ಅತ್ತೂರು ಮಹೋತ್ಸವದ 4 ನೇ ದಿನ “ದೇವರನ್ನು ಅಖಂಡವಾಗಿ ಪ್ರೀತಿಸುವವರು ಮಾತ್ರ ಅವರ ಸಾಕ್ಷಿಗಳಾಗಲು ಸಾಧ್ಯ” ಬಿಷಪ್ ಆಲೋಶಿಯಸ್ ಪಾವ್ಲ್ ಡಿಸೋಜಾ

ಅತ್ತೂರು: “ನಮ್ಮನ್ನು ಪ್ರೀತಿಯಿಂದ ಸಲಹುವ ದೇವರು ಎಲ್ಲಾ ವೇಳೆಯಲ್ಲಿಯೂ ನಮ್ಮೊಡನೆ ಇರುತ್ತಾರೆ. ದೈನಂದಿನ ಚಟುವಟಿಕೆಗಳಲ್ಲಿ ನಮ್ಮೊಡನೆ ದೇವರ ಇರುವಿಕೆಯನ್ನು ಗುರುತಿಸಿ, ಅವರನ್ನು ಅಖಂಡವಾಗಿ ಪ್ರೀತಿಸಿ, ಪರರಿಗೆ ಒಳಿತು ಮಾಡಿದಾಗ, ನಾವು ಅವರ ಸಾಕ್ಷಿಗಳಾಗಲು ಸಾಧ್ಯ. ಪರಮ ಪ್ರಸಾದದಲ್ಲಿರುವ ಪ್ರಭು ಕ್ರಿಸ್ತರು, ನಾವು ದೇವರ ಸಾಕ್ಷಿಗಳಾಗಲು ನಮಗೆ ಕೃಪೆ ನೀಡುತ್ತಾರೆ. ಅವರನ್ನು ಅನುಸರಿಸಿ ಈ ಪ್ರಪಂಚದಲ್ಲಿ ನೈಜ ವಿಶ್ವಾಸಿಗಳಾಗಿ ಬಾಳಿದಾಗ ನಾವು ಅವರ ಸಾಕ್ಷಿಗಳಾಗುತ್ತೇವೆ” ಎಂದು ಮಂಗಳೂರು ಧರ್ಮಪ್ರಾಂತ್ಯದ ನಿವೃತ್ತ ಧರ್ಮಾಧ್ಯಕ್ಷರಾದ ಪರಮಪೂಜ್ಯ ಡೊ| ಅಲೋಶಿಯಸ್ ಪಾವ್ಲ್ ಡಿ’ಸೋಜಾರವರು ಸಂದೇಶ ನೀಡಿದರು. ಅವರು ಅತ್ತೂರು ಕಾರ್ಕಳ ಸಂತ ಲಾರೆನ್ಸ್ ಬಸಿಲಿಕ ಪುಣ್ಯಕ್ಷೇತ್ರದ ಮಹೋತ್ಸವದ ನಾಲ್ಕನೇ ದಿನ ಬುಧವಾರದಂದು ಪ್ರಮುಖ ಬಲಿಪೂಜೆಯನ್ನು ಅರ್ಪಿಸಿ ಪ್ರಬೋಧನೆಯನ್ನು ನೀಡುತ್ತಿದ್ದರು.
ಜನವರಿ 22 ರಂದು ಆರಂಭಗೊಂಡ ವಾರ್ಷಿಕ ಮಹೋತ್ಸವದ ನಾಲ್ಕನೇ ದಿನದಂದು ದೇವರ ವಾಕ್ಯವನ್ನು ಧ್ಯಾನಿಸಿ ವಿಶೇಷ ಪೂಜೆ ಪ್ರಾರ್ಥನೆಗಳನ್ನು ನೆರವೇರಿಸಲಾಯಿತು.
