ಒತ್ತಡ ಜೀವನದಲ್ಲಿ ಆಧ್ಯಾತ್ಮ ಮತ್ತು ದೇವರ ಆರಾಧನೆಗೆ ಕೊಂಚ ಕಾಲವನ್ನು ವಿನಿಯೋಗಿಸಿ, ನೆಮ್ಮದಿ ಪಡೆದುಕೊಳ್ಳಬಹುದು : ಕೆ.ಆರ್.ರಮೇಶ್‍ಕುಮಾರ್

ಶ್ರೀನಿವಾಸಪುರ 1 : ಒತ್ತಡ ಜೀವನದಲ್ಲಿ ಆಧ್ಯಾತ್ಮ ಮತ್ತು ದೇವರ ಆರಾಧನೆಗೆ ಕೊಂಚ ಕಾಲವನ್ನು ವಿನಿಯೋಗಿಸುವ ಮೂಲಕ ನೆಮ್ಮದಿ ಪಡೆದುಕೊಳ್ಳಬಹುದು ಎಂದು ಶಾಸಕ ಕೆ.ಆರ್.ರಮೇಶ್‍ಕುಮಾರ್ ತಿಳಿಸಿದರು.
ಶ್ರೀನಿವಾಸಪುರ ತಾಲೂಕಿನ ರೋಣೂರು ಲಕ್ಷ್ಮೀವೆಂಕಟರಮಣಸ್ವಾಮಿ ದೇವಾಲಯಕ್ಕೆ ವೈಕುಂಠ ಏಕಾದಶಿ ಅಂಗವಾಗಿ ಬೇಟಿ ನೀಡಿ ಮಾತನಾಡಿ,
ಮಾನವೀಯ ಮೌಲ್ಯಗಳನ್ನು ಬೆಳೆಸಲು ವಿಶೇಷ ಹಬ್ಬ,ಪರಂಪರೆಯ ಸಂಪ್ರದಾಯಗಳನ್ನು ಆಚರಿಸಬೇಕು ಹಾಗೂ ಅವುಗಳ ಮಹತ್ವದ ಬಗ್ಗೆ ಹಿರಿಯರಿಂದ ಯುವಪೀಳಿಗೆ ಅರಿಯಬೇಕೆಂದರು.
ಸ್ವಾಮಿಗೆ ಪಾಂಚರಾತ್ರಾಗಮ ಪ್ರಕಾರ ಸುಪ್ರಬಾತ ಸೇವೆ ,ಪಂಚಾಮೃತ ಅಭಿಷೇಕ,ಅಲಂಕಾರ ಮುಂಜಾನೆ 5ಗಂಟೆಗೆ ವೈಕುಂಠದ್ವಾರ ಪೂಜೆ,ವೈಕುಂಠ ದ್ವಾರ ಪ್ರವೇಶ,ಶಾತ್ತುಮೊರೈ,ಮಹಾಮಂಗಳಾರತಿ,ತೀರ್ಥಪ್ರಸಾದ ವಿನಿಯೋಗ ಮಾಡಲಾಗಿತ್ತು.
ತಾಲೂಕಿನ ಪುರಾಣ ಪ್ರಸಿದ್ಧ ದೇವಸ್ಥಾನವಾದ ಗನಿಬಂಡೆ ಹಾಗೂ ತಾಲೂಕಿನ ಎಲ್ಲಾ ವಿಷ್ಣು ದೇವಸ್ಥಾನಗಳಲ್ಲಿ ವೈಕುಂಠ ಏಕಾದಶಿ ಅಂಗವಾಗಿ ವಿಶೇಷ ಪೂಜೆಗಳು ನಡೆಯಿತು. ಸಾವಿರಾರು ಭಕ್ತರು ಗೋವಿಂದನಾಮಸ್ಮರಣೆಯೊಂದಿಗೆ ಶ್ರದ್ದ,ಭಕ್ತಿಯೊಂದಿಗೆ ವೈಕುಂಠದ್ವಾರದ ಮೂಲಕ ಸರದಿಸಾಲಿನಲ್ಲಿ ದೇವರ ದರ್ಶನ ಪಡೆದರು.
ಪಿಎಲ್‍ಡಿ ಬ್ಯಾಂಕ್‍ನ ಅಧ್ಯಕ್ಷ ದಿಂಬಾಲ್ ಅಶೋಕ್, ತಾ.ಪಂ. ಮಾಜಿ ಸದಸ್ಯ ಕೆ.ಕೆ.ಮಂಜುನಾಥ್, ರಾಯಲ್ಪಾಡು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಂಜಯ್‍ರೆಡ್ಡಿ , ಗ್ರಾಮದ ಮುಖಂಡರಾದ ಎಸ್.ಡಿ.ಪ್ರತಾಪ್ , ಶ್ರೀನಿವಾಸರಾವ್ ಇದ್ದರು.