ಪತ್ರಕರ್ತರ ಭವನದಲ್ಲಿ ಗ್ರಂಥಾಲಯ ಆರಂಭಕ್ಕೆ ನಿರ್ಧಾರ

ವರದಿ: ಶಬ್ಬೀರ್ ಅಹ್ಮದ್, ಶ್ರೀನಿವಾಸಪುರ


ಕೋಲಾರ,ಮೇ.17:ನಗರದ ಪರ್ತಕರ್ತರ ಭವನದಲ್ಲಿ ಪತ್ರಕರ್ತರ ಜ್ಞಾನವೃದ್ಧಿಗಾಗಿ ಗ್ರಂಥಾಲಯ ವ್ಯವಸ್ಥೆ ಮಾಡಲು ಸಂಘದ ಅಧ್ಯಕ್ಷ ಬಿ.ವಿ ಗೋಪಿನಾಥ್ ಅಧ್ಯಕ್ಷತೆಯಲ್ಲಿ ಮಂಗಳವಾರ ನಡೆದ ಪದಾಧಿಕಾರಿಗಳ ಸಭೆಯಲ್ಲಿ ನಿರ್ಧರಿಸಲಾಯಿತು.
ಇದರ ಭಾಗವಾಗಿ ಸಂಘದ ಕಚೇರಿಯ ಮೊದಲ ಮಹಡಿಯಲ್ಲಿ ಎಲ್ಲಾ ಕನ್ನಡ ರಾಜ್ಯಮಟ್ಟದ ದಿನಪತ್ರಿಕೆಗಳು ಹಾಗೂ ಜಿಲ್ಲೆಯ ಸ್ಥಳೀಯ ಪತ್ರಿಕೆಗಳನ್ನು ದೊರಕಿಸಲು ನಿರ್ಧರಿಸಲಾಗಿದೆ.
ಸಾರ್ವಜನಿಕರಲ್ಲಿ ಕನ್ನಡ ಪತ್ರಿಕೆಗಳು ಕೊಂಡು ಓದುವಂತೆ ಪ್ರೇರೇಪಿಸುವ ಸಲುವಾಗಿ ಸಂಘಕ್ಕೆ ಸರಬರಾಜಾಗುವ ಎಲ್ಲಾ ದಿನಪತ್ರಿಕೆಗಳಿಗೆ ಮಾಸಿಕ ಚಂದಾವನ್ನು ಪಾವತಿಸುವ ಮೂಲಕ ಸಾರ್ವಜನಿಕರು ಸಹ ಕನ್ನಡ ದಿನಪತ್ರಿಕೆಗಳನ್ನು ಕೊಂಡು ಓದುವ ಮೂಲಕ ಕನ್ನಡ ಪತ್ರಿಕೆಗಳನ್ನು ಪ್ರೋತ್ಸಾಹಿಸಬೇಕೆಂದು ಸಭೆಯು ಮನವಿ ಮಾಡಿತು.
ಸಂಘದ ಮುಂದಿನ ಕಾರ್ಯಚಟುವಟಿಕೆಗಳ ಕ್ರಿಯಾಯೋಜನೆ ರೂಪಿಸುವ ಸಲುವಾಗಿ ಮುಂದಿನ ವಾರ ಕಾರ್ಯಕಾರಿ ಸಮಿತಿ ಸಭೆ ನಡೆಸಲು ನಿರ್ಧರಿಸಲಾಯಿತು.
ಸಭೆಯಲ್ಲಿ ಮಾಜಿ ಅಧ್ಯಕ್ಷರಾದ ವಿ.ಮುನಿರಾಜು, ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಎಸ್.ಕೆ ಚಂದ್ರಶೇಖರ್, ಖಜಾಂಚಿ ಎ.ಜಿ ಸುರೇಶ್‍ಕುಮಾರ್, ಉಪಾಧ್ಯಕ್ಷರಾದ ಎ.ಅಪ್ಪಾಜಿಗೌಡ, ಟೇಕಲ್ ಲಕ್ಷ್ಮೀಶ, ಕಾರ್ಯದರ್ಶಿಗಳಾದ ಸಿ.ಜಿ ಮುರಳಿ, ಎಸ್.ಪಿ.ವೆಂಕಟೇಶ್, ಎಂ.ರವಿಕುಮಾರ್ ಉಪಸ್ಥಿತರಿದ್ದರು.