ಗುತ್ತಿಗೆದಾರರು ಗುಣಮಟ್ಟದ ಕಾಮಗಾರಿ ನಡೆಸುವುದರ ಮೂಲಕ ಜನರ ವಿಶ್ವಾಸ ಗಳಿಸಬೇಕು:ವೆಂಕಟರೆಡ್ಡಿ

ಶ್ರೀನಿವಾಸಪುರ: ಗುತ್ತಿಗೆದಾರರು ಗುಣಮಟ್ಟದ ಕಾಮಗಾರಿ ನಡೆಸುವುದರ ಮೂಲಕ ಜನರ ವಿಶ್ವಾಸ ಗಳಿಸಬೇಕು ಎಂದು ನಿವೃತ್ತ ಬೆಸ್ಕಾಂ ಎಂಜಿನಿಯರ್ ವೆಂಕಟರೆಡ್ಡಿ ಹೇಳಿದರು.
ಪಟ್ಟಣದ ತಾಲ್ಲೂಕು ಬೆಸ್ಕಾಂ ಗುತ್ತಿಗೆದಾರರ ಸಂಘದ ಗೌರವಾಧ್ಯಕ್ಷ ಕೆ.ಮೋಹನಾಚಾರಿ ಅವರ ನಿವಾಸದಲ್ಲಿ ಬುಧವಾರ ಏರ್ಪಡಿಸಿದ್ದ ಸಮಾರಂಭದಲ್ಲಿ, ಗೌರವ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ವಿದ್ಯುತ್ ಎಲ್ಲ ವರ್ಗದ ಜನರಿಗೆ ಅತ್ಯಗತ್ಯವಾಗಿದೆ. ಇಲಾಖೆ ಉತ್ತಮ ಗುಣಮಟ್ಟದ ಸೇವೆ ನಿರೀಕ್ಷಿಸಿ ಗುತ್ತಿಗೆ ನೀಡುತ್ತದೆ. ಇಲಾಖೆಗೆ ಒಳ್ಳೆ ಹೆಸರು ತರುವ ಕಾರ್ಯ ಗುತ್ತಿಗೆದಾರರಿಂದ ನಡೆಯಬೇಕು ಎಂದು ಅಭಿಪ್ರಾಯಪಟ್ಟರು.
ತಾಲ್ಲೂಕು ವಿದ್ಯುತ್ ಗುತ್ತಿಗೆದಾರರ ಸಂಘದ ಗೌರವಾಧ್ಯಕ್ಷ ಕೆ.ಮೋಹನಾಚಾರಿ ಮಾತನಾಡಿ, ಎಂಜಿನಿಯರ್ ವೆಂಕಟರೆಡ್ಡಿ ಸಮಾಜ ಮುಖಿಯಾಗಿ ಸೇವೆ ಸಲ್ಲಿಸಿದ್ದಾರೆ. ತಮ್ಮ ಸೇವಾವಧಿಯಲ್ಲಿ ಕಳಪೆ ಕಾಮಗರಿಯೊಂದಿಗೆ ರಾಜಿಯಾದವರಲ್ಲ. ಪರಿಣಾಮಕಾರಿ ಕಾರ್ಯನಿರ್ವಹಣೆ ಮೂಲಕ ಗ್ರಾಮೀಣ ಪ್ರದೇಶದ ರೈತರು ಹಾಗೂ ಇತರ ವಿದ್ಯುತ್ ಗ್ರಾಹಕರ ಗೌರವಕ್ಕೆ ಪಾತ್ರರಾಗಿದ್ದರು ಎಂದು ಹೇಳಿದರು. ಪುರಸಭೆ ಮಾಜಿ ಸದಸ್ಯೆ ಕೆ.ಶಾರದಮ್ಮ, ಉಮಾಕಾಂತ್ ಇದ್ದರು.