ಜನರ ಸಮಸ್ಯೆ ಗ್ರಾಮಗಳಲ್ಲಿಯೇ ಆಲಿಸಿ ಶೀಘ್ರ ಪರಿಹರಿಸಲು, ಜನ ಕಛೇರಿಗಳಿಗೆ ಅಲೆಯುವುದನ್ನು ತಪ್ಪಿಸಲು ಗ್ರಾಮ ವಾಸ್ತವ್ಯ ಕಾರ್ಯಕ್ರಮ;ಜಿಲ್ಲಾಧಿಕಾರಿ

ವರದಿ: ಶಬ್ಬೀರ್ ಅಹಮ್ಮದ್, ಶ್ರೀನಿವಾಸಪುರ

ಕೋಲಾರ : ಜನರ ಸಮಸ್ಯೆಗಳನ್ನು ಅವರ ಗ್ರಾಮಗಳಲ್ಲಿಯೇ ಆಲಿಸಿ ಶೀಘ್ರದಲ್ಲಿ ಪರಿಹರಿಸಲು ಹಾಗೂ ಜನರು ಕಛೇರಿಗಳಿಗೆ ಅಲೆಯುವುದನ್ನು ತಪ್ಪಿಸಲು ಗ್ರಾಮ ವಾಸ್ತವ್ಯ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿಗಳಾದ ಡಾ | ಆರ್ . ಸೈಲಮಣಿ ಅವರು ತಿಳಿಸಿದರು . ಇಂದು ಕೋಲಾರ ತಾಲ್ಲೂಕಿನ ಕೆಂಬೋಡಿ ಗ್ರಾಮದಲ್ಲಿ ಹಮ್ಮಿಕೊಂಡಿದ್ದ , ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ ಎಂಬ ಗ್ರಾಮ ವಾಸ್ತವ್ಯ ಕಾರ್ಯಕ್ರಮವನ್ನು ಕುರಿತು ಅವರು ಮಾತನಾಡಿದರು . ವಿವಿಧ ಇಲಾಖೆಗಳಿಗೆ ಸಂಬಂಧಿಸಿದ 254 ಕ್ಕೂ ಹೆಚ್ಚು ಅರ್ಜಿಗಳನ್ನು ವಿಲೇವಾರಿ ಮಾಡಲಾಗಿದೆ . ಇಂದು ಸಹ ಕುಂದು ಕೊರತೆಗಳ ಅಹವಾಲುಗಳನ್ನು ಸ್ವೀಕಾರ ಮಾಡಿ ಸಾಧ್ಯವಾದವನ್ನು ಸ್ಥಳದಲ್ಲಿಯೇ ಪರಿಹರಿಸಲಾಗುವುದು . ಉಳಿದ ಮನವಿಗಳನ್ನು ಸೀಮಿತ ಅವಧಿಯ ಕಾಲಮಿತಿಯೊಳಗೆ ಪರಿಹರಿಸಲಾಗುವುದು ಎಂದು ತಿಳಿಸಿದರು . ವಿವಿಧ ಇಲಾಖೆಗಳಿಂದ ಸಿಗುವ ಸೌಲಭ್ಯಗಳ ಕುರಿತು ಪ್ರದರ್ಶನ ಏರ್ಪಡಿಸಲಾಗಿದೆ . ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ವತಿಯಿಂದ ಗರ್ಭಿಣಿ ಸ್ತ್ರೀಯರಿಗೆ ಸೀಮಂತ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ . ಇದರಲ್ಲಿ ಗರ್ಭಿಣಿ ಸ್ತ್ರೀಯರ ಮಗುವಿನ ಆರೋಗ್ಯಕರ ಬೆಳವಣಿಗೆಗೆ ಸೇವಿಸಬೇಕಾದ ಪೌಷ್ಟಿಕ ಆಹಾರಗಳ ಬಗ್ಗೆ ತಿಳಿಸುವುದಲ್ಲದೆ , ಮಾತೃವಂದನಾ ಕಾರ್ಯಕ್ರಮದಡಿ 5 ಸಾವಿರ ರೂ.ಗಳ ಪ್ರೋತ್ಸಾಹಧನ ನೀಡಲಾಗುತ್ತದೆ ಎಂದು ಮಾಹಿತಿ ನೀಡಿದರು . ಗ್ರಾಮೀಣ ಭಾಗದಲ್ಲಿ ಇರುವ ಪಿಂಚಣಿ ಸೌಲಭ್ಯ , ಜಮೀನು ಸರ್ವೇ , ಸರ್ಕಾರಿ ಜಮೀನುಗಳ ಒತ್ತುವರಿ ತೆರವು , ವಸತಿ ರಹಿತರಿಗೆ ಮನೆ ನಿರ್ಮಾಣ , ನಿವೇಶನ ಮತ್ತು ವಸತಿ ರಹಿತರಿಗೆ ನಿವೇಶನ ಮತ್ತು ಮನೆ ಸೌಲಭ್ಯ , ಆಧಾರ್ ತಿದ್ದುಪಡಿ , ಬಿ.ಪಿ.ಎಲ್ ಕಾರ್ಡ್‌ಗಳಲ್ಲಿ ಹೆಸರು ಸೇರ್ಪಡೆ , ಹೆಸರು ತೆಗೆದು ಹಾಕುವುದು ಹಾಗೂ ಹೊಸದಾಗಿ ಬಿ.ಪಿ.