ಕುರಿ ಸಾಕಾಣಿಕೆದಾರರ ಸಹಕಾರ ಸಂಘಗಳ ಸದಸ್ಯರಿಗೆ ಡಿಸಿಸಿ ಬ್ಯಾಂಕ್ ಸಾಲ ಸೌಲಭ್ಯ- ಪಾರದರ್ಶಕ ವಹಿವಾಟಿನಿಂದ ಆರ್ಥಿಕ ಸದೃಢತೆ ಸಾಧಿಸಿ:ಬ್ಯಾಲಹಳ್ಳಿ ಗೋವಿಂದಗೌಡ

ಕೋಲಾರ:- ಕುರಿ ಸಾಕಾಣಿಕೆ ಮತ್ತು ಉಣ್ಣೆ ಉತ್ಪಾದಕರ ಸಹಕಾರ ಸಂಘಗಳು ತಮ್ಮ ವಹಿವಾಟಿನಲ್ಲಿ ಪಾರದರ್ಶಕತೆ ಕಾಪಾಡಿಕೊಳ್ಳುವ ಮೂಲಕ ಆರ್ಥಿಕವಾಗಿ ಸದೃಢಗೊಳ್ಳಬೇಕು, ಸದರಿ ಸಂಘಗಳ ಸದಸ್ಯರಿಗೆ ಅಗತ್ಯವಾದ ಸಾಲ ಸೌಲಭ್ಯ ಕಲ್ಪಿಸಲು ಸಿದ್ದವಿರುವುದಾಗಿ ಕೋಲಾರ ಚಿಕ್ಕಬಳ್ಳಾಪುರ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡ ಭರವಸೆ ನೀಡಿದರು.
ಜಿಲ್ಲಾ ಸಹಕಾರಿ ಯೂನಿಯನ್ ಸಭಾಂಗಣದಲ್ಲಿ ಸೋಮವಾರ ಕರ್ನಾಟಕ ರಾಜ್ಯ ಸಹಕಾರ ಮಹಾಹಂಡಳ, ಜಿಲ್ಲಾ ಸಹಕಾರಿ ಯೂನಿಯನ್, ಕೋಲಾರ ಕುರಿ ಮತ್ತು ಉಣ್ಣೆ ಅಭಿವೃದ್ದಿ ಯೋಜನೆ, ಸಹಕಾರ ಇಲಾಖೆ ಇವರ ಸಂಯುಕ್ತಾಶ್ರಯದಲ್ಲಿ ಜಿಲ್ಲೆಯ ಕುರಿ ಸಾಕಾಣಿಕೆ ಮತ್ತು ಉಣ್ಣೆ ಉತ್ಪಾದಕರ ಸಹಕಾರ ಸಂಘಗಳ ಅಧ್ಯಕ್ಷರು, ಉಪಾಧ್ಯಕ್ಷರು,ನಿರ್ದೇಶಕರು ಹಾಗೂ ಸಿಇಒಗಳಿಗಾಗಿ ಹಮ್ಮಿಕೊಂಡಿದ್ದ ಒಂದು ದಿನದ ತರಬೇತಿ ಕಾರ್ಯಾಗಾರಕ್ಕೆ ಚಾಲನೆ ನೀಡಿ ಅವರು ಮಾತನಾಡುತ್ತಿದ್ದರು.
ಸಹಕಾರ ಕ್ಷೇತ್ರ ಇಂದು ವಿಸ್ತಾರವಾಗಿದೆ, ಬಡವರು, ಮಹಿಳೆಯರು,ರೈತರ ಬದುಕಿಗೆ ಬೆನ್ನೆಲುಬಾಗಿ ಬೆಳೆದಿದೆ ಎಂದ ಅವರು, ಸಮಾಜದ ಪ್ರತಿಕುಟುಂಬವೂ ಸಹಕಾರ ರಂಗದ ಸದಸ್ಯತ್ವ ಪಡೆಯುವಂತಾಗಬೇಕು ಎಂದು ಕಿವಿಮಾತುಹೇಳಿದರು.
ಕುರಿ ಅಭಿವೃದ್ದಿ ಮಂಡಳಿಯಿಂದ ಕುರಿ ಸಾಕಾಣಿಕೆದಾರರಿಗೆ 40 ಸಾವಿರ ರೂ ಸಹಾಯಧನ ನೀಡುತ್ತಿದ್ದು, ಫಲಾನುಭವಿಗಳ ಪಾಲಿನ ಹಣವನ್ನು ಸಾಲವಾಗಿ ಒದಗಿಸಲು ಬ್ಯಾಂಕ್ ಸಿದ್ದವಿದ್ದು, ಬಡವರು,ಮಹಿಳೆಯರು ಆರ್ಥಿಕವಾಗಿ ಬಲಗೊಂಡು ಉತ್ತಮ ಬದುಕು ಕಟ್ಟಿಕೊಳ್ಳುವ ಕಾರ್ಯಕ್ಕೆ ಡಿಸಿಸಿ ಬ್ಯಾಂಕ್ ಸದಾ ನೆರವಿಗೆ ನಿಲ್ಲುತ್ತದೆ ಎಂದು ತಿಳಿಸಿದರು.


