

ಕೋಲಾರ,ಜೂ.3: ಟೊಮೇಟೊ, ಮಾವು ಬೆಳೆಗಾರರ ಸಮಸ್ಯೆ ಆಲಿಸಲು ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಸಭೆ ಕರೆದು ಬೆಲೆ ಕುಸಿತದಿಂದ ಕಂಗಾಲಾಗಿರುವ ರೈತರ ರಕ್ಷಣೆಗೆ ಬೆಂಬಲ ಬೆಲೆ ಘೋಷಣೆ ಮಾಡಲು ಸರ್ಕಾರಕ್ಕೆ ವರದಿ ಸಲ್ಲಿಸುವ ಜೊತೆಗೆ ಪಿ.ನಂಬರ್ ದುರಸ್ಥಿತಿಯಲ್ಲಿ ನಡೆಯುತ್ತಿರುವ ಭ್ರಷ್ಟಾಚಾರದ ಬಗ್ಗೆ ತನಿಖೆ ಮಾಡಬೇಕೆಂದು ರೈತಸಂಘದಿಂದ ಉಪವಿಭಾಗಾಧಿಕಾರಿಗಳಾದ ಡಾ.ಮೈತ್ರಿ ಅವರಿಗೆ ಮನವಿ ನೀಡಿ ಒತ್ತಾಯಿಸಲಾಯಿತು.
ಜಿಲ್ಲೆಯ ರೈತರ ಸಮಸ್ಯೆಗಳನ್ನು ಗಂಭೀರವಾಗಿ ಪರಿಗಣಿಸಬೇಕಾದ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಜನಪ್ರತಿನಿಧಿಗಳು ಕೋಮಾ ಸ್ಥಿತಿಯಲ್ಲಿರುವ ರೋಗಿಯಂತೆ ಕೋವಿದ್ 19 ರೋಗಾಣುವಿನ ಭಯಕ್ಕೆ ನಾಪತ್ತೆಯಾಗಿದ್ದಾರೆಂದು ರೈತಸಂಘದ ರಾಜ್ಯ ಉಪಾಧ್ಯಕ್ಷ ಕೆ.ನಾರಾಯಣಗೌಡ ರೈತ ವಿರೋಧಿ ಜನಪ್ರತಿನಿಧಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಲಕ್ಷಾಂತರ ರೂಪಾಯಿ ಬಂಡವಾಳ ಹಾಕಿ ಬೆಳೆದಿರುವ ಟೊಮೇಟೊ ಉತ್ತಮ ಬೆಳೆಯಾಗಿದ್ದರೂ ಮಾರುಕಟ್ಟೆಯಲ್ಲಿ ಬೆಲೆ ಇಲ್ಲದೆ ತೋಟಗಳಲ್ಲಿಯೇ ಕೊಳೆಯುತ್ತಿರುವ ಜೊತೆಗೆ ಹಾಕಿದ ಬಂಡವಾಳ ಕೈಗೆ ಸಿಗದೆ ಖಾಸಗಿ ಸಾಲಕ್ಕೆ ಟೊಮೇಟೊ ಬೆಳೆಗಾರರು ಸಿಲುಕಿ ಪರದಾಡುತ್ತಿದ್ದರೆ ಮತ್ತೊಂದು ಕಡೆ ಉತ್ತಮ ಬೆಲೆ ನಿರೀಕ್ಷೆಯಲ್ಲಿದ್ದ ಮಾವು ಬೆಳೆಗಾರರಿಗೆ ಮಾರುಕಟ್ಟೆಯಲ್ಲಿ ದಿಢೀರ್ ಬೆಲೆ ಕುಸಿತದಿಂದ ಕಂಗಾಲಾಗಿರುವ ಜಿಲ್ಲೆಯ ರೈತರ ಸಮಸ್ಯೆಗಳನ್ನು ಆಲಿಸಿ ಸಮಸ್ಯೆಗೆ ಶಾಶ್ವತ ಪರಿಹಾರ ನೀಡಬೇಕಾದ ಜನಪ್ರತಿನಿಧಿಗಳು ಲಕ್ಷಾಂತರ ರೈತ ಕುಟುಂಬಗಳ ಜೀವನಾಡಿಯಾಗಿರುವ ಡಿಸಿಸಿ ಬ್ಯಾಂಕ್ ಹಾಗೂ ಹಾಲು ಒಕ್ಕೂಟದಲ್ಲಿ ರಾಜಕೀಯ ಮಾಡಿಕೊಂಡು ರೈತರನ್ನು ಯಾಮಾರಿಸುತ್ತಿದ್ದಾರೆಂದು ಅಸಮಧಾನ ವ್ಯಕ್ತಪಡಿಸಿದರು.