ಎಲ್ ಕಾರ್ಡ್‌ಗೆ ಅರ್ಜಿ ಸ್ವೀಕಾರ ಮಾಡಲಾಗುವುದು ಎಂದು ತಿಳಿಸಿದರು . ಕುಂದು ಕೊರತೆಗಳ ಸ್ವೀಕಾರ ಸಭೆಯಲ್ಲಿ ಕೆಂಬೋಡಿ ಶಾಲೆಗೆ ಕ್ರೀಡಾಂಗಣ ವ್ಯವಸ್ಥೆ ಕಲ್ಪಿಸಬೇಕು ಎಂದು ಶಿಕ್ಷಕರು ಮನವಿ ಮಾಡಿದರು . ಇದಕ್ಕೆ ಕೂಡಲೇ ಸ್ಪಂದಿಸಿ 1 ವಾರದೊಳಗೆ ಜಾಗವನ್ನು ಗುರುತಿಸಿ ನೀಡಲಾಗುವುದು . ನರೇಗಾ ಯೋಜನೆಯಡಿ ಕ್ರೀಡಾಂಗಣ ನಿರ್ಮಾಣ ಮಾಡಿಸಿ ಕೊಡಲಾಗುವುದು ಎಂದು ತಿಳಿಸಿದರು . ವೆಂಕಟರತ್ನಮ್ಮ ಎಂಬುವವರು ನನಗೆ ನಿವೇಶನ ಮತ್ತು ಮನೆ ಇಲ್ಲಿ ಒದಗಿಸಿಕೊಡಬೇಕು ಎಂದು ಮನವಿ ಮಾಡಿದರು . ಇದಕ್ಕೆ ಸ್ಪಂದಿಸಿದ ಜಿಲ್ಲಾಧಿಕಾರಿಗಳು 1 ವಾರದೊಳಗೆ ವಸತಿ ರಹಿತರು ಮತ್ತು ನಿವೇಶನ ರಹಿತರ ಪಟ್ಟಿ ನೀಡುವಂತೆ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಿಗೆ ಸೂಚಿಸಿದರು . ಇವರೆಲ್ಲರಿಗೂ ಅಗತ್ಯ ಜಮೀನನ್ನು ಗುರುತಿಸಿ ನಿವೇಶಗಳನ್ನು ಹಾಗೂ ಮನೆ ಸೌಲಭ್ಯವನ್ನು ಕಲ್ಪಿಸಲಾಗುವುದು ಎಂದು ತಿಳಿಸಿದರು . ಗ್ರಾಮಸ್ಥರು ಹೆಚ್.ಮಲ್ಲಂಡಹಳ್ಳಿ ಕೆರೆ ಒತ್ತುವರಿಯಾಗಿರುವುದನ್ನು ಒತ್ತುವರಿ ತೆರವುಗೊಳಿಸಬೇಕು ಎಂದು ಮನವಿ ಮಾಡಿದರು . ಇದಕ್ಕೆ ಸ್ಪಂದಿಸಿದ ಜಿಲ್ಲಾಧಿಕಾರಿಗಳು ಸರ್ವೇ ಮಾಡಿಸಿ ಸರ್ಕಾರಿ ಜಮೀನನ್ನು ಯಾರೇ ಒತ್ತುವರಿ ಮಾಡಿಕೊಂಡಿದ್ದರೂ ತೆರವುಗೊಳಿಸಲಾಗುವುದು ಎಂದು ಭರವಸೆ ನೀಡಿದರು . ಅಹವಾಲು ಸ್ವೀಕಾರದಲ್ಲಿ ಪಿಂಚಣಿ ಸಮಸ್ಯೆ , ಜಮೀನಿನ ಖಾತೆ ಆರ್.ಟಿ.ಸಿ ಸಮಸ್ಯೆ , ನಿವೇಶನ ಇಲ್ಲದಿರುವುದು , ಮನೆ ಇಲ್ಲದಿರುವುದು ಮುಂತಾದ 100 ಕ್ಕೂ ಹೆಚ್ಚು ಅಹವಾಲುಗಳನ್ನು ಸಾರ್ವಜನಿಕರು ಜಿಲ್ಲಾಧಿಕಾರಿಗಳಿಗೆ ಸಲ್ಲಿಸಿದರು . ನಂತರ ಗ್ರಾಮದಾದ್ಯಂತ ಸಂಚರಿಸಿ ಗ್ರಾಮದ ಕುಂದುಕೊರತೆಗಳನ್ನು ವೀಕ್ಷಿಸಿದರು , ಮನೆಮನೆಗೆ ತೆರಳಿ ಜನರ ಸಮಸ್ಯೆಗಳನ್ನು ಆಲಿಸಿ ಪರಿಹರಿಸಲು ಅಧಿಕಾರಿಗಳಿಗೆ ಸೂಚಿಸಿದರು . ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಣಾಧಿಕಾರಿಗಳಾದ ಎನ್.ಎಂ.ನಾಗರಾಜ್ , ಅಪರ ಜಿಲ್ಲಾಧಿಕಾರಿಗಳಾದ ಡಾ || ಸ್ನೇಹಾ , ವಿಭಾಗಾಧಿಕಾರಿಗಳಾದ ಸೋಮಶೇಖರ್ , ತಹಶೀಲ್ದಾರ್‌ರಾದ ಶೋಭಿತಾ , ವಡಗೂರು ಗ್ರಾಮ ಪಂಚಾಯತಿ ಅಧ್ಯಕ್ಷರಾದ ರಾಜಣ್ಣ , ಉಪಾಧ್ಯಕ್ಷರಾದ ಗಿರಿಜಮ್ಮ , ತಾಲ್ಲೂಕು ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿಗಳಾದ ಬಾಬು ಸೇರಿದಂತೆ ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು .