|ಧರ್ಮಗುರು ಫ್ರಾನ್ಸಿಸ್ ಡಿಸೋಜಾ ಮತ್ತು ಹಲವಾರು ಅತಿಥಿ ಧರ್ಮಗುರುಗಳು ದಿವ್ಯ ಬಲಿ ಪೂಜೆಯನ್ನು ಅರ್ಪಿಸಿದರು.    

   ಕೊಟೇಶ್ವರ ಇಗರ್ಜಿ ಮತ್ತು ಕಟ್ಕರೆ ಬಾಲಯೇಸುವಿನ ಆಶ್ರಮದ ಮುಖ್ಯಸ್ಥರಾದ ವಂ|ಧರ್ಮಗುರು ಪ್ರವೀಣ್ ಪಿಂಟೊ ಸ್ವಾಗತಿಸಿ ಕೊನೆಗೆ ವಂದಿಸಿದರು. ಕಟ್ಕೆರೆ ಬಾಲ ಯೇಸು ಆಶ್ರಮದ ಸಹಾಯಕ ವಂ|ಧರ್ಮಗುರು ಜೋ ಸಿದ್ದಕಟ್ಟೆ ದಾನಿಗಳ ಹಾಗೂ ಪೂಜೆ ನಿವೇದನೆ ಮಾಡಿಕೊಂಡವರ ಹೆಸರುಗಳನ್ನು ವಾಚಿಸಿದರು.  ವಂ|ಫಾ| ಆಲ್ವಿನ್ ಸಿಕ್ವೇರಾ ನಿರ್ದೇಶನದಲ್ಲಿ ಕುಂದಾಪುರ ಚರ್ಚ್ ಗಾಯನ ಪಂಗಡ ದಿವ್ಯ ಬಲಿಪೂಜೆಗೆ ಭಕ್ತಿ ಗೀತೆ ಹಾಡಿ ಸಹಕರಿಸಿತು. ಈ ಕಾರ್ಮೆಲ್ ಮಾತೆಯ ಹಬ್ಬಕ್ಕೆ ಅನೇಕ ಧರ್ಮಭಗಿನಿಯಯರು ಹಾಜರಿದ್ದು, ಕುಂದಾಪುರ ವಲಯ ಹಾಗೂ ಇತರ ಕಡೆಯಿಂದ ಭಕ್ತಾಧಿಗಳು ಈ ಹಬ್ಬದಲ್ಲಿ ಪಾಲ್ಗೊಂಡರು.