ಅಡುಗೆ ಅನಿಲ ಹಾಗೂ ಅಗತ್ಯ ವಸ್ತುಗಳ ಬೆಲೆ ಏರಿಕೆ ಖಂಡಿಸಿ ರೈತಸಂಘದಿಂದ ಸೌದೆಯಲ್ಲಿ ಒಲೆ ಹಚ್ಚಿ ಹೋಳಿಗೆ ತಯಾರಿ 

ವರದಿ: ಶಬ್ಬೀರ್ ಅಹ್ಮದ್, ಶ್ರೀನಿವಾಸಪುರ

ಕೋಲಾರ; 31: ಅಡುಗೆ ಅನಿಲ ಹಾಗೂ ಅಗತ್ಯ ವಸ್ತುಗಳ ಬೆಲೆ ಏರಿಕೆ ಖಂಡಿಸಿ ರೈತಸಂಘದಿಂದ ತಾಲೂಕು ಕಚೇರಿ ಮುಂದೆ ಸೌದೆಯಲ್ಲಿ ಒಲೆ ಹಚ್ಚಿ ಹೋಳಿಗೆ ಮಾಡುವ ಮುಖಾಂತರ ಹೋರಾಟ ಮಾಡಿ ತಹಸೀಲ್ದಾರ್ ನಾಗರಾಜ್ ಮುಖಾಂತರ ರಾಷ್ಟ್ರಪತಿಯವರಿಗೆ ಮನವಿ ಸಲ್ಲಿಸಲಾಯಿತು.
ಅಗತ್ಯ ವಸ್ತುಗಳ ಬೆಲೆ ಏರಿಕೆ ಮುಖಾಂತರ ಬಡವರ ಹಸಿವಿನ ಮೇಲೆ ಕೇಂದ್ರ ಮತ್ತು ರಾಜ್ಯ ಸರ್ಕಾರ ದಬ್ಬಾಳಿಕೆ ಮಾಡುತ್ತಿವೆ ಎಂದು ರೈತಸಂಘದ ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಎ.ನಳಿನಿಗೌಡ ಆರೋಪ ಮಾಡಿದರು.
ದೇಶಾದ್ಯಂತ ಕೊರೊನಾದ ಕರಾಳತೆಗೆ ಆರ್ಥಿಕ ವ್ಯವಸ್ಥೆ ಅಲ್ಲೋಲ ಕಲ್ಲೋಲ ಆಗುವ ಜೊತೆಗೆ ಬಡ ಕೂಲಿ ಕಾರ್ಮಿಕರ ಜೀವನ ಕಸಿದಿತ್ತು. ಮತ್ತು ಕೊರೊನಾ ಕಡಿಮೆಯ ನಂತರ ಮತ್ತೆ ಆರ್ಥಿಕತೆ ಹಳಿಗೆ ಮರಳುತ್ತಿದೆ ಎಂಬುವಷ್ಟರಲ್ಲಿ ರಷ್ಯಾ ಉಕ್ರೇನ್ ನಡುವಿನ ಯುದ್ಧ ಎಲ್ಲಾ ನಿರೀಕ್ಷೆಗಳನ್ನು ತಲೆ ಕೆಳಕಾಗಿಸಿದೆ. ಯುದ್ಧದ ನೆಪದಲ್ಲಿ ಅಗತ್ಯ ವಸ್ತುಗಳ ಬೆಲೆ ಏರಿಕೆ ಗಗನಕ್ಕೇರಿದ್ದು, ಜನ ಜೀವನ ಅಸ್ತವ್ಯಸ್ತವಾಗಿದೆ ಎಂದು ಅಸಮಧಾನ ವ್ಯಕ್ತಪಡಿಸಿದರು.