ತರಬೇತಿ ಮೂಲಕ ಸಂಘ ಬಲಗೊಳಿಸಿ


ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಮೂರಾಂಡಹಳ್ಳಿ ಗೋಪಾಲಪ್ಪ ಅಧ್ಯಕ್ಷತೆ ವಹಿಸಿ ಮಾತಮಾಡಿಕ, ಸಹಕಾರ ಸಂಘವನ್ನು ಮುನ್ನಡೆಸುವಾಗ ಆರ್ಥಿಕ ಸಾಕ್ಷರತೆ ಅಗತ್ಯವಿದೆ, ವಹಿವಾಟಿನಲ್ಲಿನೀವು ಪಾರದರ್ಶಕತೆ ಕಾಪಾಡಿಕೊಳ್ಳಬೇಕು, ಅದಕ್ಕೆ ಸಂಬಂಧಿಸಿದಂತೆ ಆಡಿಟ್, ದಾಖಲೆಗಳ ನಿರ್ವಹಣೆ ಕುರಿತು ತರಬೇತಿಯಲ್ಲಿ ಅರಿವು ಪಡೆದುಕೊಳ್ಳಿ ಎಂದು ಕಿವಿಮಾತು ಹೇಳಿದರು.
ಸಹಕಾರಿ ರಂಗವನ್ನು ಗಟ್ಟಿಗೊಳಿಸುವ ನಿಟ್ಟಿನಲ್ಲಿ ಸಹಕಾರಿ ಯೂನಿಯನ್ನು ವರ್ಷ ಪೂರ್ತಿ ಸಹಕಾರ ಸಂಘಗಳ ನಿರ್ವಹಣೆ ಕುರಿತಂತೆ ತರಬೇತಿ ನೀಡುತ್ತಾ ಬಂದಿದೆ, ವಿಸ್ತಾರವಾಗಿರುವ ಸಹಕಾರ ರಂಗದ ಕುರಿತು ಎಲ್ಲರಿಗೂ ಅರಿವು ಅಗತ್ಯ ಎಂದು ಅಭಿಪ್ರಾಯಪಟ್ಟರು.
ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಕೆ.ಎಸ್.ಗಣೇಶ್, ಸಹಕಾರ ತತ್ವ ಇಂದು ಸಮಾಜದ ಕಟ್ಟಕಡೆಯ ಬಡವನಿಗೂ ನೆರವು ಒದಗಿಸುವ ಶಕ್ತಿ ಹೊಂದಿದೆ, ವಾಣಿಜ್ಯ ಬ್ಯಾಂಕುಗಳಂತೆ ದಾಖಲೆಗಳಿಗಾಗಿ ಅಲೆದಾಡಿಸುವುದು, ಮಾನಸಿಕ ಹಿಂಸೆಗೆ ಗುರಿ ಮಾಡದ ಕ್ಷೇತ್ರವಾಗಿದ್ದು, ಸಹಕಾರಿ ರಂಗದ ಕುರಿತು ಮತ್ತಷ್ಟು ನಂಬಿಕೆ ಬಲಗೊಳಿಸಲು ಎಲ್ಲಾ ಸಂಘಗಳ ಗಣಕೀಕರಣ,ಗಣಕೀಕೃತ ವಹಿವಾಟು ಅಗತ್ಯವಿದೆ ಎಂದರು.
ಸಂಪನ್ಮೂಲ ವ್ಯಕ್ತಿಯಾಗಿದ್ದ ಬಂಗಾರಪೇಟೆ ಟಿಎಪಿಸಿಎಂಎಸ್ ಹಿರಿಯ ನಿರೀಕ್ಷಕ ಎಂ.ಜಗದೀಶ್, ಸಹಕಾರ ಸಂಘಗಳ ಚುನಾವಣೆಗೆ ಸಂಬಂಧಿಸಿದಂತೆ ಪೂರ್ವಸಿದ್ದತಾ ಕ್ರಮಗಳು, ಇತ್ತೀಚಿನ ಕಾನೂನು ತಿದ್ದುಪಡಿಗಳೂ, ಸಿಇಒಗಳ ಕರ್ತವ್ಯಗಳ ಕುರಿತು ಮಾಹಿತಿ ಒದಗಿಸಿದರು.