ದಿನದ ಪ್ರಮುಖ ಬಲಿಪೂಜೆಯನ್ನು ಮಂಗಳೂರಿನ ನಿವೃತ್ತ ಧರ್ಮಾಧ್ಯಕ್ಷ ಪರಮಪೂಜ್ಯ ಡೊ| ಅಲೋಶಿಯಸ್ ಪಾವ್ಲ್ ಡಿ’ಸೋಜಾರವರು ನೆರವೇರಿಸಿದರು. ದಿನದ ಇತರ ಬಲಿಪೂಜೆಗಳನ್ನು ವಂದನೀಯ ಹೆರಾಲ್ಡ್ ಪಿರೇರಾ, ಉಡುಪಿ; ವಂದನೀಯ ಸಂತೋಶ್ ಮಿನೇಜಸ್, ಮಂಗಳೂರು; ವಂದನೀಯ ಸ್ಟ್ಯಾನಿ ಡಿಸೋಜಾ, ಶಿವಮೊಗ್ಗ; ವಂದನೀಯ ಸುನಿಲ್ ಡಿಸಿಲ್ವ, ಸಾಸ್ತಾನ ಇವರು ನೆರವೇರಿಸಿದರು.
ಬಸಿಲಿಕಾದ ನಿರ್ದೇಶಕರಾದ ಅತಿ ವಂದನೀಯ ಆಲ್ಬನ್ ಡಿಸೋಜಾರವರು ಕನ್ನಡ ಬಲಿಪೂಜೆಯನ್ನು ಅರ್ಪಿಸಿ, ರೋಗಿಗಳಿಗಾಗಿ ವಿಶೇಸ ಪ್ರಾರ್ಥನೆಯನ್ನು ಸಲ್ಲಿಸಿದರು.
ದಿನದ ಅಂತಿಮ ಬಲಿಪೂಜೆಯನ್ನು ಅತಿ ವಂದನೀಯ ವಲೇರಿಯಮ್ ಮೆಂಡೋನ್ಸಾ, ಕಲ್ಯಾಣ್‍ಪುರ ಇವರು ನೆರವೇರಿಸುವುದರೊಂದಿಗೆ ಮಹೋತ್ಸವದ ನಾಲ್ಕನೇ ದಿನದ ಕಾರ್ಯಕ್ರಮಗಳಿಗೆ ತೆರೆ ಬಿದ್ದಿತು.
ಮಹೋತ್ಸವದ ಐದನೇ ಮತ್ತು ಅಂತಿಮ ದಿನ ಗುರುವಾರ ಬೆಳಿಗ್ಗೆ 8, 10, 12 ಹಾಗೂ ಮಧ್ಯಾಹ್ನ 2, 4, 6 ಮತ್ತು 8 ಗಂಟೆಗೆ ಬಲಿಪೂಜೆಗಳು ನೆರವೇರಲಿವೆ. ಬೆಳಿಗ್ಗೆ 10 ಗಂಟೆಯ ವಿಶೇಷ ಸಾಂಭ್ರಮಿಕ ಬಲಿಪೂಜೆಯನ್ನು ಬೆಂಗಳೂರಿನ ನಿವೃತ್ತ ಧರ್ಮಾಧ್ಯಕ್ಷ ಪರಮಪೂಜ್ಯ ಡೊ| ಬರ್ನಾರ್ಡ್ ಮೋರಸ್‍ರವರು ನೆರವೇರಿಸಿ ಪ್ರಬೋಧನೆ ನೀಡಲಿದ್ದಾರೆ. ಮಹೋತ್ಸವದ ಅಂತಿಮ ಪೂಜೆ ಸಂಜೆ 8 ಗಂಟೆಗೆ ನೆರವೇರಲಿದೆ.
ಮಂಗಳೂರು ವಿಭಾಗದ ಲೋಕಾಯುಕ್ತ ಎಸ್ಪಿ ಶ್ರೀ ಸೈಮನ್, ಡಿವೈಎಸ್‍ಪಿ ಮತ್ತಿತರ ಗಣ್ಯರು ಪುಣ್ಯಕ್ಷೇತ್ರಕ್ಕೆ ಭೇಟಿಯಿತ್ತು ಪ್ರಾರ್ಥಿಸಿದರು.

ವರದಿ: ಫಾದರ್ ರೊಯ್ಸನ್ ಫೆರ್ನಾಂಡಿಸ್, ನಿರ್ದೇಶಕರು, ಸಂಪರ್ಕ ಕೇಂದ್ರ,ಉಡುಪಿ ಧರ್ಮಪ್ರಾಂತ್ಯ