ಜನ ಸಾಮಾನ್ಯರ ತಿಂಗಳ ಬಜೆಟ್ ಹದಗೆಟ್ಟಿದ್ದು, ಆದಾಯ ಹೆಚ್ಚದೆ ಜಾಸ್ತಿಯಾಗಿರುವ ಖರ್ಚುಗಳನ್ನು ನಿಭಾಯಿಸಲು ಪರದಾಡುತ್ತಿದ್ದಾರೆ. ಇಂತಹ ಸ್ಥಿತಿಯಲ್ಲಿ ಗಾಯದ ಮೇಲೆ ಬರೆ ಎಂಬಂತೆ ಡೀಸೆಲ್, ಪೆಟ್ರೋಲ್, ಅಡುಗೆ ಅನಿಲ ಏರಿಕೆಯಿಂದ ಎರಡು ವರ್ಷಗಳಿಂದ ಕರಾಳ ಕೊರೊನಾದಿಂದ ಹಬ್ಬಗಳ ಆಚರಣೆಯಿಲ್ಲದೆ ಈ ವರ್ಷ ಯುಗಾದಿ ಸಂಭ್ರಮದಲ್ಲಿದ್ದ ಜನ ಸಾಮಾನ್ಯರಿಗೆ ಬೆಲೆ ಹೊಡೆತ ಹಬ್ಬದ ಸಂತೋಷಕ್ಕೆ ಕಡಿವಾಣ ಹಾಕಿದೆ ಎಂದು ದೂರಿದರು.
ಜಿಲ್ಲಾ ಕಾರ್ಯಾಧ್ಯಕ್ಷ ವಕ್ಕಲೇರಿ ಹನುಮಯ್ಯ ಮಾತನಾಡಿ, ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಛಾ ತೈಲ ಧರ ಏರಿಕೆಯಾದಂತೆ ದೇಶಾದ್ಯಂತ ಪೆಟ್ರೋಲ್ ಡೀಸೆಲ್ ನಿರೀಕ್ಷೆಗೂ ಮೀರಿ ಏರಿಕೆಯಾಗುತ್ತಿದೆ. ಇದರಿಂದ ರೈತರು ಬೆಳೆದ ಉತ್ಪನ್ನಗಳ ಮೇಲೆ ಹೊಡೆತ ಬೀಳುವ ಜೊತೆಗೆ ಸರಕು ಸಾಗಾಣಿಕೆ ಮಾಡುವ ಲಾರಿ ಬಾಡಿಗೆ ಹೆಚ್ಚಳವಾಗುವುದರಿಂದ ಜನಸಾಮಾನ್ಯರ ಮೇಲೆ ಹೊಡೆತ ಬಿದ್ದು ಜೀವನ ನಿರ್ವಹಣೆಯೇ ಕಷ್ಟಕರವಾಗುತ್ತದೆ ಎಂದು ಹೇಳಿದರು.
ಮನುಷ್ಯನ ಪ್ರತಿನಿತ್ಯ ಜೀವನಕ್ಕೆ ಅವಶ್ಯಕತೆಯಿರುವ ಎಣ್ಣೆಯಿಂದ ಹಿಡಿದು ಬೇಳೆ, ಅಕ್ಕಿ, ಅಡುಗೆ ಅನಿಲ ಬೆಲೆ ದಿನೇದಿನೇ ಗಗನಕ್ಕೆ ಏರಿಕೆಯಾಗುತ್ತಿದ್ದು, ದುಡಿಮೆಯ ಸಂಪೂರ್ಣ ಹಣ ವೆಚ್ಚ ಮಾಡಿದರೂ ಜೀವನ ನಿರ್ವಹಣೆ ಕಷ್ಟಕರವಾಗುತ್ತಿದೆ.
ಇದರಿಂದ ಜಾಗತಿಕ ಮಾರುಕಟ್ಟೆಯಲ್ಲಿ ಆಹಾರ ಕಲಬೆರಕೆ ಹೆಚ್ಚಾಗಿ ಜನಸಾಮಾನ್ಯರ ಆರೋಗ್ಯ ಹದಗೆಡುವಂತಹ ಪರಿಸ್ಥಿತಿ ಬರುತ್ತದೆ. ರಾಜ್ಯ ಕೇಂದ್ರ ಸರ್ಕಾರಗಳಿಗೆ ತೆರಿಗೆ ಸಂಗ್ರಹ ಹೆಚ್ಚಿಸುವ ಚಿಂತೆ, ಜನಸಾಮಾನ್ಯರಿಗೆ ಬದುಕು ನಡೆಸುವ ಚಿಂತೆ.