ಕುರಿಮತ್ತುಉಣ್ಣೆ ಯೋಜನೆ ಅಧೀಕ್ಷಕ ಡಾ.ಸುದರ್ಶನ್,ಕುರಿ ಮತ್ತು ಉಣ್ಣೆ ಅಭಿವೃದ್ದಿ ನಿಗಮದಿಂದ ಸಿಗುವ ಸೌಲಭ್ಯಗಳ ಕುರಿತು ಮಾಹಿತಿ ನೀಡಿ, ಮಂಡಳಿಯಿಂದ 20ಹೆಣ್ಣು ಕುರಿ ಒಂದು ಗಂಡು ಕುರಿ ಯೋಜನೆಯಡಿ ಕುರಿ ಸಾಕಾಣಿಕೆದಾರರ ಸಂಘದ ಸದಸ್ಯ ಫಲಾನುಭವಿಗಳಿಗೆ 40 ಸಾವಿರ ರೂ ಸಹಾಯಧನ ನೀಡುತ್ತಿದ್ದು, ಕುರಿ ಸಾಕಾಣಿಕೆದಾರರ ಸಂಘದ ಫಲಾನುಭವಿಯ ಪಾಲಿನ ಹಣವನ್ನು ಡಿಸಿಸಿ ಬ್ಯಾಂಕ್ ಮಹಿಳಾ ಸಂಘಗಳಿಗೆ ನೀಡುವ ರೀತಿಯಲ್ಲಿ ಸಾಲದ ರೂಪದಲ್ಲಿ ಒದಗಿಸಬೇಕು ಎಂದು ಮನವಿ ಮಾಡಿದರು.
ಮಂಡಳಿಯಿಂದ ಕುರಿಗಾಹಿಗಳಿಗೆ ವಿಮೆ ಸೌಲಭ್ಯ ಒದಗಿಸಲಾಗುತ್ತಿದೆ, ಕುರಿ ಸಾಕಾಣಿಕೆದಾರರಿಗೆ ಅಗತ್ಯವಾದ ಟೆಂಟ್, ಟಾರ್ಚ್ ವಿತರಿಸಲಾಗುತ್ತಿದೆ ಎಂದ ಅವರು ಕುರಿ ಸತ್ತರೆ ಒಂದು ಕುರಿಗೆ 5 ಸಾವಿರ ರೂ ನೆರವು ನೀಡಲಾಗುತ್ತಿದೆ ಎಂದು ವಿವರಿಸಿದರು.
ಸಹಕಾರಿ ಯೂನಿಯನ್ ಉಪಾಧ್ಯಕ್ಷ ಟಿ.ಕೆ.ಬೈರೇಗೌಡ,ನಿರ್ದೇಶಕ ಉರಿಗಿಲಿ ರುದ್ರಸ್ವಾಮಿ ಮಾತನಾಡಿ, ಕುರಿ ಸಾಕಾಣಿಕೆ ಇಂದು ಒಂದು ಸ್ವಾವಲಂಬಿ ಕಸುಬಾಗಿದ್ದು, ಬದುಕು ಕಟ್ಟಿಕೊಳ್ಳಲು ಅತ್ಯಂತ ಉತ್ತಮ ಉದ್ಯೋಗವಾಗಿದೆ ಎಂದು ತಿಳಿಸಿ, ಇದಕ್ಕೆ ಡಿಸಿಸಿ ಬ್ಯಾಂಕ್ ಸಾಲ ಸೌಲಭ್ಯ ನೀಡಬೇಕು ಎಂದರು.
ಜಿಲ್ಲಾ ಸಹಕಾರಿ ಯೂನಿಯನ್ ಸಿಇಇಒ ಕೆ.ಎಂ.ಭಾರತಿ ನಿರೂಪಿಸಿ,ಸ್ವಾಗತಿಸಿದ ಕಾರ್ಯಕ್ರಮದಲ್ಲಿ ಯೂನಿಯನ್ ನಿರ್ದೇಶಕರಾದ ಡಿ.ಆರ್.ರಾಮಚಂದ್ರೇಗೌಡ, ಅಣ್ಣಿಹಳ್ಳಿ ನಾಗರಾಜ್, ಅರುಣಮ್ಮ, ಕುರಿ ಸಾಕಾಣಿಕೆದಾರರ ಸಂಘದ ಬಾಲಕೃಷ್ಣ, ಯೂನಿಯನ್ ಲಕ್ಷ್ಮಿ,ರವಿ ಮತ್ತಿತರರು ಉಪಸ್ಥಿತರಿದ್ದು, ಜಿಲ್ಲೆಯ ವಿವಿಧ ತಾಲ್ಲೂಕುಗಳ ಕುರಿ ಸಾಕಾಣಿಕೆ ಮತ್ತು ಉಣ್ಣೆ ಉತ್ಪಾದಕರ ಸಹಕಾರ ಸಂಘಗಳ ಅಧ್ಯಕ್ಷರು, ಉಪಾಧ್ಯಕ್ಷರು,ನಿರ್ದೇಶಕರು ಹಾಗೂ ಸಿಇಒಗಳು ಹಾಜರಿದ್ದರು.