ಜಿಲ್ಲಾಧ್ಯಕ್ಷ ಈಕಂಬಳ್ಳಿ ಮಂಜುನಾಥ್ ಮಾತನಾಡಿ ಕೋಲಾರ ಜಿಲ್ಲೆ ರಾಜ್ಯದ ಭೂಪಟದಲ್ಲಿ ಇದೆಯೇ ಎಂದು ಸರ್ಕಾರವನ್ನು ಪ್ರಶ್ನೆ ಮಾಡುವ ಜೊತೆಗೆ ಟೊಮೇಟೊ ಮಾರುಕಟ್ಟೆಯ ಜಾಗದ ಸಮಸ್ಯೆಯಿಂದ ಹಿಡಿದು ಪ್ರತಿ ಸರ್ಕಾರಿ ಕಚೇರಿಯಲ್ಲೂ ದಲ್ಲಾಳಿಗಳ ಹಾವಳಿಯ ಜೊತೆಗೆ ಲಂಚವಿಲ್ಲದೆ ಬಡವರ ನೆರಳೂ ಸಹ ಸರ್ಕಾರಿ ಕಚೇರಿಗಳಿಗೆ ಬೀಳುವಂತಿಲ್ಲ. ಅಷ್ಟರ ಮಟ್ಟಿಗೆ ಸರ್ಕಾರಿ ಕಚೇರಿಗಳು ಹದಗೆಟ್ಟಿದ್ದರೂ ಕೇಳುವವರು ಗತಿಯಿಲ್ಲವೆಂದು ಕಿಡಿಕಾರಿದರು.
ಹತ್ತಾರು ವರ್ಷಗಳಿಂದ ಜಾತಕ ಪಕ್ಷಿಗಳಂತೆ ಕಾಯುತ್ತಿದ್ದ ಲಕ್ಷಾಂತರ ರೈತರ ಪಿ ನಂಬರ್ ದುರಸ್ಥಿಗೆ ಕಂದಾಯ ಮಂತ್ರಿಗಳಿಂದ ಆದೇಶವಾಗಿದ್ದರೂ ಜಿಲ್ಲಾದ್ಯಂತ ಎಲ್ಲಾ ತಾಲೂಕು ಕಚೇರಿಗಳಲ್ಲಿ ರೈತರ ಕಡತಗಳನ್ನು ನಿರ್ಲಕ್ಷ್ಯೆ ಮಾಡಿ ಬಲಾಢ್ಯರು ಭೂಗಳ್ಳರ ಕಡತಗಳಿಗೆ ಲಕ್ಷಲಕ್ಷ ಲಂಚ ಪಡೆದು ಮುಕ್ತಿ ನೀಡಿ ಪಿ.ನಂಬರ್ ದುರಸ್ಥಿ ಎಂಬುದು ನೂರಾರು ಕೋಟಿಯ ಹಗರಣದ ನಂಬರ್ ಆಗಿ ಮಾರ್ಪಟ್ಟಿದೆ ಎಂದು ಆರೋಪಿಸಿದರು.
ಮನವಿ ಸ್ವೀಕರಿಸಿ ಮಾತನಾಡಿದ ಉಪವಿಭಾಧಿಕಾರಿಗಳಾದ ಡಾ.ಮೈತ್ರಿ ಅವರು, ಜಿಲ್ಲಾಧಿಕಾರಿಗಳ ಜೊತೆ ಮಾತನಾಡಿ ಸಂಬಂಧಪಟ್ಟ ಅಧಿಕಾರಿಗಳು ಹಾಗೂ ರೈತರ ಸಭೆ ಕರೆದು ಮಾವು ಹಾಗೂ ಟೊಮೇಟೊ ಬೆಳೆಗಾರರ ಸಮಸ್ಯೆ ಬಗ್ಗೆ ವರದಿ ತರಿಸಿಕೊಂಡು ಸರ್ಕಾರಕ್ಕೆ ಕಳುಹಿಸುವ ಭರವಸೆಯನ್ನು ನೀಡಿದರು.
ಮನವಿ ನೀಡುವಾಗ ರಾಜ್ಯ ಮುಖಂಡ ಮರಗಲ್ ಶ್ರೀನಿವಾಸ್, ಕದಿರಿನತ್ತ ಅಪ್ಪೋಜಿರಾವ್, ಮಂಗಸಂದ್ರ ತಿಮ್ಮಣ್ಣ, ಯಲ್ಲಣ್ಣ, ಶೈಲಜ, ರತ್ನಮ್ಮ, ವೆಂಕಟಮ್ಮ, ಗೌರಮ್ಮ, ಮುನಿರತ್ನಮ್ಮ, ಹೆಬ್ಬಣಿ ಆನಂದರೆಡ್ಡಿ, ಪುತ್ತೇರಿ ರಾಜು, ಗೀರೀಶ್ ಮುಂತಾದವರಿದ್ದರು.