ಇದರ ಮಧ್ಯೆ ಸರ್ಕಾರ ಜನಸಾಮಾನ್ಯರ ಹಿತದೃಷ್ಠಿಯಿಂದ ಅಗತ್ಯ ವಸ್ತುಗಳ ಬೆಲೆ ಏರಿಕೆಯನ್ನು ನಿಯಂತ್ರಿಸಲು ಹಾಗೂ ಅನಗತ್ಯ ವೆಚ್ಚಗಳನ್ನು ತಡೆಯಲು ಸರ್ಕಾರ ಮುಂದಾಗದಿದ್ದರೆ ಸಮರ್ಪಕವಾದ ಆಹಾರ ಸಿಗದೆ ಅಪೌಷ್ಠಿಕತೆಯಿಂದ ನರಳಾಡಿ ಪ್ರಾಣ ಬಿಡುವ ಭವಿಷ್ಯದ ಸೂಚನೆ ಕಾಣಿಸುತ್ತದೆ ಎಂದು ಎಚ್ಚರಿಸಿದ ಅವರು, ಮಾನ್ಯ ರಾಷ್ಟ್ರಪತಿಯವರು ಕೂಡಲೇ ಅಗತ್ಯ ವಸ್ತುಗಳ ಬೆಲೆ ಏರಿಕೆಗೆ ಕಡಿವಾಣ ಹಾಕಲು ಪ್ರಭಲ ಕಾನೂನು ಜಾರಿಗೊಳಿಸಿ ಜನಸಾಮಾನ್ಯರ ರಕ್ಷಣೆ ಮಾಡಬೇಕೆಂದು ಮನವಿ ಮಾಡಿದರು.
ಮನವಿ ಸ್ವೀಕರಿಸಿ ಮಾತನಾಡಿದ ತಹಸೀಲ್ದಾ ನಾಗರಾಜ್ ಅವರು, ನಿಮ್ಮ ಮನವಿಯನ್ನು ಜಿಲ್ಲಾಧಿಕಾರಿಗಳ ಮುಖಾಂತರ ಮಾನ್ಯ ರಾಷ್ಟ್ರಪತಿಯವರಿಗೆ ಕಳುಹಿಸುವ ಭರವಸೆ ನೀಡಿದರು.
ಈ ಹೋರಾಟದಲ್ಲಿ ರೈತಸಂಘದ ರಾಜ್ಯ ಉಪಾಧ್ಯಕ್ಷ ಕೆ.ನಾರಾಯಣಗೌಡ, ಜಿಲ್ಲಾಧ್ಯಕ್ಷ ಐತಾಂಡಹಳ್ಳಿ ಮಂಜುನಾಥ್, ತಾಲೂಕು ಅಧ್ಯಕ್ಷ ಈಕಂಬಳ್ಳಿ ಮಂಜುನಾಥ್, ಮಾಲೂರು ತಾಲೂಕು ಅಧ್ಯಕ್ಷ ಪೆಮ್ಮದೊಡ್ಡಿ ಯಲ್ಲಣ್ಣ, ಮಂಗಸಂದ್ರ ನಾರಾಯಣಗೌಡ, ಗೋವಿಂದಪ್ಪ, ವೆಂಕಟೇಶಪ್ಪ, ಅಶ್ವತ್ಥಪ್ಪ, ಚಂದ್ರಪ್ಪ, ರತ್ನಮ್ಮ, ರಾಮಕ್ಕ, ಪಾರಂಡಹಳ್ಳಿ ಮಂಜುನಾಥ್, ನಾಗಭೂಷನ್, ಸಂದೀಪ್, ಮರಗಲ್ ಮುನಿಯಪ್ಪ, ಕಿರಣ್, ಚಾಂದ್‍ಪಾಷ, ಮುನ್ನಾ ಮುಂತಾದವರಿದ್ದರು.